ಕೋಲ್ಕತಾ, ಎ.8: ಗುರುವಾರದಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ನ 15ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR vs LSG) ಮತ್ತು ಲಖನೌ ಸೂಪರ್ ಜೈಂಟ್ಸ್ ಮುಖಾಮುಖಿಯಾಗಲಿವೆ. ಈ ಪಂದ್ಯವು ಐಕಾನಿಕ್ ಈಡನ್ ಗಾರ್ಡನ್ಸ್(Eden Gardens) ನಲ್ಲಿ ನಡೆಯಲಿದೆ. ಆದರೆ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಸೋಮವಾರ ನಡೆಯಬೇಕಿದ್ದ ಕೋಲ್ಕತಾ ಮತ್ತು ಪಂಜಾಬ್ ನಡುವಣ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಇದೀಗ ಗುರುವಾರದ ಪಂದ್ಯಕ್ಕೂ ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಮೊದಲ ಗೆಲುವಿನ ಹುಡುಕಾಟದಲ್ಲಿರುವ ಕೋಲ್ಕತಾಗೆ ತವರಿನಲ್ಲಿ ಮತ್ತೆ ಮಳೆ ಕಂಟಕ ಎದುರಾಗಿದೆ.
ಕೆಕೆಆರ್, ಬ್ಯಾಟಿಂಗ್ ಒಂದಿಬ್ಬರು ತಕ್ಕಮಟ್ಟಿಗೆ ಮಿಂಚಿದರೂ ಬೌಲಿಂಗ್ ದುರ್ಬಲವಾಗಿದೆ. ಪ್ರಮುಖವಾಗಿ ಸುನಿಲ್ ನರೇನ್ ಹಾಗೂ ವರುಣ್ ಚಕ್ರವರ್ತಿ ದುಬಾರಿ ಆಗುತ್ತಿರುವುದು ತಂಡಕ್ಕೆ ಬಹುದೊಡ್ಡ ತಲೆನೋವು ತಂದೊಡ್ಡಿದೆ. ಜೊತೆಗೆ ಗುಣಮಟ್ಟದ ವೇಗಿಗಳ ಕೊರತೆಯೂ ತಂಡಕ್ಕಿದ್ದು, ಇದು ಬ್ಯಾಟರ್ಗಳ ಮೇಲೆ ಒತ್ತಡ ಹೆಚ್ಚಿಸುತ್ತಿದೆ. 25 ಕೋಟಿ ವೀರ ಕ್ಯಾಮರೂನ್ ಗ್ರೀನ್ ಆಡಿದ ಮೂರು ಪಂದ್ಯಗಳಲ್ಲಿಯೂ ವಿಫಲರಾಗಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಅವರು ಆಡಲೇ ಬೇಕಾದ ಅನಿವಾರ್ಯತೆ ಇದೆ.
DC vs GT: ಇಂದಿನ ಐಪಿಎಲ್ ಪಂದ್ಯಕ್ಕೂ ಮಳೆ ಅಡ್ಡಿ ಸಾಧ್ಯತೆ
ಕಳೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಗೆಲುವಿನ ಖಾತೆ ತೆರೆದಿರುವ ಲಖನೌ ಸೂಪರ್ ಜೈಂಟ್ಸ್ ಇದೇ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ. ಅನುಭವಿ ವೇಗಿ ಮೊಹಮ್ಮದ್ ಶಮಿ ಅತ್ತ್ಯುತ್ತಮ ಬೌಲಿಂಗ್ ಲಯದಲ್ಲಿದ್ದಾರೆ. ಅವರ ಬೆಂಕಿ ಎಸೆತಗಳನ್ನು ಎದುರಿಸುವುದು ಕೆಕೆಆರ್ ಬ್ಯಾಟರ್ಗಳಿಗೆ ಸವಾಲಿನಿಂದ ಕೂಡಿರಬಹುದು.
ಮುಖಾಮುಖಿ
ಉಭಯ ತಂಡಗಳು ಈವರೆಗಿನ ಐಪಿಎಲ್ ಟೂರ್ನಿಯಲ್ಲಿ 6 ಬಾರಿ ಮುಖಾಮುಖಿಯಾಗಿದ್ದು ಈ ಪೈಕಿ ಕೆಕೆಆರ್ 2 ಪಂದ್ಯ ಗೆದ್ದರೆ, ಲಖನೌ 4 ಪಂದ್ಯಗಳನ್ನು ಜಯಿಸಿದೆ.
ಪಿಚ್ ರಿಪೋರ್ಟ್
ಹವಾಮಾನ ಮುನ್ಸೂಚನೆಯ ಪ್ರಕಾರ ಪಿಚ್ ವರ್ತನೆ ಬದಲಾಗಬಹುದು ಎಂದು ಪಿಚ್ ಕ್ಯೂರೇಟರ್ ತಿಳಿಸಿದ್ದಾರೆ. ಪಂದ್ಯಕ್ಕೂ ಮುನ್ನ ಮಳೆಯಾದರೆ ಪಿಚ್ನ ಕೆಳಗೆ ಸ್ವಲ್ಪ ತೇವಾಂಶ ಇರಬಹುದು. ಇದು ವೇಗಿಗಳಿಗೆ ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡಲು ನೆರವು ನೀಡಲಿದೆ. ಚೆಂಡು ಹಳೆಯದಾದ ನಂತರ, ಸಾಕಷ್ಟು ರನ್ಗಳನ್ನು ನಿರೀಕ್ಷಿಸಬಹುದು.
ಸಂಭಾವ್ಯ ಆಡುವ ಬಳಗ
ಕೋಲ್ಕತಾ: ಅಜಿಂಕ್ಯ ರಹಾನೆ (ನಾಯಕ), ಫಿನ್ ಅಲೆನ್, ಕ್ಯಾಮೆರಾನ್ ಗ್ರೀನ್, ಆಂಗ್ಕ್ರಿಶ್ ರಘುವಂಶಿ (ವಿ.ಕೀ.), ರಿಂಕು ಸಿಂಗ್, ರಮಣದೀಪ್ ಸಿಂಗ್, ಅನುಕುಲ್ ರಾಯ್, ಸುನಿಲ್ ನರೈನ್ / ರೋವ್ಮನ್ ಪೊವೆಲ್, ವರುಣ್ ಚಕ್ರವರ್ತಿ / ನವದೀಪ್ ಸೈನಿ, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ.
ಲಖನೌ: ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ವಿ.ಕೀ/ ನಾಯಕ), ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮಣಿಮಾರನ್ ಸಿದ್ಧಾರ್ಥ್, ಅವೇಶ್ ಖಾನ್, ಮೊಹಮ್ಮದ್ ಶಮಿ, ದಿಗ್ವೇಶ್ ಸಿಂಗ್ ರಾಠಿ, ಪ್ರಿನ್ಸ್ ಯಾದವ್.