ಹೈದರಾಬಾದ್, ಡಿ. 21: ಇತ್ತೀಚೆಗೆ ಸಣ್ಣ ಪುಟ್ಟ ವಿಚಾರಗಳಿಗೆ ದಂಪತಿಯ ವೈ ಮನಸ್ಸು ಮೂಡಿ ದೂರವಾಗುವ ಸಂಖ್ಯೆ ಹೆಚ್ಚಾಗುತ್ತಿದೆ. ಸಣ್ಣ ವಿಚಾರವನ್ನೂ ಗಂಭೀರವಾಗಿ ತೆಗೆದುಕೊಂಡು ದಾಂಪತ್ಯವನ್ನೇ ಕೊನೆಗೊಳಿಸುವವರ ಸಂಖ್ಯೆಗೆ ಕಡಿಮೆ ಏನಿಲ್ಲ. ಅದೇ ರೀತಿ ವೈವಾಹಿಕ ಸಂಬಂಧದಿಂದ ಬೇಸೆತ್ತು ಪ್ರಾಣ ಕಳೆದುಕೊಂಡಿರುವವರೂ ಇದ್ದಾರೆ. ಇದೀಗ ಆಂಧ್ರ ಪ್ರದೇಶ ಮೂಲದ, ಹೊಸದಾಗಿ ಮದುವೆಯಾದ ಜೋಡಿವೊಂದು ರೈಲಿನಿಂದ ಜಿಗಿದು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಯದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ನಡೆದಿದೆ. ನವ ವಿವಾಹಿತ ದಂಪತಿ ಚಲಿಸುವ ರೈಲಿನಿಂದ ಹಾರಿ ಪ್ರಾಣವೇ ಕಳೆದುಕೊಂಡಿದ್ದಾರೆ. ಸದ್ಯ ಅವರಿಬ್ಬರು ಸಾಯುವ ಮೊದಲು ಜಗಳವಾಡಿಕೊಂಡಿರುವ ದೃಶ್ಯ ಕೂಡ ವೈರಲ್ (Viral Video) ಆಗಿದೆ.
ಡಿಸೆಂಬರ್ 18ರ ತಡರಾತ್ರಿ ತೆಲಂಗಾಣದ ಯದಾದ್ರಿ ಭುವನಗಿರಿ ಜಿಲ್ಲೆಯ ವಂಗಪಲ್ಲಿ-ಅಲೇರ್ ರೈಲು ಮಾರ್ಗದಲ್ಲಿ ಚಲಿಸುವ ರೈಲಿನಿಂದ ಹಾರಿ ದಂಪತಿ ಪ್ರಾಣ ಕಳೆದು ಕೊಂಡಿದ್ದಾರೆ. ಸಾವಿಗೂ ಮುನ್ನ ದಂಪತಿ ರೈಲಿನಲ್ಲಿ ತೀವ್ರವಾಗಿ ಜಗಳವಾಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.
ವಿಡಿಯೊ ನೋಡಿ:
ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಕೊರಡ ಸಿಂಹಾಚಲಂ (25) ಮತ್ತು ಭವಾನಿ (19) ಮೃತರು. ಇವರಿಬ್ಬರ ವಿವಾಹವಾಗಿ ಕೇವಲ ಎರಡು ತಿಂಗಳಾಗಿತ್ತು. ಪೊಲೀಸರ ಪ್ರಕಾರ, ದಂಪತಿ ಸಿಕಂದರಾಬಾದ್ನಲ್ಲಿ ಮಚಲಿಪಟ್ನಂ ಎಕ್ಸ್ಪ್ರೆಸ್ ಹತ್ತಿ ಸಂಬಂಧಿಕರನ್ನು ಭೇಟಿ ಮಾಡಲು ವಿಜಯವಾಡಕ್ಕೆ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಬ್ಯಾಂಕ್ನಲ್ಲಿ ಹಣವಿಟ್ಟರೆ ಸುರಕ್ಷಿತ ಅಂದುಕೊಂಡಿದ್ದೀರಾ? ಗ್ರಾಹಕರ ದುಡ್ಡನ್ನೇ ಕದ್ದ ಕ್ಯಾಶಿಯರ್
ಸಿಂಹಾಚಲಂ ಹೈದರಾಬಾದ್ನ ರಾಸಾಯನಿಕ ಕಂಪನಿಯೊಂದರಲ್ಲಿ ಇವರು ಕೆಲಸ ಮಾಡುತ್ತಿ ದ್ದರು. ಮೊದಲಿಗೆ ದಂಪತಿ ರೈಲಿನ ಬಾಗಿಲ ಬಳಿ ನಿಂತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರಬಹುದು ಎಂದು ಪೊಲೀಸರು ಮೊದಲು ಶಂಕಿಸಿದ್ದರು. ಶುಕ್ರವಾರ (ಡಿ. 19) ಮುಂಜಾನೆ ರೈಲ್ವೆ ಹಳಿ ನಿರ್ವಹಣಾ ಸಿಬ್ಬಂದಿ ಶವಗಳನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ರೈಲಿನಲ್ಲಿ ಚಿತ್ರೀಕರಿಸಿದ ವಿಡಿಯೊವೊಂದು ವೈರಲ್ ಆಗಿದೆ. ಅದರಲ್ಲಿ ದಂಪತಿ ಒಬ್ಬರಿಗೊಬ್ಬರು ಜಗಳವಾಡುತ್ತಿರುವುದು ಕಂಡುಬಂದಿದೆ. ಈ ಜಗಳದ ಇಬ್ಬರೂ ರೈಲಿನಿಂದ ಜಿಗಿದಿರಬಹುದು ಎಂಬ ಅನುಮಾನ ಕಾಡಿದೆ. ಈ ಬಗ್ಗೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮಾಡುತ್ತಿದ್ದಾರೆ.