ನವದೆಹಲಿ: ಗುರುವಾರ ರಣಜಿ ಟೂರ್ನಿಯ(Ranji Trophy) ಪಂದ್ಯದಲ್ಲಿ ವಿರಾಟ್ ಕೊಹ್ಲಿಯದ್ದೇ(Virat Kohli) ಹವಾ, 12 ವರ್ಷಗಳ ಬಳಿಕ ತವರಿನ ಅಭಿಮಾನಿಗಳ ಮುಂದೇ ದೇಶೀಯ ಕ್ರಿಕೆಟ್ ಆಡಲಿಳಿದ ಕೊಹ್ಲಿಯನ್ನು ನೋಡಲು ಜನ ಸಾಗರವೇ ನೆರದಿದ್ದು. ಸ್ಟೇಡಿಯಂನ ಗೇಟ್ ಬಳಿ ಕಾಲ್ತುಳಿತ ಕೂಡ ಸಂಭವಿಸಿ ಹಲವರು ಗಾಯಗೊಂಡ ಘಟನೆಯೂ ನಡೆಯಿತು. ಅಂತಾರಾಷ್ಟ್ರೀಯ ಪಂದ್ಯಕ್ಕೆ ಸೇರುವ ಪ್ರೇಕ್ಷಕರಿಗೂ ಅಧಿಕ ಮಂದಿ ಕೊಹ್ಲಿಯ ಆಟವನ್ನು ನೋಡಲು ಬಂದಿದ್ದರು.
ಸಾಮಾನ್ಯವಾಗಿ ರಣಜಿ ಪಂದ್ಯಗಳಿಗಾಗಿ ಒಂದು ಗ್ಯಾಲರಿಯಲ್ಲಿ ಉಚಿತ ಪ್ರವೇಶದ ವ್ಯವಸ್ಥೆ ಇರುತ್ತದೆ. ಆದರೆ ವಿರಾಟ್ ಕೊಹ್ಲಿ ಇದ್ದಾರೆಂಬ ಕಾರಣಕ್ಕೆ ಡಿಡಿಸಿಎಯು ಈ ಪಂದ್ಯಕ್ಕಾಗಿ ಎರಡರಿಂದ ಮೂರು ಗ್ಯಾಲರಿಗಳಲ್ಲಿ ಉಚಿತ ಪ್ರವೇಶ ಕಲ್ಪಿಸಿತ್ತು. ಆದರೆ ಈ ಎಲ್ಲಾ ಗ್ಯಾಲರಿ ಫುಲ್ ಆಗಿ ಹೆಚ್ಚುವರಿ ಗ್ಯಾಲರಿಗಳನ್ನು ನೀಡಿದರೂ ಪ್ರೇಕ್ಷಕರ ಸಂಖ್ಯೆ ಮಾತ್ರ ಕಡಿಮೆಯಾಗಲಿಲ್ಲ. ಸುಮಾರು 15 ಸಾವಿರಕ್ಕೂ ಅಧಿಕ ಜನ ಇಂದು ಜೇಟ್ಲಿ ಮೈದಾನದಲ್ಲಿ ನೆರೆದಿದ್ದರು ಎಂದು ವರದಿಯಾಗಿದೆ. ಕೊಹ್ಲಿಯ ಬಾಲ್ಯದ ಕೋಚ್, ಸಹೋದರ ಮತ್ತು ಕುಟುಂಬ ಸದಸ್ಯರು ಕೂಡ ಪಂದ್ಯಕ್ಕೆ ಹಾಜಾರಾಗಿದ್ದರು.
ಪನೀರ್ ಚಿಲ್ಲಿ ಸವಿದ ಕೊಹ್ಲಿ
ಫಿಟ್ನೆಸ್ ಬಗ್ಗೆ ಬಹಳ ಕಾಳಜಿ ವಹಿಸುವ ವಿರಾಟ್ ಕೊಹ್ಲಿ ಗುರುವಾರ ಪಂದ್ಯದ ಬೋಜನ ವಿರಾಮದ ವೇಳೆ ಡಿಡಿಸಿಎ ಕ್ಯಾಂಟೀನ್ ನಿಂದ ಪನೀರ್ ಚಿಲ್ಲಿ ತರಿಸಿಕೊಂಡು ತಿಂದರು. ಪ್ರತಿದಿನವೂ ಕೊಹ್ಲಿಗಾಗಿ ಲಂಚ್ ಬ್ರೇಕ್ ವೇಳೆ ಡಿಡಿಸಿಎ ಕ್ಯಾಂಟೀನ್ ನಿಂದ ಪನೀರ್ ಚಿಲ್ಲಿಯನ್ನು ಸಿದ್ಧಪಡಿಸಿ ನೀಡಲಾಗುತ್ತದೆ ಎಂದು ಅಲ್ಲಿನ ಬಾಣಸಿಗ ಸಂಜಯ್ ಹೇಳಿರುವುದಾಗಿ ತಿಳಿದು ಬಂದಿದೆ.
ಅಭಿಮಾನಿಗಳನ್ನು ರಂಜಿಸಿದ ಕೊಹ್ಲಿ
ದೇಶೀಯ ಟೂರ್ನಿಯಾದರೂ ವಿರಾಟ್ ಕೊಹ್ಲಿ ಜೋಶ್ ಮಾತ್ರ ಕಿಂಚಿತ್ತು ಕಡಿಮೆ ಇರಲಿಲ್ಲ. ಅಂತಾರಾಷ್ಟ್ರೀಯ ಪಂದ್ಯದಂತೆ ಕೊಹ್ಲಿ ತವರಿನ ಅಭಿಮಾನಿಗಳನ್ನು ರಂಜಿಸಿದರು. ಮೈದಾನದಿಂದಲೇ ಕೈ ಸನ್ನೆ ಮೂಲಕ ಜೋರಾಗಿ ಕೂಗುವ ಮೂಲಕ ಆಟಗಾರರಿಗೆ ಪ್ರೋತ್ಸಾಹಿಸಿ ಎಂದು ಮನವಿ ಮಾಡುತ್ತಲೇ ಇದ್ದರು.
ಇದನ್ನೂ ಓದಿ Ranji Trophy: ಹರಿಯಾಣ ವಿರುದ್ಧ 26 ರನ್ಗೆ ಔಟಾದ ರಾಹುಲ್
ಮೊದಲು ಬ್ಯಾಟಿಂಗ್ ನಡೆಸಿದ ರೈಲ್ವೇಸ್ 241 ರನ್ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟುತ್ತಿರುವ ದೆಹಲಿ ತಂಡ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ಗೆ 41 ರನ್ ಬಾರಿಸಿದೆ. ಶುಕ್ರವಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸ್ಟೇಡಿಯಂಗೆ ಆಗಮಿಸುವ ನಿರೀಕ್ಷೆ ಇದೆ.