ಮುಂಬಯಿ, ಮಾ.4: ಚಂದ್ರಗ್ರಹಣದ ಕಾರಣ ಮಂಗಳವಾರ ಟೀಮ್ ಇಂಡಿಯಾ ತಮ್ಮ ತರಬೇತಿ ಅವಧಿಯನ್ನು ವಿಳಂಬಗೊಳಿಸಿದರೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಅವರು ಎರಡು ಗಂಟೆಗಳ ಹೆಚ್ಚುವರಿ ಬ್ಯಾಟಿಂಗ್ ಅಭ್ಯಾಸ ನಡೆಸಿ ಗಮನಸೆಳೆದರು. 135 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ ಪಾಂಡ್ಯ ಅವರ ಹೊಡೆತಗಳನ್ನು ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ಆರಂಭದಲ್ಲಿ ಬೌಲರ್ಗಳ ವಿರುದ್ಧ, ಪ್ಲೇಸ್ಮೆಂಟ್ ಮತ್ತು ಟೈಮಿಂಗ್ನಲ್ಲಿ ಕೆಲಸ ಮಾಡುವಾಗ ಪಂಚ್ ಮತ್ತು ಡ್ರೈವ್ ಹೊಡೆತಗಳ ಅಭ್ಯಾಸ ನಡೆಸಿದ ಪಾಂಡ್ಯ, ಬಳಿಕ ಪ್ರತ್ಯೇಕ ನೆಟ್ನಲ್ಲಿ ಡೋಸ್ಚೇಟ್ನಿಂದ ಥ್ರೋಡೌನ್ಗಳನ್ನು ಎದುರಿಸಿದರು. ಈ ವೇಳೆ ಅವರ ಬ್ಯಾಟಿಂಗ್ನಲ್ಲಿ ಸಮಸ್ಯೆಗಳಿದ್ದವು, ಅವರ ಕೈಯಲ್ಲಿ ಬ್ಯಾಟ್ ತಿರುಗುತ್ತಿತ್ತು ಮತ್ತು ಅವರ ಸೊಂಟವು ಸರಾಗವಾಗಿ ತಿರುಚುತ್ತಿರಲಿಲ್ಲ. ರಯಾನ್ ಜೊತೆ ಮಾತುಕತೆ ನಡೆಸಿ ತಮ್ಮ ತಪ್ಪುಗಳನ್ನು ತಿದ್ದಿಕೊಂಡರು.
ಸಂಜೆ 7:30 ರ ನಂತರ ತರಬೇತಿ ಅವಧಿ ಪ್ರಾರಂಭವಾಯಿತು. ಹಾರ್ದಿಕ್ ತಮ್ಮ ಅಭ್ಯಾಸ ಕೊನೆಗೊಳಿಸುವಾಗ ಸುಮಾರು 10:10 ಸಮಯವಾಗಿತ್ತು. ಹೆಚ್ಚುವರಿ ಬ್ಯಾಟಿಂಗ್ ಅಭ್ಯಾಸ ವೇಳೆ ಅವರು ತಮ್ಮ ಪವರ್ಹಿಟಿಂಗ್ ಸುಧಾರಿಸುವತ್ತ ಗಮನಹರಿಸಿದರು ಮತ್ತು ಇಂಗ್ಲೆಂಡ್ ವಿರುದ್ಧದ ದೊಡ್ಡ ಸೆಮಿಫೈನಲ್ ಹಣಾಹಣಿಗೆ ತಮ್ಮ ಬ್ಯಾಟಿಂಗ್ ಫಾರ್ಮ್ ಮರಳಿ ಪಡೆಯಲು ಹತಾಶರಾಗಿದ್ದರು.
ನಿರ್ಣಾಯಕ ಸೆಮಿಫೈನಲ್ ಪಂದ್ಯಕ್ಕೆ ಭಾರತ ತನ್ನ ಆಡುವ ಬಳಗದಲ್ಲಿ ಎರಡು ಬದಲಾವಣೆ ಮಾಡುವ ಸಾಧ್ಯತೆ ಇದೆ. ಮಿಸ್ಟರಿ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಬದಲಿಗೆ, ಅನುಭವಿ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರನ್ನು ಕಣಕ್ಕಿಳಿಸಲು ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಇದೇ ವೇಳೆ ದುಬಾರಿಯಾಗುತ್ತಿರುವ ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ಬದಲು ಹಿರಿಯ ವೇಗಿ ಮೊಹಮ್ಮದ್ ಸಿರಾಜ್ಗೆ ಅವಕಾಶ ನೀಡುವ ಸಾಧ್ಯತೆ ಇದೆ.
ದ. ಆಫ್ರಿಕಾ vs ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ, ಮುಖಾಮುಖಿ ದಾಖಲೆ ಹೀಗಿದೆ
ಸೆಮಿ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ
ಅಭಿಷೇಕ್ ಶರ್ಮ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.