ಬೆಂಗಳೂರು, ಎ.18: ಟೀಮ್ ಇಂಡಿಯಾದ ಸ್ಟಾರ್ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್(KL Rahul) ಅವರಿಗೆ ಇಂದು(ಶನಿವಾರ, ಎ.18) 34ನೇ ವರ್ಷದ ಜನ್ಮದಿನದ ಸಂಭ್ರಮ. ಹುಟ್ಟು ಹಬ್ಬದ(Happy Birthday KL Rahul) ಸಂತಸದಲ್ಲಿರುವ ರಾಹುಲ್ಗೆ ಅವರ ಅಭಿಮಾನಿಗಳು, ಹಾಲಿ ಮತ್ತು ಮಾಜಿ ಆಟಗಾರರು ಸೇರಿ ಬಿಸಿಸಿಐ(BCCI) ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಶುಭ ಹಾರೈಸಿದೆ.
ಕೆ.ಎಲ್. ರಾಹುಲ್ ಅವರು ಹುಟ್ಟಿದ್ದು ಏಪ್ರಿಲ್ 18, 1992ರಲ್ಲಿ. ಬೆಂಗಳೂರಿನಲ್ಲಿ ಜನಿಸಿದ ಅವರು ಬಾಲ್ಯ ಕಳೆದದ್ದು ಮಂಗಳೂರಿನಲ್ಲಿ. ತನ್ನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸುರತ್ಕಲ್ನ ಎನ್ಐಟಿಕೆ ಆಂಗ್ಲ ಮಾದ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿದ ಅವರು, ಪಿಯುಸಿ ವಿದ್ಯಾಬ್ಯಾಸವನ್ನು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪಡೆದರು. ಬಳಿಕ ಕ್ರಿಕೆಟ್ಗಾಗಿ ಬೆಂಗಳೂರಿನತ್ತ ಮುಖ ಮಾಡಿದ್ದರು. ಎಲ್ಲೇ ಇದ್ದರೂ ಕನ್ನಡದ ಪ್ರೇಮವನ್ನು ಅವರು ಮರೆತಿಲ್ಲ. ಕರ್ನಾಟಕ ಮೂಲದ ಕ್ರಿಕೆಟಿಗರಲ್ಲಿ ಕನ್ನಡವನ್ನೇ ಮಾತನಾಡಿ ಹಲವು ಬಾರಿ ಕನ್ನಡಿಗರ ಮನ ಗೆದ್ದಿದ್ದರು.
ಮಂಗಳೂರಿನಲ್ಲಿ ಅಂಡರ್- 13 ಕ್ರಿಕೆಟ್ ಪಂದ್ಯಾಟದಲ್ಲಿ ದ್ವಿಶತಕ ಬಾರಿಸಿ ಗಮನಸೆಳೆದಿದ್ದ ರಾಹುಲ್ ಬಳಿಕ ಕರ್ನಾಟಕ ತಂಡ, ಭಾರತ ಪರ ಆಡಿ ಹಲವು ಸಾಧನೆ ಮಾಡಿದ್ದಾರೆ. ಯಾವುದೇ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ನಡೆಸಬಲ್ಲ ಏಕೈಕ ಆಟಗಾರ ಎಂದರೆ ಅದು ರಾಹುಲ್. ಜತೆಗೆ ಕೀಪಿಂಗ್ ಕೂಡ ಮಾಡಬಲ್ಲರು. ಇದುವರೆಗೆ ಭಾರತ ಪರ ಒಟ್ಟು 223 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು 9,678 ರನ್ ಬಾರಿಸಿದ್ದಾರೆ. ಇದರಲ್ಲಿ 21 ಶತಕ ಕೂಡ ಒಳಗೊಂಡಿದೆ.
ಚೊಚ್ಚಲ ಏಕದಿನ ಪಂದ್ಯದಲ್ಲೇ ಶತಕ
ಕೆ.ಎಲ್ ರಾಹುಲ್ ಅವರು ಭಾರತ ಪರ ಪದಾರ್ಪಣೆ ಮಾಡಿದ್ದು ಟೆಸ್ಟ್ ಕ್ರಿಕೆಟ್ ಆಡುವ ಮೂಲಕ. 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ. ಚೊಚ್ಚಲ ಏಕದಿನ ಪಂದ್ಯವನ್ನು 2016ರಲ್ಲಿ ಜಿಂಬಾಬ್ವೆ ವಿರುದ್ಧ ಆಡಿ ಈ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ಮಿಂಚಿದ್ದರು. ಇದೇ ವರ್ಷ ಜಿಂಬಾವ್ವೆ ವಿರುದ್ಧವೇ ಟಿ20 ಕ್ರಿಕೆಟ್ಗೂ ಅಡಿಯಿರಿಸಿದ್ದರು. ಹಲವು ಸರಣಿಗಳಲ್ಲಿ ಹಂಗಾಮಿ ನಾಯಕನಾಗಿ ಸರಣಿ ಗೆದ್ದ ಸಾಧನೆಯೂ ಇವರದ್ದಾಗಿದೆ. ಸದ್ಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿದ್ದಾರೆ.
RCB vs DC: ವಾಹನ ಸವಾರರೇ ಗಮನಿಸಿ, ಇಂದು ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ
ಟ್ಯಾಟು ಪ್ರಿಯ, ಅಪಾರ ದೈವ ಭಕ್ತ
ಕ್ರಿಕೆಟ್ ಅಂಗಳದಲ್ಲಿ ರಾಹುಲ್ ಎಷ್ಟು ಸಾಧನೆ ಮಾಡಿದ್ದಾರೋ ಅಂಗಳದಾಚೆ ಅಷ್ಟೇ ಸ್ಟೈಲಿಶ್. ಕೆ.ಎಲ್ ರಾಹುಲ್ಗೆ ಟ್ಯಾಟೂಗಳೆಂದರೆ ಪಂಚಪ್ರಾಣ. ರಾಹುಲ್ ಮೈಮೇಲೆ 7 ಟ್ಯಾಟೂಗಳು ಇದ್ದು, ಈ ಏಳೂ ಟ್ಯಾಟೂಗಳ ಹಿಂದೆಯೂ ಕುತೂಹಲಕಾರಿ ಕತೆಯೂ ಇದೆ. ಅಪಾರ ದೈವ ಭಕ್ತರಾಗಿರುವ ರಾಹುಲ್ ಕ್ರಿಕೆಟ್ ಬಿಡುವಿನ ವೇಳೆ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ. ಧರ್ಮಸ್ಥಳ ದೇವಾಸ್ಥಾನಕ್ಕೆ ಆಗಾಗ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿರುತ್ತಾರೆ.
RCB vs DC: ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಹೇಗಿರಲಿದೆ ಆರ್ಸಿಬಿ ಪ್ಲೇಯಿಂಗ್ 11
ಇಂದು ಆರ್ಸಿಬಿ ವಿರುದ್ಧ ಕಣಕ್ಕೆ
ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುವ ರಾಹುಲ್, ಇಂದು ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ತಾವು ಆಡಿ ಬೆಳೆದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿರುವ ಕಾರಣ ಈ ಪಂದ್ಯವೂ ಅವರಿಗೆ ವಿಶೇಷವಾಗಿದೆ. ಹುಟ್ಟುಹಬ್ಬದಂದೇ ಅವರು ತವರಿನ ಮೈದಾನದಲ್ಲಿ ಶತಕ ಬಾರಿಸಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.