ನವದೆಹಲಿ, ನ. 24: ವಿಮಾನ ಪ್ರಯಾಣ ಬಹುತೇಕರ ಕನಸು. ಆದರೆ ಪ್ರಯಾಣದ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮ, ಇತರ ವ್ಯವಸ್ಥೆಗಳು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹೀಗಾಗಿ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಅದಕ್ಕಾಗಿಯೇ ಗೈಡ್ಗಳನ್ನು ಮತ್ತು ಇತರ ಸಿಬಂದಿಯನ್ನು ನಿಯೋಜಿಸಲಾಗುತ್ತದೆ. ಇದೀಗ ವಿಶೇಷ ಚೇತನ ಪ್ರಯಾಣಿಕರೊಬ್ಬರಿಗೆ ಸನ್ನೆಯ ಮೂಲಕ ಸಂವಹನ ಮಾಡಿ ಸಹಾಯ ಮಾಡುತ್ತಿರುವ ಇಂಡಿಗೋ (IndiGo) ಸಿಬಂದಿಯೊಬ್ಬರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಇಂಡಿಗೋ ಪ್ರಯಾಣಿಕರೊಬ್ಬರು ಚೆಕ್-ಇನ್ ಪ್ರಕ್ರಿಯೆಯ ಸಮಯದಲ್ಲಿ ವಿಶೇಷ ಚೇತನ ಸಿಬ್ಬಂದಿಯೊಂದಿಗೆ ತಾಳ್ಮೆಯಿಂದ ಸಂವಹನ ನಡೆಸುತ್ತಿರುವುದನ್ನು ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಮಾತು ಬರದೆ ಕಿವಿಯೂ ಕೆಳದಿರುವವರೊಂದಿಗೆ ವ್ಯವಹರಿಸುವುದು ಬಹಳ ಕಷ್ಟ. ಅದಕ್ಕಾಗಿ ಕಿವುಡು ಮತ್ತು ಮೂಗರ ಸಂಜ್ಞೆ ಭಾಷೆ ಅರಿತಿರಬೇಕು. ಅಂತೆಯೇ ಇಂಡಿಗೋ ಸಿಬಂದಿಗೆ ಸಂಜ್ಞೆಯ ಭಾಷೆಯ ಬಗ್ಗೆ ಅಷ್ಟಾಗಿ ಅರಿವಿಲ್ಲದಿದ್ದರೂ ತನ್ನ ಕೈಲಾದ ಮಟ್ಟಿಗೆ ವಿಶೇಷ ಚೇತನ ಪ್ರಯಾಣಿಕರಿಗೆ ಸನ್ನೆ ಮಾಡಿ, ಪೇಪರ್ನಲ್ಲಿ ಬರೆದು ಸಹಾಯ ಮಾಡಿದ ದೃಶ್ಯ ವೈರಲ್ ಆಗಿರುವ ವಿಡಿಯೊದಲ್ಲಿ ಕಾಣಬಹುದು.
ವಿಶೇಷ ಚೇತನ ಪ್ರಯಾಣಿಕನ ಜತೆ ಇಂಡಿಗೋ ಸಿಬಂದಿ ಸಂವಹನ:
ಸಾಮಾನ್ಯವಾಗಿ ಇಂತಹ ವಿಶೇಷ ಚೇತನರು ತಮ್ಮ ಆಪ್ತರ ಜತೆ ಪ್ರಯಾಣ ಬೆಳೆಸುತ್ತಾರೆ. ಆದರೆ ಇಲ್ಲಿ ಅವರೊಬ್ಬರೇ ಬಂದಿದ್ದಾರೆ. ಚೆಕ್-ಇನ್ ಕೌಂಟರ್ನಲ್ಲಿ ಇಂಡಿಗೋ ಸಿಬಂದಿಗೆ ಪ್ರಯಾಣಿಕರೊಬ್ಬರಿಗೆ ಕಿವುಡು ಸಮಸ್ಯೆ ಇದೆ ಹಾಗೂ ಅವರಿಗೆ ಮಾತನಾಡಲು ಬರುವುದಿಲ್ಲ ಎನ್ನುವುದು ಗೊತ್ತಾಯಿತು. ಹೀಗಾಗಿ ಆ ಸಿಬಂದಿಯು ಪ್ರಯಾಣಿಕರಿಗೆ ಅತ್ಯಂತ ತಾಳ್ಮೆಯಿಂದ ಮಾರ್ಗದರ್ಶನ ನೀಡಿದರು. ಈ ರೀತಿಯಾಗಿ ಅವರು ಸಹಾಯ ಮಾಡುತ್ತಿರುವ ವಿಡಿಯೊಕ್ಕೆ ಆನ್ಲೈನ್ನಲ್ಲಿ ಚಪ್ಪಾಳೆ ಸಿಕ್ಕಿದೆ.
ವಾಟ್ ಎ ಗಿಫ್ಟ್?! ಬಾಯ್ಫ್ರೆಂಡ್ಗೆ ಗುಟ್ಕಾ ಪುಷ್ಪಗುಚ್ಛ ನೀಡಿದ ಯುವತಿ
ಸುಮಾರು 36 ಸೆಕೆಂಡುಗಳ ಈ ಕ್ಲಿಪ್ ಅನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಚೆಕ್-ಇನ್ ಕೌಂಟರ್ನಲ್ಲಿ ವಾಕ್ ಮತ್ತು ಶ್ರವಣದೋಷವುಳ್ಳ ವ್ಯಕ್ತಿಗೆ ಇಂಡಿಗೋ ಸಿಬಂದಿ ಸಹಾಯ ಮಾಡುತ್ತಿರುವುದು ನೋಡಿದರೆ ಬಹಳ ಖುಷಿಯಾಗುತ್ತದೆ. ಇಂಡಿಗೋ ಸಂಸ್ಥೆಯಲ್ಲಿ ಇಂತಹ ಬದ್ಧತೆ ಸದಾ ಇರುತ್ತದೆ. ಪ್ರಯಾಣಿಕರಿಗೆ ಸಹಾಯ ಮಾಡುವ ಮನೋಧರ್ಮ ಎಲ್ಲರಲ್ಲೂ ಇರಬೇಕು. ಇದು ಬೇರೆಯವರಿಗೂ ಸ್ಪೂರ್ತಿದಾಯಕ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊ ಪೋಸ್ಟ್ ಮಾಡಲಾಗಿದೆ.
ಈ ವಿಡಿಯೊ ಪೋಸ್ಟ್ ಆದ ಕೂಡಲೇ ಅತೀ ಹೆಚ್ಚು ವೀಕ್ಷಣೆ ಪಡೆದಿದೆ. ಅದರ ಜತೆಗೆ ಲೈಕ್ಸ್ ಮತ್ತು ಕಮೆಂಟ್ ಕೂಡ ಬಂದಿದೆ. ಈ ಬಗ್ಗೆ ಇಂಡಿಗೋ ಸಂಸ್ಥೆ ಪ್ರತಿಕ್ರಿಯಿಸಿ, ನಮ್ಮ ತಂಡವು ಸಹಾನುಭೂತಿಯಿಂದಲೇ ಪ್ರಯಾಣಿಕರ ಮನ ಗೆದ್ದಿದೆ. ಅವರ ಪ್ರಯತ್ನಗಳನ್ನು ಗುರುತಿಸಿದ್ದಕ್ಕಾಗಿ ಹಾಗೂ ನಮ್ಮ ಸಂಸ್ಥೆಯ ಬದ್ಧತೆಯನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದೆ. ಬಳಕೆದಾರರೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಕೂಡ ಇಂತಹದ್ದೇ ಒಂದು ಘಟನೆ ನಡೆದಿದೆ. ಇಂಡಿಗೋ ಸಿಬಂದಿಯ ತಾಳ್ಮೆ ಬಹಳ ಇಷ್ಟವಾಯಿತು ಎಂದು ತಿಳಿಸಿದ್ದಾರೆ.