ತಿರುವನಂತಪುರಂ, ಆ. 22: ʼವೈದ್ಯೋ ನಾರಾಯಣೋ ಹರಿಃʼ ಎನ್ನುವ ಮಾತಿದೆ. ರೋಗಿಯ ಜೀವ ಉಳಿಸುವ ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ವೈದ್ಯೆಯೊಬ್ಬರು ತಮ್ಮ ಜೀವನದ ಮುಖ್ಯ ಘಟ್ಟದಲ್ಲೂ ಕತ್ಯವ್ಯ ಮರೆಯುದೆ ಚಿಕಿತ್ಸೆ ನೀಡಿದ ಘಟನೆಯೊಂದು ನಡೆದಿದೆ. ಕೇರಳಂನ ಕಣ್ಣೂರಿನ ವೈದ್ಯೆ ಮದುವೆ ನಡೆಯುತ್ತಿತ್ತು. ಅವರು ಮಂಟಪದಲ್ಲಿ ಇದ್ದಾಗಲೇ ಅಡುಗೆ ಸಿಬ್ಬಂದಿಯೊಬ್ಬರು ಅಸ್ವಸ್ಥರಾಗಿದ್ದರು. ಈ ಸಂದರ್ಭದಲ್ಲಿ ತಮ್ಮದೇ ಮದುವೆ ಎನ್ನುವುದನ್ನೂ ಲೆಕ್ಕಿಸದೇ ವೈದ್ಯೆ ಮಂಟಪದಿಂದ ಎದ್ದು ಬಂದು ತಕ್ಷಣ ಪ್ರಥಮ ಚಿಕಿತ್ಸೆಯನ್ನು ನೀಡಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಕಣ್ಣೂರಿನ ವೈದ್ಯೆಯೊಬ್ಬರು ತಮ್ಮ ವಿವಾಹ ಸಮಾರಂಭದಲ್ಲಿ ಅನಾರೋಗ್ಯಕ್ಕೆ ಒಳಗಾದ ಅಡುಗೆ ಸಿಬ್ಬಂದಿಗೆ ಚಿಕಿತ್ಸೆ ನೀಡಲು ಆಚರಣೆಗಳನ್ನೇ ಬದಿಗೊತ್ತಿದ್ದಾರೆ. ತಮ್ಮ ಜೀವನದ ಪ್ರಮುಖ ದಿನದಲ್ಲಿಯೂ ವೈದ್ಯಕೀಯ ಕರ್ತವ್ಯಕ್ಕೆ ಆದ್ಯತೆ ನೀಡಿದ್ದಕ್ಕಾಗಿ ನೆಟ್ಟಿಗರು ಅವರನ್ನು ಹೊಗಳಿದ್ದಾರೆ.
ಪ್ರಥಮ ಚಿಕಿತ್ಸೆ ನೀಡಿದ ಮದುಮಗಳ ವಿಡಿಯೊ ಇಲ್ಲಿದೆ:
ಡಾ. ಶಿರಿನ್ ಸುಬೈರ್ ಮತ್ತು ಡಾ. ರಿಝಾಝ್ ಅವರ ಮದುವೆ ಕಾರ್ಯಕ್ರಮವು ಕಣ್ಣೂರಿನಲ್ಲಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವಧುವಿನ ಉಡುಪು ಧರಿಸಿ ಡಾ. ಶಿರಿನ್ ಮಂಟಪದಲ್ಲಿದ್ದರು. ಮದುವೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಂಡು ಬಂದಿದೆ. ಒಬ್ಬ ಮಹಿಳೆಗೆ ಮೂಗಿನಿಂದ ರಕ್ತಸ್ರಾವವಾಗಿದ್ದು, ಇನ್ನೊಬ್ಬರಿಗೆ ತಲೆತಿರುಗಿದೆ.
ಇದನ್ನೆಲ್ಲ ಮಂಟಪದಿಂದಲೇ ಗಮನಿಸುತ್ತಿದ್ದಡಾ. ಶಿರಿನ್ ಸುಬೈರ್ ಒಂದು ಕ್ಷಣವೂ ತಡಮಾಡದೆ ಮಂಟಪದಿಂದ ಓಡಿಬಂದು ಇಬ್ಬರಿಗೂ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಈ ಪರಿಸ್ಥಿತಿಯನ್ನು ನಿಭಾಯಿಸಿ ಅಗತ್ಯ ಆರೈಕೆ ಮಾಡಿದ ಬಳಿಕವೇ ಅವರು ಮದುವೆಯ ಶಾಸ್ತ್ರ ಮುಂದುವರಿಸಲು ಮುಂದೆ ಬಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರು ಅವರನ್ನು ಹೊಗಳಿದ್ದಾರೆ.
ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು!
ಅನೇಕರು ಆ ಕ್ಷಣವನ್ನು ಹೃದಯಸ್ಪರ್ಶಿ ಎಂದು ಕರೆದಿದ್ದಾರೆ. ಒಬ್ಬರು ʼʼಧನ್ಯವಾದ ಸಹೋದರಿ. ನಾವೆಲ್ಲರೂ ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು, ʼ‘ಮೊದಲು ವೈದ್ಯೆ, ಆಮೇಲೆ ವಧು. ವೈದ್ಯಕೀಯ ವೃತ್ತಿಯೇ ಮೊದಲು ಎಂದು ತೋರಿಸಿದ ಹೆಮ್ಮೆಯ ವೈದ್ಯೆʼʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.