ಹುಬ್ಬಳ್ಳಿ, ಫೆ.24: ಜಮ್ಮ-ಕಾಶ್ಮೀರ ಮತ್ತು ಕರ್ನಾಟಕ ನಡುವಣ ರಣಜಿ ಟ್ರೋಫಿ ಫೈನಲ್ ಪಂದ್ಯ ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು. ರಾಜನಗರದ ಕೆಎಸ್ಸಿಎ (KSCA) ಕ್ರೀಡಾಂಗಣದ ಪೆವಿಲಿಯನ್ ಬ್ಲಾಕ್ವೊಂದಕ್ಕೆ ಹಿರಿಯ ಕ್ರಿಕೆಟಿಗ ಸುನೀಲ್ ಜೋಶಿ(Sunil Joshi) ಅವರ ನಾಮಕರಣ ಮಾಡಲಾಯಿತು. ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ನೂತನ ಪೆವಿಲಿಯನ್ ಬ್ಲಾಕ್ ಅನ್ನು ಉದ್ಘಾಟಿಸಿದರು. ತಮ್ಮ ಹೆಸರಿನ ನಾಮಫಲಕ ಅನಾವರಣಗೊಳ್ಳುತ್ತಿದ್ದಂತೆಯೇ ಸುನೀಲ್ ಜೋಶಿ ಅವರು ಅತ್ಯಂತ ಭಾವುಕರಾಗಿ ಕಣ್ಣೀರು ಹಾಕಿದರು.
''ನನಗೆ ಇಷ್ಟು ದೊಡ್ಡ ಕೀರ್ತಿ ಸಿಗುತ್ತದೆ ಎಂದು ನಾನು ಕನಸು ಕೂಡ ಕಂಡಿಲ್ಲ. ರಾಷ್ಟ್ರಕವಿ ಕುವೆಂಪು ಅವರು ಹೇಳುತ್ತಿದ್ದಂತೆ, ನಮ್ಮ ಸಾಧನೆ ಯಾರಿಗಾದರೂ ಪ್ರೇರಣೆಯಾಗಬೇಕು. ಅಂತಹ ದಿನ ಇಂದು ನನ್ನ ಪಾಲಿಗೆ ಬಂದಿದೆ'' ಎಂದು ಜೋಶಿ ಹರ್ಷ ವ್ಯಕ್ತಪಡಿಸಿದರು.
''ನಾನು 14 ವರ್ಷದ ಹುಡುಗನಾಗಿದ್ದಾಗ ಗದಗದಿಂದ ಹುಬ್ಬಳ್ಳಿಗೆ ಬಂದು ಅಭ್ಯಾಸ ಮಾಡುತ್ತಿದ್ದೆ. ಈ ಮಟ್ಟದ ಶ್ರೇಯಸ್ಸು ಸಿಗುತ್ತದೆ ಎಂದು ನನಗೆ ಆಗ ಗೊತ್ತಿರಲಿಲ್ಲ. ನನ್ನ ಜೀವಮಾನದಲ್ಲಿ ಭಾರತದ ಪರ ಆಡುತ್ತೇನೆಂದು ಅಂದುಕೊಂಡಿರಲಿಲ್ಲ. ನನ್ನ ಕೋಚ್ ಆದ ದಯಾನಂದ ಶೆಟ್ಟಿ ಹಾಗೂ ಎ.ಕೆ.ಕ್ರಿಕೆಟ್ ಅಕಾಡೆಮಿಗೆ ಧನ್ಯವಾದ ಸಲ್ಲಿಸುತ್ತೇನೆ. ನನ್ನ ಜನ್ಮಸ್ಥಳ ಗದಗ ಆದರೂ, ನನ್ನ ಕ್ರಿಕೆಟ್ ಭವಿಷ್ಯವನ್ನು ಕಟ್ಟಿಕೊಟ್ಟಿದ್ದು ಮಾತ್ರ ಇದೇ ಹುಬ್ಬಳ್ಳಿ. ಈ ಮಣ್ಣಿನ ಗುಣ ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ'' ಎಂದು ಕೃತಜ್ಞತೆ ಸಲ್ಲಿಸಿದರು.
''ಕರ್ನಾಟಕ ಹಾಗೂ ಭಾರತ ತಂಡದಲ್ಲಿ ಆಡಿರುವುದು ಹೆಮ್ಮೆಯ ಸಂಗತಿ. ತಮ್ಮ ಈ ಯಶಸ್ಸಿನ ಹಿಂದೆ ಸಹಕರಿಸಿದ ಕೋಚ್ಗಳು, ಪಾಲಕರು, ಆಯ್ಕೆ ಸಮಿತಿ ಹಾಗೂ ತಮ್ಮ ಪತ್ನಿಗೆ ಧನ್ಯವಾದಗಳು. ದೇಶಕ್ಕಾಗಿ ಆಡುವಾಗ ಮಗ ಆರ್ಯನ್ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ'' ಎಂದು ಕುಟುಂಬದ ತ್ಯಾಗವನ್ನು ನೆನೆದು ಭಾವುಕರಾದರು.
22 ವರ್ಷಗಳ ಹಿಂದೆ ಸಚಿನ್ಗೆ ಔಟ್ ನೀಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಸ್ಟೀವ್ ಬಕ್ನರ್
ಎಡಗೈ ಸ್ಪಿನ್ನರ್ ಸುನೀಲ್ ಜೋಶಿ ಭಾರತದ ಪರ 15 ಟೆಸ್ಟ್ ಪಂದ್ಯಗಳಲ್ಲಿ 41 ವಿಕೆಟ್ ಹಾಗೂ 69 ಏಕದಿನ ಪಂದ್ಯಗಳಲ್ಲಿ 69 ವಿಕೆಟ್ಗಳನ್ನ ಪಡೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 160 ಪಂದ್ಯಗಳಿಂದ 615 ವಿಕೆಟ್ ಪಡೆದಿದ್ದಾರೆ. ಇನ್ನು ಜೋಶಿ ಅವರ ನಾಯಕತ್ವದಲ್ಲಿ ಕರ್ನಾಟಕ ತಂಡ 1998-99ರಲ್ಲಿ ರಣಜಿ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು.