ಲಖನೌ, ಜೂ. 18: ಆಧುನಿಕ ಯುಗದಲ್ಲಿ ಮಾನವೀಯತೆ ಅನ್ನೋದು ಮರೆಯಾಗಿದೆ ಎನ್ನುವ ದೂರು ಪದೇ ಪದೆ ಕೇಳಿ ಬರುತ್ತಿದೆ. ಈ ಹೇಳಿಕೆ ನಿಜ ಎಂಬಂತೆ ಉತ್ತರ ಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಕ್ಯಾಬ್ ಚಾಲಕನೊಬ್ಬ ವಿಶೇಷ ಚೇತನ ಮಹಿಳೆಯೊಬ್ಬರ ವ್ಹೀಲ್ಚೇರ್ ಇಟ್ಟುಕೊಳ್ಳಲು ನಿರಾಕರಿಸಿದ್ದು, ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ. ಪ್ರತಿಷ್ಠಾ ದೇವೇಶ್ವರ್ ಶರ್ಮಾ ಎನ್ನುವವರು ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೊ ಶೇರ್ ಮಾಡಿದ್ದು, ಇದು ನಾಚಿಕೆಗೇಡಿನ ಸಂಗತಿ ಎಂದು ಅನೇಕರು ಆಕ್ರೋಶ ಹೊರ ಹಾಕಿದ್ದಾರೆ.
ವ್ಹೀಲ್ಚೇರ್ ಅನ್ನು ವಾಹನದ ಒಳಗೆ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಮಹಿಳೆಯನ್ನು ಚಾಲಕ ಕಾರಿನಿಂದ ಇಳಿಸಿದ್ದಾನೆ. ಚಾಲಕನ ವರ್ತನೆಯಿಂದ ಬೇಸರಗೊಂಡ ಮಹಿಳೆ ಇನ್ನೊಂದು ಕ್ಯಾಬ್ ಬುಕ್ ಮಾಡಬೇಕಾಯಿತು. ಇಂತಹ ಚಾಲಕರಿಗೆ ಅನುಮತಿ ನೀಡಬಾರದು ಎಂದು ಅನೇಕರು ಕಿಡಿಕಾರಿದ್ದಾರೆ.
ವಿಡಿಯೊ ನೋಡಿ:
ವಿಡಿಯೊದಲ್ಲಿ ಮಾತನಾಡಿರುವ ಪ್ರತಿಷ್ಠಾ, ʼʼಚಾಲಕನು ಕಾರಿನಲ್ಲಿ ವ್ಹೀಲ್ಚೇರ್ ಇಡಲು ಸಾಧ್ಯವಿಲ್ಲ ಎಂದು ನನ್ನನ್ನು ಇಳಿಸಿದ. ಇದರಿಂದಾಗಿ ಮತ್ತೊಂದು ಕ್ಯಾಬ್ ಬುಕ್ ಮಾಡಬೇಕಾಯಿತು. ಈತನ ಮುಖ ನೋಡಿ, ಯಾವುದೇ ತರಹದ ಪಶ್ಚಾತ್ತಾಪವಾಗಲಿ, ನಾಚಿಕೆಯಾಗಲಿ ಇಲ್ಲ. ವಿಶೇಷ ಚೇತನರ ಜೀವನವನ್ನು ಜಗತ್ತು ಎಷ್ಟು ಕಷ್ಟವಾಗಿಸಿದೆ ಎಂಬುದಕ್ಕೆ ಇದು ಸಾಕ್ಷಿ. ಈತನಿಗೆ ಸೂಕ್ತ ಶಿಕ್ಷೆಯಾಗಬೇಕುʼʼ ಎಂದು ಬರೆದುಕೊಂಡಿದ್ದಾರೆ.
ಗಾಂಜಾ ಬಗ್ಗೆ ದೂರು ನೀಡಿದ್ದಕ್ಕೆ ಮಕ್ಕಳ ಮೇಲೆ ಹಲ್ಲೆ ನಡೆಸಿದ ಅಪ್ರಾಪ್ತ ಬಾಲಕರು
ಈತನಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಉಬರ್ ಸಂಸ್ಥೆಯನ್ನು ಟ್ಯಾಗ್ ಮಾಡಿ ಒತ್ತಾಯಿಸಿದ್ದಾರೆ. ಈ ವಿಡಿಯೊ ಇದೀಗ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಹೊಂದಿದೆ. ಆದರೆ ಉಬರ್ ಇಂಡಿಯಾ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪ್ರತಿಷ್ಠಾ ಅಸಮಾಧಾನ ಹೊರಹಾಕಿದ್ದಾರೆ. ಅನೇಕ ಬಳಕೆದಾರರು ಮಹಿಳೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು ''ನಿಮಗೆ ನಾಚಿಕೆಯಾಗಬೇಕು, ನಾನು ಇನ್ನು ಮುಂದೆ ಉಬರ್ ಬಳಸುವುದಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಾರಿನಲ್ಲಿ, ʼʼವ್ಹೀಲ್ಚೇರ್ ಇಡಲು ಜಾಗದ ಕೊರತೆ ಇರಬಹುದು. ಈ ಕಾರಣ ಕೂಡ ಇರಬಹುದುʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.