ಕಾರ್ಕಳ: ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಹಾಗೂ ಆಟಗಾರ ರವಿಶಾಸ್ತ್ರಿ(Ravi Shastri) ಅವರು ಪ್ರತಿ ವರ್ಷದಂತೆ ಈ ಬಾರಿಯೂ ತಮ್ಮ ಕುಟುಂಬದ ಮೂಲ ಸ್ಥಾನ ಕಾರ್ಕಳ ತಾಲೂಕಿನ ಬೈಲೂರು ಎರ್ಲಪಾಡಿ ಕರ್ವಾಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನ(Karvalu Vishnumoorthi temple)ಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೈಲೂರು ಎರ್ಲಪಾಡಿ ಕರ್ವಾಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಅನಂತ ಪಟ್ಟಾಭಿ ರಾವ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಭೋಜ ಶೆಟ್ಟಿ, ಪ್ರಮುಖರಾದ ಸಂದೀಪ್ ಶೆಟ್ಟಿ, ಸುಧಾಕರ ಹೆಗ್ಡೆ, ಪ್ರಶಾಂತ್ ಶೆಟ್ಟಿ, ದಿಲೀಪ್ ಶೆಟ್ಟಿ, ತಂತ್ರಿಗಳಾದ ವರದರಾಜ್ ತಂತ್ರಿ, ಹರಿಶ್ಚಂದ್ರ ರಾವ್, ರವಿಶಾಸ್ತಿ ಕುಟುಂಬಸ್ಥರಾದ ವಾದಿರಾಜ ಪೆಜತ್ತಾಯ ಉಪಸ್ಥಿತರಿದ್ದರು.
ಹಲವು ವರ್ಷಗಳಿಂದ ಮಕ್ಕಳಾಗದೇ ಇದ್ದಾಗ 2007ರಲ್ಲಿ ರವಿಶಾಸ್ತ್ರಿ ದಂಪತಿ ಇಲ್ಲಿಗೆ ಮೊದಲ ಬಾರಿಗೆ ಭೇಟಿ ನೀಡಿ ನಾಗಬನದಲ್ಲಿ ಪೂಜೆಗೈದಿದ್ದರು. ಇದಾದ ಮರು ವರ್ಷವೇ ಈ ದಂಪತಿಗೆ ಮಗುವಾಯಿತು. ಇದರಿಂದ ಪ್ರಭಾವಿತರಾದ ಶಾಸ್ತ್ರಿ ಅವರು ನಿರಂತರವಾಗಿ ವರ್ಷಕ್ಕೊಮ್ಮೆ ಭೇಟಿ ನೀಡಿ ಇಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಲೇ ಬರುತ್ತಿದ್ದಾರೆ.
ಇದನ್ನೂ ಓದಿ IPL 2025: ಐಪಿಎಲ್ನಲ್ಲಿ ಅತಿ ವೇಗದ ಶತಕ ಬಾರಿಸಿದ ದಾಂಡಿಗರು
ಶಾಸ್ತ್ರಿಯವರ ಪೂರ್ವಜರು ಎರ್ಲಪಾಡಿಯ ಕರ್ವಾಲುಗೆ ಸೇರಿದವರು. ಐವತ್ತರ ದಶಕದಲ್ಲಿ ರವಿಶಾಸ್ತ್ರಿಯವರ ಅಜ್ಜ ,ಎಂ ವಿ ಶಾಸ್ತ್ರಿ ಮಂಗಳೂರಿನ ಪ್ರಸಿದ್ಧ ವೈದ್ಯರಾಗಿದ್ದವರು. ಬಳಿಕ ರವಿಶಾಸ್ತ್ರಿ ತಂದೆ ಜಯದ್ರಥ ಶಾಸ್ತ್ರಿ ಅಂದಿನ ಮದ್ರಾಸ್ನಲ್ಲಿ ಶಿಕ್ಷಣ ಮುಗಿಸಿ ಮುಂಬಯಿನಲ್ಲಿ ಡಾಕ್ಟರ್ ಆಗಿದ್ದರು. ಮುಂಬೈಯಲ್ಲೇ ಬೆಳೆದ ರವಿಶಾಸ್ತ್ರಿ ಅಲ್ಲೇ ಶಿಕ್ಷಣ ಪಡೆದು ದೇಶದ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗಿದ್ದರು.
ಇದೇ ಶನಿವಾರ(ಮಾ.22) ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿ ಬಗ್ಗೆ ಮಾತನಾಡಿದ ರವಿ ಶಾಸ್ತ್ರಿ ಹತ್ತು ತಂಡದ ಜಿದ್ದಾಜಿದ್ದಿನ ಹೋರಾಟ ಕಣ್ತುಂಬಿಕೊಳ್ಳಲು ಕ್ರೀಡಾ ಕ್ಷೇತ್ರವೆ ಕಾತರದಲ್ಲಿದೆ. ಐಪಿಎಲ್ ಯುವ ಆಟಗಾರರಿಗೆ ತೆರೆದಿಟ್ಟ ವೇದಿಕೆಯಾಗಿದ್ದು ದಾಖಲೆಗಳಿಗೆ ಸ್ಪೂರ್ತಿದಾಯಕವಾಗಿದೆ ಎಂದರು. ರವಿಶಾಸ್ತ್ರಿ ಐಪಿಎಲ್ನಲ್ಲಿ ವೀಕ್ಷಕ ವಿವರಣೆ ಮಾಡಲಿದ್ದಾರೆ.