ಲಖನೌ,ಆ.16: ಯಾವುದೇ ವ್ಯಕ್ತಿಗೆ ಹಾವು ಕಚ್ಚಿದಾಗ ವೇಷ ಏರಲು ಬಿಡಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ. ಇದೀಗ ಹಾವು ಕಚ್ಚಿದ 21 ವರ್ಷದ ಯುವಕನನ್ನು ಆತನ ಅಣ್ಣನು ಪ್ರಜ್ಞೆ ತಪ್ಪದಂತೆ ನೋಡಿಕೊಳ್ಳಲು 150 ಬಾರಿ ಕಪಾಳಮೋಕ್ಷ ಮಾಡಿದ್ದಾನೆ. ಈ ರೋಚಕ ಘಟನೆಯ ದೃಶ್ಯ (Viral News) ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಘಟನೆ ಹಾರ್ದೋಯ್ನ ಗ್ರಾಮೀಣ ಕೊಟ್ವಾಲಿ ಪ್ರದೇಶದ ಜ್ಯೋತಿ ನಗರದಲ್ಲಿ ನಡೆದಿದೆ. 21 ವರ್ಷದ ಅರುಣ್ ಬೆಳೆಗಳಿಗೆ ನೀರುಣಿಸಲು ತನ್ನ ಅಣ್ಣ ಆಕಾಶ್ನ ಜೊತೆ ಹೊಲಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ.
ಹಾವಿನ ಕಡಿತಕ್ಕೆ ಒಳಗಾದ 21 ವರ್ಷದ ಸಹೋದರ ಅರುಣ್ನನ್ನು ಪ್ರಜ್ಞೆ ತಪ್ಪದಂತೆ ನೋಡಿಕೊಳ್ಳಲು, ಆತನ ಅಣ್ಣನು ಒಂದು ಗಂಟೆಯಲ್ಲಿ 150ಕ್ಕೂ ಹೆಚ್ಚು ಬಾರಿ ಕಪಾಳಮೋಕ್ಷ ಮಾಡಿದ್ದಾನೆ. ವೈದ್ಯರು ಅರುಣ್ಗೆ ತಕ್ಷಣವೇ 15 ಆಂಟಿ-ವೆನಮ್ ಇಂಜೆಕ್ಷನ್ಗಳನ್ನು ನೀಡಿ ಕೊನೆಗೂ ರಕ್ಷಣೆ ಮಾಡಿದ್ದಾರೆ.
ಮಧ್ಯಾಹ್ನ 2 ಗಂಟೆಯ ಸುಮಾರಿಗೆ, ಅರುಣ್ ಹುಲ್ಲು ಕೊಯ್ಯುತ್ತಿದ್ದಾಗ ಅದರೊಳಗೆ ಅಡಗಿ ಕೊಂಡಿದ್ದ ಹಾವು ಆತನನ್ನು ಕಚ್ಚಿದೆ. ಅವನ ಸ್ಥಿತಿ ಶೀಘ್ರದಲ್ಲೇ ಹದಗೆಡಲು ಪ್ರಾರಂಭಿಸಿದೆ. ಆತನ ದೇಹಕ್ಕೆ ವಿಷದ ಪ್ರಭಾವ ಏರಿ ಅರುಣ್ ತೀವ್ರ ತೂಕಡಿಕೆ ಮತ್ತು ಪ್ರಜ್ಞೆ ತಪ್ಪುವ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಿದ್ದಾನೆ. ಆಗ ಆತನ ಅಣ್ಣ ಆಕಾಶ್ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾನೆ. ಪ್ರಯಾಣದ ಸಮಯದಲ್ಲಿ, ಶಿವಂ ಶರ್ಮಾ ಎಂದು ಗುರುತಿಸಲ್ಪಟ್ಟ ಅಂಗಡಿಯ ಮಾಲೀಕರು ಇದನ್ನು ಗಮನಿಸಿ ಅರುಣ್ ಅವರನ್ನು ಬೈಕ್ ನಲ್ಲಿ ಆಸ್ವತ್ರೆಗೆ ಸಾಗಿಸಲು ಸಹಾಯ ಮಾಡಿದ್ದಾರೆ.
ಆದರೆ ಆಸ್ಪತ್ರೆಯ ವೈದ್ಯರು ಅರುಣ್ ಚಿಕಿತ್ಸೆಗೆ ಸ್ಪಂದಿಸುವಂತೆ ಮಾಡಲು ಮತ್ತು ಪ್ರಜ್ಞೆ ತಪ್ಪದಂತೆ ನೋಡಿಕೊಳ್ಳಲು ಕುಟುಂಬದ ವರಿಗೆ ಸೂಚನೆಯನ್ನು ನೀಡಿದ್ದರು. ವಿಷವು ದೇಹಕ್ಕೆ ಹೆಚ್ಚು ಪರಿಣಾಮ ಬೀರುತ್ತಿದ್ದರಿಂದ ಅರುಣ್ ಕಣ್ಣುಗಳು ಮುಚ್ಚಿ ಕೊಳ್ಳುತ್ತಿದ್ದವು. ಇದರಿಂದ ಗಾಬರಿಗೊಂಡ ಆಕಾಶ್, ತಮ್ಮ ಸೋದರನನ್ನು ಪ್ರಜ್ಞೆ ತಪ್ಪದಂತೆ ನೋಡಿಕೊಳ್ಳಲು ಆತನಿಗೆ ಸತತವಾಗಿ ಕಪಾಳಮೋಕ್ಷ ಮಾಡುತ್ತಿದ್ದರು.
ಹೀಗೆ ಒಂದು ಗಂಟೆಯ ಅವಧಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಬಾರಿ ಕಪಾಳಮೋಕ್ಷ ಮಾಡಿ ಆತನನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾನೆ. ಹಾವಿನ ಕಡಿತದ ತೀವ್ರತೆಯನ್ನು ಗಮನಿಸಿದ ವೈದ್ಯರು 15 ವಿಷ ವಿರೋಧಿ ಚುಚ್ಚುಮದ್ದುಗಳನ್ನು ನೀಡಿದ್ದಾರೆ. ವಿಷವು ಅವನ ದೇಹದಾದ್ಯಂತ ಗಮನಾರ್ಹವಾಗಿ ಹರಡಿದ್ದು ಹೆಚ್ಚಿನ ಚಿಕಿತ್ಸೆ ಅಗತ್ಯ ಎಂದು ವೈದ್ಯರು ತಿಳಿಸಿದ್ದಾರೆ. ನಿರಂತರ ವೈದ್ಯಕೀಯ ಆರೈಕೆ ಮತ್ತು ಸಹೋದರನ ಪ್ರಯತ್ನಗಳಿಂದ, ಅರುಣ್ ಅಂತಿಮವಾಗಿ ಬದುಕುಳಿದರು.