ನವದೆಹಲಿ, ಆ. 17: ಪ್ರಸಿದ್ಧ ಇ- ಕಾಮರ್ಸ್ ಸಂಸ್ಥೆ ಫ್ಲಿಪ್ಕಾರ್ಟ್ ಸಂಸ್ಥೆ ಇದೀಗ ತೀವ್ರ ವಿವಾದಕ್ಕೆ ಗುರಿಯಾಗಿದೆ. ಪ್ರೀಡಂ ಸೇಲ್ ಕೊಡುಗೆಯ ಪ್ರಚಾರಕ್ಕಾಗಿ ನೀಡಿದ ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ (Viral News) ಟೀಕೆಗೆ ಕಾರಣವಾಗಿದೆ. ಸೇಲ್ ಮುಕ್ತಾಯಗೊಳ್ಳುತ್ತಿರುವುದನ್ನು ತಿಳಿಸಲು ಸಂಸ್ಥೆಯು ಶ್ರದ್ಧಾಂಜಲಿ ರೀತಿಯ ವಿನ್ಯಾಸವನ್ನು ಬಳಸಿದೆ. ಸಾವು ಮತ್ತು ಶೋಕಕ್ಕೆ ಸಂಬಂಧಿಸಿದ ಚಿತ್ರಣವನ್ನು ಮಾರ್ಕೆಟಿಂಗ್ ಸಾಧನವಾಗಿ ಬಳಸಿದ್ದಕ್ಕಾಗಿ ಅನೇಕರು ಇ-ಕಾಮರ್ಸ್ ಪ್ಲಾಟ್ಫಾರ್ಮ್ ಅನ್ನು ಟೀಕಿಸಿದ್ದಾರೆ.
ಫ್ಲಿಪ್ಕಾರ್ಟ್ ತನ್ನ ‘ಫ್ರೀಡಂ ಸೇಲ್’ ಕೊಡುಗೆಯ ಪ್ರಚಾರಕ್ಕಾಗಿ ಮುದ್ರಣ ಜಾಹೀರಾತುವೊಂದನ್ನು ನೀಡಿದೆ. ಸೇಲ್ ಕೊನೆಗೊಂಡಿದೆ ತಿಳಿಸಲು ಸಂಸ್ಥೆಯು ವಿಭಿನ್ನ ಮಾದರಿಯ ವಿನ್ಯಾಸವನ್ನು ಹಂಚಿಕೊಂಡಿದೆ. ಸಾವು ಮತ್ತು ಸಂತಾಪ ಸೂಚಿಸುವ ಮಾದರಿಯಲ್ಲಿ ವ್ಯಾಪಾರಕ್ಕೆ ಬಳಸಿ ಕೊಂಡಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಮಾರ್ಕೆಟಿಂಗ್ ವ್ಯವಹಾರ, ಆಕರ್ಷಣೆಗಾಗಿ ಈ ರೀತಿ ಜಾಹೀರಾತು ನೀಡುವುದು ತಪ್ಪು ಎಂದು ಅನೇಕರು ಕಿಡಿಕಾರಿದ್ದಾರೆ.
ವೈರಲ್ ಪೋಸ್ಟ್:
ಪ್ರಚಾರದ ಜಾಹೀರಾತಿನಲ್ಲಿ ವ್ಯಕ್ತಿಗಳ ಫೋಟೊ ಹಾಗೂ ವಿವರಗಳನ್ನು ಶ್ರದ್ಧಾಂಜಲಿ ನೀಡುವ ಮಾದರಿಯಲ್ಲಿ ಪ್ರಕಟಿಸಲಾಗಿತ್ತು. ಅದರ ಜತೆಗೆ ಬೋಲ್ಡ್ ಅಕ್ಷರದಲ್ಲಿ "ನಮಗೆ ಬೇಸರವಿಲ್ಲ" ಎಂದು ಬರೆದು, ಕೆಳಗೆ "ಅವರು ಜೀವಿಸುತ್ತಲೇ ಇರುತ್ತಾರೆ. ಆಫರ್ಗಳು ಶೀಘ್ರದಲ್ಲೇ ಮುಕ್ತಾಯಗೊಳ್ಳಲಿವೆ" ಎಂಬ ಸಂದೇಶ ಹಂಚಿಕೊಳ್ಳಲಾಗಿದೆ.
ರೈಲ್ವೆ ಗೇಟ್ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ
ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಜನರು ನಿಜವಾದ ವ್ಯಕ್ತಿಗಳೇ ಅಥವಾ AI-ರಚಿತವೇ ಎಂಬುದು ಸ್ಪಷ್ಟವಾಗಿಲ್ಲವಾದರೂ, ಅನೇಕರು ಅಭಿಯಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸಿದ್ಧ ಲೇಖಕಿ ಹಾಗೂ ಅಂಕಣಕಾರ್ತಿ ಶೋಭಾ ಡೇ ಈ ಜಾಹೀರಾತನ್ನು ತೀವ್ರವಾಗಿ ಖಂಡಿಸಿದ್ದು ಇದು ಒಂದು ಸೃಜನಶೀಲತೆಯೇ? ಎಂದು ಪ್ರಶ್ನಿಸಿದ್ದಾರೆ.
ನೆಟ್ಟಿಗರೊಬ್ಬರು, ʼʼಫ್ಲಿಪ್ಕಾರ್ಟ್ ಸಂಸ್ಥೆಗೆ ನಾಚಿಕೆಯಾಗಬೇಕು. ಸೃಜನಶೀಲತೆ ಎಂಬುದು ಸಂಪೂರ್ಣವಾಗಿ ಸತ್ತುಹೋಗಿದೆʼʼ ಎಂದಿದ್ದಾರೆ. ಮತ್ತೊಬ್ಬರು, ʼʼವ್ಯಾಪಾರ ವೃದ್ಧಿಯಾಗಲು ಇಷ್ಟು ಕೀಳು ಮಟ್ಟಕ್ಕೆ ಇಳಿಯಬಾರದುʼʼ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು "ಇವು ನಿಜವಾದ ವ್ಯಕ್ತಿಗಳ ಫೋಟೊ ಅಲ್ಲ. ಬದಲಿಗೆ ಕೃತಕ ಬುದ್ಧಿಮತ್ತೆ ಮೂಲಕ ಸೃಷ್ಟಿಸಿದ ಚಿತ್ರಗಳು. ಇದನ್ನು ಅಷ್ಟೊಂದು ಸಿರಿಯಸ್ ಆಗಿ ತೆಗೆದುಕೊಳ್ಳುವ ಅಗತ್ಯವಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.