ಲಖನೌ: ಸಾಕು ಪ್ರಾಣಿಗಳ ಮೇಲೆ ನಡೆಯುವ ಕೆಲವೊಂದು ಅಮಾನವೀಯ ಘಟನೆಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತವೆ. ಇದೀಗ ಇಂತಹುದೇ ಘಟನೆಯೊಂದು ನಡೆದಿದೆ. ಮರಿಗಳನ್ನು ತಾಯಿ ನಾಯಿಯಿಂದ ಬೇರ್ಪಡಿಸಿ ಅವುಗಳನ್ನು ಕಸದ ಡಬ್ಬಿಯೊಂದರಲ್ಲಿ ಕೊಂಡೊಯ್ಯುವ ದೃಶ್ಯವೊಂದು ಪ್ರಾಣಿ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ನೋಯ್ಡಾದ ಆಮ್ರಪಾಲಿ ಗಾಲ್ಫ್ ಹೋಮ್ನಲ್ಲಿ ಈ ಘಟನೆ ನಡೆದಿದ್ದು, 13 ನವಜಾತ ಮರಿಗಳನ್ನು, ತಾಯಿ ನಾಯಿಯಿಂದ ಬಲವಂತವಾಗಿ ಕೊಂಡೊಯ್ದ ದೃಶ್ಯ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ದೃಶ್ಯಕ್ಕೆ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ (Viral Video). ಸಿಸಿಟಿವಿ ದೃಶ್ಯದಲ್ಲಿ ಯುವಕರ ತಂಡವೊಂದು ಸೇರಿ ಉದ್ದೇಶ ಪೂರ್ವಕವಾಗಿಯೇ ನಾಯಿ ಮರಿಗಳನ್ನು ದೊಡ್ಡ ಕಸದ ಡಬ್ಬಿಯಲ್ಲಿ ತುಂಬಿ ಸ್ಥಳಾಂತರಿಸುತ್ತಿರುವ ದೃಶ್ಯ ಕಂಡು ಬಂದಿದೆ.
ಸದ್ಯ ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, 13 ನವಜಾತ ನಾಯಿಮರಿಗಳನ್ನು ಅವುಗಳ ತಾಯಿಯಿಂದ ಬಲವಂತವಾಗಿ ಬೇರ್ಪ ಡಿಸಲಾಗಿದೆ. ವೈರಲ್ ವಿಡಿಯೊದಲ್ಲಿ ಮೂವರು ಯುವಕರು ನಾಯಿ ಮರಿಗಳನ್ನು ದೊಡ್ಡ ಕಸದ ಡಬ್ಬಿಯಲ್ಲಿ ತುಂಬಿ ಸ್ಥಳಾಂತರಿಸುತ್ತಿರುವುದನ್ನು ತೋರಿಸಿದೆ. ಈ ಸಂದರ್ಭ ನಾಯಿ ಮರಿಗಳು ತನ್ನ ತಾಯಿ ಎಲ್ಲಿ ಎಂದು ಇಣುಕಿ ನೋಡುವ ದೃಶ್ಯ ನಿಜವಾಗಿಯು ಮನಕಲಕುವಂತಿದೆ.
ಈ ದೃಶ್ಯ ನೋಡಿದ ಯಾರಿಗೂ ಮನ ಕರಗುವಂತದ್ದು, ಈ ರೀತಿ ಪ್ರಾಣಿ ಹಿಂಸೆ ಮಾಡುವ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ. ಪ್ರಾಣಿ ಹಿಂಸೆಯ ಈ ಕ್ಲಿಪ್ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕೆರಳಿಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಸ್ಟ್ರೀಟ್ ಡಾಗ್ಸ್ ಆಫ್ ಬಾಂಬೆ ಪೋಸ್ಟ್ನಲ್ಲಿ ಈ ಘಟನೆಯನ್ನು ಹಂಚಿಕೊಳ್ಳಲಾಗಿದೆ. ಈ ಪುಟ್ಟ ಆತ್ಮಗಳು ಅನುಭವಿಸಿದ ಭಯವನ್ನು ನೀವು ಊಹಿಸಬಲ್ಲಿರಾ? ಹಸಿವು, ಹೆದರಿಕೆ, ಸಾಂತ್ವನ ಹೇಳಲು ಯಾರೂ ಇಲ್ಲದೇ ಮರಿಗಳು ತಾಯಿಯ ಭೇಟಿಗಾಗಿ ಕಾಯುತ್ತಿವೆ. ಅವುಗಳ ತಾಯಿ ಅಳುವುದು, ಹುಡುಕುವುದು, ಅಸಹಾಯಕತೆಯಿಂದ ಎಂದಿಗೂ ಹಿಂತಿರುಗದ ತನ್ನ ಶಿಶುಗಳಿಗಾಗಿ ಕಾಯುತ್ತಿದೆ ಎಂದು ಪೋಸ್ನಲ್ಲಿ ಬರೆದುಕೊಳ್ಳಲಾಗಿದೆ.
ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಇನ್ಸ್ಟಾಗ್ರಾಮ್ನಲ್ಲಿ ಪ್ರಾಣಿ ಪ್ರೇಮಿಗಳು ನಾಯಿ ಮರಿಗಳಿಗೆ ನ್ಯಾಯ ಕೋರಿ ಧ್ವನಿ ಎತ್ತಿದ್ದು ಅವುಗಳನ್ನು ತಾಯಿಯೊಂದಿಗೆ ಮತ್ತೆ ಸೇರಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಬಳಕೆದಾರರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ಹೃದಯಹೀನ ಮನಸ್ಥಿತಿಯುಳ್ಳವರು ಎಂದುಕರೆದಿದ್ದಾರೆ. ಮೊತ್ತೊಬ್ಬರು ನಿಜಕ್ಕೂ ಈ ದೃಶ್ಯ ನೋಡಲಾಗದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಂಡಿದ್ದಾರೆ.
ಬಿಸ್ರಖ್ ಪೊಲೀಸ್ ಠಾಣೆ ಸಂಪೂರ್ಣ ತನಿಖೆ ನಡೆಸಿದೆ ಎಂದು ಡಿಸಿಪಿ ಸೆಂಟ್ರಲ್ ನೋಯ್ಡಾ ಎಕ್ಸ್ನಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ನಾಯಿ ಮರಿಗಳನ್ನು ಕೆಲವು ವರ್ಗದ ನಿವಾಸಿಗಳು ಒಂದು ಟವರ್ನಿಂದ ಮತ್ತೊಂದು ಟವರ್ಗೆ ಸ್ಥಳಾಂತರಿಸಿದ್ದಾರೆ. ಇದನ್ನು ಶ್ವಾನ ಪ್ರೇಮಿಗಳಾದ ಇತರ ನಿವಾಸಿಗಳು ವಿರೋಧಿಸಿದ್ದಾರೆ. ಇದೀಗ ನಾಯಿ ಮರಿಗಳು ಸೇಫ್ ಆಗಿವೆ ಎಂದು ತಿಳಿಸಿದ್ದಾರೆ.