ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ದೀಪಾವಳಿಯಂದು ಪತ್ನಿ ಮನೆ ಬಾಗಿಲು ತೆಗೆಯದಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ

ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಪತ್ನಿ ಮನೆ ಬಾಗಿಲು ತೆಗಿಯಲಿಲ್ಲ ಎನ್ನುವ ಕಾರಣಕ್ಕೆ ತನ್ನ ಪ್ರಾಣವನ್ನೇ ತೆಗೆದುಕೊಂಡಿದ್ದಾನೆ. ಈ ದಾರುಣ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.

ಲಖನೌ: ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದ್ದ ವೇಳೆಯೇ, ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಪತ್ನಿ ಮನೆಯ ಬಾಗಿಲು ತೆಗೆಯದಿದ್ದಕ್ಕೆ ಮನನೊಂದ ಪತಿ, ಬೆಂಕಿ ಹಚ್ಚಿಕೊಂಡು ಗಾಜಿಯಾಬಾದ್‌ ಆತ್ಮಹತ್ಯೆ ಶರಣಾಗಿದ್ದಾನೆ. ಈ ದಾರುಣ ಘಟನೆ ಉತ್ತರ ಪ್ರದೇಶ(Uttar Pradesh)ದ ಗಾಜಿಯಾಬಾದ್‌(Ghaziabad)ನಲ್ಲಿ ನಡೆದಿದೆ. ಮೀರತ್(Meerut) ಜಿಲ್ಲೆಯ ಸರ್ಧಾನಾ ಠಾಣಾ ವ್ಯಾಪ್ತಿಯ ಬಹದ್ದೂರ್‌ಪುರ(Bahadurpur) ಗ್ರಾಮದ ಟಿಂಕು ಕುಮಾರ್(Tinku Kumar) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಪತ್ನಿ ಹಾಗೂ ಮಕ್ಕಳೊಂದಿಗೆ ಟಿಂಕು ಕುಮಾರ್ ಗಾಜಿಯಾಬಾದ್‌ನ ನಂದಗ್ರಾಮ್‌ನ ನೂರ್‌ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕಳೆದ ಒಂದುವರೆ ತಿಂಗಳಿನಿಂದ ದಂಪತಿ ನಡುವೆ ಜಗಳಗಳು ಶುರುವಾಗಿದ್ದವು ಎನ್ನಲಾಗಿದೆ.

ವರದಿಗಳ ಪ್ರಕಾರ, ದೀಪಾವಳಿಯ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕುಡಿದ ಅಮಲಿನಲ್ಲಿ ಟಿಂಕು ಮನೆಗೆ ಬಂದಿದ್ದಾನೆ. ಎಷ್ಟೇ ಡೋರ್ ಬೆಲ್ ಬಾರಿಸಿದರು ಪತ್ನಿ ಬಾಗಿಲು ತೆರೆಯಲೇ ಇಲ್ಲ. ಬಳಿಕ ಬಾಗಿಲು ತೆರೆಯದಿದ್ದರೆ ಬೆಂಕಿ ಹಚ್ಚಿಕೊಳ್ಳುವುದಾಗಿ ಟಿಂಕು ಬೆದರಿಕೆ ಹಾಕಿದ್ದಾನೆ. ಆದರೆ ಪತ್ನಿ ಅದನ್ನು ಗಂಭೀರವಾಗಿ ತೆಗೆದುಕೊಳ್ಳದೇ ಕುಡಿದ ಮತ್ತಿನಲ್ಲಿ ಏನೋ ಹೇಳುತ್ತಿದ್ದಾನೆ ಎಂದು ನಿರ್ಲಕ್ಷಿಸಿದ್ದಾಳೆ. ಎಷ್ಟೇ ಬೇಡಿಕೊಂಡರು ಪತ್ನಿ ಬಾಗಿಲು ತೆರೆಯದಿದ್ದಾಗ ಮನನೊಂದು ಟಿಂಕು ಮನೆಯ ಹೊರಗಿನ ಕಟ್ಟೆಯ ಮೇಲೆ ಕುಳಿತು ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.



ಈ ಸುದ್ದಿಯನ್ನು ಓದಿ: Crime News: ಮಾರಕಾಸ್ತ್ರ ಹಿಡಿದು ಸಾರ್ವಜನಿಕ ರಸ್ತೆಯಲ್ಲಿ ಓಡಾಟ; ಬ್ಯಾಂಕಾಕ್‌ನಲ್ಲಿ ಭಾರತೀಯ ವ್ಯಕ್ತಿಯ ಬಂಧನ

ಇನ್ನೂ ಮನೆ ಹೊರಗಿನ ಕಟ್ಟೆಯ ಮೇಲೆ ಕುಳಿತು ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುತ್ತಿರುವುದು, ಬಳಿಕ ಬೆಂಕಿಯ ಶಾಖ ತಾಳಲಾರದೇ ರಸ್ತೆಯಲ್ಲಿ ಓಡುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಟಿಂಕುವಿನ ಕಿರುಚಾಟ ಕೇಳಿ ಮನೆಯಿಂದ ಹೊರಬಂದ ನೆರೆಹೊರೆಯವರು, ಬಟ್ಟೆ ಮತ್ತು ಮಣ್ಣನ್ನು ಎರಚಿ ರಕ್ಷಿಸಲು ಪ್ರಯತ್ನಿಸಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ಕರೆದೊಯ್ಯಲಾಗಿದೆ. ಆದರೆ, ಅಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಮಂಗಳವಾರ ಮಧ್ಯಾಹ್ನ ಟಿಂಕು ಮೃತಪಟ್ಟಿದ್ದಾನೆ.

ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸಿಪಿ ನಂದಗ್ರಾಮ ಉಪಾಸನ ಪಾಂಡೆ, "ಈ ಘಟನೆಯು ಸಂಪೂರ್ಣ ಕೌಟುಂಬಿಕ ಕಲಹದಿಂದ ಉಂಟಾಗಿದೆ. ಕುಂಟುಂಬದ ಸದಸ್ಯರ ದೂರಿನ ಆಧಾರದ ಮೇಲೆ ಕಾನೂನು ಕ್ರಮ ಕೂಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.