ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs ENG: ಭಾರತ ತಂಡದಲ್ಲಿ ತಿಲಕ್‌ ವರ್ಮಾ ಬದಲು ಸಂಜು ಸ್ಯಾಮ್ಸನ್‌ ಆಡಬೇಕೆಂದ ಕೆ ಶ್ರೀಕಾಂತ್‌!

ಇಂಗ್ಲೆಂಡ್‌ ಟಿ20ಐ ಸರಣಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ತಿಲಕ್‌ ವರ್ಮಾ ಅವರನ್ನು ಕೈ ಬಿಟ್ಟು ಸಂಜು ಸ್ಯಾಮ್ಸನ್‌ ಅವರಿಗೆ ತಂಡದ ಪ್ಲೇಯಿಂಗ್‌ XIನಲ್ಲಿ ಸ್ಥಾನ ನೀಡಬೇಕೆಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ ಅವರು ಸಲಹೆ ನೀಡಿದ್ದಾರೆ.

ತಿಲಕ್‌ ವರ್ಮಾ ಬೌನ್ಸ್‌ಗೆ ಸರಿಯಾಗಿ ಬ್ಯಾಟ್‌ ಮಾಡಲ್ಲ ಎಂದ ಕೆ ಶ್ರೀಕಾಂತ್.

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಯಲ್ಲಿ (IND vs ENG) ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ತಿಲಕ್‌ ವರ್ಮಾ (Tilak Verma) ಅವರನ್ನು ಕೈ ಬಿಟ್ಟು ಸಂಜು ಸ್ಯಾಮ್ಸನ್‌ ತಂಡದಲ್ಲಿ ಸ್ಥಾನ ನೀಡಬೇಕೆಂದು ಬಿಸಿಸಿಐ ಮಾಜಿ ಸೆಲೆಕ್ಟರ್‌ ಕೃಷ್ಣಮಾಚಾರಿ ಶ್ರೀಕಾಂತ್‌ (K Srikkanth) ಅವರು ಆಗ್ರಹಿಸಿದ್ದಾರೆ. ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಭಾರತ ತಂಡ ಇನ್ನೂ ಮೊದಲ ಗೆಲುವಿನ ಪ್ರಯತ್ನದಲ್ಲಿದ್ದು, ಇಲ್ಲಿಯವರಗೂ ಆಡಿದ ಆರು ಪಂದ್ಯಗಳ ಪೈಕಿ ಐದರಲ್ಲಿ ಸೋಲು ಅನುಭವಿಸಿದ್ದು, ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯವಾಗಿದೆ.

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಕೆ ಶ್ರೀಕಾಂತ್‌, "ತಿಲಕ್ ವರ್ಮಾ ಈಗಾಗಲೇ ತಂಡದ ಉಪನಾಯಕರಾಗಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಶೀಘ್ರದಲ್ಲೇ ಅವರು ನಾಯಕನಾಗುವ ಸಾಧ್ಯತೆಯೂ ಕಾಣಿಸುತ್ತಿದೆ. ಆದರೆ ಇಂಗ್ಲೆಂಡ್‌ನ ವೇಗ ಮತ್ತು ಹೆಚ್ಚುವರಿ ಬೌನ್ಸ್ ಕಂಡು, ತಿಲಕ್ ವರ್ಮಾ ಅವರೇ 'ನಾನು ಈಗ ಬ್ಯಾಟಿಂಗ್‌ಗೆ ಹೋಗುವುದಿಲ್ಲ' ಎಂದು ಹೇಳಿರಬಹುದೆನಿಸುತ್ತದೆ. ಸದ್ಯ ಅವರು ಸಂಪೂರ್ಣ ಗೊಂದಲದಲ್ಲಿರುವಂತೆ ಕಾಣುತ್ತಿದ್ದಾರೆ," ಎಂದು ಹೇಳಿದ್ದಾರೆ.

IND vs ENG: ಭಾರತ ತಂಡದ ಹೀನಾಯ ಸೋಲಿಗೆ ಕಾರಣ ತಿಳಿಸಿದ ದಿನೇಶ್‌ ಕಾರ್ತಿಕ್‌!

"ನೀವು ತಿಲಕ್ ವರ್ಮಾರನ್ನು ತಂಡದ ಪ್ರಮುಖ ಬ್ಯಾಟರ್ ಹಾಗೂ ಉಪನಾಯಕನನ್ನಾಗಿ ಮಾಡಿದ್ದೀರಿ. ಆದರೆ ವೇಗದ ಬೌಲಿಂಗ್ ಎದುರಿಸುವಾಗ ಅವರನ್ನು ರಕ್ಷಿಸುತ್ತಿದ್ದೀರಾ? ಅವರಿಗಿಂತ ಮೊದಲು ಅಕ್ಷರ್ ಪಟೇಲ್ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಲಾಗುತ್ತಿದೆ. ಶಾರ್ಟ್-ಪಿಚ್ ಎಸೆತಗಳ ವಿರುದ್ಧ ತಿಲಕ್ ವರ್ಮಾ ದುರ್ಬಲರಾಗಿದ್ದಾರೆ ಎಂಬುದು ತಂಡದ ಆಡಳಿತಕ್ಕೂ ಗೊತ್ತಿರುವುದರಿಂದಲೇ ಅವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಅವರನ್ನು ಕೈಬಿಡಬೇಕು ಎಂದು ನಾನು ನಿರಂತರವಾಗಿ ಹೇಳುತ್ತಾ ಬಂದಿದ್ದೇನೆ. ಆದರೆ ಅವರನ್ನು ತಂಡದಿಂದ ಹೊರಗಿಡುತ್ತಿಲ್ಲ," ಎಂದು 1983ರ ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರ ಶ್ರೀಕಾಂತ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಮೂರನೇ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ 11 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ನಿರಾಸೆ ಮೂಡಿಸಿದರು. ಕ್ರೀಸ್‌ನಲ್ಲಿ ಅವರು ಪರದಾಡುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿತ್ತು. ಅವರ ಈ ಹೋರಾಟದ ವೈಫಲ್ಯ ಭಾರತದ ಒಟ್ಟಾರೆ ಕಳಪೆ ಬ್ಯಾಟಿಂಗ್ ಪ್ರದರ್ಶನದ ಒಂದು ಭಾಗವಾಗಿತ್ತು. ಈ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್ ನೆಲದಲ್ಲಿ ಪುರುಷರ ಟಿ20ಐ ಕ್ರಿಕೆಟ್‌ನಲ್ಲೇ ತನ್ನ ಅತಿ ಕಡಿಮೆ ತಂಡದ ಮೊತ್ತಕ್ಕೆ ಆಲೌಟ್ ಆಗಿತ್ತು.

ವೈಫಲ್ಯದ ಹೊರತಾಗಿಯೂ ವೈಭವ್‌ ಸೂರ್ಯವಂಶಿಯನ್ನು ಬೆಂಬಲಿಸಿದ ಅಭಿಷೇಕ್‌ ನಾಯರ್!

ತಿಲಕ್‌ ವರ್ಮಾ ಬದಲು ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಿ

ಇದೇ ವೇಳೆ, ಶ್ರೀಕಾಂತ್ ಅವರು ಭಾರತದ ಟಿ20 ತಂಡದ ಪ್ಲೇಯಿಂಗ್ XIನಲ್ಲಿ ತಿಲಕ್ ವರ್ಮಾ ಬದಲು ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡುವುದೇ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. "ನಾನು ತಿಲಕ್ ವರ್ಮಾ ಬದಲು ಸಂಜು ಸ್ಯಾಮ್ಸನ್ ಅವರನ್ನೇ ಆಡಿಸಲು ಬಯಸುತ್ತೇನೆ," ಎಂದು ಶ್ರೀಕಾಂತ್ ಹೇಳಿದ್ದಾರೆ.

ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸತತ ಮೂರು ಪಂದ್ಯಗಳಲ್ಲಿ ವಿಫಲವಾದ ಬಳಿಕ ಸಂಜು ಸ್ಯಾಮ್ಸನ್ ಅವರನ್ನು ಭಾರತದ ತಂಡದಿಂದ ಕೈಬಿಡಲಾಗಿತ್ತು. ಅವರ ಸ್ಥಾನದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಗಿತ್ತು. ಆದರೆ ಸೂರ್ಯವಂಶಿ ಕೂಡ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಹೀಗಾಗಿ ಉಳಿದಿರುವ ಒಂದು ಪಂದ್ಯಕ್ಕೆ ಸ್ಯಾಮ್ಸನ್ ಮತ್ತೆ ತಂಡಕ್ಕೆ ಮರಳುವ ಸಾಧ್ಯತೆ ಇದೆ.