ನವದೆಹಲಿ: ಇಂಗ್ಲೆಂಡ್ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ (ICC women's T20 World Cup 2026) ಟೂರ್ನಿಯಲ್ಲಿ ಭಾರತ ತಂಡದ ಪರ ಆಡುತ್ತಿರುವ ಕ್ರಾಂತಿ ಗೌಡ್ (Kranti Gaud) ಅವರು ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಅನುಭವಿಸಿದ ಕಷ್ಟಗಳನ್ನು ಸ್ಮರಿಸಿಕೊಂಡಿದ್ದಾರೆ. ಅಲ್ಲದೆ ತನಗೆ ಕ್ರಿಕೆಟ್ ಕಿಟ್ ಕೊಡಿಸಲು ನನ್ನ ಅಮ್ಮ ಆಭರಣಗಳನ್ನು ಮಾರಿದ್ದರು ಎಂದು ಟೀಮ್ ಇಂಡಿಯಾ ಆಟಗಾರ್ತಿ ತಿಳಿಸಿದ್ದಾರೆ.
ಮಧ್ಯಪ್ರದೇಶದ ಒಂದು ಸಣ್ಣ ಹಳ್ಳಿಯಿಂದ ಬಂದಿರುವ ಗೌಡ್, ತಮ್ಮ ಕ್ರಿಕೆಟ್ ಕನಸನ್ನು ಜೀವಂತವಾಗಿಡಲು ತಮ್ಮ ತಾಯಿ ಮಾಡಿದ ತ್ಯಾಗಗಳನ್ನು ನೆನಪಿಸಿಕೊಂಡರು. ಕ್ರಿಕೆಟ್ ಕಿಟ್ ಖರೀದಿಸಲು ತಮ್ಮ ತಾಯಿ ಆಭರಣಗಳನ್ನು ಮಾರಾಟ ಮಾಡಿದ್ದರು ಎಂದು ಅವರು ಬಹಿರಂಗಪಡಿಸಿದ್ದಾರೆ.
ಯುವ ವೇಗದ ಬೌಲರ್ ಆಗಿರುವ ಗೌಡ್, ಆ ತ್ಯಾಗಗಳು ಇಂದಿಗೂ ಪ್ರತಿದಿನ ತಮ್ಮನ್ನು ಪ್ರೇರೇಪಿಸುತ್ತಿವೆ ಎಂದು ಹೇಳಿದರು. ವಿಶ್ವ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ನೀಡಿ ತಮ್ಮ ಕುಟುಂಬಕ್ಕೆ ಹೆಮ್ಮೆ ತರುವ ಉತ್ಸಾಹ ಮತ್ತು ಸಂಕಲ್ಪ ತಮ್ಮಲ್ಲಿದೆ ಎಂದು ಅವರು ತಿಳಿಸಿದರು.
2027ರ ಏಕದಿನ ವಿಶ್ವಕಪ್ಗೆ ಕೊಹ್ಲಿ, ರೋಹಿತ್ ಅನುಮಾನ ಎಂದವರಿಗೆ ಕ್ಲಾಸ್ ತೆಗೆದುಕೊಂಡ ಆರ್ ಅಶ್ವಿನ್!
"ನಿಮ್ಮ ಕುಟುಂಬ ನಿಮ್ಮ ಬೆಂಬಲಕ್ಕೆ ನಿಂತಿದ್ದರೆ, ಹೊರಗಿನವರು ಏನು ಹೇಳುತ್ತಾರೆ ಎಂಬುದು ಮುಖ್ಯವಾಗುವುದಿಲ್ಲ. ಏಕೆಂದರೆ ಆ ಹೊರಗಿನವರು ಹೇಗಿದ್ದರೂ ನಿಮಗೆ ಬೆಂಬಲ ನೀಡುವುದಿಲ್ಲ. ನನ್ನ ಜೀವನದ ಪ್ರತಿಯೊಂದು ಹಂತದಲ್ಲೂ ನನ್ನ ಕುಟುಂಬ ನನ್ನೊಂದಿಗೆ ನಿಂತಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞಳಾಗಿದ್ದೇನೆ. ನಮ್ಮ ಮುಂದೆ ಸಾಕಷ್ಟು ಸಮಸ್ಯೆಗಳಿದ್ದವು. ಹಣದ ಕೊರತೆ ಯಾವಾಗಲೂ ಇತ್ತು. ನನಗೆ ಒಳ್ಳೆಯ ಕ್ರಿಕೆಟ್ ಕಿಟ್ ಖರೀದಿಸಿಕೊಡಲು ನನ್ನ ತಾಯಿ ತಮ್ಮ ಆಭರಣಗಳನ್ನು ಮಾರಿದ್ದರು. ಅದು ತುಂಬಾ ದೊಡ್ಡ ತ್ಯಾಗವಾಗಿತ್ತು. ನನ್ನ ಕುಟುಂಬ ನನಗಾಗಿ ಇಷ್ಟೆಲ್ಲ ಮಾಡುತ್ತಿರುವಾಗ, ನನ್ನ ಮೇಲೂ ಒಂದು ಜವಾಬ್ದಾರಿ ಇದೆ ಎಂಬ ಭಾವನೆ ಮೂಡಿತು. ನಾನು ಅವರಿಗಾಗಿ ಏನಾದರೂ ಮಾಡಬೇಕು ಎಂದು ಬಯಸಿದೆ. ಅವರ ತ್ಯಾಗ ಸಾರ್ಥಕವಾಗಬೇಕು ಎಂಬುದೇ ನನ್ನ ಆಶಯವಾಗಿತ್ತು," ಎಂದು ಗೌಡ್ ಜಿಯೋಸ್ಟಾರ್ ಬಳಿ ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
"ಆ ಸಮಯದಲ್ಲಿ ಅನೇಕ ಹುಡುಗಿಯರಿಗೆ ಮನೆಯ ಹೊರಗೆ ಕಾಲಿಡುವುದಕ್ಕೂ ಅವಕಾಶ ಇರಲಿಲ್ಲ. ಆದರೆ ನನ್ನ ಪೋಷಕರು ವಿಭಿನ್ನರಾಗಿದ್ದರು. ನಾನು ತಪ್ಪು ಕೆಲಸ ಮಾಡುತ್ತಿದ್ದೇನೆ ಎಂಬ ಭಾವನೆಯನ್ನು ಅವರು ಎಂದಿಗೂ ನನಗೆ ಮೂಡಿಸಲಿಲ್ಲ. ನನ್ನ ಕನಸಿನ ಮೇಲೆ ಅವರು ನಂಬಿಕೆ ಇಟ್ಟಿದ್ದರು. ಅದೇ ನನಗೆ ಮುಂದುವರಿಯಲು ಮತ್ತು ನನ್ನ ಗುರಿಯನ್ನು ಹಿಂಬಾಲಿಸಲು ಶಕ್ತಿ ನೀಡಿತು. ನಿಮ್ಮ ಕುಟುಂಬ ನಿಮ್ಮ ಜೊತೆಗಿದೆ ಎಂಬ ನಂಬಿಕೆ ಇದ್ದಾಗ, ಹೊರಗಿನ ಜಗತ್ತಿನ ಮಾತುಗಳನ್ನು ನಿರ್ಲಕ್ಷಿಸುವುದು ತುಂಬಾ ಸುಲಭವಾಗುತ್ತದೆ," ಎಂದು ಅವರು ಸೇರಿಸಿದರು.
ಶುಭಮನ್ ಗಿಲ್ ಹುಟ್ಟು ನಾಯಕರಲ್ಲ, ಕಲಿಯುವುದು ಸಾಕಷ್ಟಿದೆ: ಮನೋಜ್ ತಿವಾರಿ!
ಗೌಡ್ ಅವರ ಭಾರತೀಯ ಕ್ರಿಕೆಟ್ ತಂಡದ ಪ್ರವೇಶವು ಅವರ ಹಳ್ಳಿಯಲ್ಲಿಯೂ ಮಹತ್ತರ ಬದಲಾವಣೆಗಳನ್ನು ತಂದಿದೆ. ಅವರ ಸಾಧನೆಯಿಂದ ಪ್ರೇರಿತವಾಗಿ ಅಲ್ಲಿ ಒಂದು ಕ್ರಿಕೆಟ್ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಈಗ ಪೋಷಕರು ತಮ್ಮ ಪುತ್ರಿಯರನ್ನು ಕ್ರೀಡೆಯನ್ನು ವೃತ್ತಿಯಾಗಿ ಆಯ್ಕೆಮಾಡಲು ಉತ್ತೇಜಿಸುತ್ತಿದ್ದಾರೆ.
ಇದೀಗ ಗೌಡ್ ಅವರು ಮ್ಯಾಂಚೆಸ್ಟರ್ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲು ಸಜ್ಜಾಗಿದ್ದಾರೆ. ಸೆಮಿಫೈನಲ್ ಪ್ರವೇಶದ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಭಾರತ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅತ್ಯಗತ್ಯವಾಗಿದೆ.