ನವದೆಹಲಿ, ಫೆ.13: ಹೊಟ್ಟೆನೋವಿನಿಂದ ಚೇತರಿಸಿಕೊಳ್ಳುತ್ತಿರುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಗುರುವಾರ ನಡೆದ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಆಡಲಿಳಿಯಲಿಲ್ಲ. ಇದೀಗ ಭಾನುವಾರ ನಡೆಯಲಿರುವ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಅವರ ಲಭ್ಯತೆ ಬಗ್ಗೆ ನಾಯ ಸೂರ್ಯಕುಮಾರ್ ಯಾದವ್ ಮಹತ್ವದ ಮಾಹಿತಿ ನೀಡಿದ್ದಾರೆ.
ಅಭಿಷೇಕ್ ಸೋಮವಾರ ಹೊಟ್ಟೆನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಮತ್ತೆ ತಂಡಕ್ಕೆ ಮರಳಿದ್ದರು. ಆದರೆ ಯಾವುದೇ ತರಬೇತಿ, ತಾಲೀಮಿನಲ್ಲಿ ಭಾಗಿಯಾಗಲಿಲ್ಲ. ‘ಅಭಿಷೇಕ್ ಶರ್ಮಾ ಅವರು ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ನಮೀಬಿಯಾ ಪಂದ್ಯಕ್ಕೆ ವಿಶ್ರಾಂತಿ ಪಡೆದರು. ವೈದ್ಯಕೀಯ ತಂಡವು ನಿಗಾ ವಹಿಸಿದೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿತ್ತು.
ಟಾಸ್ ಸಮಯದಲ್ಲಿ ಅಭಿಷೇಕ್ ಫಿಟ್ನೆಸ್ ಬಗ್ಗೆ ಕೇಳಿದಾಗ, ನಾಯಕ ಸೂರ್ಯಕುಮಾರ್ ಯಾದವ್, "ಅಭಿಷೇಕ್ ಒಂದು ಅಥವಾ ಎರಡು ಪಂದ್ಯಗಳಿಗೆ ವಿಶ್ರಾಂತಿ ಪಡೆಯಬಹುದು. ಅವರು ಇನ್ನೂ ಚೇತರಿಕೆ ಕಂಡಿಲ್ಲ" ಎಂದು ಹೇಳಿದರು. ಹೀಗಾಗಿ ಭಾನುವಾರದ ಪಾಕಿಸ್ತಾನ ವಿರುದ್ಧದ ಪಂದ್ಯದಿಂದಲೂ ಅವರು ಹೊರಗುಳಿಯುವ ಸಾಧ್ಯತೆ ಇದೆ. 24 ವರ್ಷದ ಅಭಿಷೇಕ್ ಮೂರು ಬಾರಿ ಪಾಕಿಸ್ತಾನವನ್ನು ಎದುರಿಸಿದ್ದು, 189 ರ ಸ್ಟ್ರೈಕ್ ರೇಟ್ನಲ್ಲಿ 110 ರನ್ ಗಳಿಸಿದ್ದಾರೆ.
IND vs NAM: ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಆಟದಿಂದ ನಮೀಬಿಯಾ ಎದುರು ಗೆದ್ದ ಭಾರತ!
ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆರಂಭಿಕ ಆಘಾತಗಳ ನಡುವೆಯೂ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತು. ಕಠಿಣ ಗುರಿಯನ್ನು ಬೆನ್ನಟ್ಟಿದ ನಮೀಬಿಯಾ ತಂಡವು ಭಾರತೀಯ ಬೌಲರ್ಗಳ ನಿಖರ ದಾಳಿಗೆ ತತ್ತರಿಸಿತು. 18.2 ಓವರ್ಗಳಲ್ಲಿ ಕೇವಲ 116 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು ಶರಣಾಯಿತು.
ಭಾರತ ಪರ ಆರಂಭಿಕ ಆಟಗಾರ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ 52 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬೌಲಿಂಗ್ನಲ್ಲಿ ವರುಣ್ ಚಕ್ರವರ್ತಿ 3 ವಿಕೆಟ್ ಕಿತ್ತು ಮಿಂಚಿದರೆ, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು.