ಲಖನೌ, ಡಿ. 18: ಹೆಂಡತಿ ತವರಿಗೆ ಹೋದ್ರೆ ಸಾಕೆಂದು ಬಯಸುವ ಅದೆಷ್ಟೋ ಗಂಡಂದಿರ ನಡುವೆ ಇಲ್ಲೊಬ್ಬ ಭೂಪ ಪತ್ನಿಯನ್ನು ತನ್ನೊಂದಿಗೆ ಕಳುಹಿಸಿಕೊಡುವಂತೆ ಅತ್ತೆಯ ಕಾಲಿಗೆ ಸಾರ್ವಜನಿಕವಾಗಿ ಬಿದ್ದು ಗೋಳಾಡುತ್ತಿರುವ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಂದಹಾಗೆ ಈ ಘಟನೆ ಉತ್ತರ ಪ್ರದೇಶದ ಅಲಿಘಡದಲ್ಲಿರುವ ಪೊಲೀಸ್ ಸ್ಟೇಷನ್ ಒಂದರ ಹೊರಗಡೆ ನಡೆದಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಆತ ಪತ್ನಿಗೆ ಹಿಂದೆ ಕೊಡುತ್ತಿದ್ದ. ಹೀಗಾಗಿ ಅತ್ತೆ ತನ್ನ ಮಗಳನ್ನು ಮತ್ತೆ ಆತನೊಂದಿಗೆ ಕಳುಹಿಸಲು ಸುತರಾಂ ಒಪ್ಪಿರಲಿಲ್ಲ. ಹೀಗಾಗಿ ಅಳಿಯ ಮಹಾಶಯ ತನ್ನ ಅತ್ತೆಯ ಕಾಲಿಗೆ ಬಿದ್ದು ಹೊರಳಾಡುತ್ತಾ, ಪತ್ನಿಯನ್ನು ತನ್ನೊಂದಿಗೆ ಕಳುಹಿಸಿಕೊಡುವಂತೆ ಪರಿ ಪರಿಯಾಗಿ ಬೇಡಿಕೊಂಡಿದ್ದಾನೆ. ತನ್ನ ಅತ್ತೆಯ ಬಳಿ ಇನ್ನು ಮುಂದೆ ಇಂತಹ ತಪ್ಪನ್ನು ಮರುಕಳಿಸುವುದಿಲ್ಲ ಎಂದಾತ ಕೈಮುಗಿದು ಪ್ರಾರ್ಥಿಸಿಕೊಳ್ಳುತ್ತಿರುವುದು ಆ ವಿಡಿಯೊದಲ್ಲಿ ರೆಕಾರ್ಡ್ ಆಗಿದೆ.
ವೈರಲ್ ವಿಡಿಯೊ ಇಲ್ಲಿದೆ:
ತನ್ನ ಅಳಿಯನ ಪರಿಪರಿಯಾದ ಗೋಳಿಗೆ ಅತ್ತೆ ಮಾತ್ರ ಕರಗದೇ ಮುನ್ನಡೆಯುತ್ತಿರುವುದು ಈ ವಿಡಿಯೊದಲ್ಲಿ ನಾವು ಕಾಣಬಹುದಾಗಿದೆ. ಹೀಗೆ ಪತ್ನಿ ಪೀಡಕನಾಗಿ ಠಾಣೆಯ ಮೆಟ್ಟಿಲು ಹತ್ತಿದ ವ್ಯಕ್ತಿ ಮಥುರಾ ಜಿಲ್ಲೆಯ ರಾಯ ಎಂಬ ಪ್ರದೇಶದವನಾಗಿದ್ದು, ಈತನಿಗೆ ಒಂಭತ್ತು ವರ್ಷಗಳ ಹಿಂದೆ ಗೊಂಡಾ ಎಂಬಲ್ಲಿಯ ಮಹಿಳೆಯ ಜತೆ ವಿವಾಹವಾಗಿತ್ತು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಕೌಟುಂಬಿಕ ಕಲಹದ ಕಾರಣದಿಂದ ಇದೀಗ ಈತನ ಪತ್ನಿ ತನ್ನ ತವರು ಮನೆಯಲ್ಲಿ ವಾಸವಾಗಿದ್ದಾಳೆ. ಈತನ ಪತ್ನಿ, ತನ್ನ ಪತಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾನೆ ಎಂದು ಆರೋಪಿಸಿ ಮಹಿಳಾ ಠಾಣೆಗೆ ಈ ಹಿಂದೆ ದೂರನ್ನೂ ಸಹ ನೀಡಿದ್ದಳು. ಪೊಲೀಸರು ಎರಡೂ ಕುಟುಂಬದವರಿಗೆ ಠಾಣೆಗೆ ಹಾಜರಾಗುಂತೆ ಪೊಲೀಸರು ಸಮನ್ಸ್ ನೀಡಿದ್ದರು.
ಬ್ಯಾಂಕ್ನಲ್ಲಿ ಹಣವಿಟ್ಟರೆ ಸುರಕ್ಷಿತ ಅಂದುಕೊಂಡಿದ್ದೀರಾ? ಗ್ರಾಹಕರ ದುಡ್ಡನ್ನೇ ಕದ್ದ ಕ್ಯಾಶಿಯರ್
ಈ ಸಂದರ್ಭದಲ್ಲಿ ಪತಿ ತನ್ನ ಪತ್ನಿಯ ಜತೆ ಬಾಳುವ ಇಚ್ಛೆ ವ್ಯಕ್ತಪಡಿಸಿದ್ದ. ಮುಂದಿನ ವಿಚಾರಣೆಗೆ ಹಾಜರಾಗುವುದಾಗಿ ಒಪ್ಪಿಕೊಂಡಿದ್ದ. ಹೀಗೆ ಠಾಣೆಯಿಂದ ಹಿಂತಿರುವ ಸಂದರ್ಭದಲ್ಲಿ ಈ ಅಳಿಯ ಮಹಾಶಯ ಸಾರ್ವಜನಿಕವಾಗಿ ತನ್ನ ಅತ್ತೆಯ ಕಾಲಿಗೆ ಎರಗಿದ್ದಾನೆ. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಆತನನ್ನು ಸಮಾಧಾನಪಡಿಸಿ ವಾಪಾಸು ಕಳಿಸಿದ್ದಾರೆ.
ಬಳಿಕ ಈ ವ್ಯಕ್ತಿ, ತನ್ನ ಪತ್ನಿಯ ಮನೆಯವರು ಆಕೆ ತನ್ನೊಂದಿಗೆ ಬಾರದಂತೆ ತಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪೊಲೀಸರು, ಎರಡೂ ಕಡೆಯವರನ್ನು ಸಮಾಲೋಚನೆಗೆ ಬರುವಂತೆ ದಿನಾಂಕ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.