ಮುಂಬೈ, ಆ. 13: ಮುಂಬೈಯಿಂದ ಗೋವಾಕ್ಕೆ ತೆರಳಬೇಕಿದ್ದ ವಿಮಾನವೊಂದು 6 ಗಂಟೆ ವಿಳಂಬವಾಗಿದ್ದು, ನಿರ್ಲಕ್ಷ್ಯ ವಹಿಸಿದ ಘಟನೆ (Viral News) ನಡೆದಿದೆ. ಸರಿಯಾದ ಮಾಹಿತಿ ನೀಡದೆ ಹಾಗೂ ಮೂಲಭೂತ ಸೌಕರ್ಯ ಒದಗಿಸದೆ ಪ್ರಯಾಣಿಕರನ್ನು ದೀರ್ಘ ಕಾಲದವರೆಗೆ ಕಾದು ಕೂರಿಸಿದೆ. ಕ್ಯಾಪ್ಟನ್ ಅವರನ್ನು ಪದೇ ಪದೆ ವಿನಂತಿಸಿದರೂ ವಿಳಂಬಕ್ಕೆ ಕಾರಣಗಳನ್ನು ನೀಡಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.
ತಮ್ಮ ವಿಮಾನ ಯಾವಾಗ ಹೊರಡುತ್ತದೆ ಎಂಬುದರ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲದೆ ದೀರ್ಘವಾಗಿ ಕಾಯಬೇಕಾಯಿತು. ಈ ಸಮಯದಲ್ಲಿ ಯಾವುದೇ ಆಹಾರ ಅಥವಾ ಉಪಹಾರಗಳನ್ನು ಒದಗಿಸಲಾಗಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಸದ್ಯ ವಿಮಾನಯಾನ ಸಂಸ್ಥೆಯ ಈ ನಡೆಗೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೊ ನೋಡಿ:
ನತಾಶಾ ದೇಸಾಯಿ ಲಾವಂಡೆ ಎಂಬ ಪ್ರಯಾಣಿಕರೊಬ್ಬರು ಇನ್ಸ್ಟಾಗ್ರಾಮ್ನಲ್ಲಿ ಈ ಅನುಭವ ಹಂಚಿಕೊಂಡಿದ್ದಾರೆ. ಮಧ್ಯಾಹ್ನ ಮುಂಬೈನಿಂದ ಹೊರಡಬೇಕಿದ್ದ ಸ್ಪೈಸ್ಜೆಟ್ ವಿಮಾನವು ಸಂಜೆ 6 ಗಂಟೆಯ ಸುಮಾರಿಗೆ ರನ್ವೇ ತಲುಪಿತು. ಎಲ್ಲ ಪ್ರಯಾಣಿಕರು ವಿಮಾನ ಹತ್ತುವ ಮೊದಲು ನಿಲ್ದಾಣದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಕಾಯುತ್ತಿದ್ದರು ಎಂದು ಅವರು ಹೇಳಿದ್ದಾರೆ.
ವಿಮಾನ ಒಳ ಹೋದ ನಂತರ ಹೊರಡಲು ಇನ್ನೂ ಮೂರು ಗಂಟೆಗಳ ಕಾಲ ಕಾಯಬೇಕಾಯಿತು. ಯಾವುದೇ ಜವಾಬ್ದಾರಿ ಇಲ್ಲದಂತೆ ಪ್ರಯಾಣಿಕರನ್ನು ನಡೆಸಿಕೊಂಡಿದ್ದಾರೆ. ಬೆಳಗ್ಗೆ 9 ಗಂಟೆಗೆ ಮನೆಯಿಂದ ಹೊರಟಿದ್ದ ಪ್ರಯಾಣಿಕರು, ವೃದ್ಧರು ಮತ್ತು ಸಣ್ಣ ಮಕ್ಕಳು ಯಾವುದೇ ಆಹಾರವಿಲ್ಲದೆ ಪ್ರಯಾಸ ಎದುರಿಸಿದರು. ಏನಾಯಿತು ಎಂದು ನಾವು ಸಿಬ್ಬಂದಿಯನ್ನು ಕೇಳಿದಾಗಲೆಲ್ಲಾ, ಒಂದೇ ಉತ್ತರ ನಮಗೆ ATC ಕ್ಲಿಯರೆನ್ಸ್ ಇಲ್ಲ. ತಮಗೂ ಸರಿಯಾದ ಮಾಹಿತಿ ಇಲ್ಲ ಎಂದಷ್ಟೇ ಉತ್ತರಿಸಿದರು ಎಂಬುದಾಗಿ ಪ್ರಯಾಣಿಕರು ದೂರಿದ್ದಾರೆ.
ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ; ಸಿಬ್ಬಂದಿಯನ್ನು ಲಾಕ್ ಮಾಡಿದ ಮ್ಯಾನೇಜರ್!
ಸರಿಯಾದ ವಿವರಣೆ ಇಲ್ಲ, ಉಪಾಹಾರವಿಲ್ಲದೆ ಸುಮಾರು 6 ಗಂಟೆಗಳ ಕಾಲ ಕಾಯಬೇಕಾಯಿತು. ನೀರು ಮಾತ್ರ ನೀಡಿದ್ದಾರೆ ಎಂದು ಮಹಿಳೆ ಬರೆದಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನಾಗರಿಕ ವಿಮಾನಯಾನ ಸಚಿವಾಲಯವು ಸ್ಪಂದಿಸಿದ್ದು, "ನಿಮಗಾದ ಅನಾನುಕೂಲಕ್ಕೆ ವಿಷಾದಿಸುತ್ತೇವೆ. ಸಮಸ್ಯೆಯನ್ನು ಬಗೆಹರಿಸಲು ದಯವಿಟ್ಟು ನಿಮ್ಮ ವಿಮಾನದ ಹೆಸರು, PNR ಸಂಖ್ಯೆ, ಪೂರ್ಣ ಹೆಸರು ಮತ್ತು ಫೋನ್ ಸಂಖ್ಯೆಯನ್ನು ಕಳುಹಿಸಿ" ಎಂದು ತಿಳಿಸಿದ್ದಾರೆ.
ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ʼʼನೀವು ಸುರಕ್ಷಿತವಾಗಿ ತಲುಪಿದ್ದೀರಿ ಎಂದು ಭಾವಿಸುತ್ತೇನೆʼʼ ಎಂದರು. ಮತ್ತೊಬ್ಬರು, ʼʼಕೆಟ್ಟ ವಿಮಾನಯಾನ ಸಂಸ್ಥೆ, ಇನ್ಮುಂದೆ ಎಂದಿಗೂ ಬುಕ್ ಮಾಡಬೇಡಿʼʼ ಎಂದು ಸಲಹೆ ನೀಡಿದ್ದಾರೆ.