ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ದ 4ನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡ ಭಾರತ ಸದ್ಯ ಸರಣಿ ಸೋಲಿನ ಭೀತಿಯಿಂದ ಪಾರಾಗಿದ್ದರೂ ಕೂಡ ಅಂತಿಮ ಹಾಗೂ 5ನೇ ಪಂದ್ಯ(IND vs ENG 5th Test) ಕೂಡ ನಿರ್ಣಾಯಕವೆನಿಸಿದೆ. 4 ಪಂದ್ಯಗಳ ಬಳಿಕ ಇಂಗ್ಲೆಂಡ್ ಸದ್ಯ 2-1ರಿಂದ ಮುನ್ನಡೆಯಲ್ಲಿದೆ. ಸರಣಿ ಸೋಲು ತಪ್ಪಿಸಬೇಕಿದ್ದರೆ ಭಾರತಕ್ಕೆ ಅಂತಿಮ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಹೀಗಾಗಿ ಈ ಪಂದ್ಯದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ(Jasprit Bumrah) ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ.
ನಾಲ್ಕನೇ ಪಂದ್ಯದ ಭಾರತದ ಬೌಲಿಂಗ್ ಇನಿಂಗ್ಸ್ ವೇಳೆ ಬುಮ್ರಾ ಮೆಟ್ಟಿಲು ಇಳಿಯುವಾಗ ಕಾಲು ಜಾರಿದ್ದರಿಂದ ಕಣಕಾಲಿನಲ್ಲಿ ನೋವು ಉಂಟಾಗಿತ್ತು. ಹೀಗಾಗಿ ಅವರು ಕೆಲ ಕಾಲ ಫೀಲ್ಡಿಂಗ್ ನಡೆಸಿರಲಿಲ್ಲ. ಇನ್ನೊಂದೆಡೆ ಕಾರ್ಯದೊತ್ತಡ ನಿಭಾಯಿಸುವ ನಿಟ್ಟಿನಲ್ಲಿ ಬೂಮ್ರಾ ಈ ಸರಣಿಯ 5 ಪಂದ್ಯಗಳ ಪೈಕಿ ಮೂರರಲ್ಲಿ ಮಾತ್ರ ಆಡಲಿದ್ದಾರೆ ಎನ್ನಲಾಗಿತ್ತು. 1 ಮತ್ತು 3ನೇ ಟೆಸ್ಟ್ನಲ್ಲಿ ಆಡಿದ್ದ ಬುಮ್ರಾ 4ನೇ ಟೆಸ್ಟ್ನಲ್ಲಿ ವಿಶ್ರಾಂತಿ ಪಡೆಯಬೇಕಿತ್ತು. ಆದರೆ ಭಾರತ ಪಾಲಿಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾದ ಕಾರಣ ಬುಮ್ರಾರನ್ನು ಆಡಿಸಲಾಗಿತ್ತು. ಇದೀಗ ನಿರ್ಣಾಯಕ 5ನೇ ಪಂದ್ಯದಲ್ಲೂ ಬುಮ್ರಾ ಕಣಕ್ಕಿಳಿಸಲು ಕೋಚ್ ಗಂಭೀರ್ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
"ಸರಣಿಯಲ್ಲಿ ನಾವು ಇನ್ನೂ 2-1 ಹಿನ್ನಡೆಯಲ್ಲಿದ್ದೇವೆ. ಇದು ಭಾರತೀಯ ತಂಡ. ಓವಲ್ಗೆ ಹೋಗುವಾಗ ನಮಗೆ ಹೆಚ್ಚಿನ ಆತ್ಮವಿಶ್ವಾಸ ಇರುತ್ತದೆ ಎಂದು ನನಗೆ ಖಚಿತವಾಗಿದೆ, ಆದರೆ ನಾವು ಯಾವುದನ್ನೂ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಇದು ಹೊಸ ಪಂದ್ಯವಾಗಲಿದೆ ಎಂದು ನಾನು ಭಾವಿಸುತ್ತೇನೆ. ಇದು ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ ನಡೆಯಲಿದೆ ಮತ್ತು ನಾವು ಅದನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧರಿದ್ದೇವೆ" ಎಂದು ಗಂಭೀರ್ ಹೇಳಿದರು.
ಇದನ್ನೂ ಓದಿ IND vs ENG 4th Test: ಟೆಸ್ಟ್ನಲ್ಲಿ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ
‘ಆಕಾಶ್ದೀಪ್ ಗಾಯದ ಬಗ್ಗೆ ಫಿಸಿಯೋಗಳು ಪರಿಶೀಲಿಸುತ್ತಿದ್ದಾರೆ. ಅವರಿಂದ ಇನ್ನಷ್ಟೇ ವರದಿ ಬರಬೇಕಿದೆ. ಸದ್ಯ ಅವರು ಅಭ್ಯಾಸ ಶಿಬಿರದಲ್ಲಿ ಬೌಲ್ ನಡೆಸುತ್ತಿದಾರೆ’ ಎಂದರು.