ಕೊಲಂಬೊ, ಫೆ.17: ಫೆಬ್ರವರಿ 15, ಭಾನುವಾರ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದ್ದ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟರ್ಗಳಿಗೆ ಸ್ಲೆಡ್ಜ್ ಮಾಡದಂತೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ತಂಡವನ್ನು ಕೇಳಿಕೊಂಡಿದ್ದರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಸೂರ್ಯಕುಮಾರ್ ತಮ್ಮ ತಂಡದ ಆಟಗಾರರಿಗೆ ಸ್ಪಷ್ಟ ಸಂದೇಶವನ್ನು ನೀಡುತ್ತಿರುವುದು ಕಂಡುಬಂದಿದೆ.
ಬಿಸಿಸಿಐ ಹಂಚಿಕೊಂಡಿರುವ ಈ ವಿಡಿಯೊದಲ್ಲಿ ಭಾರತದ ಬೌಲಿಂಗ್ ಇನಿಂಗ್ಸ್ಗೂ ಮುನ್ನ ಸೂರ್ಯಕುಮಾರ್ ಅವರು ತಂಡದ ಸಹ ಆಟಗಾರರಿಗೆ, ಮೈದಾನದಲ್ಲಿ ಮಾತಿನ ಚಕಮಕಿಯಲ್ಲಿ ತೊಡಗಿಸಿಕೊಳ್ಳುವ ಬದಲು ತಮ್ಮ ಕೌಶಲ್ಯಗಳ ಮೇಲೆ ಮಾತ್ರ ಗಮನಹರಿಸುವಂತೆ ಒತ್ತಾಯಿಸಿದರು. ಸ್ಲೆಡ್ಜ್ ಮಾಡುವ ಬದಲು ಉತ್ತಮ ಕ್ರಿಕೆಟ್ ಪ್ರದರ್ಶನ ನೀಡುವಂತೆ ಪ್ರೋತ್ಸಾಹಿಸಿದರು. ಸೂರ್ಯಕುಮಾರ್ ಅವರ ಈ ನಡೆಗೆ ಕ್ರಿಕೆಟ್ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಓವರ್ಗಳ ನಡುವೆ ಓಡುತ್ತಲೇ ಇರಿ. ಯಾರಿಗೂ ಏನನ್ನೂ ಹೇಳಬೇಡಿ. ನಾವು ಉತ್ತಮ ಕ್ರಿಕೆಟ್ ಆಡಬೇಕು. ಉತ್ತಮ ಕೌಶಲ್ಯದ ಮೂಲಕ ನಾವು ಈ ಪಂದ್ಯವನ್ನು ಗೆಲ್ಲುತ್ತೇವೆ" ಎಂದು ಬಿಸಿಸಿಐ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಸೂರ್ಯಕುಮಾರ್ ಹೇಳಿದ್ದಾರೆ.
ಈ ಪಂದ್ಯಕ್ಕೂ ಮುನ್ನ ಹಲವಾರು ವಿವಾದಗಳು ನಡೆದಿತ್ತು. ಪಾಕಿಸ್ತಾನವು ಪಂದ್ಯಾವಳಿಗೆ ಮುಂಚಿತವಾಗಿ ಪಂದ್ಯದಿಂದ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿತ್ತು. ಆದರೆ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸತತ ಸಭೆ ಮತ್ತು ಮಾತುಕತೆಯ ಬಳಿಕ ಪಾಕ್ ನಿರ್ಧಾರ ಬದಲಿಸಿ ಭಾರತ ವಿರುದ್ಧ ಪಂದ್ಯ ಆಡಲು ಒಪ್ಪಿಕೊಂಡಿತ್ತು. ಭಾರತವು ತಮ್ಮ ಸಾಂಪ್ರದಾಯಿಕ ಎದುರಾಳಿಗಳೊಂದಿಗೆ 'ನೋ ಹ್ಯಾಂಡ್ಶೇಕ್' ನೀತಿಯನ್ನು ಉಳಿಸಿಕೊಂಡಿದ್ದರೂ, ಮೈದಾನದಲ್ಲಿ ಯಾವುದೇ ನಾಟಕೀಯತೆ ಇರಲಿಲ್ಲ, ಯಾವುದೇ ಆಟಗಾರರು ಮಾತಿನ ಚಕಮಕಿಯಲ್ಲಿ ತೊಡಗಲಿಲ್ಲ.
IND v PAK: ಭಾರತದ ವಿರುದ್ಧ ಪ್ರಚೋದನಕಾರಿ ಸನ್ನೆ ಮಾಡಿದ ಹ್ಯಾರಿಸ್ ರೌಫ್ಗೆ ದಂಡ!
ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ಆರಂಭದಲ್ಲೇ ಅಭಿಷೇಕ್ ಶರ್ಮ ಅವರನ್ನು ಶೂನ್ಯಕ್ಕೆ ಕಳೆದುಕೊಂಡಿತ್ತು. ಈ ವೇಳೆ ಭಾರತದ ಪಾಳಯದಲ್ಲಿ ಆತಂಕ ಮನೆಮಾಡಿತ್ತು. ಆದರೆ ಇಶಾನ್ ಕಿಶನ್ ಅಬ್ಬರ, ಇತರ ಬ್ಯಾಟರ್ಗಳ ಸಮಯೋಚಿತ ಆಟದ ನೆರವಿನಿಂದ ಭಾರತ 7 ವಿಕೆಟ್ಗೆ 175 ರನ್ ಕಲೆಹಾಕಿತು. ಪಾಕಿಸ್ತಾನ 18 ಓವರ್ಗಳಲ್ಲಿ 114 ರನ್ಗೆ ಆಲೌಟ್ ಆಯಿತು. ಭಾರತ 61 ರನ್ಗಳ ಗೆಲುವು ಸಾಧಿಸಿತ್ತು.