ಗಾಂಧಿನಗರ, ಆ. 1: ಮನೆಯೊಂದರ ಸ್ನಾನಗೃಹದಲ್ಲಿ ಏಳು ಅಡಿ ಉದ್ದದ ಮೊಸಳೆ ಪತ್ತೆಯಾದ ಘಟನೆ ಗುಜರಾತ್ನ ಆನಂದ್ ಜಿಲ್ಲೆಯಲ್ಲಿ ನಡೆದಿದೆ. ಕುಟುಂಬವು ನಿದ್ರಿಸುತ್ತಿರುವಾಗ ಈ ಘಟನೆ ನಡೆದಿದೆ. ಇದು ಮಳೆಗಾಲದಲ್ಲಿ ವಸತಿ ಪ್ರದೇಶಗಳಿಗೆ ಮೊಸಳೆಗಳು (Crocodile) ನುಗ್ಗುತ್ತಿರುವ ಘಟನೆಗಳು ಹೆಚ್ಚುತ್ತಿರುವ ಮಧ್ಯೆ ಈ ಬೆಳವಣಿಗೆ ನಡೆದಿದೆ. ಅಧಿಕಾರಿಗಳ ಪ್ರಕಾರ, ಮೊಸಳೆ ಬಾಲಾಭಾಯಿ ಚೌಹಾಣ್ ಎಂಬವರ ಮನೆಯ ಬಾತ್ರೂಂಗೆ ಪ್ರವೇಶಿಸಿತ್ತು.
ಮನೆಯ ಹೊರಗೆ ನಿರಂತರವಾಗಿ ನಾಯಿಗಳು ಬೊಗಳುತ್ತಿದ್ದರಿಂದ ಎಚ್ಚರಗೊಂಡ ಬಾಲಭಾಯಿ ಚೌಹಾಣ್ ಕುಟುಂಬ ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಾತ್ರೂಂಗೆ ಆಗಮಿಸಿದ ಅನಿರೀಕ್ಷಿತ ಅತಿಥಿ ಕಂಡು ಕುಡುಂಬಸ್ಥರು ಬೆಚ್ಚಿ ಬಿದ್ದರು. ಈ ಆಘಾತಕಾರಿ ದೃಶ್ಯವು ಆಘಾತ ತಂದಿತ್ತಿತು. ಅಪಾಯವನ್ನು ಅರಿತುಕೊಂಡ ಅವರು, ಕೂಡಲೇ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದರು.
ಇಲ್ಲಿದೆ ವಿಡಿಯೊ:
ಕೂಡಲೇ ಸ್ಥಳಕ್ಕೆ ತಲುಪಿದ ರಕ್ಷಣಾ ತಂಡವು, ಅರಣ್ಯ ರಕ್ಷಕರಾದ ನೀಲೇಶ್ ಭಾರ್ವಾಡ್ ಮತ್ತು ಮನೀಶ್ ಪ್ರಜಾಪತಿ ಅವರೊಂದಿಗೆ ದಯಾ ಫೌಂಡೇಶನ್ ಅಧ್ಯಕ್ಷ ನಿತೇಶ್ ಚೌಹಾಣ್ ಮತ್ತು ಸ್ವಯಂಸೇವಕ ತುಷಾರ್ ರಾಣಾ ಕಾರ್ಯಾಚರಣೆಯನ್ನು ನಡೆಸಿದರು. ಮೊಸಳೆಗೆ ಯಾವುದೇ ಗಾಯವಾಗದಂತೆ ಅಥವಾ ಹತ್ತಿರದ ನಿವಾಸಿಗಳಿಗೆ ಅಪಾಯವಾಗದಂತೆ ಅದನ್ನು ಸುರಕ್ಷಿತವಾಗಿ ಹಿಡಿದಿಡಲು ತಂಡವು ಎಚ್ಚರಿಕೆಯಿಂದ ಕೆಲಸ ಮಾಡಿದ್ದರಿಂದ ರಕ್ಷಣೆ ಸುಮಾರು ಒಂದು ಗಂಟೆ ತೆಗೆದುಕೊಂಡಿತು. ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಮೊಸಳೆಯನ್ನು ಹತ್ತಿರದ ಕೊಳಕ್ಕೆ ಬಿಡಲಾಯಿತು.
ʼʼನಂಗೂ ಅಡ್ಮಿಷನ್ ಕೊಡಿʼʼ; ಬಾಯ್ಸ್ ಹಾಸ್ಟೆಲ್ ಮೆಸ್ಗೆ ನುಗ್ಗಿದ ಮೊಸಳೆ
“ಅರಣ್ಯ ಇಲಾಖೆಯಿಂದ ಮಾಹಿತಿ ಪಡೆದ ಕೂಡಲೇ, ನಮ್ಮ ತಂಡ ಸ್ಥಳಕ್ಕೆ ತಲುಪಿತು. ನಾವು 7 ಅಡಿ ಉದ್ದದ ಮೊಸಳೆಯನ್ನು ರಕ್ಷಿಸಿ ಸುರಕ್ಷಿತವಾಗಿ ಕೊಳಕ್ಕೆ ಬಿಟ್ಟೆವು” ಎಂದು ನಿತೇಶ್ ಚೌಹಾಣ್ ಹೇಳಿದರು.
ಮಳೆಗಾಲದಲ್ಲಿ ಮೊಸಳೆಗಳು ವಸತಿ ಪ್ರದೇಶಗಳಿಗೆ ಪ್ರವೇಶಿಸುವುದೇಕೆ?
ಮಳೆಗಾಲದಲ್ಲಿ ಹಳ್ಳಿಗಳು ಮತ್ತು ವಸತಿ ಪ್ರದೇಶಗಳಲ್ಲಿ ಮೊಸಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂದು ಅರಣ್ಯ ಅಧಿಕಾರಿಗಳು ವಿವರಿಸಿದ್ದಾರೆ. ಭಾರಿ ಮಳೆಯಿಂದಾಗಿ ನದಿಗಳು, ಕೊಳಗಳು, ಕಾಲುವೆಗಳು ಮತ್ತು ಜೌಗು ಪ್ರದೇಶಗಳಲ್ಲಿ ನೀರಿನ ಮಟ್ಟ ಏರುತ್ತದೆ. ಇದರಿಂದಾಗಿ ಸರೀಸೃಪಗಳು ತಮ್ಮ ಸಾಮಾನ್ಯ ಆವಾಸಸ್ಥಾನಗಳನ್ನು ಮೀರಿ ಪ್ರಯಾಣಿಸುತ್ತವೆ.
ಆಹಾರ, ಹೊಸ ಪ್ರದೇಶಗಳು ಅಥವಾ ತಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸೂಕ್ತವಾದ ಸ್ಥಳಗಳನ್ನು ಹುಡುಕುವಾಗ ಮೊಸಳೆಗಳು ಹತ್ತಿರದ ವಸತಿ ಪ್ರದೇಶಗಳಿಗೆ ನುಗ್ಗುವ ಸಾಧ್ಯತೆ ಇದೆ ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ. ಪ್ರವಾಹದ ವ್ಯಾಪ್ತಿ ವಿಸ್ತರಿಸಿದಂತೆ, ಮನುಷ್ಯರೊಂದಿಗೆ ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.
ಇನ್ನು ಈ ಘಟನೆ ನಡೆದ ಪ್ರದೇಶದ ಬಳಿ ಇರುವ ಮಲತಾಜ್ ಗ್ರಾಮದಲ್ಲಿರುವ ಒಂದು ಕೊಳದಲ್ಲಿ 100ಕ್ಕೂ ಹೆಚ್ಚು ಮೊಸಳೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದ ಸಮಯದಲ್ಲಿ, ಈ ಸರೀಸೃಪಗಳಲ್ಲಿ ಕೆಲವು ನೀರಿನ ಕಾಲುವೆಗಳ ಮೂಲಕ ಜನ ವಸತಿ ಪ್ರದೇಶಕ್ಕೆ ಪ್ರವೇಶಿಸಿರುವ ಸಾಧ್ಯತೆ ಇದೆ.