ಕರಾಚಿ: ಫೆ.19ರಿಂದ ಪಾಕಿಸ್ತಾನ ಆತಿಥ್ಯದಲ್ಲಿ ಪಾಕ್(IND vs PAK) ಮತ್ತು ಯುಎಇಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಎರಡು ದಿನ ಬಾಕಿ ಇರುವಾಗಲೇ ರಾಷ್ಟ್ರಧ್ವಜಕ್ಕೆ(Indian Flag Controversy) ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತದ ಧ್ವಜವನ್ನು ಹೊರತುಪಡಿಸಿ ಉಳಿದೆಲ್ಲ ಪಾಲ್ಗೊಳ್ಳುವ ರಾಷ್ಟ್ರಗಳ ಧ್ವಜವನ್ನು ಸ್ಟೇಡಿಯಂನಲ್ಲಿ ಹಾಕಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಬಿಸಿಸಿಐ, ಐಸಿಸಿಗೆ ದೂರು ನೀಡುವ ಸಾಧ್ಯತೆ ಇದೆ.
ಕೆಲ ದಿನಗಳ ಹಿಂದೆ ಭಾರತ ಕ್ರಿಕೆಟ್ ತಂಡದ ಜೆರ್ಸಿಯಲ್ಲಿ ಆತಿಥೇಯ ಪಾಕಿಸ್ತಾನದ ಹೆಸರನ್ನು ಪ್ರಿಂಟ್ ಹಾಕಿಸಲು ಬಿಸಿಸಿಐ ವಿರೋಧ ವ್ಯಕ್ತಪಡಿಸಿತ್ತು. ಆದರೆ ಐಸಿಸಿ ಇದನ್ನು ಗಂಭೀರವಾಗಿ ಪರಿಗಣಿಸಿ ಬಿಸಿಸಿಐಗೆ ಎಚ್ಚರಿಕೆ ನೀಡಿತ್ತು. ಬಳಿಕ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿ ಐಸಿಸಿಯ ಎಲ್ಲಾ ನಿಯಮಗಳಿಗೆ ನಾವು ಬದ್ಧರಾಗಿದ್ದೇವೆ ಎಂದು ಬಿಸಿಸಿಐ ಹೇಳಿತ್ತು. ಈ ಮೂಲಕ ಜೆರ್ಸಿ ವಿವಾದ ಸುಖಾಂತ್ಯ ಕಂಡಿತ್ತು. ಇದೀಗ ಧ್ವಜದ ಕುರಿತಾಗಿ ಮತ್ತೆ ವಿವಾದವೊಂದು ಹುಟ್ಟಿಕೊಂಡಿದೆ.
ಪಾಕಿಸ್ತಾನದಲ್ಲಿ ಪಂದ್ಯಾವಳಿ ನಡೆಯುವ ಸ್ಟೇಡಿಯಂಗಳಾದ ಲಾಹೋರ್, ಕರಾಚಿ ಹಾಗೂ ರಾವಲ್ಪಿಂಡಿಯಲ್ಲಿ ಭಾರತದ ತ್ರಿವರ್ಣ ಧ್ವಜ ಹೊರತುಪಡಿಸಿ ಉಳಿದ ಎಲ್ಲ 7 ರಾಷ್ಟ್ರಗಳ ಧ್ವಜ ಹಾಕಲಾಗಿದೆ. ಪಾಕ್ನ ನೆಟ್ಟಿಗರೊಬ್ಬರು ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟ ಕಾರಣ ಈ ವಿಚಾರ ಬೆಳಕಿಗೆ ಬಂದಿದೆ. ಐಸಿಸಿ ನಿಯಮದ ಪ್ರಕಾರ ಐಸಿಸಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ರಾಷ್ಟ್ರಗಳ ಧ್ವಜವನ್ನು ಪಂದ್ಯಾವಳಿ ನಡೆಯುವ ಸ್ಟೇಡಿಯಂನಲ್ಲಿ ಹಾಕಬೇಕು. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತವನ್ನು ಬಿಟ್ಟು ಉಳಿದೆಲ್ಲ ರಾಷ್ಟ್ರದ ಧ್ವಜ ಹಾಕಿದೆ.
ಬದ್ಧವೈರಿ ಪಾಕಿಸ್ತಾನದ ನೆಲಕ್ಕೆ ತನ್ನ ಕ್ರಿಕೆಟ್ ತಂಡ ಕಾಲಿಡಲು ಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ ಕಾರಣ, ತಂಡವನ್ನು ಕಳುಹಿಸಲು ಬಿಸಿಸಿಐ ನಿರಾಕರಿಸಿತು. ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮೇಲೆ ಒತ್ತಡ ಹೇರಿತು. ಇದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರೀ ವಿರೋಧ ವ್ಯಕ್ತಪಡಿಸಿದ್ದರೂ ಕೊನೆಗೆ ಕೆಲ ಷರತ್ತುಗಳೊಂದಿಗೆ ಒಪ್ಪಿಕೊಂಡಿತು. ಈ ಸಿಟ್ಟನ್ನು ತೀರಿಸಿಕೊಳ್ಳಲು ಪಿಸಿಬಿ ಈ ಎಲ್ಲ ಕುತಂತ್ರವನ್ನು ನಡೆಸುತ್ತಿರುವಂತೆ ಕಾಣುತ್ತಿದೆ.
ಇದನ್ನೂ ಓದಿ ICC Champions Trophy: 'ಮಿನಿ ವಿಶ್ವಕಪ್' ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ
ಫೆ.23 ರಂದು ನಡೆಯುವ ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನವೇ ಪಾಕ್ ತಂಡಕ್ಕೆ ಅಲ್ಲಿನ ಅಭಿಮಾನಿಗಳು, ಮಾಜಿ ಆಟಗಾರರು ಹಾಗೂ ಪ್ರಧಾನಿ ಭಾರತವನ್ನು ಸೋಲಿಸಲೇ ಬೇಕು ಎಂದು ಕರೆ ನೀಡಿದ್ದಾರೆ. ಜತೆಗೆ ಕೆಲ ಅಭಿಮಾನಿಗಳು ಪಂದ್ಯಾವಳಿಯ ವೇಳೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಭಾರತೀಯ ಕ್ರಿಕೆಟ್ ತಂಡದ ಯಾವ ಆಟಗಾರನ್ನೂ ಅಪ್ಪಿಕೊಳ್ಳುವುದು ಬೇಡ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಈ ಬಾರಿ ಭಾರತ ಮತ್ತು ಪಾಕ್ ನಡುವಣ ಪಂದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿದೆ.