ಲಖನೌ, ಡಿ. 16: ಶಿಕ್ಷಣ ಅನ್ನೋದು ಪ್ರತಿಯೊಬ್ಬರಿಗೂ ಬಹಳ ಮುಖ್ಯ. ಅದರಲ್ಲೂ ಇಂದು ಎಷ್ಟೇ ಬಡತನವಿದ್ದರೂ ಹೆತ್ತವರು ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ. ಈ ನಡುವೆ ಶಿಕ್ಷಣವು ಆರ್ಥಿಕ ಕಾರಣದಿಂದ ನಿಲ್ಲಬಾರದು ಎಂದು ಸಾಬೀತು ಪಡಿಸುವಂತಹ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. ವಿದ್ಯಾರ್ಥಿಯೊಬ್ಬಳು ಆರ್ಥಿಕ ಸಂಕಷ್ಟದ ಕಾರಣದಿಂದ ಶುಲ್ಕ ಪಾವತಿ ಮಾಡದೇ ಶಾಲೆಗೆ ಹೋಗುವುದನ್ನೇ ನಿಲ್ಲಿಸಿ ಕೂಲಿ ಕೆಲಸಕ್ಕೆ ಮುಂದಾಗಿದ್ದಳು. ಇದನ್ನು ತಿಳಿದು ಶಾಲೆಯ ಪ್ರಾಂಶುಪಾಲರು ಮಾಡಿದ ಒಂದು ನಿಸ್ವಾರ್ಥ ಕೆಲಸಕ್ಕೆ ಇದೀಗ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸದ್ಯ ಈ ಕುರಿತಾದ ವಿಡಿಯೊ ಭಾರಿ ವೈರಲ್ (Viral Video) ಆಗಿದೆ.
ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲಾ ಪ್ರಾಂಶುಪಾಲರ ಕಾರ್ಯವನ್ನು ಎಲ್ಲರೂ ಶ್ಲಾಘಿಸಿದ್ದಾರೆ. ವಿದ್ಯಾರ್ಥಿನಿಯೊಬ್ಬಳು ಸುಮಾರು 15 ದಿನಗಳಿಂದ ಶಾಲೆಗೆ ಗೈರಾಗಿರುವುದನ್ನು ಪ್ರಾಂಶುಪಾಲರು ಗಮನಿಸಿದ್ದರು. ಆಕೆಯ ದೀರ್ಘಕಾಲದ ಗೈರು ಹಾಜರಿಯ ಹಿಂದಿನ ಕಾರಣವನ್ನು ತಿಳಿಯಲು ಅವರು ವೈಯಕ್ತಿಕವಾಗಿ ಆಕೆಯ ಹಳ್ಳಿಗೆ ಪ್ರಯಾಣ ಬೆಳೆಸಿದರು. ಆದರೆ ಈ ಬಗ್ಗೆ ನಿಖರವಾದ ಕಾರಣ ತಿಳಿದು ಪ್ರಾಂಶುಪಾಲರೇ ಭಾವುಕರಾಗಿದ್ದಾರೆ.
ವಿಡಿಯೊ ಇಲ್ಲಿದೆ:
ಪ್ರಾಂಶುಪಾಕರು ಆಕೆಯ ಹಳ್ಳಿಗೆ ಭೇಟಿ ನೀಡುತ್ತಿದ್ದಂತೆ ಆ ಬಾಲಕಿ ತನ್ನ ಕುಟುಂಬದೊಂದಿಗೆ ಕೃಷಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ದೃಶ್ಯ ಕಂಡು ಬಂದಿದೆ. ಪ್ರಾಂಶುಪಾಲರು ಈ ಬಗ್ಗೆ ಪ್ರಶ್ನೆ ಮಾಡಿದಾಗ 500 ರುಪಾಯಿ ಶುಲ್ಕವನ್ನು ಪಾವತಿಸಲು ಕುಟುಂಬಕ್ಕೆ ಸಾಧ್ಯವಾಗದ ಕಾರಣ ಶಾಲೆ ಬಿಟ್ಟಿದ್ದಾಗಿ ಆಕೆ ತಿಳಿಸಿದ್ದಾಳೆ. ಕಾರಣ ತಿಳಿದ ಪ್ರಾಂಶುಪಾಲರು ಸ್ಥಳದಲ್ಲೇ ಆಕೆಯ ಎಲ್ಲ ಬಾಕಿ ಶಾಲಾ ಶುಲ್ಕವನ್ನು ಪಾವತಿಸಿದ್ದಾರೆ. ಯಾವುದೇ ಭಯ ಅಥವಾ ಹಿಂಜರಿಕೆಯಿಲ್ಲದೆ ಶಾಲೆಗೆ ಮರಳುವಂತೆ ತಿಳಿಸಿದ್ದಾರೆ.
ಅಕ್ಷಯ್ ಖನ್ನಾ ವೈರಲ್ ಡ್ಯಾನ್ಸ್ಗೆ ದೆಹಲಿ ಪೊಲೀಸರು ಫಿದಾ
ಆರ್ಥಿಕ ಕಾರಣದಿಂದ ಶಾಲೆ ಬಿಡುವಂತೆ ಆಗಬಾರದು ಎಂದು ಅವರು ವಿದ್ಯಾರ್ಥಿನಿಯ ಕಷ್ಟ ಅರಿತು ಸ್ಪಂದಿಸಿದ್ದಾರೆ. ಪ್ರಾಂಶುಪಾಲರ ಈ ಮಹತ್ವದ ನಡೆ, ಆ ಬಾಲಕಿ ಮತ್ತೆ ಶಿಕ್ಷಣ ಮುಂದು ವರಿಸಲು ಸಾಧ್ಯವಾಗಿದೆ. ಸದ್ಯ ಹೊಲದಲ್ಲಿ ಪ್ರಾಂಶುಪಾಲರು ವಿದ್ಯಾರ್ಥಿನಿಯೊಂದಿಗೆ ಸಂಭಾಷಣೆ ನಡೆಸುವ ದೃಶ್ಯ ಕಂಡು ಬಂದಿದ್ದು ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ ಅನೇಕ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಒಬ್ಬರು, "ಈ ದೇಶದಲ್ಲಿ ಇನ್ನೂ ಇಂತಹ ಒಳ್ಳೆಯ ಮನುಷ್ಯರಿದ್ದಾರೆ'' ಎಂದು ಹೇಳಿದ್ದಾರೆ. ಮತ್ತೊಬ್ಬರು, ʼʼನಮಗೆ ಇಂತಹ ಶಿಕ್ಷಕರ ಅಗತ್ಯವಿದೆ. ನಿಮಗೆ ಸಹಾಯ ಮಾಡಲು ಸಾಧ್ಯವಾದರೆ ಇತರರಿಗೆ ಸಹಾಯ ಮಾಡಿʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬರು, "ಇತರರಿಗೆ ಒಳ್ಳೆಯದನ್ನು ಮಾಡಿ. ಆದರೆ ದಯವಿಟ್ಟು ಕ್ಯಾಮರಾವನ್ನು ಮನೆಯಲ್ಲಿಯೇ ಇರಿಸಿ'' ಎಂದು ಬರೆದುಕೊಂಡಿದ್ದಾರೆ.