ಪುಣೆ: ಚಲಿಸುತ್ತಿದ್ದ ರೈಲಿನಲ್ಲಿ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ಪುಣೆ- ಸುಪೌಲ್ ಎಕ್ಸ್ಪ್ರೆಸ್ ರೈಲಿನಲ್ಲಿ (pune-Supaul Express) ಪ್ರಯಾಣಿಸುತ್ತಿದ್ದ ಉತ್ತರ ಪ್ರದೇಶದ (uttar pradesh) 28 ವರ್ಷದ ರುಕ್ಸಾನಾ ಖಾತುನ್ ಅವರು ಮಗುವಿಗೆ ಜನ್ಮ ನೀಡಿದ್ದಾರೆ. ಜನರಿಂದ ತುಂಬಿ ತುಳುಕುತ್ತಿದ್ದ ಜನರಲ್ ಕೋಚ್ ನಲ್ಲಿ ಅವರು ಪ್ರಯಾಣಿಸುತ್ತಿದ್ದರು. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಆರ್ಪಿಎಫ್ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರ ಸಹಾಯದಿಂದ ಅವರಿಗೆ ರೈಲಿನಲ್ಲೇ ಸುರಕ್ಷಿತ ಹೆರಿಗೆಯಾಗಿದೆ. ಇದರ ವಿಡಿಯೋ (viral video) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಜನರಿಂದ ತುಂಬಿದ್ದ ಪುಣೆ- ಸುಪೌಲ್ ಎಕ್ಸ್ಪ್ರೆಸ್ ರೈಲಿನ ಜನರಲ್ ಕೋಚ್ನಲ್ಲಿ ರುಕ್ಸಾನಾ ಖಾತುನ್ ಅವರು ತಮ್ಮ ಪತಿ ಜಮೀಲ್ ಬೆಲಾವರ್ ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣವೇ ಸ್ಪಂದಿಸಿದ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರು ತಾಯಿ ಮತ್ತು ಮಗುವನ್ನು ಉಳಿಸಲು ರೈಲಿನಲ್ಲೇ ವ್ಯವಸ್ಥೆ ಮಾಡಿದರು.
Viral Video: ಗಡಿ ದಾಟಿ ಭಾರತದೊಳಗೆ ಸುಲಭವಾಗಿ ಕಾಲಿಡಬಹುದು ಎಂದ ಪಾಕಿಸ್ತಾನ ಪತ್ರಕರ್ತೆಗೆ ತರಾಟೆ
ಪುಣೆ ರೈಲ್ವೆ ನಿಲ್ದಾಣದಿಂದ ಬಿಹಾರದ ಸುಪೌಲ್ ಗೆ ತೆರಳುತ್ತಿದ್ದ ಎಕ್ಸ್ಪ್ರೆಸ್ ರೈಲಿನಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ರುಕ್ಸಾನಾ ಖಾತುನ್ ಮತ್ತು ಅವರ ಪತಿ ಜಮೀಲ್ ಬೆಲಾವರ್ ದಂಪತಿ ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಜಂಕ್ಷನ್ನಲ್ಲಿ ಇಳಿಯಬೇಕಿತ್ತು. ಆದರೆ ರೈಲು ಅಹಲ್ಯಾನಗರ ನಿಲ್ದಾಣ ತಲುಪುತ್ತಿದ್ದಂತೆ ರುಕ್ಸಾನಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.
ರೈಲು ಅತೀ ವೇಗದಲ್ಲಿ ಚಲಿಸುತ್ತಿತ್ತು. ಜನರಲ್ ಕೋಚ್ ಆಗಿದ್ದರಿಂದ ಹೆಚ್ಚಿನ ಜನದಟ್ಟಣೆಯು ಇತ್ತು. ಹೀಗಾಗಿ ತಕ್ಷಣದ ವೈದ್ಯಕೀಯ ಸಹಾಯ ಸಿಗುವುದು ಕಷ್ಟವಾಗಿತ್ತು. ಕೂಡಲೇ ತುರ್ತು ಪರಿಸ್ಥಿತಿಯ ಸಹಾಯ ಕೇಳಿದ್ದರಿಂದ ಸೆಂಟ್ರಲ್ ರೈಲ್ವೆಯ 'ಆಪರೇಷನ್ ಮಾತೃಶಕ್ತಿ' ಕೂಡಲೇ ಸ್ಪಂದಿಸಿತ್ತು.
ಆರ್ಪಿಎಫ್ ಕಾನ್ಸ್ಟೆಬಲ್ ಸೋಮನಾಥ್ ಪಠಾಡೆ ಮತ್ತು ಹೆಡ್ ಕಾನ್ಸ್ಟೆಬಲ್ ವಿಶ್ವಜೀತ್ ಕಾಕ್ಡೆ ಅವರು ಸಾಮಾನ್ಯ ಬೋಗಿಗೆ ತೆರಳಿ ಆರ್ಪಿಎಫ್ ಸಿಬ್ಬಂದಿ, ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರ ನೆರವಿನೊಂದಿಗೆ ಸುರಕ್ಷಿತ ಹೆರಿಗೆ ನಡೆಸಲು ರಕ್ಷಣಾತ್ಮಕ ಸ್ಥಳವನ್ನು ಮಾಡಿಕೊಟ್ಟರು. ಇದರಿಂದ ರುಖ್ಸಾನಾ ಅವರು ಆರೋಗ್ಯವಂತ ಮಗುವಿಗೆ ಚಲಿಸುತ್ತಿದ್ದ ರೈಲಿನಲ್ಲೇ ಜನ್ಮ ನೀಡಿದರು. ಮಗು ಅಳುವ ಶಬ್ದ ಕೇಳಿ ಸಹ ಪ್ರಯಾಣಿಕರೆಲ್ಲ ಸಂತೋಷ ಪಟ್ಟರು.
ಸೀಲ್ ಮಾಡಿದ ಥಮ್ಸ್ ಅಪ್ ಪಾನೀಯದಲ್ಲಿ ಸತ್ತ ಹಲ್ಲಿ ಪತ್ತೆ; ವಿಡಿಯೋ ನೋಡಿ
ಬಳಿಕ ರೈಲು ಅಧಿಕಾರಿಗಳು ಹಲ್ಯಾನಗರ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ರೈಲು ನಿಲ್ದಾಣ ತಲುಪುವ ಮೊದಲೇ 108 ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಬಳಿಕ ತಾಯಿ ಮಗುವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ತಾಯಿ ಮತ್ತು ಮಗು ಆರೋಗ್ಯವಾಗಿರುವುದಾಗಿ ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ ಎನ್ನಲಾಗಿದೆ.