ಕೊಲಂಬೊ, ಫೆ.3: ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ ಸರ್ಕಾರ ಸೂಚನೆ ನೀಡಿದ್ದರ ಬಗ್ಗೆ ಭಾರಿ ವಿವಾದದ ನಡುವೆಯೇ, ಮುಂಬರುವ 2026 ರ ಟಿ20 ವಿಶ್ವಕಪ್(T20 World Cup 2026)ಗಾಗಿ ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡ ಶ್ರೀಲಂಕಾಕ್ಕೆ ಆಗಮಿಸಿದೆ. ಸಲ್ಮಾನ್ ಅಘಾ ನೇತೃತ್ವದ 15 ಸದಸ್ಯರ ತಂಡ ಸೋಮವಾರ ತಡ ರಾತ್ರಿ ಶ್ರೀಲಂಕಾ ರಾಜಧಾನಿ ಕೊಲಂಬೊಗೆ ಆಗಮಿಸಿದೆ.
ಮಂಗಳವಾರ ಪಾಕಿಸ್ತಾನ ತಂಡ ವಿಶ್ರಾಂತಿ ದಿನವಾಗಿದ್ದು, ಬುಧವಾರ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಐರ್ಲೆಂಡ್ ವಿರುದ್ಧದ ತನ್ನ ಏಕೈಕ ಅಭ್ಯಾಸ ಪಂದ್ಯದಲ್ಲಿ ಆಡಲಿದೆ. ಅಲ್ಲಿ ಅವರು 'ಎ' ಗುಂಪಿನ ಮೂರು ಪಂದ್ಯಗಳನ್ನು ಆಡಲಿದ್ದಾರೆ. ಪಾಕಿಸ್ತಾನವು ಹಾಲಿ ಚಾಂಪಿಯನ್ ಭಾರತ, ಅಮೆರಿಕ, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ ತಂಡಗಳೊಂದಿಗೆ ಸ್ಥಾನ ಪಡೆದಿದೆ. 2009 ರ ಚಾಂಪಿಯನ್ ಪಾಕ್ ತಂಡ ಫೆಬ್ರವರಿ 7 ರಂದು ನೆದರ್ಲ್ಯಾಂಡ್ಸ್ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.
ವಿಶ್ವಕಪ್ನಲ್ಲಿ ಭಾರತವನ್ನು ಎದುರಿಸದಿರಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಐಸಿಸಿಯ ಕೋಪಕ್ಕೆ ಗುರಿಯಾಗುವ ಅಪಾಯದಲ್ಲಿದೆ. ಐಸಿಸಿ ಈಗಾಗಲೇ ಪಿಸಿಬಿಗೆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸೂಚಿಸಿದೆ ಮತ್ತು ಹಾಗೆ ಮಾಡಲು ವಿಫಲವಾದರೆ ದೀರ್ಘಾವಧಿಯ ಪರಿಣಾಮಗಳನ್ನು ಬೀರಬಹುದು.
ವರದಿಗಳ ಪ್ರಕಾರ, ಭಾರತ-ಪಾಕ್ ಪಂದ್ಯ ನಡೆಯದಿದ್ದರೆ ಬರೋಬ್ಬರಿ ₹2200 ಕೋಟಿ ನಷ್ಟವಾಗಲಿದೆ ಎಂದು ತಿಳಿದುಬಂದಿದೆ. ಈ ನಷ್ಟ ಐಸಿಸಿಗೆ ಮಾತ್ರವಲ್ಲದೆ ಪಾಕ್ ಕ್ರಿಕೆಟ್, ಬಿಸಿಸಿಐ, ಶ್ರೀಲಂಕಾ, ಟೂರ್ನಿಯ ಪ್ರಾಯೋಜಕರು, ಜಾಹೀರಾತುದಾರರಿಗೂ ಅನ್ವಯಿಸಲಿದೆ.
ಪಂದ್ಯದ ಪ್ರಸಾರ ಹಕ್ಕು, ಜಾಹೀರಾತು, ಪ್ರಾಯೋಜಕತ್ವ, ಟಿಕೆಟ್ ಆದಾಯ ಮತ್ತು ಕಾನೂನುಬದ್ಧ ಬೆಟ್ಟಿಂಗ್(ಭಾರತದ ಹೊರಗಡೆ) ಸೇರಿ ಹಲವು ವಿಧದಲ್ಲಿ ಆದಾಯ ಸಿಗಲಿದೆ. ಒಂದು ವೇಳೆ ಭಾರತ-ಪಾಕ್ ಪಂದ್ಯ ರದ್ದಾದರೆ, ಬರೀ ಜಾಹೀರಾತು ಆದಾಯದಲ್ಲೇ 200ರಿಂದ 250 ಕೋಟಿ ರು. ನಷ್ಟ ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ.
ಟಿ20 ವಿಶ್ವಕಪ್ಗೆ ಶ್ರೀಲಂಕಾ ತಂಡ ಪ್ರಕಟ; ದಾಸುನ್ ಶನಕ ನಾಯಕ
ಪಂದ್ಯ ರದ್ದಾದರೆ ಪ್ರಾಯೋಜಕರು, ಪ್ರಸಾರಕರಿಗೆ ಐಸಿಸಿ ನಷ್ಟ ಪರಿಹಾರ ನೀಡಬೇಕಾಗುತ್ತದೆ. ಟಿಕೆಟ್ ಮಾರಾಟದ ಮೂಲಕ ಬರಬೇಕಿದ್ದ ಹಣ ಕೈತಪ್ಪಲಿದೆ. ಪಂದ್ಯ ಆಯೋಜನೆ ಹೊಣೆ ಹೊತ್ತಿದ್ದ ಲಂಕಾ ಕ್ರಿಕೆಟ್ ಮಂಡಳಿ ಐಸಿಸಿ ಬಳಿ ಪರಿಹಾರ ಕೇಳಬಹುದು. ಮತ್ತೊಂದೆಡೆ ಐಸಿಸಿ ಸದಸ್ಯ ದೇಶಗಳಿಗೂ ಇದರ ಪರಿಣಾಮ ತಟ್ಟಲಿದೆ.
ಟಿ20 ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ
ಸಲ್ಮಾನ್ ಅಲಿ ಆಘಾ (ನಾಯಕ), ಬಾಬರ್ ಅಜಂ, ಶಾಹೀನ್ ಶಾ ಆಫ್ರಿದಿ, ಫಖರ್ ಜಮಾನ್, ಶಾದಾಬ್ ಖಾನ್, ನಸೀಮ್ ಶಾ, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಖವಾಜಾ ಮೊಹಮ್ಮದ್ ನಫಯ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಉಸ್ಮಾನ್ ಖಾನ್, ಉಸ್ಮಾನ್ ತಾರಿಖ್.