ಬೆಂಗಳೂರು: ಮನೆ ಎಂದರೆ ಕೇವಲ ವಾಸಿಸುವ ಸ್ಥಳವಲ್ಲ. ಅದು ಸಂತೋಷ, ಉತ್ಸಾಹ ಮತ್ತು ಧನಾತ್ಮಕ ಶಕ್ತಿಯ ಕೇಂದ್ರವಾಗಿರಬೇಕು. ಮನೆಯ ವಾತಾವರಣದಲ್ಲಿ ನಕಾರಾತ್ಮಕತೆ ಹೆಚ್ಚಾದರೆ ಅದು ಮನೆಯವರ ಮನಸ್ಸಿನ ಮೇಲೆ ಮಾತ್ರವಲ್ಲ, ಅವರ ಕೆಲಸ ಹಾಗೂ ಜೀವನದ ಮೇಲೂ ಪರಿಣಾಮ ಬೀರುತ್ತದೆ. ವಾಸ್ತುಶಾಸ್ತ್ರದ ಪ್ರಕಾರ, ಕೆಲವು ಸರಳ ಕ್ರಮಗಳನ್ನು ಅನುಸರಿಸಿದರೆ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ ಧನಾತ್ಮಕ ವಾತಾವರಣವನ್ನು ಹೆಚ್ಚಿಸಬಹುದು.
ಪೀಠೋಪಕರಣಗಳನ್ನು ಸರಿಯಾಗಿ ಜೋಡಿಸಿ
ಮನೆಯೊಳಗಿನ ಸ್ಥಳಾವಕಾಶವನ್ನು ಸರಿಯಾಗಿ ಬಳಸುವುದು ಅತ್ಯಂತ ಮುಖ್ಯ. ಪೀಠೋಪಕರಣಗಳನ್ನು ಸರಿಯಾದ ರೀತಿಯಲ್ಲಿ ಮರುಜೋಡಣೆ ಮಾಡಿದರೆ ಶಕ್ತಿಯ ಹರಿವು ಸುಗಮವಾಗುತ್ತದೆ. ಮುಕ್ತ ಸ್ಥಳಾವಕಾಶವು ಮನೆಯ ಒಳಾಂಗಣ ಸೌಂದರ್ಯವನ್ನೂ ಹೆಚ್ಚಿಸುತ್ತದೆ.
ಉಪ್ಪು ಹಾಕಿದ ನೀರಿನಿಂದ ನೆಲ ಒರೆಸಿ
ನೆಲವನ್ನು ಸ್ವಚ್ಛಗೊಳಿಸುವಾಗ ನೀರಿಗೆ ಸ್ವಲ್ಪ ಉಪ್ಪು ಹಾಕಿ ಒರೆಸುವುದರಿಂದ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಉಪ್ಪು ಸೂಕ್ಷ್ಮಾಣು ಜೀವಿಗಳನ್ನೂ ಕಡಿಮೆ ಮಾಡಲು ಸಹಾಯಕವಾಗುತ್ತದೆ.
Vastu Tips: ಅಡುಗೆ ಮನೆಯಲ್ಲಿ ಈ ಪದಾರ್ಥಗಳನ್ನು ಇಟ್ಟರೆ ದಾರಿದ್ರ್ಯ ಹೆಚ್ಚಾಗುತ್ತದೆ!
ಮನೆಯ ಬಾಗಿಲಿಗೆ ರಂಗೋಲಿ ಹಾಕಿ
ಮುಂಜಾನೆ ಮನೆಯ ಬಾಗಿಲಿಗೆ ರಂಗೋಲಿ ಹಾಕುವುದು ಭಾರತೀಯ ಸಂಪ್ರದಾಯ. ಇದು ಮನೆಗೆ ಅಂದವನ್ನು ನೀಡುವುದರ ಜೊತೆಗೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವಾಸ್ತು ಹೇಳುತ್ತದೆ.
ಸೂರ್ಯನ ಬೆಳಕು ಮತ್ತು ತಾಜಾ ಗಾಳಿಗೆ ಅವಕಾಶ ನೀಡಿ
ಪ್ರತಿದಿನ ಕೆಲವು ಸಮಯ ಕಿಟಕಿ ಬಾಗಿಲುಗಳನ್ನು ತೆರೆಯುವುದರಿಂದ ಮನೆಯೊಳಗೆ ಸೂರ್ಯನ ಬೆಳಕು ಹಾಗೂ ತಾಜಾ ಗಾಳಿ ಪ್ರವೇಶಿಸುತ್ತದೆ. ಇದು ಮನೆಯ ವಾತಾವರಣವನ್ನು ತಾಜಾತನದಿಂದ ತುಂಬಿಸುತ್ತದೆ.
ಮನೆಯೊಳಗೆ ಗಿಡಗಳನ್ನು ಇಡಿ
ಹೂವಿನ ಗಿಡಗಳು ಮನೆಯಲ್ಲಿನ ವಾತಾವರಣವನ್ನು ಹಸನಾಗಿಸುತ್ತದೆ. ಒಳಾಂಗಣದಲ್ಲಿ ಇಡುವಂತಹ ಕಡಿಮೆ ನೀರು ಬೇಕಾಗುವ ಗಿಡಗಳನ್ನು ಇಟ್ಟರೆ ಧನಾತ್ಮಕ ಶಕ್ತಿ ಹೆಚ್ಚುತ್ತದೆ.
ಕನ್ನಡಿಯನ್ನು ಸರಿಯಾದ ಸ್ಥಳದಲ್ಲಿ ಇಡಿ
ಕನ್ನಡಿಯು ಬೆಳಕನ್ನು ಪ್ರತಿಫಲಿಸಿ ಕೊಠಡಿಯನ್ನು ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತದೆ. ಆದರೆ ಕನ್ನಡಿಯನ್ನು ಮನೆಯ ಪ್ರವೇಶದ್ವಾರದ ಎದುರಿಗೆ ಅಥವಾ ಹಾಸಿಗೆಯ ಪ್ರತಿಬಿಂಬ ಕಾಣುವಂತೆ ಇಡಬಾರದು.
ಕರ್ಪೂರ ಮತ್ತು ಸುಗಂಧದ್ರವ್ಯ ಬಳಸಿ
ಕರ್ಪೂರ, ಶುದ್ಧ ತುಪ್ಪ ಅಥವಾ ಶ್ರೀಗಂಧವನ್ನು ಸುಟ್ಟು ಅದರ ಸುಗಂಧವನ್ನು ಮನೆಯಲ್ಲೆಲ್ಲ ಹರಡಿದರೆ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.
ಮನೆ ಸದಾ ಸ್ವಚ್ಛವಾಗಿರಲಿ
ಮನೆಯ ಸ್ವಚ್ಛತೆ ಅತ್ಯಂತ ಮುಖ್ಯ. ಧೂಳು ಮತ್ತು ಕಸದಿಂದ ಮುಕ್ತವಾಗಿರುವ ಮನೆ ಮನಸ್ಸಿಗೆ ಸಂತೋಷ ನೀಡುತ್ತದೆ. ಸ್ವಚ್ಛ ವಾತಾವರಣದಲ್ಲಿ ಕೆಲಸ ಮಾಡುವ ಉತ್ಸಾಹವೂ ಹೆಚ್ಚುತ್ತದೆ.