ಬದೌನ್,ಡಿ.27: ಇತ್ತೀಚೆಗೆ ಕಾಡು ಪ್ರಾಣಿಗಳು ಮಾನವ ವಾಸಸ್ಥಳಗಳಿಗೆ ಭೇಟಿ ನೀಡುವ ಪ್ರಮಾಣ ಹೆಚ್ಚಾಗಿದೆ. ಹುಲಿ, ಆನೆ, ಚಿರತೆ ಹೀಗೆ ಕಾಡು ಪ್ರಾಣಿಗಳು ಮಾನವನ ಮೇಲೆ ದಾಳಿ ನಡೆಸಿರುವ ಪ್ರಕರಣಗಳು ಕೂಡ ಕಂಡು ಬಂದಿವೆ. ಅಂತೆಯೇ ಉತ್ತರ ಪ್ರದೇಶದಲ್ಲಿ ಅರಣ್ಯ ಅಧಿಕಾರಿಯೊಬ್ಬರ ಮೇಲೆ ಕಾಡುಹಂದಿವೊಂದು ದಾಳಿ ನಡೆಸಿದೆ. ಗ್ರಾಮದಲ್ಲಿ ಬೆಳೆ ನಾಶಪಡಿಸುತ್ತಿದ್ದ ಕಾಡುಹಂದಿ ಯನ್ನು ಸೆರೆಹಿಡಿಯಲು ಹೋದ ಅರಣ್ಯಾಧಿಕಾರಿಯೊಬ್ಬರ ಮೇಲೆಯೇ ಭಯಾನಕವಾಗಿ ದಾಳಿ ಮಾಡಿದೆ. ಸದ್ಯ ಈ ಆಘಾತಕಾರಿ ವಿಡಿಯೊ ಭಾರೀ ವೈರಲ್ (Viral Video) ಆಗಿದೆ.
ಉತ್ತರ ಪ್ರದೇಶದ ಸಿರ್ಸೌಲಿ ಗ್ರಾಮದಲ್ಲಿ ಕಾಡುಹಂದಿಯೊಂದು ರೈತರ ಬೆಳೆಗಳನ್ನು ನಾಶ ಪಡಿಸುತ್ತಿತ್ತು. ಹಂದಿಗಳ ಅವಾಂತರದಿಂದ ಬೆಳೆ ಹಾನಿಯಾಗಿದೆ ಎಂದು ಗ್ರಾಮಸ್ಥರು ಅಧಿಕಾರಿಗೆ ದೂರನ್ನು ನೀಡಿದ್ದರು. ಹೀಗಾಗಿ ಅರಣ್ಯ ಅಧಿಕಾರಿ ಶುಭಂ ಪ್ರತಾಪ್ ಸಿಂಗ್ ತಮ್ಮ ತಂಡದೊಂದಿಗೆ ಭೇಟಿ ನೀಡಿದ್ದರು. ಅವರು ಬಲೆ ಬೀಸಿ ಕಾಡು ಹಂದಿಯ ಸುತ್ತುವರೆದು ಸುರಕ್ಷಿತವಾಗಿ ಸೆರೆಹಿಡಿ ಯಲು ಯೋಜಿಸಿದ್ದರು. ಆದರೆ ಈ ಸಂದರ್ಭದಲ್ಲಿ ಹಂದಿ ಹಠಾತ್ತನೆ ಅಧಿಕಾರಿಯ ಮೇಲೆ ಎರಗಿ ದಾಳಿ ಮಾಡಿದೆ.
ವಿಡಿಯೋ ನೋಡಿ:
ಹಂದಿಯನ್ನು ರಕ್ಷಿಸಿ, ಬೇರೆಡೆಗೆ ಸ್ಥಳಾಂತರಿಸಲು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಕಾಡು ಹಂದಿ ದಿಢೀರ್ ಆಗಿ ದಾಳಿಗೆ ಮುಂದಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಹಂದಿ ಅಧಿಕಾರಿಯ ಮೇಲೆ ದಾಳಿ ಮಾಡುತ್ತಿರುವುದು ಕಂಡು ಬರುತ್ತದೆ. ಸುಮಾರು ಎರಡು ನಿಮಿಷದವರೆಗೆ ಅಧಿಕಾರಿಯನ್ನು ಬಿಡದೆ ದಾಳಿ ನಡೆಸಿದೆ. ತಕ್ಷಣವೇ ಅಲ್ಲಿದ್ದ ಸಿಬ್ಬಂದಿಗಳು ಕೈಯಲ್ಲಿದ್ದ ಕೋಲಿನಿಂದ ಹಂದಿಯನ್ನು ಹೊಡೆದು ಓಡಿಸಿ, ಅಧಿಕಾರಿಯನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಗಾಯಗೊಂಡ ಅಧಿಕಾರಿಯನ್ನು ಚಿಕಿತ್ಸೆಗೆ ದಾಖಲಿಸಲಾಗಿದ್ದು ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
Viral News: ಚಾಲಕನಿಲ್ಲದೆ ಚಲಿಸಿದ ಟ್ರ್ಯಾಕ್ಟರ್; ಭೀಕರ ಅಪಘಾತದಿಂದ ವ್ಯಕ್ತಿಯ ಸ್ಥಿತಿ ಗಂಭೀರ
ಸದ್ಯ ಈ ವೀಡಿಯೊ ಈಗಾಗಲೇ 2.5 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ, ಅನೇಕ ಬಳಕೆದಾರರು ತಂಡದ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದಾರೆ. ಅಪಾಯಕಾರಿ ಕಾಡುಹಂದಿಗಳನ್ನು ಹಿಡಿಯಲು ಕೇವಲ ಕೋಲು ಮತ್ತು ಬಲೆಗಳನ್ನು ಬಳಸುವುದು ಬಹಳಷ್ಟು ಅಪಾಯ... ಅರಿವಳಿಕೆ ನೀಡುವ ಗನ್ ಒದಗಿಸಬೇಕು ಎಂದು ಅನೇಕರು ಸಲಹೆ ನೀಡಿದ್ದಾರೆ. ಬಳಕೆದಾರರೊಬ್ಬರು ಅಧಿಕಾರಿಯನ್ನು ರಕ್ಷಿಸಿದ ತಂಡದ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.