ನವದೆಹಲಿ, ಜು.20: ಇಂಗ್ಲೆಂಡ್ ವಿರುದ್ಧದ 27 ರನ್ಗಳ ಸೋಲಿನ ನಂತರ ಭಾರತದ ಇತ್ತೀಚಿನ ಏಕದಿನ ಸರಣಿಯು ಮುಕ್ತಾಯಗೊಂಡಿದೆ. ಭಾನುವಾರ ನಡೆದಿದ್ದ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ(138) ಶತಕ, ವಿರಾಟ್ ಕೊಹ್ಲಿ(74) ಅರ್ಧಶತಕ ಗಳಿಸಿದರೂ ಭಾರತವು ಅಂತಿಮವಾಗಿ 388 ರನ್ಗಳ ಬೃಹತ್ ಗುರಿಯನ್ನು ತಲುಪಲು ಸಾಧ್ಯವಾದೆ ಸೋಲು ಕಂಡಿತ್ತು.
ಈ ಸರಣಿಯ ನಂತರ, ಭಾರತದ ಮುಂದಿನ ಏಕದಿನ ಸರಣಿ ಸೆಪ್ಟೆಂಬರ್ನಲ್ಲಿ ನಡೆಯಲಿದೆ. ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 3 ರವರೆಗೆ ತಿರುವನಂತಪುರಂ, ಗುವಾಹಟಿ ಮತ್ತು ನ್ಯೂ ಚಂಡೀಗಢದಲ್ಲಿ ಮೂರು ಏಕದಿನ ಪಂದ್ಯಗಳನ್ನು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.
ವಿಂಡೀಸ್ ಎದುರಿನ ಸರಣಿ ಬಳಿಕ, ನವೆಂಬರ್ನಲ್ಲಿ ಐದು ಏಕದಿನ ಪಂದ್ಯಗಳಿಗಾಗಿ ನ್ಯೂಜಿಲೆಂಡ್ಗೆ ಪ್ರಯಾಣ ಬೆಳೆಸಲಿದೆ. ಇದಾಗಿ ಡಿಸೆಂಬರ್ನಲ್ಲಿ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನು ಆಡಲಿದೆ.
ಲಾರ್ಡ್ಸ್ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, 50 ಓವರ್ಗಳಲ್ಲಿ 3 ವಿಕೆಟ್ ಗೆ 387 ರನ್ಗಳ ಬೃಹತ್ ಮೊತ್ತ ದಾಖಲಿಸಿತು. 388 ರನ್ಗಳ ಗುರಿ ಬೆನ್ನಟ್ಟಿದ ಭಾರತ, 50 ಓವರ್ಗಳಲ್ಲಿ 7 ವಿಕೆಟ್ ಗೆ 360 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಭಾರತದ ಪರ ರೋಹಿತ್ ಶರ್ಮಾ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದರು. 110 ಎಸೆತಗಳಲ್ಲಿ 17 ಬೌಂಡರಿ ಹಾಗೂ 5 ಸಿಕ್ಸರ್ ಗಳ ನೆರವಿನಿಂದ 138 ರನ್ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸುವ ಪ್ರಯತ್ನ ನಡೆಸಿದರು. ವಿರಾಟ್ ಕೊಹ್ಲಿ 60 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಗಳೊಂದಿಗೆ 74 ರನ್ ಗಳಿಸಿದರೆ, ಶುಭ್ ಮನ್ ಗಿಲ್ 84 ಎಸೆತಗಳಲ್ಲಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 77 ರನ್ಗಳಿಸಿದರು. ಈ ಮೂವರ ವಿಕೆಟ್ ಪತನದ ಬಳಿಕ ಬಂದ ಬ್ಯಾಟರ್ಗಳು ದೊಡ್ಡ ಜೊತೆಯಾಟ ಕಟ್ಟುವಲ್ಲಿ ವಿಫಲರಾದ ಕಾರಣ ಭಾರತ ಗುರಿ ತಲುಪಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ಪರ ಸ್ಯಾಮ್ ಕರನ್ ಅತ್ಯಂತ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿ 75 ರನ್ ಗಳಿಗೆ 4 ವಿಕೆಟ್ ಕಬಳಿಸಿದರು.
ಫಿಟ್ನೆಸ್, ಬೌಲಿಂಗ್ ಸುಧಾರಿಸದ ಹೊರತು ಸರಣಿ ಗೆಲುವು ಅಸಾಧ್ಯ; ಶುಭಮನ್ ಗಿಲ್
ಇಂಗ್ಲೆಂಡ್ ಪರ ಬೆನ್ ಡಕೆಟ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 141 ರನ್ ಗಳಿಸಿದರು. ಜಾಕೋಬ್ ಬೆಥೆಲ್ 91 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಅಂತಿಮ ಹಂತದಲ್ಲಿ ಜೋ ರೂಟ್ (ಅಜೇಯ 74) ಮತ್ತು ಜೋಸ್ ಬಟ್ಲರ್ (ಔಟಾಗದೆ 41) ದೊಡ್ಡ ಮೊತ್ತವನ್ನು ಕಲೆಹಾಕಿದರು. ಭಾರತ ಪರ ಬೌಲರ್ಗಳಾದ ಪ್ರಸಿದ್ಧಕೃಷ್ಣ (69ಕ್ಕೆ2), ಅರ್ಷದೀಪ್ ಸಿಂಗ್ (10 ಓವರ್; 72ರನ್), ಪ್ರಿನ್ಸ್ ಯಾದವ್ (79ಕ್ಕೆ1) ಮತ್ತು ಗುರ್ನೂರ್ ಬ್ರಾರ್ (10 ಓವರ್; 97 ರನ್) ಅವರು ಬಹಳಷ್ಟು ದಂಡನೆಗೊಳಗಾದರು.