ನವದೆಹಲಿ: ಪಾಕಿಸ್ತಾನ ಸರ್ಕಾರ ಭಾನುವಾರ ಭಾರತದ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಾಯ್ಕಾಟ್ ಮಾಡುವುದಾಗಿ ಘೋಷಣೆ (Ind vs Pak) ಮಾಡಿದೆ. ಫೆಬ್ರವರಿ 15ರಂದು ಶ್ರೀಲಂಕಾದ ಕೊಲಂಬೋದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಪಂದ್ಯ ನಡೆಯಬೇಕಿತ್ತು. (T20 World Cup match) ಬಾಂಗ್ಲಾದೇಶವನ್ನ ವಿಶ್ವಕಪ್ನಿಂದ ಹೊರಗಿಟ್ಟಿರುವುದನ್ನ ಖಂಡಿಸಿ ಭಾರತದ ವಿರುದ್ಧದ ಪಂದ್ಯವನ್ನ ಬಹಿಷ್ಕರಿಸುವುದಾಗಿ ಪಾಕಿಸ್ತಾನ ಹೇಳಿತ್ತು. ಇದೀಗ ಪಂದ್ಯದ ದಿನಾಂಕ ಹತ್ತಿರ ಬರುತ್ತಿದ್ದಂತೆ ತನ್ನ ಹೇಳಿಕೆಗೆ ಉಲ್ಟಾ ಹೊಡೆಯುತ್ತಿರುವ ಪಾಕ್, ತನ್ನ ಹಿಂದೆಗೆದುಕೊಳ್ಳುವ ಸಾಧ್ಯತೆಯಿದೆ. ಆದರೆ ಇದಕ್ಕೆ ಬದಲಾಗಿ ಐಸಿಸಿ ಎದುರು ಹಲವು ಬೇಡಿಕೆಯನ್ನಿಟ್ಟಿದೆ.
ಭಾರತದ ವಿರುದ್ಧ ಪಂದ್ಯದ ಬಹಿಷ್ಕಾರದ ಬಳಿಕ ಐಸಿಸಿ ಪಿಬಿಸಿಗೆ ಕೆಲ ಎಚ್ಚರಿಕೆಗಳನ್ನು ನೀಡಿತ್ತು. ಎಚ್ಚರಿಕೆಯ ಬೆನ್ನಲ್ಲೇ ಈಗ ಪಿಸಿಬಿ ಭಾರತದ ವಿರುದ್ಧ ಪಂದ್ಯವಾಡಲು ಒಪ್ಪಿಗೆ ನೀಡಲು ಮುಂದಾಗಿದ್ದರೂ ಮೂರು ಬೇಡಿಕೆಗಳನ್ನು ಮುಂದಿಟ್ಟಿದೆ. ಬಿಕ್ಕಟ್ಟನ್ನು ಬಗೆಹರಿಸಲು ಐಸಿಸಿ (ICC) ಅಧಿಕಾರಿಗಳು ತುರ್ತಾಗಿ ಲಾಹೋರ್ಗೆ ಧಾವಿಸಿದ್ದಾರೆ. ಲಾಹೋರ್ನ ಗಡ್ಡಾಫಿ ಕ್ರೀಡಾಂಗಣದಲ್ಲಿ ಸುಮಾರು 5 ಗಂಟೆಗಳ ಕಾಲ ಸುದೀರ್ಘ ಸಭೆ ನಡೆಯಿತು. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಐಸಿಸಿ ಉಪಾಧ್ಯಕ್ಷ ಅಮೀನುಲ್ ಇಸ್ಲಾಂ ಈ ಸಭೆಯಲ್ಲಿ ಭಾಗಿಯಾಗಿದ್ದರು.
ಮೂರು ಬೇಡಿಕೆಗಳೇನು?
ಪಾಕಿಸ್ತಾನ ಐಸಿಸಿ ಆದಾಯದಲ್ಲಿ ತನಗೆ ಹೆಚ್ಚಿನ ಪಾಲನ್ನ ನೀಡಬೇಕೆಂದು ಬೇಡಿಕೆ ಇಟ್ಟಿದೆ. ಪಾಕಿಸ್ತಾನ ಪ್ರತಿ ವರ್ಷ ಐಸಿಸಿಯ ನಿಧಿಯಿಂದ 34.5 ಮಿಲಿಯನ್ ಡಾಲರ್ ಪಡೆಯುತ್ತದೆ. ಇದು ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಂತರ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಎರಡನೆಯದಾಗಿ ಭಾರತದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳನ್ನು ಪುನರಾರಂಭಿಸುವಂತೆ ಪಾಕ್ ಒತ್ತಾಯಿಸಿದೆ. ಕೊನೆಯದಾಗಿ, ಟಿ20 ವಿಶ್ವಕಪ್ನಲ್ಲಿ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರೊಂದಿಗೆ ಕೈಕುಲುಕಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ. ಪಿಸಿಬಿ ಮಾತ್ರವಲ್ಲ, ಬಿಸಿಬಿ ಕೂಡ ಐಸಿಸಿಯಿಂದ ಕೆಲವು ವಿಷಯಗಳನ್ನು ಒತ್ತಾಯಿಸಿತು. ಬಿಸಿಬಿ ಮುಖ್ಯಸ್ಥ ಅಮೀನುಲ್ ಇಸ್ಲಾಂ ಅವರು ಐಸಿಸಿ ಕಾರ್ಯಕ್ರಮವನ್ನು ಆಯೋಜಿಸುವ ಹಕ್ಕುಗಳ ಜೊತೆಗೆ ಹಣಕಾಸಿನ ಪರಿಹಾರವನ್ನು ಕೇಳಿದ್ದಾರೆ ಎಂದು ವರದಿಯಾಗಿದೆ.
ಸೂರ್ಯಕುಮಾರ್ ಫಿಫ್ಟಿ, ಯುಎಸ್ಎ ವಿರುದ್ಧ ಗೆದ್ದು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಶುಭಾರಂಭ!
ಪಂದ್ಯ ನಡೆಯದಿದ್ದರೆ ಐಸಿಸಿಗೇನು ನಷ್ಟ?
ಕ್ರಿಕೆಟ್ ಜಗತ್ತಿನ ಹೈವೋಲ್ಟೇಜ್ ಪಂದ್ಯವಾದ ಭಾರತ ಹಾಗೂ ಪಾಕಿಸ್ತಾನ ಪಂದ್ಯದಿಂದ ಐಸಿಸಿಗೆ ಭಾರೀ ಲಾಭವಿದೆ. ಪ್ರಸಾರ ಹಕ್ಕುಗಳು, ಜಾಹೀರಾತು ಮತ್ತು ಪ್ರಾಯೋಜಕತ್ವದ ಬಹುಪಾಲು ಆದಾಯ ಈ ಒಂದೇ ಪಂದ್ಯದಿಂದ ಬರುತ್ತದೆ. ಪಂದ್ಯ ರದ್ದಾದರೆ ಶ್ರೀಲಂಕಾದ ಆರ್ಥಿಕತೆಯ ಮೇಲೂ ಹೊಡೆತ ಬೀಳಲಿದೆ.