ಅಂಧೇರಿ: ಮುಂಬೈನಲ್ಲಿ 40 ವರ್ಷದ ಪ್ರಯಾಣಿಕರೊಬ್ಬರು ಚಲಿಸುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಅಘಾತಕಾರಿ ಘಟನೆಯೊಂದು ನಡೆದಿದ್ದು ಕೂಡಲೇ ರೈಲೆ ರಕ್ಷಣಾ ಪಡೆಯ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಸದ್ಯ ಈ ದೃಶ್ಯ ಸಿಸಿ ಟಿವಿ ಯಲ್ಲಿ ರೆಕಾರ್ಡ್ ಆಗಿದ್ದು ಬಹಳಷ್ಟು ವೈರಲ್(Viral Video) ಆಗಿದೆ. ಮುಂಬೈನ ಅಂಧೇರಿ ರೈಲು ನಿಲ್ದಾಣದಲ್ಲಿ ಈ ದೃಶ್ಯ ನಡೆದಿದ್ದು ಪ್ರಯಾಣಿಕನನ್ನು ಅಂಧೇರಿಯ ಸೆವೆನ್ ಬಂಗಲೆಯ ನಿವಾಸಿ ರಾಜೇಂದ್ರ ಮಂಗಿಲಾಲ್ (40) ಎಂದು ಗುರುತಿಸಲಾಗಿದ್ದು ಪ್ರಯಾಣಿಕನ ಪ್ರಾಣ ಉಳಿಸಿದ ರೈಲ್ವೇ ರಕ್ಷಣಾ ಪಡೆ (ಆರ್ಪಿಎಫ್) ಸಮಯಪ್ರಜ್ಞೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂಬೈನ ಅಂಧೇರಿ ರೈಲು ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದ್ದು ಪ್ರಯಾಣಿಕನು ಇನ್ನೇನು ರೈಲು ತಪ್ಪಿಬಿಡುತ್ತದೆ ಎಂದು ಚಲಿಸುತ್ತಿದ್ದ ರೈಲಿಗೆ ಅವಸರವಾಗಿ ಹತ್ತಿದ್ದಾರೆ. ಚಲಿಸುತ್ತಿದ್ದ ರೈಲಿನ ಸ್ಟೆಪ್ ಹತ್ತುತ್ತಿ ದ್ದಂತೆ ಆತ ಕಾಲು ಜಾರಿ ರೈಲು ಮತ್ತು ಪ್ಲಾಟ್ಫಾರ್ಮ್ನ ನಡುವಿನ ಅಂತರಕ್ಕೆ ಬಿದ್ದಿದ್ದಾನೆ. ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾದ ಎಎಸ್ಐ ಸಿಂಗ್, ಸಮೀಪದಲ್ಲಿ ನಿಂತಿದ್ದ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ.
ಘಟನೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪ್ರಯಾಣಿಕನು ಎರಡು ಲಗೆಜ್ ಬ್ಯಾಗ್ ಹಿಡಿದುಕೊಂಡು ರೈಲು ಹತ್ತಲು ಪ್ಲಾಟ್ಫಾರ್ಮ್ನಲ್ಲಿ ನಿಂತುಕೊಂಡಿರುವ ದೃಶ್ಯ ನೋಡಬಹುದು. ರೈಲು ಚಲಿಸುತ್ತಿದ್ದಂತೆ ಪ್ರಯಾಣಿಕ ಹತ್ತಲು ಪ್ರಯತ್ನಿಸುತ್ತಾನೆ. ಆದರೆ ರೈಲು ಮತ್ತು ಪ್ಲಾಟ್ಫಾರ್ಮ್ ನಡುವಿನ ಅಂತರದಲ್ಲಿ ಜಾರಿ ಬೀಳುತ್ತಾನೆ. ಪ್ರಯಾಣಿಕನು ಬಿದ್ದ ತಕ್ಷಣ, ಅವನ ಹಿಂದೆಯೇ ನಿಂತಿದ್ದ ಸಹಾಯಕ ಸಬ್-ಇನ್ಸ್ಪೆಕ್ಟರ್ ಪಹೂಪ್ ಸಿಂಗ್ ಎನ್ನುವವರು ಕೂಡಲೇ ಕಾರ್ಯ ಪ್ರವೃತ್ತರಾಗಿ ಪ್ರಯಾಣಿಕನನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ರೈಲ್ವೆ ಸಿಬ್ಬಂದಿ ಪಹೂಪ್ ಸಿಂಗ್ ಸಮಯಪ್ರಜ್ಞೆಯಿಂದಾಗಿ ಆತ ಚಲಿಸುವ ರೈಲಿನಡಿ ಸಿಲುಕಿ ಪ್ರಾಣ ಕಳೆದುಕೊಳ್ಳುವುದು ತಪ್ಪಿದಂತಾಗಿದೆ.
ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು, ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿಯ ಕಾರ್ಯ ಪ್ರವೃತ್ತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದುರಂತವೊಂದು ತಪ್ಪಿದೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ನೆಟ್ಟಿಗರು ಜಾರಿ ಬಿದ್ದ ಪ್ರಯಾಣಿಕನಿಗೆ ಮರು ಜೀವ ನೀಡಿದರು ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನು ಓದಿ: Viral News: ಈ ಶತಮಾನದ ಮಾದರಿ ಗಂಡು! ತಾಳಿ ಕಟ್ಟುತ್ತಿದ್ದಂತೆ 5 ಲಕ್ಷ ರೂ. ವರದಕ್ಷಿಣೆ ವಾಪಸ್ ಕೊಟ್ಟ ವರ
ಕಳೆದ ಕೆಲವು ತಿಂಗಳ ಹಿಂದೆ ಮುಂಬೈನಲ್ಲಿ ಇಂತಹದ್ದೇ ಘಟನೆ ನಡೆದಿದೆ. ಮುಂಬೈನ ವಸಾಯಿ ರೋಡ್ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲನ್ನು ಪ್ರಯಾಣಿಕರೊಬ್ಬರು ಹತ್ತಲು ಪ್ರಯತ್ನಿಸುತ್ತಿದ್ದಾಗ, ಪ್ಲಾಟ್ ಫಾರ್ಮ್ ಹಾಗೂ ರೈಲಿನ ಮದ್ಯದಲ್ಲಿರುವ ಅಂತರಕ್ಕೆ ಬಿದ್ದಿದ್ದಾರೆ. ರೈಲು ವೇಗ ಪಡೆದುಕೊಂಡ ಕಾರಣ, ವ್ಯಕ್ತಿಯನ್ನು ಕೆಲವು ದೂರದ ವರೆಗೆ ರೈಲು ಎಳೆಯಲ್ಪಟ್ಟಿತ್ತು. ಇದರ ನಂತರ, ಇಬ್ಬರು ಆರ್ಪಿಎಫ್ ಸಿಬ್ಬಂದಿ ಆತನನ್ನು ಹಿಡಿದು ಹೊರಕ್ಕೆ ಎಳೆದು ಆತನ ಜೀವ ಉಳಿಸಿದ್ದರು. ಇದೀಗ ಇಂತಹ ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ.