ಮಹಾರಾಷ್ಟ್ರ: ದೇವಾಲಯವೊಂದರಲ್ಲಿ ಭಕ್ತರ ಮೇಲೆ ಪುರೋಹಿತರು ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದದಲ್ಲಿ ನಡೆದಿದೆ. ಮನಸ್ಸಿನ ಶಾಂತಿಗಾಗಿ ದೇವಾಲಯಗಳಿಗೆ ಜನರು ಭೇಟಿ ನೀಡುತ್ತಾರೆ. ಆದರೆ ಅಲ್ಲೇ ಅವರು ಮನಸ್ಸಿನ ಶಾಂತಿ ಕಳೆದುಕೊಳ್ಳುವಂತ ಪರಿಸ್ಥಿತಿ ಎದುರಾದ ಘಟನೆ ಕೊಲ್ಹಾಪುರದ ಜ್ಯೋತಿಬಾ ದೇವಾಲಯದಲ್ಲಿ ನಡೆದಿದೆ. ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಪುರೋಹಿತರು ಭಕ್ತರ ಮೇಲೆ ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಕೊಲ್ಹಾಪುರದ ಜ್ಯೋತಿಬಾ ದೇವಾಲಯದಲ್ಲಿ ಬೆಳಗಿನ ಆಚರಣೆಗಳ ವೇಳೆ ಪುರೋಹಿತರು ಹಲ್ಲೆ ನಡೆಸಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಸುಮಾರು 15 ರಿಂದ 20 ಮಂದಿ ಪುರೋಹಿತರು ಭಕ್ತರನ್ನು ಹೊಡೆಯುವುದು, ಒದೆಯುವುದು ಮತ್ತು ತೆಂಗಿನಕಾಯಿಗಳನ್ನು ಬಳಸಿ ಗುದ್ದುವುದನ್ನು ತೋರಿಸಲಾಗಿದೆ. ಭಾನುವಾರ ಬೆಳಗ್ಗೆ ಸುಮಾರು 11- 12 ಗಂಟೆಗೆ ಪ್ರದಕ್ಷಿಣೆ, ಆರತಿ ಸಮಯದಲ್ಲಿ ನಡೆದಿದೆ ಎನ್ನಲಾಗಿದೆ.
ಅಯೋಧ್ಯೆಯಲ್ಲಿ ಗಮನ ಸೆಳೆದ ಜರ್ಮನಿಯ ಪುಟಾಣಿ ಅಂಜನೇಯ: ವಿಡಿಯೊ ನೋಡಿ
ಭಕ್ತರ ಸಣ್ಣ ಗುಂಪೊಂದು ಅಶಿಸ್ತಿನಿಂದ ವರ್ತಿಸಿದ್ದರಿಂದ ಈ ಜಗಳ ಪ್ರಾರಂಭವಾಗಿದೆ. ಕೆಲವು ವ್ಯಕ್ತಿಗಳು ದೇವರ ಆರತಿ ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ. ಪದೇ ಪದೇ ಎಚ್ಚರಿಕೆ ನೀಡಿದರೂ ನಿರ್ಲಕ್ಷಿಸಿದರು. ಪುರೋಹಿತರ ಮೇಲೆ ಬಣ್ಣಗಳನ್ನು ಎಸೆದಿದ್ದರು. ಕೆಲವು ಅರ್ಚಕರ ಸಾಂಪ್ರದಾಯಿಕ ಪೇಟಗಳು ಕಳಚಿ ಬಿದ್ದಿದ್ದರಿಂದ ಈ ಘರ್ಷಣೆ ಉಂಟಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಪರಿಸ್ಥಿತಿ ನಿಯಂತ್ರಣ ಕಳೆದುಕೊಂಡಿದ್ದು,. ಅರ್ಚಕರು ಆರೋಪಿ ಭಕ್ತರನ್ನು ಹಿಡಿಯಲು ಅವರ ಹಿಂದೆ ಓಡಿದ್ದಾರೆ. ಇದರಿಂದ ಕೆಲವು ಜನರು ಭಯಭೀತರಾಗಿದ್ದಾರೆ. ಆರೋಪಿ ಭಕ್ತರನ್ನು ಹಿಡಿದು ಅವರನ್ನು ಥಳಿಸಲಾಗಿದೆ. ಅನೇಕರು ಸಂಭಾಷಣೆಯ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ ಎಂದು ಹೇಳಿದೆ.
ಲಂಡನ್ನಲ್ಲೂ ಭಾರತೀಯ ಆಟೋ ರಿಕ್ಷಾ ಪತ್ತೆ: ʼʼಗೇಮ್ ಓವರ್ʼʼ ಎಂದ ನೆಟ್ಟಿಗರು
ದೇವಾಲಯದಲ್ಲಿ ನಡೆದ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಭಕ್ತರ ಮೇಲೆ ಅರ್ಚಕರು ಅತಿಯಾದ ಬಲಪ್ರಯೋಗ ಮಾಡಿದ್ದಾರೆಯೇ ಎಂಬುದನ್ನು ನಿರ್ಧರಿಸಲು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸುತ್ತಿದ್ದಾರೆ.