ಬಾರಾಮತಿ,ಜ. 29: ಮಹಾರಾಷ್ಟ್ರದ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತ ಇಡೀ ದೇಶವೇ ಬೆಚ್ಚಿಬೀಳುವಂತೆ ಆಗಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಇದ್ದ ವಿಮಾನ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಗಂಭೀರ ಅಪಘಾತಕ್ಕೀಡಾಗಿದೆ. ಸದ್ಯ ಅವರ ಅಕಾಲಿಕ ನಿಧನವು ಇಡೀ ದೇಶವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಇಂದು ಅವರ ಅಂತ್ಯಕ್ರಿಯೆ ಬಾರಾಮತಿಯ ಅಹಿಲ್ಯಾದೇವಿ ಹೋಳ್ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೊರಾಂಗಣದಲ್ಲಿ ನಡೆದಿದೆ. ಅವರ ಅಂತಿಮ ಸಂಸ್ಕಾರದ ಮೊದಲು ನಡೆದ ಈ ಒಂದು ಹೃದಯವಿದ್ರಾವಕ ಘಟನೆಯ ವಿಡಿಯೊ ಎಲ್ಲರ ಕಣ್ಣು ತೇವಗೊಳಿಸುವಂತೆ ಮಾಡಿದೆ.
ವಿಡಿಯೋ ನೋಡಿ:
ಅಂತ್ಯಕ್ರಿಯೆಗೂ ಮುನ್ನ ಬಾರಾಮತಿ ವೈದ್ಯಕೀಯ ಕಾಲೇಜಿನ ಹೊರಗೆ ಈ ಒಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಅಜಿತ್ ಪವಾರ್ ಅವರ ಬೆಂಬಲಿಗರೊಬ್ಬರು ದುಃಖದಲ್ಲಿ ಮುಳುಗಿದ್ದು ಅಜಿತ್ ಪವಾರ್ ಅವರ ಮಗ ಪಾರ್ಥ್ ಪವಾರ್ ಅವರನ್ನು ಸಮಾಧಾನ ಪಡಿಸಿದ್ದಾರೆ. ಅಜಿತ್ ಪವಾರ್ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿದ್ದ ಸ್ಥಳದಲ್ಲಿ ಅವರ ಪುತ್ರ ಪಾರ್ಥ ಪವಾರ್ ಅವರು ಅಲ್ಲಿನ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಬಿಕ್ಕಿ ಬಿಕ್ಕಿ ಅಳುತ್ತಾ, "ಪಾರ್ಥ ದಾದಾ..ದಾದಾಗೆ 'ಐ ಲವ್ ಯೂ' ಅಂತ ಹೇಳಿ ಎಂದು ಅಳುತ್ತಿರುವ ದೃಶ್ಯ ನೋಡಬಹುದು.
ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದರೂ ಪಾರ್ಥ ಅವರು ಆ ಅಭಿಮಾನಿಯತ್ತ ಕೈಬೀಸಿ ಸಮಾಧಾನ ಮಾಡಲು ಪ್ರಯತ್ನ ಪಟ್ಟಿದ್ದಾರೆ. ಈ ದೃಶ್ಯವು ಜನರೊಂದಿಗೆ ಅಜಿತ್ ಪವಾರ್ ಇಟ್ಟುಕೊಂಡ ಭಾವನಾತ್ಮಕ ಬಾಂಧವ್ಯವನ್ನು ಎತ್ತಿ ತೋರಿಸುತ್ತದೆ. ಬಾರಾಮತಿ ವೈದ್ಯಕೀಯ ಕಾಲೇಜಿನಲ್ಲಿ ಮತ್ತು ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ದೊಡ್ಡ ಜನಸಮೂಹವು ಗೌರವ ಸಲ್ಲಿಸಲು ಸೇರಿತ್ತು. ಹಲವಾರು ದೃಶ್ಯಗಳಲ್ಲಿ ವಯಸ್ಕರು,ಯುವಕರು ಸೇರಿದಂತೆ ಬಹಿರಂಗವಾಗಿ ಅಳುತ್ತಿರುವ ದೃಶ್ಯ ಕಂಡುಬಂದಿದೆ. ಮೈದಾನದಲ್ಲಿ ಇಂದು ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದೆ.