ಬೆಂಗಳೂರು, ಫೆ.4: ಒಂದೆಡೆ ಐಪಿಎಲ್ ಟೂರ್ನಿ ಆರಂಭಕ್ಕೆ ತಿಂಗಳು ಮಾತ್ರ ಬಾಕಿ ಇರವಾಗಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರಾಟ(RCB Sale) ಪ್ರಕ್ರಿಯೆಯ ಮೊದಲ ಹಂತ ಅಧಿಕೃತವಾಗಿ ಆರಂಭಗೊಂಡಿದೆ. ಇದರ ಭಾಗವಾಗಿ ಆರ್ಸಿಬಿ ಫ್ರಾಂಚೈಸಿಯ ಮಾಲೀಕತ್ವ ಹೊಂದಿರುವ ಡಿಯಾಜಿಯೋ (Diageo) ಕಂಪನಿಯು, ಆಸಕ್ತ ಖರೀದಿದಾರರಿಗೆ ಮಾಹಿತಿ ಪತ್ರಗಳನ್ನು ವಿತರಿಸಿದೆ. 19ನೇ ಆವೃತ್ತಿ ಆರಂಭಕ್ಕೆ ಮೊದಲೇ ಮಾರಾಟ ಪ್ರಕ್ರಿಯೆ ಮುಕ್ತಾಯವಾಗುವ ನಿರೀಕ್ಷೆ ಇದೆ.
ಕಳೆದ ವರ್ಷದಿಂದಲೇ ಆರ್ಸಿಬಿ ತಂಡದ ಮಾರಾಟ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಡಿಯಾಜಿಯೋ ಈ ಮೊದಲೇ ಪ್ರಕಟಿಸಿತ್ತು. ಡಿಯಾಜಿಯೋ ವಿತರಿಸಿರುವ ಈ ಮಾಹಿತಿ ಪತ್ರದಲ್ಲಿ (ಸಿಐಎಂ) ಆರ್ಸಿಬಿ ತಂಡದ ಬಗೆಗಿನ ಕೆಲ ಗೌಪ್ಯ ಮಾಹಿತಿಗಳು ಇವೆ. ಸಂಭಾವ್ಯ ಖರೀದಿದಾರರು, ಆರ್ಸಿಬಿ ಫ್ರಾಂಚೈಸಿಯ ಖರೀದಿಗಾಗಿ ಸಲ್ಲಿಸಬೇಕಾದ ಬಿಡ್ ಮೊತ್ತವನ್ನು ಈ ದಾಖಲೆಪತ್ರಗಳಿಂದ ಮೌಲ್ಯಮಾಪನ ಮಾಡಬಹುದಾಗಿದೆ.
ಆರ್ಸಿಬಿಯನ್ನು ಬರೋಬ್ಬರಿ 2 ಬಿಲಿಯನ್ ಡಾಲರ್(ಅಂದಾಜು 17700 ಕೋಟಿ ರು.ಗೆ) ಗೆ ಮಾರಾಟ ಮಾಡಲು ಡಿಯಾಜಿಯೋ ಮುಂದಾಗಿದೆ. ಫೋರ್ಬ್ಸ್ ವರದಿ ಪ್ರಕಾರ, ಪೂನಾವಾಲಾ ಮತ್ತು ಕುಟುಂಬದ ನಿವ್ವಳ ಮೌಲ್ಯ 1.7 ಲಕ್ಷ ಕೋಟಿ ಇದೆ. ಇನ್ನು ರಂಜನ್ ಪೈ 24000 ಕೋಟಿ, 22000 ಕೋಟಿ ನಿವ್ವಳ ಮೌಲ್ಯ ಹೊಂದಿದ್ದಾರೆ.
ಚಿನ್ನಸ್ವಾಮಿಯಲ್ಲಿ ಪಂದ್ಯ ಆಡಲು ಆರ್ಸಿಬಿ ಬಹುತೇಕ ಒಪ್ಪಿಗೆ?
ಜೆರೋದಾ ಸಂಸ್ಥೆಯ ಸಹ ಸ್ಥಾಪಕ ನಿಖಿಲ್ ಕಾಮತ್ ಹಾಗೂ ಮಣಿಪಾಲ್ ಎಜುಕೇಶನ್ ಮತ್ತು ಮೆಡಿಕಲ್ ಗ್ರೂಪ್ (ಎಂಇಎಂಜಿ) ಮುಖ್ಯಸ್ಥ ರಂಜನ್ ಪೈ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಆರ್ಸಿಬಿ ಖರೀದಿಸಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲದೆ ಕೆಜಿಎಫ್, ಕಾಂತಾರ ಖ್ಯಾತಿಯ ಹೊಂಬಾಳೆ ಫಿಲ್ಮ್ಸ್ ಕೂಡ ಆರ್ಸಿಬಿ ಖರೀದಿಸಲು ಮುಂದಾಗಿದೆ ಎಂಬ ಸುದ್ದಿ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಒಟ್ಟಾರೆ ಕೆಲವೇ ದಿನಗಳಲ್ಲಿ ಆರ್ಸಿಬಿ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳುವುದು ಖಚಿತ.
ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ನಿವೃತ್ತಿ ಅಂಚಿನಲ್ಲಿದ್ದಾರೆ. ಇನ್ನೊಂದೆಡೆ ಇಷ್ಟು ವರ್ಷ ಆರ್ಸಿಬಿ ಕಪ್ ಗೆದ್ದಿಲ್ಲ ಎನ್ನುವ ಕಾರಣಕ್ಕೆ ಭಾರೀ ಕ್ರೇಜ್ ಇತ್ತು. ಈಗ ಕಪ್ ಗೆದ್ದಾಯಿತು. ಹೀಗಾಗಿ ಕ್ರೇಜ್ ಕಡಿಮೆಯಾಗಲಿದೆ ಎನ್ನುವುದು ಕೆಲವರ ವಾದ. ಇನ್ನು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆದ ಕಾಲ್ತುಳಿತ ಪ್ರಕರಣದಿಂದಾಗಿ ತಂಡಕ್ಕೆ ಬೆಂಗಳೂರಿನಲ್ಲಿ ದೊಡ್ಡ ಬೆಂಬಲ ಸಿಗುವ ಸಾಧ್ಯತೆಯೂ ಕಡಿಮೆ.