ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ranji Trophy 2025-26: ಉತ್ತರಾಖಂಡ ಪಂದ್ಯದಲ್ಲಿ ಡ್ರಾ ಸಾಧಿಸಿ, ಫೈನಲ್‌ಗೇರಿದ ಕರ್ನಾಟಕ!

ಕರ್ನಾಟಕ ಹಾಗೂ ಉತ್ತರಾಖಂಡ ನಡುವಣ 2025-26ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್‌ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿನ ಮುನ್ನಡೆಯ ನೆರವಿನಿಂದ ಕರ್ನಾಟಕ ತಂಡ ಫೈನಲ್‌ ಪಂದ್ಯಕ್ಕೆ ಪ್ರವೇಶ ಮಾಡಿತು. ಇದರೊಂದಿಗೆ ಕರ್ನಾಟಕದ ಹುಬ್ಬಳ್ಳಿಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಫೈನಲ್‌ ಪಂದ್ಯ ಫೆಬ್ರವರಿ 24 ರಂದು ಆರಂಭವಾಗಲಿದೆ.

2025-26ರ ಸಾಲಿನ ರಣಜಿ ಟ್ರೋಫಿ ಫೈನಲ್‌ಗೆ ಕರ್ನಾಟಕ ಪ್ರವೇಶ.

ಲಖನೌ: ದೇವದತ್‌ ಪಡಿಕ್ಕಲ್‌ ನಾಯಕತ್ವದ ಕರ್ನಾಟಕ (Karnataka) ತಂಡ 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿದೆ ಹಾಗೂ ಬರೋಬ್ಬರಿ ಒಂದು ದಶಕದ ಬಳಿಕ ರೆಡ್‌ ಬಾಲ್‌ ಕ್ರಿಕೆಟ್‌ ಟೂರ್ನಿಯನ್ನು ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ಗುರುವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಅಂತ್ಯವಾದ ಉತ್ತರಾಖಂಡ ವಿರುದ್ಧದ (KAR vs UTK) ಸೆಮಿಫೈನಲ್‌ ಪಂದ್ಯ ಡ್ರಾ ಆಯಿತು. ಆದರೆ, ಪ್ರಥಮ ಇನಿಂಗ್ಸ್‌ನಲ್ಲಿನ ಮುನ್ನಡೆಯ ಫಲವಾಗಿ ಕರ್ನಾಟಕ ತಂಡ ಫೈನಲ್‌ಗೆ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಂಡಿತು. ಫೆಬ್ರವರಿ 24 ರಂದು ಕರ್ನಾಟಕದ ಹುಬ್ಭಳ್ಳಿಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಕರ್ನಾಟಕ ಕಾದಾಟ ನಡೆಸಲಿದೆ.

ಈ ಪಂದ್ಯದಲ್ಲಿ ಕರ್ನಾಟಕ ತಂಡ ತನ್ನ ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿತು. ಪಂದ್ಯದ ಐದನೇ ಹಾಗೂ ಕೊನೆಯ ದಿನ ಬೆಳಗ್ಗೆ ಕರ್ನಟಕ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 74.3 ಓವರ್‌ಗಳಿಗೆ 323 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಎದುರಾಳಿ ಉತ್ತರಾಖಂಡ ತಂಡಕ್ಕೆ 826 ರನ್‌ಗಳ ಗುರಿಯನ್ನು ನೀಡಿತು. ಆದರೆ, ಈ ಅಸಾಧ್ಯ ಗುರಿಯನ್ನು ಹಿಂಬಾಲಿಸಿದ ಉತ್ತರಾಖಂಡ ತಂಡ, ಐದನೇ ದಿನದ ಟೀ ವಿರಾಮದ ವೇಳೆಗೆ 62 ಓವರ್‌ಗಳಿಗೆ 260 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಎರಡೂ ತಂಡಗಳ ನಾಯಕರ ಜತೆಗೆ ಅಂಪೈರ್‌ಗಳು ಚರ್ಚೆ ನಡೆಸಿ ಡ್ರಾ ಘೋಷಿಸಿದರು.

Ranji Trophy: ದೇವದತ್‌ ಪಡಿಕ್ಕಲ್‌ ದ್ವಿಶತಕ, ಫೈನಲ್‌ಗೆ ಇನ್ನಷ್ಟು ಸನಿಹವಾದ ಕರ್ನಾಟಕ!

ಪ್ರಥಮ ಇನಿಂಗ್ಸ್‌ನಲ್ಲಿ ಉತ್ತರಾಖಂಡ ತಂಡ, 233 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ತಮ್ಮ ಬ್ಯಾಟಿಂಗ್‌ನಲ್ಲಿ ತೀವ್ರ ಪೈಪೋಟಿಯನ್ನು ನೀಡಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳು ಬೇಗ ವಿಕೆಟ್‌ ಒಪ್ಪಿಸಿದರೂ ಅವ್ನೀಶ್‌ ಸುಧಾ (66 ರನ್‌), ಆದಿತ್ಯ ರಾವತ್‌ (53* ರನ್‌) ಹಾಗೂ ಅಭಯ್‌ ನೇಗಿ (57* ರನ್‌) ಅವರು ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಕರ್ನಾಟಕ ತಂಡದ ಪರ ಶ್ರೇಯಸ್‌ ಗೋಪಾಲ್‌ ಮೂರು ವಿಕೆಟ್‌ ಪಡೆದರೆ, ಪ್ರಸಿಧ್‌ ಕೃಷ್ಣ ಎರಡು ವಿಕೆಟ್‌ ಪಡೆದರು.



ದ್ವಿತೀಯ ಇನಿಂಗ್ಸ್‌ನಲ್ಲಿಯೂ ಸ್ಮರಣ್‌ ರವಿಚಂದ್ರನ್‌ ಶತಕ

ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಸ್ಮರಣ್‌ ರವಿಚಂದ್ರನ್‌ ಅವರು ದ್ವಿತೀಯ ಇನಿಂಗ್ಸ್‌ನಲ್ಲಿಯೂ ಶತಕ ಸಿಡಿಸಿದರು. ಅವರು ಆಡಿದ 149 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 12 ಬೌಂಡರಿಗಳೊಂದಿಗೆ 127 ರನ್‌ಗಳನ್ನು ಗಳಿಸಿದರು. ಇನ್ನು ಕೆಎಲ್‌ ರಾಹುಲ್‌ 103 ಎಸೆತಗಳಲ್ಲಿ ಅಜೇಯ 86 ರನ್‌ ಗಳಿಸಿದರು. ಇದಕ್ಕೂ ಮುನ್ನ 97ಎಸೆತಗಳಲ್ಲಿ 52 ರನ್‌ಗಳನ್ನು ಗಳಿಸಿದರು.



ದೇವದತ್‌ ಪಡಿಕ್ಕಲ್‌ ದ್ವಿಶತಕ

ಇನ್ನು ಪ್ರಥಮ ಇನಿಂಗ್ಸ್‌ನಲ್ಲಿ ದೇವದತ್‌ ಪಡಿಕ್ಕಲ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿ ದ್ವಿಶತಕ ಬಾರಿಸಿದ್ದರು. ಅವರು ಆಡಿದ 330 ಎಸೆತಗಳಲ್ಲಿ ಮೂರು ಹಾಗೂ 29 ಬೌಂಡರಿಗಳೊಂದಿಗೆ 232 ರನ್‌ಗಳನ್ನು ಗಳಿಸಿದ್ದರು. ಇವರ ಜೊತೆಗೆ ಕೆಎಲ್‌ ರಾಹುಲ್‌ 141 ರನ್‌ ಹಾಗೂ ಸ್ಮರಣ್‌ ರವಿಚಂದ್ರನ್‌ 135 ರನ್‌ ಗಳನ್ನು ಗಳಿಸಿದರು. ಆ ಮೂಲಕ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 736 ರನ್‌ಗಳನ್ನು ಕಲೆ ಹಾಕಿತ್ತು.ಇದಕ್ಕೆ ಪ್ರತಿಯಾಗಿ ಉತ್ತರಾಖಂಡ 233 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.