ದೆಹಲಿ, ಏ. 1: ರೈಲೊಂದರಲ್ಲಿ ನಡೆದ ಮಾನವೀಯ ಘಟನೆಯೊಂದು ಗಮನ ಸೆಳೆದಿದೆ. ರೈಲು ಶೌಚಾಲಯದ ಬಳಿ ಮಲಗಿದ್ದ ಯೋಧರಿಗೆ ಟಿಟಿಇ ಒಬ್ಬರು ಸೀಟು ಬಿಟ್ಟು ಕೊಟ್ಟಿದ್ದಾರೆ. ಕಿಕ್ಕಿರಿದ ರೈಲಿನ ಮಧ್ಯದಲ್ಲಿ, ಪ್ರಯಾಣಿಕರ ಅವ್ಯವಸ್ಥೆಯ ನಡುವೆ ಕಂಡುಬಂದ ಮಾನವೀಯತೆಯ ಒಂದು ಸಣ್ಣ ಕಾರ್ಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದೇಶ ಕಾಯುವ ಸೈನಿಕರಿಗೆ ಸೀಟು ಬಿಟ್ಟು ಕೊಡುವ ಮೂಲಕ ಟಿಟಿಇ ಮಾನವೀಯತೆ ಮೆರೆದಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.
ದೇಶಕ್ಕಾಗಿ ಹೊರಡುವ ಯೋಧರ ಬಗ್ಗೆ ಎಲ್ಲರಿಗೂ ಅತೀಯಾದ ಗೌರವ ಇದೆ. ಇದೀಗ ರೈಲಿನ ಶೌಚಾಲಯದ ಬಳಿ ಮಲಗಿದ್ದ ಸೈನಿಕರನ್ನು ಟಿಟಿಇ ಒಬ್ಬರು ಕರೆದೊಯ್ಯುತ್ತಿರುವ ಹೃದಯಸ್ಪರ್ಶಿ ದೃಶ್ಯ ಎಲ್ಲರ ಮನಗೆದ್ದಿದೆ.
ವಿಡಿಯೊ ನೋಡಿ:
ಚುನಾವಣಾ ಕರ್ತವ್ಯಕ್ಕೆ ತುರ್ತಾಗಿ ಕರೆ ಮಾಡಿದ ಸೈನಿಕರಿಗೆ ದೃಢೀಕೃತ ಟಿಕೆಟ್ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಯೋಧರು ರೈಲಿನ ಶೌಚಾಲಯದ ಬಳಿ ನೆಲದ ಮೇಲೆ ಮಲಗಿದ್ದರು. ಇಂತಹ ಸ್ಥಿತಿಯಲ್ಲಿ ಮಲಗಿದ್ದ ಸೈನಿಕರರಿಗೆ ಟಿಟಿಇ ಮಾನವೀಯತೆ ಮೆರೆದಿದ್ದಾರೆ.
ವಿಡಿಯೊದಲ್ಲಿ ರೈಲಿನ ಶೌಚಾಲಯಗಳ ಬಳಿ ಮಲಗಿದ್ದ ಯೋಧರನ್ನು ಟಿಟಿಇ ಎಬ್ಬಿಸಿ ಸೀಟು ನೀಡುತ್ತಿರುವ ದೃಶ್ಯ ಕಾಣಬಹುದು. ಟಿಟಿಇ ಯೋಧರ ಐಡಿ ಕಾರ್ಡ್ಗಳನ್ನು ಪರಿಶೀಲಿಸಿ ಗೌರವ ಪೂರ್ವಕವಾಗಿ ಸೀಟಿನ ವ್ಯವಸ್ಥೆ ಮಾಡಿದರು. ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು, ʼʼನಾವೆಲ್ಲರೂ ದೇಶಭಕ್ತರಾಗಿರಬಹುದು. ಆದರೆ ಈ ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಈ ಧೈರ್ಯಶಾಲಿ ಯೋಧರಿಗಾಗಿ ಏನು ಬೇಕಾದರೂ ಮಾಡಿ" ಎಂದು ಬರೆದುಕೊಂಡಿದ್ದಾರೆ.