ಲಖನೌ: ಉತ್ತರ ಪ್ರದೇಶದ ಮಥುರಾದ ಪ್ರಾಥಮಿಕ ಶಾಲೆಯೊಂದರಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಶಿಕ್ಷಕಿ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆಯನ್ನು ಕಂಡು ಕೆಲವು ಮಕ್ಕಳು ಹೆದರಿಕೊಂಡಿದ್ದರೆ ಇನ್ನೂ ಕೆಲವು ಮಕ್ಕಳು ಈ ಹೋರಾಟದಲ್ಲಿ ತಮ್ಮ ಶಿಕ್ಷಕರನ್ನು ಬೆಂಬಲಿಸಲು ಅಂಗನವಾಡಿ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಜಗಳವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಮತ್ತು ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಪ್ರಾಥಮಿಕ ಶಿಕ್ಷಣ ಅಧಿಕಾರಿ (ಬಿಎಸ್ಎ) ತಕ್ಷಣ ಗಮನ ಹರಿಸಿ ಈ ಬಗ್ಗೆ ತನಿಖೆ ನಡೆಸಲು ಬ್ಲಾಕ್ ಶಿಕ್ಷಣ ಅಧಿಕಾರಿಯನ್ನು ನಿಯೋಜಿಸಿದ್ದಾರೆ. ಈ ಜಗಳದಲ್ಲಿ ಅಂಗನವಾಡಿ ಕಾರ್ಯಕರ್ತೆಗೆ ಗಂಭೀರ ಗಾಯಗಳಾಗಿದ್ದು, ಅವಳನ್ನು ಚಿಕಿತ್ಸೆಗಾಗಿ ಫರಿದಾಬಾದ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೈರಲ್ ಆದ ವಿಡಿಯೊದಲ್ಲಿ ಮಹಿಳಾ ಪ್ರಾಥಮಿಕ ಶಾಲಾ ಶಿಕ್ಷಕಿ ಮತ್ತು ಅಂಗನವಾಡಿ ಕಾರ್ಯಕರ್ತೆ ಇಬ್ಬರೂ ಪರಸ್ಪರರ ಕೂದಲನ್ನು ಎಳೆಯುವುದು ಸೆರೆಯಾಗಿದೆ.ಹಾಗೇ ಒಬ್ಬರಿಗೊಬ್ಬರು ಕೆನ್ನೆಗೆ ಹೊಡೆದುಕೊಂಡಿದ್ದಾರೆ. ಶಾಲೆಯ ಸಣ್ಣ ಮಕ್ಕಳು ಸಹ ಈ ಜಗಳದಲ್ಲಿ ಭಾಗಿಯಾಗಿದ್ದರು. ಇಬ್ಬರೂ ನೆಲದ ಮೇಲೆ ಪರಸ್ಪರರ ಕೂದಲನ್ನು ಎಳೆಯುತ್ತಿರುವಾಗ ಮಕ್ಕಳು ಬಂದು ಅವರಿಗೆ ಕಾಲಿನಲ್ಲಿ ಒದೆದಿದ್ದಾರೆ. ಜಗಳ ನೋಡಿ ಅಲ್ಲಿಗೆ ಬಂದ ಸ್ಥಳೀಯರು ಜಗಳ ಬಿಡಿಸಲು ಪರದಾಡುವುದು ಸೆರೆಯಾಗಿದೆ.
ಶಿಕ್ಷಕಿ ಹಾಗೂ ಅಂಗನವಾಡಿ ಕಾರ್ಯಕರ್ತೆಯ ಮಾರಾಮಾರಿ ವಿಡಿಯೊ
ವರದಿಗಳ ಪ್ರಕಾರ, ಪ್ರೀತಿ ತಿವಾರಿ ಎಂದು ಗುರುತಿಸಲಾದ ಸಹಾಯಕ ಶಿಕ್ಷಕಿಯನ್ನು ಇತ್ತೀಚೆಗೆ ಜೌನ್ಪುರದಿಂದ ಈ ಶಾಲೆಗೆ ವರ್ಗಾಯಿಸಲಾಗಿದೆ. ಬುಧವಾರ (ಮಾರ್ಚ್ 26) ಅವರು ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿ ಅವಳೊಂದಿಗೆ ವಿಷಯವೊಂದರ ಬಗ್ಗೆ ವಾಗ್ವಾದ ನಡೆಸಿದ್ದಾಳೆ. ವಾದವು ಬೇಗನೆ ದೈಹಿಕ ಜಗಳಕ್ಕೆ ಕಾರಣವಾಯಿತು ಮತ್ತು ಇಬ್ಬರೂ ಮಹಿಳೆಯರು ಪರಸ್ಪರ ಹಲ್ಲೆ ಮಾಡಲು ಶುರುಮಾಡಿದ್ದಾರೆ.
ಈ ಘಟನೆಯನ್ನು ಅಲ್ಲಿದ್ದವರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ವೈರಲ್ ಆಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿಡಿಯೊವನ್ನು ನೋಡಿದ ಕೂಡಲೇ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ಪ್ರಕರಣದ ತನಿಖೆ ನಡೆಸುವಂತೆ ಬ್ಲಾಕ್ ಶಿಕ್ಷಣ ಅಧಿಕಾರಿ ಕೈಲಾಶ್ ಶುಕ್ಲಾ ಅವರಿಗೆ ಸೂಚಿಸಲಾಗಿದೆ ಎನ್ನಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಸಹಾಯಕ ಶಿಕ್ಷಕಿ ಪ್ರೀತಿ ತಿವಾರಿ ಜಗಳವನ್ನು ಶುರುಮಾಡಿದ್ದಾಳಂತೆ ಮತ್ತು ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿ ಮೇಲೆ ಮೊದಲು ಹಲ್ಲೆ ನಡೆಸಿದ್ದಾಳೆ. ಪ್ರೀತಿ ತಿವಾರಿ ವಿವಾದದಲ್ಲಿ ಭಾಗಿಯಾಗುತ್ತಿರುವುದು ಇದೇ ಮೊದಲಲ್ಲ ಎಂದು ವರದಿಗಳು ಬಹಿರಂಗಪಡಿಸಿವೆ. ಏಕೆಂದರೆ ಅವಳ ವಿರುದ್ಧ ಈ ಹಿಂದೆ ಇದೇ ರೀತಿಯ ಹಲವು ದೂರುಗಳು ಬಂದಿವೆ ಎಂಬುದಾಗಿ ತಿಳಿದುಬಂದಿದೆ.
ಜಗಳವು ಎಷ್ಟು ಭಯಾನಕವಾಗಿ ನಡೆದಿತ್ತು ಎಂದರೆ ಅಂಗನವಾಡಿ ಕಾರ್ಯಕರ್ತೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಕೆಯ ಸ್ಥಿತಿ ಗಂಭೀರವಾಗಿದೆ. ಆದ್ದರಿಂದ ಆಕೆಯ ಕುಟುಂಬವು ಅವಳನ್ನು ಫರಿದಾಬಾದ್ನ ಆಸ್ಪತ್ರೆಯ ಐಸಿಯುಗೆ ದಾಖಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: SSLC ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ ಬ್ಯಾಗ್ನಲ್ಲಿ ಸಿಕ್ಕಿದ್ದೇನು? ಬೆಚ್ಚಿಬಿದ್ದ ಶಿಕ್ಷಕರು
ಘಟನೆಯ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸಲು ಬ್ಲಾಕ್ ಅಭಿವೃದ್ಧಿ ಅಧಿಕಾರಿಗೆ ಎರಡು ದಿನಗಳ ಕಾಲಾವಕಾಶ ನೀಡಲಾಗಿದೆ. ವರದಿ ಬಂದ ನಂತರ ಇದಕ್ಕೆ ಕಾರಣರಾದವರ ವಿರುದ್ಧ ಶಿಕ್ಷಣ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ. ಏತನ್ಮಧ್ಯೆ, ಘಟನೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ದೂರು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ದೂರು ದಾಖಲಾದರೆ, ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.