ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

N S SridharMurthy Column: ಹಾಡು ಮುಗಿಯುವುದಿಲ್ಲ, ಮುಗಿದರದು ಹಾಡಲ್ಲ !

ಅದು ನಮ್ಮ ಬಾಲ್ಯದ ದಿನಗಳ ಆಕರ್ಷಣೆಯಾಗಿದ್ದ ಚಿತ್ರದುರ್ಗದ ಕೋಟೆಯ ರಹಸ್ಯಗಳ ಕುರಿತೇ ಇತ್ತು. ಅದನ್ನು ಹತ್ತಾರು ಸಲ ಓದಿದ್ದಷ್ಟೇ ಅಲ್ಲ ಪಾರಾಯಣ ಮಾಡಿದ್ದೂ ಆಯಿತು. ಮುಂದಿನ ಸಲ ಚಿತ್ರದುರ್ಗಕ್ಕೆ ಹೋದಾಗ ಚಂದ್ರವಳ್ಳಿಗೆ ಹೋಗಿ ಅಲ್ಲಿ ಧವಳಗಿರಿ, ನಾಮದ ಜಲಪಾತ, ಶಿಲಾದುರ್ಗ ಗಳನ್ನು ಹುಡುಕಿದ್ದೂ ಆಯಿತು. ಅವು ಕವಿಯ ಕಲ್ಪನೆ ಎಂಬ ತಿಳಿವಳಿಕೆ ಇರುವ ವಯಸ್ಸಲ್ಲವಾದ್ದ ರಿಂದ ನಿರಾಶರಾಗಿದ್ದೂ ಆಯಿತು

ಹಾಡು ಮುಗಿಯುವುದಿಲ್ಲ, ಮುಗಿದರದು ಹಾಡಲ್ಲ !

Profile Ashok Nayak Jun 1, 2025 4:23 PM

ಎನ್.ಎಸ್.ಶ್ರೀಧರಮೂರ್ತಿ

ಎಚ್.ಎಸ್.ವೆಂಕಟೇಶಮೂರ್ತಿಯವರು ರಚಿಸಿದ ಗೀತೆಗಳು ನೂರಾರು; ಅವುಗಳಲ್ಲಿ 72 ಗೀತೆಗಳು ಚಲನಚಿತ್ರಗಳಲ್ಲಿ ಬಳಕೆಯಾಗಿವೆ; ಅಪಾರ ಜನಪ್ರಿಯತೆಯನ್ನೂ ಗಳಿಸಿವೆ. ಅವರ ಚಿತ್ರಗೀತೆಗಳ ಕುರಿತು ಪುಸ್ತಕವೊಂದು ಬಿಡುಗಡೆಯಾದ ರೀತಿ ಸ್ವಾರಸ್ಯಕರವಾಗಿದೆ. ಇಂತಹ ಹಲವು ಸ್ವಾರಸ್ಯಕರ ನೆನಪುಗಳು ಈ ಬರಹದಲ್ಲಿವೆ. ಎನ್.ಎಸ್.ಶ್ರೀಧರ ಮೂರ್ತಿ ಎಚ್. ಎಸ್. ವೆಂಕಟೇಶ ಮೂರ್ತಿ ಯವರು ನನ್ನ ಬಾಲ್ಯದ ಹೀರೋ. ನನ್ನ ದೊಡ್ಡಪ್ಪ ಎನ್.ಎಸ್.ಚಿದಂಬರ ರಾವ್ ಎಚ್.ಎಸ್.ವಿ.
ಯವರ ಆಪ್ತ ಸ್ನೇಹಿತರು; ಒಂದು ಕಾಲದಲ್ಲಿ ಇಬ್ಬರೂ ಮಲ್ಲಾಡಿಹಳ್ಳಿಯಲ್ಲಿ ಒಟ್ಟಿಗೆ ಕೆಲಸ ಮಾಡಿದವರು.

ದೊಡ್ಡಪ್ಪ ಬೆಂಗಳೂರಿಗೆ ಪೇಪರ್ ವ್ಯಾಲ್ಯೂವೇಷನ್‌ಗಾಗಿ ಬರುತ್ತಿದ್ದರು. ಹಾಗೆ ಬಂದವರು ಉಳಿದು ಕೊಳ್ಳುತ್ತಾಇದ್ದದ್ದು ಎಚ್.ಎಸ್.ವಿ.ಯವರ ಮನೆಯಲ್ಲಿಯೇ. ಅಲ್ಲಿಂದ ನೇರವಾಗಿ ಆಗ ಹರಿಹರ ಪುರದಲ್ಲಿದ್ದ ನಮ್ಮ ಮನೆಗೆ ಬರುತ್ತಿದ್ದರು. ಬರುವಾಗ ಎಚ್.ಎಸ್.ವಿ.ಯವರ ಹೊಸ ಪುಸ್ತಕಗಳನ್ನು, ಅವರ ಕುರಿತು ಕಥೆಗಳನ್ನು ಹೊತ್ತು ತರುತ್ತಿದ್ದರು. ಅವುಗಳ ಮೂಲಕ ಎಚ್.ಎಸ್.ವಿ. ನನ್ನ ಬಾಲ್ಯದ ದಿನಗಳ ಹೀರೋ ಆಗಿ ಮಾರ್ಪಟ್ಟರು.

ಇದೇ ಸಮಯದಲ್ಲಿ ವಾರಪತ್ರಿಕೆಯೊಂದರಲ್ಲಿ ಅವರ ‘ಅಮಾನುಷರು’ ಧಾರಾವಾಹಿಯಾಗಿ ಪ್ರಕಟವಾಯಿತು. ಅದು ನಮ್ಮ ಬಾಲ್ಯದ ದಿನಗಳ ಆಕರ್ಷಣೆಯಾಗಿದ್ದ ಚಿತ್ರದುರ್ಗದ ಕೋಟೆಯ ರಹಸ್ಯಗಳ ಕುರಿತೇ ಇತ್ತು. ಅದನ್ನು ಹತ್ತಾರು ಸಲ ಓದಿದ್ದಷ್ಟೇ ಅಲ್ಲ ಪಾರಾಯಣ ಮಾಡಿದ್ದೂ ಆಯಿತು. ಮುಂದಿನ ಸಲ ಚಿತ್ರದುರ್ಗಕ್ಕೆ ಹೋದಾಗ ಚಂದ್ರವಳ್ಳಿಗೆ ಹೋಗಿ ಅಲ್ಲಿ ಧವಳಗಿರಿ, ನಾಮದ ಜಲಪಾತ, ಶಿಲಾದುರ್ಗಗಳನ್ನು ಹುಡುಕಿದ್ದೂ ಆಯಿತು. ಅವು ಕವಿಯ ಕಲ್ಪನೆ ಎಂಬ ತಿಳಿವಳಿಕೆ ಇರುವ ವಯಸ್ಸಲ್ಲವಾದ್ದರಿಂದ ನಿರಾಶರಾಗಿದ್ದೂ ಆಯಿತು. ಹೀಗೆ ಮನಸ್ಸನ್ನು ಪ್ರವೇಶಿ ಸಿದ ಎಚ್.ಎಸ್.ವಿ. ನಿಧಾನವಾಗಿ ಬೆಳೆಯಲು ಆರಂಭಿಸಿದರು.

ಬೆಳದಿಂಗಳ ಬಾಲೆಯ ವಾಗ್ವಾದ

ಆಗೀಗ ಭೇಟಿ, ನಮಸ್ಕಾರಗಳಿದ್ದರೂ ಅವರು ನಿಕಟವಾಗಿದ್ದು ನಾನು ಬೆಂಗಳೂರಿಗೆ ಬಂದ ಮೇಲೆ ಯೇ; ಬಹಳ ಬೇಗ ಹತ್ತಿರವಾದರು. 1995; ಆಗ ತಾನೆ ‘ಬೆಳದಿಂಗಳ ಬಾಲೆ’ ಚಿತ್ರ ಬಿಡುಗಡೆ ಯಾಗಿತ್ತು. ಹೊಸ ಚಿತ್ರಗಳ ಕುರಿತು ಆಗ ಸುಚಿತ್ರ ಫಿಲಂ ಸೊಸೈಟಿಯಲ್ಲಿ ವಿಚಾರ ಸಂಕಿರಣ ನಡೆಯುತ್ತಿತ್ತು. ಯು.ಆರ್.ಅನಂತ ಮೂರ್ತಿಯವರದು ಅಧ್ಯಕ್ಷತೆ. ಎಚ್.ಎಸ್.ವಿ, ‘ಗಂಗವ್ವ ಗಂಗಾಮಾಯಿ’ ಚಿತ್ರದ ಕುರಿತು ಮಾತನಾಡಿದರು.

ಇದನ್ನೂ ಓದಿ: Vishweshwar Bhat Column: ಆನೆ ಮಾಂಸವನ್ನು ಒಬ್ಬ ವ್ಯಕ್ತಿ ಸೇವಿಸುವುದು ಸಾಧ್ಯವಾ ? ಹೂಂ ಸಾಧ್ಯ..

ನಾನು ‘ಬೆಳದಿಂಗಳ ಬಾಲೆ’ ಚಿತ್ರದ ಕುರಿತು ಮಾತನಾಡುವುದಿತ್ತು. ಎಚ್.ಎಸ್.ವಿ. ತಮ್ಮ ಭಾಷಣ ದಲ್ಲಿ ಯಂಡಮೂರಿಯಂತಹ ಸಾಧಾರಣ ಕಾದಂಬರಿಕಾರ, ಚಲನಚಿತ್ರದ ಕಾರಣ ಸ್ವೀಕೃತನಾಗು ತ್ತಾನೆ ಎಂದು ಬಿಟ್ಟರು. ನನ್ನ ಭಾಷಣದಲ್ಲಿ ಇದನ್ನು ಖಂಡಿಸಿ, ಅಕಾಡಮಿಕ್ ಲೇಖಕರಿಗೆ ಜನಪ್ರಿಯ ಬರಹಗಾರರ ಕುರಿತು ಇರುವ ಪೂರ್ವಗ್ರಹದ ಕುರಿತು ಮಾತನಾಡಿದೆ. ನನ್ನ ಮಾತುಗಳನ್ನು ಅಧ್ಯಕ್ಷತೆ ವಹಿಸಿದ್ದ ಅನಂತ ಮೂರ್ತಿಯವರೂ ಆಕ್ಷೇಪಿಸಿದರು.

ಸುಚಿತ್ರ ಬಾಗಿಲಿನ ಬಳಿಯೇ ನನಗೂ ಎಚ್.ಎಸ್.ವಿ.ಯವರಿಗೂ ತೀವ್ರ ವಾಗ್ವಾದವೇ ನಡೆಯಿತು. ಅವರು ಜನಪ್ರಿಯತೆ ಎಂದರೆ ತೆಳು ಎಂಬುದು ನನ್ನ ಅರ್ಥವಲ್ಲವೆಂದೂ. ಯಂಡಮೂರಿಯಂತಹ ಕಾದಂಬರಿಕಾರರದು ರಂಜಿಸಿ, ವಂಚಿಸುವ ಸಾಹಿತ್ಯವೆಂದೂ ಸಮರ್ಥಿಸಿಕೊಂಡರು. ನನ್ನ ನಿಲು ವನ್ನು ಗಟ್ಟಿಯಾಗಿ ಹೇಳಿದೆ. ಮಹತ್ವದ ಸಂಗತಿ ಎಂದರೆ ಇಂತಹ ವಾಗ್ವಾದದ ನಂತರವೂ ನನ್ನ ಅವರ ಒಡನಾಟ ಮುಂದುವರೆಯಿತು, ಅಷ್ಟೇ ಅಲ್ಲ ಗಟ್ಟಿಯಾಯಿತು ಎನ್ನುವುದು ಸಮಕಾಲೀನ ಸಂದರ್ಭದಲ್ಲಿ ಮುಖ್ಯವಾದ ಸಂಗತಿ ಎನ್ನಿಸುತ್ತದೆ.

ವಿಶೇಷ ಸಂಚಿಕೆ

ಅವರ ಅರವತ್ತನೆಯ ವರ್ಷದ ಸಂದರ್ಭದಲ್ಲಿ ‘ಮಲ್ಲಿಗೆ’ ಮಾಸ ಪತ್ರಿಕೆಯ ವಿಶೇಷ ಸಂಚಿಕೆ ತಂದೆ. ಅವರ ಸಂದರ್ಶನ, ಆತ್ಮೀಯರ ಲೇಖನಗಳು ಎಲ್ಲವೂ ಇದ್ದವು. ನಾನು ಅವರ ಒಟ್ಟು ಕಾವ್ಯದ ಕುರಿತು ಒಂದು ಲೇಖನ ಬರೆದೆ : ‘ಬಾಗಿಲಿಗೆ ಬಿದ್ದ ಮಳೆ ಹನಿಗಳ’ ಎಂದು ಅದಕ್ಕೆ ಶೀರ್ಷಿಕೆ. ಅದರಲ್ಲಿ ಅವರ ಕಾವ್ಯದ ಕುರಿತು ಕೆಲವು ಮುಖ್ಯವಾದ ಪ್ರಶ್ನೆಗಳನ್ನು ಎತ್ತಿದ್ದೆ, ಈ ಕುರಿತು ನನಗೆ ಆತಂಕವೂ ಇತ್ತು. ಆದರೆ ಸಂಚಿಕೆ ಬಂದ ಕೂಡಲೇ ಎಚ್.ಎಸ್.ವಿ.ಯವರೇ ಪೋನ್ ಮಾಡಿ ‘ನನ್ನ ಅರವತ್ತನೆಯ ವರ್ಷಕ್ಕೆ ಸಿಕ್ಕ ಅತ್ಯುತ್ತಮ ಉಡುಗೊರೆ ಇದು’ ಎಂದು ಸಂಭ್ರಮಿಸಿದರು.

ಲೇಖನದ ಕುರಿತು ಒಂದೂ ಮಾತನ್ನಾಡಲಿಲ್ಲ. ಮುಂದೆ ಎಷ್ಟೋ ವರ್ಷದ ಬಳಿಕ ನೀವು ನನ್ನ ಕಾವ್ಯವನ್ನು ಅನಂತ ಮೂರ್ತಿಯವರು ಕ್ರಿಯಾ ಪರ್ವದಲ್ಲಿ ಎತ್ತಿದ ಪ್ರಶ್ನೆಗಳ ನೆಲೆಯಲ್ಲಿ ನೋಡು ತ್ತಿದ್ದೀರಿ, ಯು.ಆರ್.ಎ. ಅವರೇ ತಮ್ಮ ಅಭಿಪ್ರಾಯವನ್ನು ಬದಲಾಯಿಸಿ ಕೊಂಡಿದ್ದೀರಿ, ಕಾವ್ಯ ವನ್ನು ನಿಮ್ಮ ರೀತಿಯಲ್ಲಿಯೇ ಓದಲು ಪ್ರಯತ್ನಿಸಿ ಎಂದರು. ಒಂದು ನೆಲೆಯಲ್ಲಿ ಅದು ನಿಜವೂ ಆಗಿತ್ತು.

ಮುಂದೆ ಎಚ್.ಎಸ್.ವಿ.ಯವರ ಕಾವ್ಯದ ಕುರಿತು ನಾನು ಸಾಕಷ್ಟು ಲೇಖನಗಳನ್ನು ಬರೆದಿದ್ದೇನೆ, ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದೇನೆ. ನನ್ನದೇ ನಿಲುವು ತಳೆಯಲು ಅವರು ನೀಡಿದ ಎಚ್ಚರ ಕಾರಣವಾಗಿತ್ತು.

ವೇದಾವತಿ ತೀರದಲ್ಲಿ

ಎಚ್.ಎಸ್.ವೆಂಕಟೇಶ ಮೂರ್ತಿಯವರ ‘ವೇದಾವತಿ ನದಿಯಲ್ಲ’ ಕಾದಂಬರಿ ಕಥಾಲೋಕ ಪತ್ರಿಕೆಯಲ್ಲಿ ಸಂಪೂರ್ಣ ಕಾದಂಬರಿಯಾಗಿ ಪ್ರಕಟವಾಗಿತ್ತು. ಇದನ್ನು ಓದಿದಾಗ ನಾನು ಏಳನೆಯ ತರಗತಿಯಲ್ಲಿ ಓದುತ್ತಿದ್ದೆ. ಈ ಕಾದಂಬರಿಯನ್ನು ಎಷ್ಟು ಇಷ್ಟ ಪಟ್ಟಿದ್ದೆ ಎಂದರೆ ಅದರ ಪ್ರತಿ ಪದವೂ ಬಾಯಿಪಾಠವಾಗಿತ್ತು. ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಎಂದು ಅವರು ಸಿಕ್ಕಾಗ ಲೆಲ್ಲಾ ಹೇಳುತ್ತಿದ್ದೆ. ಮುಂದೆ ಸಪ್ನ ಬುಕ್ ಹೌಸ್ ಅದನ್ನು ಪ್ರಕಟಿಸಿತು. ಪ್ರಕಟವಾಗುತ್ತದೆ ಎಂದು ಗೊತ್ತಾದ ಕೂಡಲೇ ಎಚ್.ಎಸ್.ವಿ. ನನಗೆ ಪೋನ್ ಮಾಡಿ, ಇದಕ್ಕೆ ಮುನ್ನಡಿ ಬರೆಯಿರಿ ಎಂದರು. ಆಗಲೇ ಅವರು ಸಾರಸ್ವತ ಲೋಕದ ದಿಗ್ಗಜರಾಗಿದ್ದರು. ಅವರಿಗೆ ನಾನು ಮುನ್ನಡಿ ಬರೆಯುವುದೆ? ಬೇಡ ಎಂದೆ. ಅವರು ಪ್ರತಿಯಾಗಿ ಯು.ಆರ್.ಅನಂತ ಮೂರ್ತಿಯವರು ತಮ್ಮ ಕವನ ಸಂಕಲನಕ್ಕೆ ಅವರಿಂದ ಮುನ್ನಡಿ ಬರೆಸಿ ಕೊಂಡ ಪ್ರಸಂಗ ಹೇಳಿದರು. ಎಲ್ಲಿಯ ಹೋಲಿಕೆ? ಕೊನೆಗೂ ನಾನು ಅವರ ಪ್ರೀತಿಗೆ ಮಣಿದು ಮುನ್ನುಡಿ ಬರೆದು ಕೊಟ್ಟೆ. ಆ ಕಾದಂಬರಿ ನಾಗರಾಜ ವಸ್ತಾರೆಯವರ ಮನೆಯಲ್ಲಿ ಆತ್ಮೀಯ ಸಮಾರಂಭದಲ್ಲಿ ಬಿಡುಗಡೆಯಾಯಿತು. ಆಗ ಎಚ್.ಎಸ್.ವಿ ನನ್ನ ಕುರಿತು ಆಡಿದ ಪ್ರೀತಿಯ ಮಾತುಗಳನ್ನು ನಾನು ಎಂದಿಗೂ ಮರೆಯಲಾರೆ.

ಕುಮಾರ ವ್ಯಾಸ, ಪಂಪರನ್ನು ಹೊಸಗನ್ನಡಕ್ಕೆ ತಂದಿದ್ದು ಎಚ್.ಎಸ್ .ವಿ.ಯವರ ಬಹಳ ದೊಡ್ಡ ಸಾಧನೆ. ಅವರು ರಾಮಾಯಣವನ್ನು ಹಿರಿಯರಿಗೆ ತಂದರು. ಹಾಗೆಯೇ ಭಗವದ್ಗಿತೆಯನ್ನೂ ತನ್ನಿ ಸಾರ್ ಎಂದು ಅವರಿಗೆ ಸದಾ ಹೇಳುತ್ತಿದ್ದೆ. ಹೀಗೆ ರೂಪುಗೊಂಡಿದ್ದು ‘ಆಪ್ತ ಗೀತೆ’. ಸಂಸ್ಕೃತದ ಏಳು ನೂರು ಶ್ಲೋಕಗಳನ್ನು ಅವರ ಹಂತ ಹಂತವಾಗಿ ಕನ್ನಡಕ್ಕೆ ತಂದರು. ಪ್ರತಿ ಹಂತದಲ್ಲಿಯೂ ಅವರು ನನಗೆ ಕಳುಹಿಸುತ್ತಿದ್ದರು ಅಥವಾ ಅವರ ಮನೆಯಲ್ಲಿ ಇದರ ವಾಚನ-ಚರ್ಚೆ ನಡೆಯು ತ್ತಿತ್ತು. ಈ ಯೋಜನೆಯಲ್ಲಿ ಭಾಗಿಯಾಗಿದ್ದು ನನ್ನ ಜೀವನದ ಮರೆಯಲಾಗದ ಅನುಭವ. ಇಪ್ಪತ್ತು ದಿನಗಳಲ್ಲಿ ಸಿದ್ದವಾದ ಪುಸ್ತಕ.

ಚಿತ್ರಗೀತೆಗಳ ವಿಚಾರ ಸಂಕಿರಣದ ಅಧ್ಯಕ್ಷತೆ ಎಚ್.ಎಸ್.ವಿ.ಯವರದು; ನನ್ನದು ಪ್ರಬಂಧ ಮಂಡನೆ. ನಾನು ಅವತ್ತು ವಿಶೇಷವಾಗಿ ಎಚ್.ಎಸ್ .ವಿ.ಯವರ ಚಿತ್ರಗೀತೆಗಳ ಕುರಿತು ಮಾತ ನಾಡಿದೆ. ಇಬ್ಬರು ಒಂದೇ ಕಾರಿನಲ್ಲಿ ಹಿಂದಿರುಗಿದೆವು. ಎಚ್.ಎಸ್.ವಿ. ನೀನು ಇವತ್ತು ಮಾತನಾಡಿ ದ್ದು ದಾಖಲೆ ಆಗ ಬೇಕು ಎಂದರು. ನಾನು ‘ಖಂಡಿತ, ನಿಮ್ಮ ಚಿತ್ರಗೀತೆಗಳ ಕುರಿತೇ ಪುಸ್ತಕ ಬರೆಯು ತ್ತೇನೆ’ ಎಂದು ಬಿಟ್ಟೆ, ಮರೆತೂ ಬಿಟ್ಟೆ. ಮುಂದೆ ಎಚ್.ಎಸ್.ವಿ. ಗುಲ್ಬರ್ಗದಲ್ಲಿ ನಡೆದ 85ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು. ಆಗ ಅಂಕಿತ ಪ್ರಕಾಶ ನದ ಪ್ರಕಾಶ ಕಂಬತ್ತಳ್ಳಿ ನೀವು ಎಚ್.ಎಸ್.ವಿಯವರ ಚಿತ್ರಗೀತೆಗಳ ಬಗ್ಗೆ ಬರೆಯುತ್ತಿರುವ ಪುಸ್ತಕ ನಮಗೆ ಕೊಡಿ, ಅದಷ್ಟು ಬೇಗ ಹಸ್ತಪ್ರತಿ ಬೇಕು ಎಂದರು.

ನಾನು ಬರೆಯುತ್ತೇನೆ ಎಂದಿದ್ದೆ ಅಷ್ಟೇ, ಒಂದಕ್ಷರವನ್ನೂ ಬರೆದಿರಲಿಲ್ಲ. ಸಮ್ಮೇಳನಕ್ಕೆ ಆಗ ಇನ್ನು ಕೇವಲ ಇಪ್ಪತ್ತು ದಿನಗಳಿದ್ದವು. ಆಗುವುದಿಲ್ಲ ಎಂದೆ. ಈಗ ಒತ್ತಾಯಿಸುವ ಸರದಿ ಎಚ್. ಎಸ್.ವಿ ಯವರದು. ಒಟ್ಟು ಚಿತ್ರಗೀತೆಗಳು 72 ಎಂಬ ಲೆಕ್ಕ ಸಿಕ್ಕಿತು. ಎಚ್.ಎಸ್.ವಿ. ಕೆಲವು ಕ್ಯಾಸೆಟ್ ಕೊಟ್ಟರು, ಉಪಾಸನಾ ಮೋಹನ್ ನೆರವಾದರು. ಕೆಲವನ್ನು ನಿರ್ಮಾಪಕರಿಂದ ಪಡೆಯಲಾಯಿತು. ಅಂತೂ ಹತ್ತೇ ದಿನಗಳಲ್ಲಿ ‘ಹಾಡು ಮುಗಿಯುವುದಿಲ್ಲ’ ಪುಸ್ತಕ ಸಿದ್ಧವಾಗಿ ಸಮ್ಮೇಳನದಲ್ಲಿ ಬಿಡುಗಡೆಯೂ ಆಯಿತು.

ಊರ ಸೇರಬಹುದೆ?

ಒಂದು ರೆಕಾರ್ಡಿಂಗ್ ಮುಗಿಸಿ ಕೊಂಡು ನಾನು ಮತ್ತು ಎಚ್.ಎಸ್.ವಿ ಹಿಂದಿರುಗಿ ಬರುತ್ತಿದ್ದೆವು. ಅವರಿಗೆ ಪ್ರಿಯಳಾದ ಗಾಯಕಿ ಹೊಸದಾಗಿ ಕಾರ್ ಕೊಂಡಿದ್ದರು. ಅದನ್ನು ಗುರುಗಳಿಗೆ ತೋರಿಸುವ ಹಂಬಲ, ಗಾಯಕಿಯ ಕಾರಿನಲ್ಲಿಯೇ ನಾವು ಹೊರಟೆವು. ಆ ಗಾಯಕಿ ಆಗ ತಾನೆ ಡ್ರೈವಿಂಗ್ ಕಲಿಯುತ್ತಿದ್ದಳು. ಹನುಮಂತನಗರದ ಮುಖ್ಯ ರಸ್ತೆಯಲ್ಲಿ ಎರಡು ಸಲ ಕೂದಲೆಳೆಯಲ್ಲಿ ಅಪಘಾತ ತಪ್ಪಿತು! ಆಗ ಮಗಳು ಜಾನಕಿ ಜನಪ್ರಿಯತೆಯ ಕಾಲ; ‘ಊರ ಸೇರಬಹುದೆ ಹೇಳು.. ದಾರಿ ಮುಗಿಯದೆ’ ಎಂಬ ಎಚ್.ಎಸ್.ವಿಯವರೇ ಬರೆದ ಶೀರ್ಷಿಕೆ ಗೀತೆ ಕಾರಿನಲ್ಲಿ ಮೊಳಗುತ್ತಿತ್ತು. ಎಚ್.ಎಸ್.ವಿ ನನ್ನ ಕಡೆ ತಿರುಗಿ ‘ಊರ ಸೇರಬಹುದೆ ನಾವು?’ ಎಂದು ನಕ್ಕರು. ಆ ಆತಂಕದಲ್ಲಯೂ ನನಗೆ ನಗುವನ್ನು ತಡೆಯಲಾಗಲಿಲ್ಲ. ಈಗ ದಾರಿ ಮುಗಿಯದೆ ಗುರುಗಳು ಊರ ಸೇರಿ ಬಿಟ್ಟಿದ್ದಾರೆ; ಹೇಳಿ ಸರ್, ಇದು ನ್ಯಾಯವೆ ?

ಮಾಧುರ್ಯ ಹೆಚ್ಚಿಸಿದ ಕವಿ

ತಮ್ಮ ಸಮೃದ್ಧವಾದ ಭಾವಗೀತೆಗಳಿಂದ ಸುಗಮ ಸಂಗೀತಕ್ಕೆ ವಿಶೇಷ ಚಾಲನೆ ನೀಡಿ, ಕಾವ್ಯವನ್ನು ಓದುಗರ ಮತ್ತು ಕೇಳುಗರ ಪ್ರೀತಿಯ ಸಂಗಾತಿಯನ್ನಾಗಿಸಿದ ಮುಖ್ಯ ಕವಿಗಳಲ್ಲಿ ಎಚ್ಚೆಸ್ವಿಯವರೂ ಒಬ್ಬರು. ಸಾಹಿತ್ಯವನ್ನು ಓದುವ ಒಂದು ಸಂಗೀತ ಶೈಲಿಯಾಗಿ, ಸಂಗೀತದ ಮೂಲಕ ಸಾಹಿತ್ಯದ ಅರ್ಥೈಕೆಯಾಗಿ ಅವರು ಸುಗಮ ಸಂಗೀತವನ್ನು ಪರಿಗಣಿಸಿರುವುದು ಗಾಯಕರಿಗೆ ಮಾರ್ಗದರ್ಶನ ದಂತಿದೆ.

ಸುಗಮ ಸಂಗೀತ ಗಾಯಕರು, ಸಂಯೋಜಕರು, ನಿರ್ದೇಶಕರು, ಮೂರ್ತಿಯವರಂತಹ ಮುಕ್ತ ಪ್ರeಯ ಕವಿಗಳಿಂದ ಪಡೆದಿರುವ ಪ್ರಯೋಜನ ಅಷ್ಟಿಷ್ಟಲ್ಲ. ಹೀಗೆ ಅನೇಕ ವಿಧದಲ್ಲಿ ನಮ್ಮ ಸಾಂಸ್ಕೃತಿಕ ಲೋಕದ ಮಾಧುರ್ಯವನ್ನು ಹೆಚ್ಚಿಸಿದ ಕವಿ ಎಚ್ಚೆಸ್ವಿ. - ನಾಡೋಜ ಚೆನ್ನವೀರ ಕಣವಿ

(ಹಾಡು ಮುಗಿಯುವುದಿಲ್ಲ ಪುಸ್ತಕದ ಬೆನ್ನುಡಿಯಲ್ಲಿ)