ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಬಳಿಕ ಆರ್ಸಿಬಿ ಫ್ರಾಂಚೈಸಿ ಬ್ಯಾನ್ ಆಗಲಿದೆ ಎಂಬ ಮಾತುಗಳು ಕೇಳಿಬಂದಿತ್ತು. ಇದೀಗ ಫ್ರಾಂಚೈಸಿಯನ್ನು ಮಾರಾಟ ಮಾಡಲು(RCB for sale) ನಿರ್ಧರಿಸಲಾಗಿದೆ ಎಂಬ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಮುಂಬರುವ ಆವೃತ್ತಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ಮಾಲೀಕತ್ವ ಬದಲಾವಣೆಯ ಹೊಸ್ತಿಲಲ್ಲಿದೆ ಎಂದು ವರದಿಯಾಗಿದೆ.
ತಂಡದ ಮಾಲೀಕರು ತಮ್ಮ ಬ್ಯಾಲೆನ್ಸ್ ಶೀಟ್ನಿಂದ ಫ್ರಾಂಚೈಸಿಯನ್ನು ತೆಗೆದುಹಾಕಿ ಮಾರಾಟಕ್ಕೆ ಇಡುವ ಸಾಧ್ಯತೆಯಿದೆ ಎಂದು ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಹೇಳಿದ್ದಾರೆ.
"ಫ್ರಾಂಚೈಸಿಯ ಮಾರಾಟದ ಬಗ್ಗೆ, ನಿರ್ದಿಷ್ಟವಾಗಿ ಆರ್ಸಿಬಿ ಬಗ್ಗೆ ಸಾಕಷ್ಟು ವದಂತಿಗಳಿವೆ. ಮಾಲೀಕರು ಅಂತಿಮವಾಗಿ ಅದನ್ನು ತಮ್ಮ ಬ್ಯಾಲೆನ್ಸ್ ಶೀಟ್ನಿಂದ ತೆಗೆದು ಮಾರಾಟ ಮಾಡಲು ನಿರ್ಧರಿಸಿದ್ದಾರೆಂದು ತೋರುತ್ತದೆ" ಎಂದು ಲಲಿತ್ ಮೋದಿ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಈ ಮಾರಾಟಕ್ಕಾಗಿ ಸಿಟಿ ಬ್ಯಾಂಕ್ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಲಿದೆ ಎಂಬುದನ್ನು ಸಹ ಖಚಿತಪಡಿಸಿದ್ದಾರೆ.
ಬೃಹತ್ ಹೂಡಿಕೆದಾರರು ಆರ್ಸಿಬಿ ತಂಡವನ್ನು ಖರೀದಿಸುವ ಸಾಧ್ಯತೆಯಿದೆ. ಏಕೆಂದರೆ ಭಾರತದಲ್ಲಿ ಹೂಡಿಕೆ ಮಾಡಲು ಇದಕ್ಕಿಂತ ಉತ್ತಮ ಅವಕಾಶ ಇನ್ನೊಂದಿಲ್ಲ. ಅದನ್ನು ಬಳಸಿಕೊಳ್ಳುವ ಯಾರಿಗಾದರೂ ಶುಭವಾಗಲಿ ಎಂದು ಲಲಿತ್ ಮೋದಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ Asia Cup 2025: ʻಭಾರತ ತಂಡದ ಎದುರು ಹ್ಯಾರಿಸ್ ರೌಫ್ ರನ್ ಮಷೀನ್ʼ-ವಸೀಮ್ ಅಕ್ರಮ್ ಟೀಕೆ!
ಕಳೆದ ಜೂನ್ನಲ್ಲಿ ಆರ್ಸಿಬಿ ಸಂಭ್ರಮಾಚರಣೆ ವೇಳೆ ಉಂಟಾದ ಅತಿ ಭೀಕರ ಕಾಲ್ತುಳಿತ 11 ಜೀವಗಳನ್ನು ಬಲಿ ತೆಗೆದುಕೊಳ್ಳುವುದರ ಜೊತೆಗೆ, ಕ್ರೀಡಾಂಗಣದ ಹಣೆಬರಹವನ್ನೇ ಬದಲಿಸಿಬಿಟ್ಟಿದೆ. ಇಲ್ಲೀಗ ಪಂದ್ಯಗಳು ನಡೆಯುತ್ತಿಲ್ಲ. ಮಹಿಳಾ ವಿಶ್ವಕಪ್ ಟೂರ್ನಿ, ಮಹತ್ವದ ಸರಣಿಗಳು ಈಗಾಗಲೇ ಬೇರೆಡೆಗೆ ಸ್ಥಳಾಂತರಗೊಂಡಿದೆ. ಐಪಿಎಲ್, ಭಾರತದ ಪಂದ್ಯಗಳು ಚಿನ್ನಸ್ವಾಮಿಯಲ್ಲಿ ನಡೆಯುವ ಸಾಧ್ಯತೆ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ.