ನವದೆಹಲಿ,ಸೆ.10: ಇತ್ತೀಚೆಗೆ ಆನ್ ಲೈನ್ ಡೆಲಿವರಿ ಸಿಬ್ಬಂದಿ ಗಳಿಂದ ಕಿರುಕುಳ ಉಂಟಾದ ಅನೇಕ ಘಟನೆಗಳು ವರದಿ ಯಾಗಿವೆ. ಇದೀಗ ಖ್ಯಾತ ನಟಿ ಸುಚಿತ್ರಾ ಕೃಷ್ಣ ಮೂರ್ತಿ ಕೊರಿಯರ್ ಸಂಸ್ಥೆ ವಿರುದ್ಧ ಅಸಮಾಧಾನ (Viral News) ವ್ಯಕ್ತಪಡಿಸಿದ್ದಾರೆ. ಮುಂಗಡ ಹಣ ಪಾವತಿ ಮಾಡಿದ್ದರೂ ಪಾರ್ಸಲ್ ತಲುಪಿಸದ ಬ್ಲೂ ಡಾರ್ಟ್ ಕೊರಿಯರ್ ಸಂಸ್ಥೆಯ ಸಿಬ್ಬಂದಿಯೊಬ್ಬ ಬೆಳಿಗ್ಗೆಯಿಂದಲೇ ಹಲವು ಭಾರಿ ಕರೆ ಮಾಡಿ ಕಿರುಕುಳ ನೀಡಿರುವ ಬಗ್ಗೆ ದೂರಿದ್ದಾರೆ.
ಸಿಬ್ಬಂದಿಯಿಂದ ಬರುವ ಅತಿಯಾದ ಕರೆಗಳು ತನಗೆ ಕಿರಿ- ಕಿರಿ ಉಂಟು ಮಾಡುತ್ತಿತ್ತು. ಅಗತ್ಯ ವಿರುವ OTP ನೀಡಲು ತಾನು ಲಭ್ಯವಿರುತ್ತೇನೆಯೇ ಎಂದು ಪರಿಶೀಲಿಸಲು ಕೊರಿಯರ್ ವ್ಯಕ್ತಿ ಬೆಳಿಗ್ಗೆಯೇ ಕರೆ ಮಾಡಲು ಆರಂಭ ಮಾಡಿದ್ದಾನೆ. ಆದರೆ ತನ್ನ ಪಾರ್ಸೆಲ್ ಮಾತ್ರ ಇನ್ನೂ ತಲುಪಿಲ್ಲ. ಗ್ರಾಹಕರಿಗೆ ನಿಮ್ಮ ಕರೆಗಳಿಗೆ ಪ್ರತಿಕ್ರಯಿಸುವುದು ಬಿಟ್ಟು ಬೇರೆ ಕೆಲಸವಿಲ್ಲದ ಮೂರ್ಖರೇ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ ಸುಚಿತ್ರಾ, "ಕೊರಿಯರ್ ಕಳುಹಿಸುವ ವ್ಯಕ್ತಿಗೆ ಬೆಳಿಗ್ಗೆ ಎದ್ದ ತಕ್ಷಣ ಗ್ರಾಹಕರ ವಿಳಾಸ ದೂರ ಇದ್ದರೆ ಸಾಕು, ಕರೆ ಮಾಡಲು ಶುರು ಮಾಡುತ್ತಾನೆ. ಮನೆಯವರೆಗೆ ಬಂದು ಒಟಿಪಿ ಪಡೆಯುವ ಬದಲು ಮುಂಚಿತವಾಗಿಯೇ ಒಟಿಪಿ ಕೇಳಲು ಪದೇ ಪದೇ ಕರೆ ಮಾಡಿ ಕಿರಿಕಿರಿ ನೀಡುತ್ತಾನೆ.
ಬ್ಲೂ ಡಾರ್ಟ್ ಡೆಲಿವರಿ ಬಾಯ್ಗಳು ತಾವೇ ವಿಐಪಿಗಳಂತೆ ವರ್ತನೆ ತೋರುತ್ತಿದ್ದಾರೆ. ಹಾಗಿದ್ರೆ ನಾವೇನೂ ಕೆಲಸವಿಲ್ಲದೆ ಕುಳಿತವರೇ? ಎಂದು ಕಿಡಿಕಾರಿದ್ದಾರೆ. ಗ್ರಾಹಕರು ಮರಳಿ ಕರೆ ಮಾಡಲು ಒದಗಿಸಲಾದ ಸಂಪರ್ಕ ಸಂಖ್ಯೆಗಳ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. ಬ್ಲೂ ಡಾರ್ಟ್ ಕಾಲ್ಬ್ಯಾಕ್ ಸಂಖ್ಯೆಗಳು ಕಾರ್ಯನಿರ್ವಹಿಸುತ್ತಿಲ್ಲ. ಇಂತಹ ನಕಲಿ, ನಿಷ್ಕ್ರಿಯ ಸಂಖ್ಯೆಗಳನ್ನು ನೀಡುತ್ತಿರುವ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ
ಒಮ್ಮೆ ಕರೆ ಸ್ವೀಕರಿಸಲು ಸಾಧ್ಯವಾಗದಿದ್ದರೆ, ಅದನ್ನೇ ನೆಪವಾಗಿಟ್ಟುಕೊಂಡು ಪಾರ್ಸಲ್ ತಲುಪಿಸುವುದನ್ನು ತಪ್ಪಿಸಲಾಗುತ್ತದೆ. ನಂತರ ಮತ್ತೆ ನೂರಾರು ಕರೆಗಳನ್ನು ಮಾಡಲು ಆರಂಭಿಸುತ್ತಾರೆ. ಪಾರ್ಸಲ್ ನೀಡದೆ ಈ ರೀತಿ ನೂರಾರು ಕರೆ ಮಾಡುವುದು ಕಿರುಕುಳವಲ್ಲವೇ? ಎಂದು ಸುಚಿತ್ರಾ ಕೃಷ್ಣಮೂರ್ತಿ ಖಾರವಾಗಿ ಪ್ರಶ್ನಿಸಿದ್ದಾರೆ. ಸದ್ಯ ಸುಚಿತ್ರಾ ಅವರ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೊರಿಯರ್ ಸಂಸ್ಥೆಗಳ ಇಂತಹ ಬೇಜವಾಬ್ದಾರಿ ವರ್ತನೆ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.