ಭುವನೇಶ್ವರ: ಒಡಿಶಾ(Odisha)ದ ಬೋಲಂಗೀರ್ನ ಹಳ್ಳಿಯೊಂದರಲ್ಲಿ ಕಾವಲು ಗೋಡೆಯ ನಿರ್ಮಾಣದಲ್ಲಿ ನಡೆದ ಅಕ್ರಮಗಳ ಬಗ್ಗೆ ವರದಿ ಮಾಡಲು ಹೋದ ಪತ್ರಕರ್ತನ ಮೇಲೆ ಸ್ಥಳೀಯ ವ್ಯಕ್ತಿಗಳು ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಹಲ್ಲೆಯ ವೀಡಿಯೊ ವೈರಲ್ ಆದ ನಂತರ ಅಪ್ರಾಪ್ತ ವಯಸ್ಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಪತ್ರಕರ್ತ ಬಿಜಯ್ ಪ್ರಧಾನ್ ಅನ್ನು ಸಾರ್ವಜನಿಕವಾಗಿ ಕಟ್ಟಿಹಾಕಿ ಥಳಿಸಲಾಗಿದೆಯಂತೆ. ಆರೋಪಿಗಳನ್ನು ಅಭಿನಾಶ್ ದಲೈ, ಆದಿತ್ಯ ಜೆನಾ, ಗುಮಾರ ನಾಯಕ್ ಮತ್ತು ಅಪ್ರಾಪ್ತ ವಯಸ್ಕನೊಬ್ಬ ಎಂದು ಗುರುತಿಸಲಾಗಿದೆ. ಪ್ರಧಾನ್ ಮಾಹಿತಿ ಸಂಗ್ರಹಿಸುತ್ತಾ, ಫೋಟೊಗಳನ್ನು ತೆಗೆದುಕೊಳ್ಳುತ್ತಿದ್ದಾಗ ಪುರುಷರ ಗುಂಪೊಂದು ಅವನ ಮೇಲೆ ಹಲ್ಲೆ ಮಾಡಿದೆ ಎಂದು ಆರೋಪಿಸಲಾಗಿದೆ. ಆರೋಪಿಗಳು ಅವನ ಮೊಬೈಲ್ ಫೋನ್, ಮೈಕ್ರೊಫೋನ್ ಮತ್ತು ಇತರ ಉಪಕರಣಗಳನ್ನು ಕಿತ್ತುಕೊಂಡಿದ್ದಾರಂತೆ.
ವೈರಲ್ ಆದ ವಿಡಿಯೊದಲ್ಲಿ ಆರೋಪಿಗಳು ಪತ್ರಕರ್ತನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ್ದು ಅಲ್ಲದೇ,ಅವನ ಮುಖಕ್ಕೆ ಒದೆಯುತ್ತಿರುವ ದೃಶ್ಯ ಕೂಡ ಸೆರೆಯಾಗಿದೆ. ಆರೋಪಿಗಳ ವಿರುದ್ಧ ಪತ್ರಕರ್ತ ಹಲ್ಲೆ ಪ್ರಕರಣ ದಾಖಲಿಸಿದ್ದು, ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಹಾಗೂ ಈ ಕೃತ್ಯದಲ್ಲಿ ಗುತ್ತಿಗೆದಾರರ ಕೈವಾಡವಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಗುತ್ತಿಗೆದಾರರು ಈ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆಯೇ? ಇಲ್ಲವೇ? ಎಂಬುದನ್ನು ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ ಮತ್ತು ತಪ್ಪಿತಸ್ಥರೆಂದು ಸಾಬೀತಾದರೆ ಅವನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಛತ್ತೀಸ್ಗಢದಲ್ಲಿ ಪತ್ರಕರ್ತನ ಕೊಲೆ ಪ್ರಕರಣ
ಇತ್ತೀಚೆಗೆ ಛತ್ತೀಸ್ಗಢದಲ್ಲಿ 28 ವರ್ಷದ ಪತ್ರಕರ್ತನ ಶವವು ಗುತ್ತಿಗೆದಾರರ ಕ್ಯಾಂಪಸ್ನಲ್ಲಿರುವ ಸೆಪ್ಟಿಕ್ ಟ್ಯಾಂಕ್ನಲ್ಲಿ ಕಂಡುಬಂದಿತ್ತು. ಮೃತ ಪತ್ರಕರ್ತ ತನ್ನ ಇತ್ತೀಚಿನ ವರದಿಯಲ್ಲಿ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದನು. ಮೃತನನ್ನು ಸ್ಥಳೀಯ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಮುಖೇಶ್ ಚಂದ್ರಕರ್ ಎಂದು ಗುರುತಿಸಲಾಗಿದ್ದು, ಬಿಜಾಪುರ ಜಿಲ್ಲೆಯಲ್ಲಿ ಅವನ ಮೃತದೇಹ ಪತ್ತೆಯಾಗಿತ್ತು.ಪತ್ರಕರ್ತನ ಕೊಲೆ ಪ್ರಕರಣದಲ್ಲಿ ಗುರುತಿಸಲಾದ ನಾಲ್ವರು ಆರೋಪಿಗಳಲ್ಲಿ ಒಬ್ಬ ತಲೆಮರೆಸಿಕೊಂಡಿದ್ದು, ಉಳಿದ ಮೂವರನ್ನು ಬಂಧಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಮದುವೆ ಮನೆಗೆ ಬಂದ ಈ ಅನಿರೀಕ್ಷಿತ ಅತಿಥಿ ಕಂಡು ಜನ ಫುಲ್ ಶಾಕ್! ವಿಡಿಯೊ ವೈರಲ್
ರಸ್ತೆ ನಿರ್ಮಾಣ ಯೋಜನೆಯಲ್ಲಿನ ಅಕ್ರಮಗಳ ಕುರಿತು ಮುಖೇಶ್ ನೀಡಿದ ಸುದ್ದಿ ವರದಿಗೆ ಸಂಬಂಧಿಸಿದಂತೆ ವಾಗ್ವಾದ ನಡೆದ ನಂತರ, ರಿತೇಶ್ ಚಂದ್ರಕರ್ ಮತ್ತು ಮಹೇಂದ್ರ ರಾಮ್ಟೆಕೆ ಅವರು ಪತ್ರಕರ್ತನ ತಲೆ, ಎದೆ, ಹೊಟ್ಟೆ ಮತ್ತು ಬೆನ್ನಿನ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.