ಜೈಪುರ, ಜು. 30: ವಿಐಪಿಗಳ ಸಂಚಾರಕ್ಕಾಗಿ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದ ಸಾರ್ವಜನಿಕರನ್ನು ಪೊಲೀಸರು ಗದರಿಸಿ ಓಡಿಸಿದ ಘಟನೆ ನಡೆದಿದೆ. ರಾಜಸ್ಥಾನದ ಜೈಪುರದಲ್ಲಿ ತೀವ್ರ ಮಳೆಯಿಂದಾಗಿ ಹಲವು ಪ್ರಯಾಣಿಕರು ಜೆಎಲ್ಎನ್ ಮಾರ್ಗದಲ್ಲಿರುವ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದರು. ಅದೇ ಮಾರ್ಗದಲ್ಲಿ ವಿಐಪಿ ವಾಹನ ಸಾಗಬೇಕಿದ್ದರಿಂದ ಮಳೆಯ ನಡುವೆಯೂ ಸಾರ್ವಜನಿಕರನ್ನು ಬೈದು ಓಡಿಸಿದ್ದಾರೆ. ಈ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ. ವಿಐಪಿ ಸಂಸ್ಕೃತಿಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ಜೈಪುರ ಪೊಲೀಸರು ಸಾರ್ವಜನಿಕರು ಬಸ್ ನಿಲ್ದಾಣದಿಂದ ದೂರ ಹೋಗುವಂತೆ ಬೈಯುತ್ತಿರುವುದು ಕಂಡುಬಂದಿದೆ. ಆ ಪ್ರದೇಶದಲ್ಲಿ ಲಭ್ಯವಿರುವ ಏಕೈಕ ಆಶ್ರಯ ತಾಣ ಇದಾಗಿರುವುದರಿಂದ ಕೆಲವು ಪ್ರಯಾಣಿಕರು ಹೊರ ಹೋಗಲು ಹಿಂಜರಿದಿದ್ದಾರೆ. ಆದರೆ ಪೊಲೀಸರು ಬಲವಂತವಾಗಿ ಅವರನ್ನು ಹೊರಗೆ ಕಳುಹಿಸಿದ್ದಾರೆ. ದೇಶದಲ್ಲಿ ವಿಐಪಿ ಸಂಸ್ಕೃತಿ ಕೊನೆಯಾಗಬೇಕೆಂದು ನೆಟ್ಟಿಗರು ಕಿಡಿಕಾರಿದ್ದಾರೆ.
ವಿಡಿಯೊ ನೋಡಿ:
ಪೊಲೀಸ್ ಸಿಬ್ಬಂದಿ ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರ ಮೇಲೆ ಕೂಗಾಡುತ್ತಿರುವುದು ಕಂಡು ಬಂದಿದೆ. ಕೆಲವರು ಸ್ಥಳದಿಂದ ಹೊರಟುಹೋದರೆ, ಇತರರು ಬಸ್ ನಿಲ್ದಾಣದ ಹಿಂದೆ ಹೋಗಿ ನಿಂತಿದ್ದಾರೆ. ಪೊಲೀಸರು ಜಾಗ ಖಾಲಿ ಮಾಡಿಸಿದ ಕೆಲವೇ ಕ್ಷಣಗಳಲ್ಲಿ ವಿಐಪಿ ಕಾರ್ಗಳ ಸಾಲು ಅಲ್ಲಿಂದ ವೇಗವಾಗಿ ಹಾದುಹೋಗಿವೆ. ಇತ್ತ ಕೆಲವು ಜನರು ತೀವ್ರ ಮಳೆಯಲ್ಲೂ ಹಿಂದಕ್ಕೆ ಹೋಗಿ ನಿಂತಿದ್ದಾರೆ.
ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಅರ್ಧ ಕಿಲೋ ಮೀಟರ್ ಎಳೆದೊಯ್ದ ಉಬರ್ ಚಾಲಕ
ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಅನೇಕರು ದೇಶದಲ್ಲಿನ ವಿಐಪಿ ಸಂಸ್ಕೃತಿಯನ್ನು ಟೀಕಿಸಿದ್ದಾರೆ. ಮಳೆಯಿಂದ ಆಶ್ರಯ ಪಡೆಯುತ್ತಿದ್ದ ಸಾಮಾನ್ಯ ನಾಗರಿಕರನ್ನು ವಿಐಪಿ ಪಡೆಗಾಗಿ ಏಕೆ ಓಡಿಸಬೇಕು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಪ್ರಯಾಣಿಕರನ್ನು ನಡೆಸಿಕೊಂಡ ರೀತಿಯನ್ನು ಟೀಕಿಸಿದ್ದಾರೆ. ''ಸಮವಸ್ತ್ರವು ಸಾರ್ವಜನಿಕರ ರಕ್ಷಣೆಗಾಗಿ ಇರಬೇಕು ಅಧಿಕಾರದಲ್ಲಿರುವವರಿಗೆ ಅಲ್ಲ" ಎಂದು ಕಿಡಿಕಾರಿದ್ದಾರೆ.
ʼʼಭಾರತದಲ್ಲಿ ವಿಐಪಿ ಸಂಸ್ಕೃತಿ ಕೊನೆಗೊಳ್ಳಬೇಕುʼʼ ಎಂದು ಜೈಪುರ ಪೊಲೀಸರ ಕ್ರಮಗಳನ್ನು ಟೀಕಿಸಿ ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು, ʼʼಭಾರತದಲ್ಲಿ ಜನರ ರಕ್ಷಣೆಗಿಂತ ಪೊಲೀಸರಿಗೆ ಇಂತಹ ಜವಾಬ್ದಾರಿಗಳೇ ಹೆಚ್ಚಾಗಿದೆʼʼ ಎಂದಿದ್ದಾರೆ.