ಚಂಡೀಗಢ: ಇಲ್ಲಿನ ಮುಲ್ಲಾನ್ಪುರದ ಮಹಾರಾಜ ಯದವೀಂದ್ರ ಸಿಂಗ್ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 37ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಎದುರಾಳಿ ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲ ಬ್ಯಾಟಿಂಗ್ಗೆ ಆಹ್ವಾನ ನೀಡಿದ್ದಾರೆ. ಕಡಿಮೆ ಮೊತ್ತಕ್ಕೆ ಆತಿಥೇಯ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಲು ಬೆಂಗಳೂರು ತಂಡ ಎದುರು ನೋಡುತ್ತಿದೆ.
ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯಕ್ಕೆ ಆರ್ಸಿಬಿ ತನ್ನ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆಯನ್ನು ಮಾಡಿಕೊಂಡಿದೆ. ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ ಅವರ ಸ್ಥಾನಕ್ಕೆ ವೆಸ್ಟ್ ಇಂಡೀಸ್ ದೈತ್ಯ ಆಲ್ರೌಂಡರ್ ರೊಮ್ಯಾರಿಯೊ ಶೆಫರ್ಡ್ ಪ್ರಸಕ್ತ ಟೂರ್ನಿಯಲ್ಲಿ ಆಡಲು ಮೊದಲ ಅವಕಾಶವನ್ನು ನೀಡಲಾಗಿದೆ. ಈ ಬಗ್ಗೆ ಟಾಸ್ ವೇಳೆ ಬೆಂಗಳೂರು ನಾಯಕ ರಜತ್ ಪಾಟಿದಾರ್ ಮಾಹಿತಿ ನೀಡಿದ್ದಾರೆ.
IPL 2025: ಗೆಲುವಿನ ಸಂತಸದಲ್ಲಿದ್ದ ನಾಯಕ ಗಿಲ್ಗೆ 12 ಲಕ್ಷ ದಂಡದ ಬರೆ
ಇನ್ನು ಎದುರಾಳಿ ಪಂಜಾಬ್ ಕಿಂಗ್ಸ್ ತಂಡದ ಪ್ಲೇಯಿಂಗ್ XIನಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ನಾಯಕ ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ಪಂದ್ಯವಾಡಿದ್ದ ಅದೇ ಆಡುವ ಬಳಗವನ್ನು ತನ್ನ ತವರು ಪಂದ್ಯಕ್ಕೆ ಪಂಜಾಬ್ ಉಳಿಸಿಕೊಂಡಿದೆ.
ಇತ್ತಂಡಗಳ ಪ್ಲೇಯಿಂಗ್ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್(ನಾಯಕ), ಜಿತೇಶ್ ಶರ್ಮಾ(ವಿ.ಕೀ), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಸುಯಶ್ ಶರ್ಮಾ, ಜಾಶ್ ಹೇಝಲ್ವುಡ್, ಯಶ್ ದಯಾಳ್
ಪಂಜಾಬ್ ಕಿಂಗ್ಸ್: ಪ್ರಭ್ಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಜಾಶ್ ಇಂಗ್ಲಿಸ್ (ವಿ.ಕೀ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯ್ನಿಸ್, ಮಾರ್ಕೊ ಯೆನ್ಸನ್, ಕ್ಸೇವಿಯರ್ ಬಾರ್ಟ್ಲೆಟ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್
ಕಳೆದ ಪಂದ್ಯದಲ್ಲಿ ಪಂಜಾಬ್ಗೆ ಮಣಿದಿದ್ದ ಆರ್ಸಿಬಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಕೊನೆಯ ಪಂದ್ಯದಲ್ಲಿ ಇದೇ ಪಂಂಜಾಬ್ ಕಿಂಗ್ಸ್ ಎದುರು ಸೋಲು ಅನುಭವಿಸಿತ್ತು. ತವರು ಅಂಗಣ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 18 ರಂದು ನಡೆದಿದ್ದ ಪಂದ್ಯದಲ್ಲಿ 5 ವಿಕೆಟ್ಗಳಿಂದ ಸೋಲು ಅನುಭವಿಸಿತ್ತು. ಮಳೆಯ ಕಾರಣ 14 ಓವರ್ಗಳಿಗೆ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ವೈಫಲ್ಯದ ಹೊರತಾಗಿಯೂ ಟಿಮ್ ಡೇವಿಡ್ ಅವರ ನಿರ್ಣಾಯಕ ಅರ್ಧಶತಕದಿಂದ 95 ರನ್ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಪಂಜಾಬ್, ನೆಹಾಲ್ ವಧೇರಾ ಬ್ಯಾಟಿಂಗ್ ಬಲದಿಂದ ಗೆದ್ದು ಸಂಭ್ರಮಿಸಿತ್ತು.
ನಾಲ್ಕನೇ ಸ್ಥಾನದಲ್ಲಿ ಆರ್ಸಿಬಿ
ಆರ್ಸಿಬಿ ತಂಡ ಇಲ್ಲಿಯವರೆಗೂ ಆಡಿದ 7 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, ಇನ್ನುಳಿದ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಎಂಟು ಅಂಕಗಳನ್ನು ಕಲೆ ಹಾಕಿರುವ ಪಂಜಾಬ್, ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಮತ್ತೊಂದೆಡೆ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ 7 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಪಡೆದು, ಇನ್ನುಳಿದ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದೆ.