ರಾಯ್ಪುರ, ಮೇ 11: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs MI) ತಂಡದ ನಾಯಕ ರಜತ್ ಪಾಟೀದಾರ್(Rajat Patidar) ಪಂದ್ಯದ ಬಳಿಕ ನೀಡುತ್ತಿರುವ ಹೇಳಿಕೆಗಳು ಆರ್ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಪಂದ್ಯದ ಸೋಲಿನ ಬಳಿಕ ನಾವು ಈ ಬಾರಿ ಟ್ರೋಫಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಇಲ್ಲ ಎಂದಿದ್ದರು. ಇದೀಗ ಮುಂಬೈ ವಿರುದ್ಧದ ರೋಚಕ ಗೆಲುವಿನ ಹೊರತಾಗಿಯೂ ನಾವು ಗೆಲ್ಲಲು ಅರ್ಹರು ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ.
ಭಾನುವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ, ನಮನ್ಧೀರ್(47) ಹಾಗೂ ತಿಲಕ್ ವರ್ಮಾ(57) ಹೋರಾಟದಿಂದಾಗಿ 7 ವಿಕೆಟ್ಗೆ 166 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಆರ್ಸಿಬಿ ಹಲವು ನಾಟಕೀಯ ಕುಸಿತದ ಹೊರತಾಗಿಯೂ 8 ವಿಕೆಟ್ಗೆ 167 ರನ್ ಬಾರಿಸಿ ಗೆಲುವು ಸಾಧಿಸಿತು.
ತನ್ನ 2ನೇ ತವರು ರಾಯ್ಪುರದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಆರ್ಸಿಬಿ 2 ವಿಕೆಟ್ನಿಂದ ರೋಚಕವಾಗಿ ಗೆದ್ದಿದ್ದು, 11 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. ಮುಂಬೈ 8 ಸೋಲಿನೊಂದಿಗೆ ಅಧಿಕೃತವಾಗಿ ಪ್ಲೇ-ಆಫ್ರೇಸ್ನಿಂದ ಹೊರಬಿದ್ದಿತು.
RCB vs MI: ಗೋಲ್ಡನ್ ಡಕ್ ಮೂಲಕ ಅನಗತ್ಯ ದಾಖಲೆ ಬರೆದ ವಿರಾಟ್ ಕೊಹ್ಲಿ
ಗೆಲುವಿನ ಬಳಿಕ ಮಾತನಾಡಿದ ಪಾಟೀದಾರ್, "ನಮ್ಮ ಬ್ಯಾಟಿಂಗ್ ಲೈನ್ಅಪ್ನೊಂದಿಗೆ, ನಾವು ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಬೇಕಿತ್ತು. ಆದರೆ ನಾವು ಕಷ್ಟಪಟ್ಟು ಪಂದ್ಯವನ್ನು ಗೆದ್ದವು. ಒಟ್ಟಾರೆಯಾಗಿ, ಉತ್ತಮ ಆಟ, ಮತ್ತು ಕ್ರುನಾಲ್ ಪಾಂಡ್ಯ ತಂಡಕ್ಕಾಗಿ ಆಡಿದ ರೀತಿ ಉತ್ತಮವಾಗಿತ್ತು. ಆದರೆ ನಾವು ಈ ಗೆಲುವಿಗೆ ಅರ್ಹರಲ್ಲ" ಎಂದರು.
ಪಾಟೀದಾರ್ ಹೇಳಿಕೆಗೆ ಕೆಲವು ಆರ್ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ನಾಯಕನಾಗಿ ತಂಡದ ಆತ್ಮವಿಶ್ವಾಸ ಹೆಚ್ಚಿಸುವ ಬದಲು ಕುಗ್ಗಿಸುವ ಕೆಲಸ ಮಾಡುತ್ತಿದ್ದೀರಿ, ಗೆಲುವಿಗೆ ಅರ್ಹರಲ್ಲದಿದ್ದರೆ ತಂಡವನ್ನು ತೊರೆಯಿರಿ ಎಂದು ಖಾರವಾಗಿಯೇ ಕಮೆಂಟ್ ಮಾಡಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಮುಂಬೈ 20 ಓವರಲ್ಲಿ 166/7 (ತಿಲಕ್ 57, ನಮನ್ 47, ಭುವನೇಶ್ವರ್ 4-23), ಆರ್ಸಿಬಿ 20 ಓವರಲ್ಲಿ 167/8 (ಕೃನಾಲ್ 73, ಬೆಥೆಲ್ 27, ಕಾರ್ಬಿನ್ 4-26)
ಪಂದ್ಯಶ್ರೇಷ್ಠ: ಭುವನೇಶ್ವರ್ ಕುಮಾರ್.