ರಾಜಸ್ಥಾನ,ಜು.21: ಚಿರತೆಯೊಂದು ವೈನ್ ಶಾಪ್ಗೆ ನುಗ್ಗಿ ಭೀತಿ ಹುಟ್ಟಿಸಿರುವ ಘಟನೆಯೊಂದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಹತ್ತಿರದ ಕಾಡಿನಿಂದ ಆಹಾರ ಹುಡುಕುತ್ತಾ ಬಂದ ಚಿರತೆಯೂ ರಾಜಸ್ಥಾನದ ಟೋಂಕ್ ಜಿಲ್ಲೆಯ ಎಸ್ಬಿಐ ಚೌರಸ್ತಾ ಬಳಿಯ ವೈನ್ ಶಾಪ್ಗೆ ನುಗ್ಗಿದೆ. ಅಲ್ಲಿ ಸಿಕ್ಕ ಸಿಕ್ಕ ಬಾಟಲಿಗಳನ್ನು ಪುಡಿಮಾಡಿ ಮಾರಾಟಗಾರನ ಮೇಲೆಯೂ ದಾಳಿ ಮಾಡಿದೆ. ಅಂಗಡಿ ಯೊಳಗಿದ್ದ 25 ವರ್ಷದ ಮಾರಾಟಗಾರ ಸಂಜಯ್ ಗುರ್ಜರ್ ಅವರು ಗಾಯಗೊಂಡಿದ್ದು ಮೂಗು ಮತ್ತು ಬೆನ್ನಿನ ಭಾಗಕ್ಕೆ ತೀವ್ರವಾಗಿ ಗಾಯವಾಗಿದೆ. ಸಂಜಯ್ ಹೇಗೋ ಅಡ್ಡದಿಡ್ಡಿಯಾಗಿ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಈ ಘಟನೆಯೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಭಾರೀ ವೈರಲ್ (Viral News) ಆಗುತ್ತಿದೆ.
ಮುಂಜಾನೆ 8.45 ರ ಸುಮಾರಿಗೆ ರಾಜಸ್ಥಾನದ ತೋಡರೈಸಿಂಗ್ ಪಟ್ಟಣದ ಸಮೀಪದ ಪೊದೆಗಳಲ್ಲಿ ಚಿರತೆ ಮೊದಲು ಕಾಣಿಸಿಕೊಂಡಿತ್ತು. ಇದಕ್ಕೂ ಮೊದಲೇ ಚಿರತೆ ಅರಣ್ಯ ಅಧಿಕಾರಿ ರಾಕೇಶ್ ಎಂಬವರ ಮೇಲೂ ದಾಳಿ ಮಾಡಿತ್ತು. ನಂತರ ಜನನಿಬಿಡ ಪ್ರದೇಶಕ್ಕೆ ಎಂಟ್ರಿಕೊಟ್ಟಿದ್ದು ಅಂಗಡಿಯ ಹೊರಗಿದ್ದ ಫತೇಹ್ ಲಾಲ್ ಕೋಲಿ ಎಂಬ ವ್ಯಕ್ತಿಯನ್ನು ಗಾಯಗೊಳಿಸಿ, ನೇರವಾಗಿ ಮದ್ಯದ ಅಂಗಡಿಯೊಳಗೆ ಪ್ರವೇಶಿಸಿದೆ.
ವಿಡಿಯೊ ನೋಡಿ:
ರಕ್ಷಣಾ ತಂಡ, ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳು ಸುಮಾರು 5 ಗಂಟೆಗಳ ಕಾಲ ಸುದೀರ್ಘ ಜಂಟಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ. ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಿಸಿಟಿವಿ ಕ್ಲಿಪ್ ಆನ್ಲೈನ್ನಲ್ಲಿ ಹರಡುತ್ತಿದ್ದಂತೆ ಹಾಸ್ಯಮಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ. ಬಳಕೆದಾರರೊಬ್ವರು "ಚಿರತೆಗೂ ಒಂದು ಪೆಗ್ ಹಾಕುವ ಆಸೆ" ಎಂದು ಬರೆದಿದ್ದಾರೆ. "ಚಿರತೆ ಚಿಲ್ ಆಗಿರಲು ವೈನ್ ಶಾಪ್ ಗೆ ಬಂದಿದೆ ಅಂಗಡಿಯವನು ವಯಸ್ಸಿನ ಪುರಾವೆಗಾಗಿ ಆಧಾರ್ ಕಾರ್ಡ್ ಕೇಳಿರಬೇಕು ಅದಕ್ಕೆ ಸಿಟ್ಟು ಬಂದಿದೆ ಇರಬೇಕು" ಎಂದು ಹಾಸ್ಯಭರಿತ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇನ್ನೊಂದೆಡೆ ಕಾಡು ಪ್ರಾಣಿಗಳು ವಸತಿ ಪ್ರದೇಶಕ್ಕೆ ಲಗ್ಗೆ ಇಡುವ ಬಗ್ಗೆ ಆನೇಕರು ಆತಂಕ ವ್ಯಕ್ತಪಡಿಸಿದ್ದಾರೆ.