Harish Kera Column: ಕಾಂತಾರದ ನಡುವೆ ಏಕಾಂತದ ಸಮಯ
ಪ್ರತೀ ಶಾಲೆಯೂ ಈ ಅರ್ಧ ಅಥವಾ ಮುಕ್ಕಾಲು ಗಂಟೆಯ ಮೌನ ಸಮಯವನ್ನು ಪಾಲಿಸುವುದು ಒಳ್ಳೆಯದು. ಹಿಂದೆ ಬೆಳಗ್ಗಿನ ಹೊತ್ತು ಸ್ಟಡಿ ಟೈಮ್ ಎಂದು ಮುಕ್ಕಾಲು ಗಂಟೆ ಕೊಡಲಾಗುತ್ತಿತ್ತು. ಸದ್ದಿಲ್ಲದೇ ಓದಿಕೊಳ್ಳಲೆಂದು ನೀಡುತ್ತಿದ್ದ ಸಮಯವದು. ಆದರೆ ಮೌನಸಮಯ ಅಥವಾ ಏಕಾಂತ ಮತ್ತೂ ಮಿಗಿಲು. ಅದರ ಅಗತ್ಯವನ್ನು ಶಿಕ್ಷಣತಜ್ಞರೇ ಗ್ರಹಿಸಿದಂತಿಲ್ಲ.


ಕಾಡುದಾರಿ
ನನ್ನ ಮಗಳ ಸನಿವಾಸ ಶಾಲೆಯಲ್ಲಿ ಒಂದು ವಿಶಿಷ್ಟ ರೂಢಿ ಇದೆ. ಪ್ರತೀ ಮುಂಜಾನೆ ಅರ್ಧ ಗಂಟೆ ಕಾಲ ‘ಮೌನ ಸಮಯ’. ಆ ಹೊತ್ತಿನಲ್ಲಿ ಇಡೀ ಕ್ಯಾಂಪಸ್ ನಿಶ್ಶಬ್ದವಾಗಿರುತ್ತದೆ. ನಗರದಿಂದ ದೂರ, ಹಳ್ಳಿ- ಗುಡ್ಡಗಾಡು ನಡುವೆ ಇರುವ ಶಾಲೆಯಾದ್ದರಿಂದ ಅಲ್ಲಿ ವಾಹನಗಳ ಶಬ್ದವೂ ಇರುವುದಿಲ್ಲ. ಆವರಣದೊಳಗೆ ಯಾರೂ ಪರಸ್ಪರ ಮಾತನಾಡುವುದಿಲ್ಲ. ಆ ಹೊತ್ತಿನಲ್ಲಿ ಲೈಬ್ರರಿಯಲ್ಲಿಯೂ ಯಾರೂ ಇರುವಂತಿಲ್ಲ, ಓದುವಂತಿಲ್ಲ, ಕಸೂತಿ ಮಾಡುವುದೋ ಆಡುವುದೋ ಕೂಡ ಇಲ್ಲ.
ಕ್ಯಾಂಪಸ್ನಲ್ಲಿ ಸಾಕಷ್ಟು ಕಾಡು ಇರುವುದರಿಂದ ಅದರೊಳಗೆ ಎಲ್ಲಿ ಬೇಕಾದರೂ ಓಡಾಡ ಬಹುದು. ಸುಮ್ಮನೇ ಕುಳಿತುಕೊಂಡು ಹಕ್ಕಿ, ಕೀಟಗಳ ದನಿಯನ್ನು ಆಲಿಸಬಹುದು. ಲೆಕ್ಚರರ್ಸ್ ಕೂಡ ಆ ಹೊತ್ತಿನಲ್ಲಿ ಮೌನವಾಗಿರುತ್ತಾರೆ. ಎದುರಾ ಎದುರು ಸಿಕ್ಕಿದರೂ ಮುಗುಳು ನಗು ಮಾತ್ರ. ಆ ಹೊತ್ತಿನಲ್ಲಿ ನೀನು ನಿನ್ನ ಜೊತೆಗೇ ಮೌನವಾಗಿ ಇರಬೇಕು ಮಾತ್ರ. ಶಾಲೆ ವರ್ಷಗಳಿಂದ ಈ ಪದ್ಧತಿಯನ್ನು ಪಾಲಿಸಿಕೊಂಡು ಬಂದಿದೆ. ಮಕ್ಕಳ ಸಂಖ್ಯೆಯೂ ಅಲ್ಲಿ ಸೀಮಿತ. ಹೀಗಾಗಿ ಘನ ಮೌನವೊಂದು ಅಲ್ಲಿ ಪಸರಿಸಿರುವುದನ್ನು ಆಲಿಸಬಹುದು. ಮೌನ ಸಮಯದ ಪರಿಣಾಮ ಮಕ್ಕಳ ಮೇಲೂ ಸಾಕಷ್ಟು ಆಗಿರುವುದನ್ನು ನಾವು ಗಮನಿಸಬಹುದು. ಸಣ್ಣ ಮಕ್ಕಳು ಮೊದಲ ವರ್ಷ ಈ ಹೊತ್ತಿನಲ್ಲಿ ಚಡಪಡಿಸುತ್ತಿರುತ್ತವೆ.
ಎರಡನೇ ವರ್ಷದಿಂದ, ಈ ಸಮಯಕ್ಕಾಗಿ ಅವು ಹಾತೊರೆಯುವಂತಾಗಿರುತ್ತದೆ. ಈ ಅರ್ಧ ಗಂಟೆಯ ನಂತರದ ಕ್ಲಾಸಿನ ಅವಧಿಯಲ್ಲಿ ಕಲಿತದ್ದನ್ನು ಮಕ್ಕಳು ಮರೆಯುವುದೇ ಇಲ್ಲ. ಅರ್ಧ ಗಂಟೆಯ ಮೌನ ಅವರ ಮನಸ್ಸನ್ನು ಹಸಿ ಗೋಡೆಯಂತಾಗಿಸಿರುತ್ತದೆ. ಮಾತುಗಳು ಮನಸ್ಸಿನಿಂದ ಬಂದಿರುತ್ತವೆ, ಸ್ಪಷ್ಟವಾಗಿರುತ್ತವೆ.
ಇದನ್ನೂ ಓದಿ: Harish Kera Column: ಓ ಹೆಣ್ಣೇ, ಗಂಡನನ್ನು ಏಕೆ ಕೊಂದೆ ?
ಪ್ರತೀ ಶಾಲೆಯೂ ಈ ಅರ್ಧ ಅಥವಾ ಮುಕ್ಕಾಲು ಗಂಟೆಯ ಮೌನ ಸಮಯವನ್ನು ಪಾಲಿಸುವುದು ಒಳ್ಳೆಯದು. ಹಿಂದೆ ಬೆಳಗ್ಗಿನ ಹೊತ್ತು ಸ್ಟಡಿ ಟೈಮ್ ಎಂದು ಮುಕ್ಕಾಲು ಗಂಟೆ ಕೊಡಲಾಗುತ್ತಿತ್ತು. ಸದ್ದಿಲ್ಲದೇ ಓದಿಕೊಳ್ಳಲೆಂದು ನೀಡುತ್ತಿದ್ದ ಸಮಯವದು. ಆದರೆ ಮೌನ ಸಮಯ ಅಥವಾ ಏಕಾಂತ ಮತ್ತೂ ಮಿಗಿಲು. ಅದರ ಅಗತ್ಯವನ್ನು ಶಿಕ್ಷಣತಜ್ಞರೇ ಗ್ರಹಿಸಿದಂತಿಲ್ಲ.
ಶಾಲೆಯಿಂದ ಮನೆಗೆ ತೆರಳುತ್ತಿದ್ದ, ಮನೆಯಿಂದ ಶಾಲೆಗೆ ಮರಳುತ್ತಿದ್ದ ಮೂರ್ನಾಲ್ಕು ಕಿಲೋ ಮೀಟರ್ಗಳ ನಡಿಗೆಯ ದಿನಗಳು ನೆನಪಾಗುತ್ತವೆ. ಸುತ್ತಮುತ್ತ ಮರಗಿಡಗಳು, ಕುರುಚಲು ಕಾಡು ಗುಡ್ಡಗಳು, ಸಣ್ಣ ಹೊಳೆ ಹಳ್ಳಗಳು, ಅಲ್ಲಲ್ಲಿ ಒಂದೊಂದು ಮನೆಗಳ ನಡುವೆ ನಡಿಗೆ ಸಾಗುತ್ತಿತ್ತು. ನಡಿಗೆಯ ಅಷ್ಟೂ ಕಾಲ ಸಹಪಾಠಿಗಳು ಜತೆಗಿದ್ದರೆ ಮಾತುಕತೆ, ಕಿಚಾಯಿಸುವಿಕೆ. ಯಾರೂ ಇಲ್ಲದಿದ್ದರೆ ಸುದೀರ್ಘ ಮೌನವೇ ನಮ್ಮ ಜೊತೆಯಾಗಿರುತ್ತಿತ್ತು.
ಮೌನದ ನಡುವೆ ಕಾಜಾಣದ ಕೂಗು, ಯಾರೋ ಕರೆದಂತೆ ಸಿಳ್ಳಾರದ ಸಿಳ್ಳು, ತೊರೆಯ ಜುಳುಜುಳು, ಕಾಡಿಗೆ ಬಿಟ್ಟ ದನಗಳ ಅಂಬಾ ಹಾದುಬರುತ್ತಿದ್ದವು. ಮನದ ಮೌನದ ನಡುವೆ ಅವು ಇನ್ನಷ್ಟು ಗಾಢವಾಗಿ ಬಂದು ನೆಲೆಯಾಗುತ್ತಿದ್ದವು. ಅದರಿಂದ ಕಲಿತದ್ದೆಂದರೆ, ಎಲ್ಲರ ಮನದೊಳಗೂ ಒಂದು ಮೌನವಿರುತ್ತದೆ, ಅದನ್ನು ಗೌರವಿಸಬೇಕು. ಹಾರುತ್ತಿರುವ ಹಕ್ಕಿಯಾಗಲೀ, ಮೇಯುತ್ತಿರುವ ದನವಾಗಲೀ ಏನನ್ನು ತಮ್ಮ ತಲೆಯಲ್ಲಿ ತುಂಬಿಕೊಂಡಿವೆ ಎಂದರೆ ಏನೂ ಇಲ್ಲ.
ಅವು ಇರುವಂತೆ ತಮ್ಮಷ್ಟಕ್ಕೆ ಇವೆ. ಇನ್ಯಾರೋ ಅವುಗಳನ್ನು ಆಳಲು ಬಿಟ್ಟಿಲ್ಲ. ಆದರೆ ನಾವು ಮಾತ್ರ ಇತರರೇ ನಮ್ಮ ತಲೆಯನ್ನು ಆಳಲಿ ಎಂದು ಬಿಟ್ಟುಕೊಟ್ಟಿದ್ದೇವೆ. ಐಡಿಯಾಗಳನ್ನು ಬಿತ್ತಿದವರು ನಮ್ಮ ತಲೆ ಮೆದುಳುಗಳಲ್ಲಿ ಗಟ್ಟಿಯಾಗಿ ಕೂತಿದ್ದಾರೆ. ನಮ್ಮ ಮನಸ್ಸನ್ನೇ ಒಂದು ಸಲ ಗಮನಿಸಿಕೊಂಡರೆ, ಸದಾ ಕಾಲ ಇಸ್ರೇಲ್-ಇರಾನ್ ಯುದ್ಧ ಅ ನಡೆಯುತ್ತಿರುತ್ತದೆ. ಅಲ್ಲಿ ಏನೇನನ್ನೋ, ಯಾರು, ಯಾರನ್ನೋ ತುಂಬಿಕೊಂಡಿರುತ್ತೇವೆ.
ಅವರ ಮಾತುಗಳೂ ಕೃತ್ಯಗಳೂ ಅಲ್ಲಿ ರುದ್ರನಾಟ್ಯ ಮಾಡುತ್ತಿರುತ್ತವೆ. ಕೈಗಳು ಏನೋ ಕೆಲಸ ಮಾಡುತ್ತಿರುತ್ತವೆ. ಕೈಗಳನ್ನು ನರವ್ಯೂಹವೂ ಮೆದುಳೂ ಹೃದಯವೂ ಹಿಂಬಾಲಿಸುತ್ತದೆ. ಅಲ್ಲಿ ಕಾಣಿಸದೇ ಹೋಗುವ ಏಕೈಕ ವ್ಯಕ್ತಿ ಅಂದರೆ ನಾವೇ. ಅಲ್ಲಿ ನಾವು ನೋಡಿದ, ಓದಿದ, ಕೇಳಿದ, ಕಲ್ಪಿಸಿದ ಎಲ್ಲವೂ ಬಸ್ಸು ನಿಲ್ದಾಣಕ್ಕೆ ಬಂದು ಹೋಗುವ ಬಸ್ಸುಗಳಂತೆ. ಆದರೆ ಏಕಾಂತವು ಶಾಂತ ರಾತ್ರಿಯ, ಯಾವ ಬಸ್ಸುಗಳೂ ಇಲ್ಲದ, ನಿಲ್ದಾಣ ಗುಡಿಸಿ ಚೊಕ್ಕಟ ಮಾಡುವ ಸಮಯದಂತೆ. ಮೆದುಳಲ್ಲಿ ಲೋಕವನ್ನು ತುಂಬಿಕೊಂಡರೆ ಲೋಕಾಂತ. ನನ್ನ ಜೊತೆಗೆ ನಾನಷ್ಟೇ ಇದ್ದರೆ ಏಕಾಂತ. ನಾನು ಸಣ್ಣವನಿದ್ದಾಗ ಒಬ್ಬರು ತಾತನನ್ನು ದಿನಾ ನೋಡುತ್ತಿದ್ದೆ. ಅವರು ಮನೆಯ ಮುಂದಿನ ಚಿಟ್ಟೆಯಲ್ಲಿ ಕುಳಿತು ಶೂನ್ಯ ಕಂಗಳಿಂದ ಎತ್ತಲೋ ನೋಡುತ್ತಿದ್ದರು.
ನೋಡುತ್ತಿದ್ದ ದೃಶ್ಯ ಅವರಲ್ಲಿ ದಾಖಲಾಗುತ್ತಿತ್ತು ಎಂದು ನನಗೆ ನಂಬಿಕೆಯಿಲ್ಲ. ಶೂನ್ಯ ಕಂಗಳು ಎಂಬುದು ಕೂಡ ಇಲ್ಲಿ ಪದ ಬಳಕೆ ಮಾತ್ರ. ಹಾಗೆ ನೋಡುತ್ತಿದ್ದಾಗ ಅವರ ಕಂಗಳು ಮನದೊಳಗೇ ತಿರುಗಿರುತ್ತಿದ್ದವೋ ಏನೋ. ತಮ್ಮ ಸುತ್ತಮುತ್ತ ಚಲಿಸುತ್ತಿರುವ ಜಗತ್ತು, ಓಡಾಡುವ ಮಕ್ಕಳು, ಮಾವಿನ ಮರದಲ್ಲಿ ಬಂದು ಕುಳಿತ ಕಾಗೆ ಎಲ್ಲವೂ ಅವರ ಮನದಲ್ಲಿ ವಿಚಿತ್ರ ಬಗೆಯಲ್ಲಿ ದಾಖಲಾಗುತ್ತಿದ್ದಿರಬೇಕು. ಆದರೆ ಅವರ ಕೈಬೆರಳು ಕೂಡ ಅಲುಗಾಡುತ್ತಿದ್ದಿಲ್ಲ. ಅಂದು ಅದು ವಿಚಿತ್ರವೆನಿಸುತ್ತಿತ್ತು. ಈಗ ಅದು ಸಹಜವೆನಿಸುತ್ತದೆ.
ಚಂಚಲವಾಗಿರುವ ಜಗತ್ತನ್ನು ಗ್ರಹಿಸುವ ಒಂದು ಅಚಂಚಲ ಬಗೆಯದು. ಈಗಲೂ ಅಂಥವರನ್ನು ಸಂಜೆ ಉದ್ಯಾನಗಳಲ್ಲಿ ನೀವು ಗಮನಿಸಬಹುದು. ಹೆಚ್ಚಿನವರು ಹಿರಿಯ ನಾಗರಿಕರು. ಜಿಮ್ಗಳಲ್ಲಿ ದಣಿಯುತ್ತಿರುವ ಮಧ್ಯವಯಸ್ಕರು, ಜಾರುಬಂಡಿ ಹತ್ತಿಳಿಯುತ್ತಿರುವ ಮಕ್ಕಳು, ಇತರರನ್ನು ತಳ್ಳಿಕೊಂಡು ವಾಕಿಂಗ್ ಮಾಡುವ ಅವಸರಗೇಡಿಗಳು, ಪಕ್ಕದ ಬೀದಿಯ ಕಡ್ಲೆಕಾಯಿ ಮಾರುವಾಕೆ- ಎಲ್ಲವನ್ನೂ ಅವರು ಯಾವ ಧಾವಂತವೂ ಇಲ್ಲದೆ ನೋಡುತ್ತಿರುತ್ತಾರೆ.
ಅವರಲ್ಲಿ ಬೇಸರ, ವಿಷಾದ ಮಡುಗಟ್ಟಿರಬಹುದು ಎಂದು ನಾವು ಪಕ್ಕನೇ ಭಾವಿಸಲಿಕ್ಕೂ ಅವಕಾಶ ವಿದೆ. ಆದರೆ ಹಾಗೇನೂ ಇರಲಿಕ್ಕಿಲ್ಲ. ಒಂದು ಸ್ಥಿರವಾದ ಏಕಾಂತದಲ್ಲಿ ಇದ್ದುಕೊಂಡು ಲೋಕ ವನ್ನು ನೋಡುತ್ತಿರುವ ಬಗೆ ಅದಾಗಿರಬಹುದು. ಅಂಥ ಸಂತೆಯೊಳಗಿನ ಏಕಾಂತ ನಮಗೇಕೆ ಒಲಿಯಲಿಲ್ಲ ಎಂದು ಹೊಟ್ಟೆಕಿಚ್ಚಾಗುತ್ತದೆ.
ಏಕಾಂತ ಎಂಬುದು ಮೌನದ ಹೊಳೆಯಲ್ಲಿ ಮುಳುಗಿ ಮಿಂದಂತೆ. ವರ್ತಮಾನದಲ್ಲಿ ಕರಗಿ ಇಲ್ಲವಾಗುವ ಕ್ಷಣ. ಕೆಲವೊಮ್ಮೆ ’ನಾನು’ ಎಂಬ ಭಾವನೆಯೂ ಅಲ್ಲಿ ಇರುವುದಿಲ್ಲ. ವಿಶೇಷವಾಗಿ ಪ್ರಕೃತಿಯ ಪ್ರಶಾಂತತೆಯಲ್ಲಿ ಏಕಾಂತದ ಕ್ಷಣಗಳು ದೊರೆತಾಗ. ತುಂಬಾ ಮಂದಿ ಏಕಾಂತವನ್ನೂ ಒಂಟಿತನವನ್ನೂ ಒಂದೇ ಎಂದು ಭಾವಿಸುತ್ತಾರೆ.
ಒಂಟಿತನದೊಂದಿಗೆ ದುಃಖ, ಶೋಕ, ಕಳೆದುಕೊಂಡ ಭಾವಗಳೆಲ್ಲ ಮಿಳಿತವಾಗಿರುತ್ತವೆ. ಏಕಾಂತ ಹಾಗಲ್ಲ. ಜನರ ನಡುವೆಯಿದ್ದೂ ಒಂಟಿತನವನ್ನೂ ಏಕಾಂತವನ್ನೂ ಅನುಭವಿಸಬಹುದು ಎಂಬುದೇನೋ ನಿಜ; ಆದರೆ ಎರಡರಿಂದಲೂ ನಾವು ಪಡೆಯುವುದೇ ಬೇರೆ ಬೇರೆ. ಒಂಟಿತನದಿಂದ ಮನಸ್ಸು ಇನ್ನಷ್ಟು ಭಾರವಾಗುತ್ತದೆ, ಖಿನ್ನವಾಗುತ್ತದೆ.
ಏಕಾಂತದಿಂದ ಅದು ತನಗೆ ಬೇಕಾದ ಚೈತನ್ಯವನ್ನು ಮರಳಿ ಪಡೆದುಕೊಳ್ಳುತ್ತದೆ. ಒಂಟಿತನ ಹೊರಗಿನ ಸದ್ದುಗಳಿಂದ ತಿನ್ನುವ ಏಟು; ಏಕಾಂತ ಅಂಥ ಹೊಡೆತಗಳನ್ನು ನಿರ್ಮೋಹದಿಂದ ವೀಕ್ಷಿಸುವ ಕಣ್ಣು. ಏಕಾಂತ ಉದ್ದೇಶಪೂರ್ವಕ ಅನುಭವ. ಮನುಷ್ಯ ಬೇರೆ ಯಾರಿಗೂ ಹೆದರ ದಷ್ಟು ಒಂಟಿಯಾಗಿರುವುದಕ್ಕೆ, ತನ್ನೊಳಗನ್ನು ತಾನೇ ನೋಡಿಕೊಳ್ಳುವುದಕ್ಕೆ ಭಯಪಡುತ್ತಾನೆ. ಏಕಾಂತವೆಂದರೆ ಬೆದರುತ್ತಾನೆ.
ಮೊಬೈಲ್, ಪುಸ್ತಕ ಏನೂ ಇಲ್ಲದೆ ಒಬ್ಬ ವ್ಯಕ್ತಿಯನ್ನು ಇಂದು ಒಂಟಿಯಾಗಿ ಒಂದು ಕೋಣೆಯಲ್ಲಿ ಕೂಡಿ ಹಾಕಿದರೆ ಒಂದೇ ದಿನದಲ್ಲಿ ಆತ ಅರೆಹುಚ್ಚನಾಗುತ್ತಾನೆ. ತನ್ನ ಸಾಂಗತ್ಯವೇ ಆತನಿಗೆ ಬರ್ಬರ ಎನಿಸುತ್ತದೆ. ಇಷ್ಟವಿಲ್ಲದ ಏಕಾಂತ ಸಜೆ. ಅಧಿಕಾರದಿಂದ, ಒತ್ತಡದಿಂದ ಸೃಷ್ಟಿಸುವ ಏಕಾಂತ ನಿಜವಲ್ಲ. ಬಯಸದವರಲ್ಲಿ ಅದನ್ನು ಉಂಟು ಮಾಡಲು ಸಾಧ್ಯವಿಲ್ಲ. ನಿಜವಾದ ಏಕಾಂತ ಕನ್ನಡಿಯಂತೆ. ಮನಸ್ಸನ್ನು ಸ್ಪಷ್ಟವಾಗಿ ನೋಡಲು ಅದು ಸಹಾಯಕ. ಮಹತ್ವಾಕಾಂಕ್ಷೆ, ಚಡಪಡಿಕೆಯ ಚಟುವಟಿಕೆಗಳ ಜೊತೆಗೆ ತಳುಕುಹಾಕಿಕೊಂಡ ಸಂಕೀರ್ಣತೆ, ಭಯ, ಹತಾಶೆಗಳನ್ನು ಅದು ಕಾಣಿಸುತ್ತದೆ. ಆ ವ್ಯರ್ಥ ಪ್ರಯತ್ನದಿಂದ ಮುಕ್ತಗೊಳಿಸುತ್ತದೆ.
ಒಂಟಿತನದ ಭಯವೇ ನಮ್ಮ ಚಟುವಟಿಕೆಗಳನ್ನು ರೂಪಿಸುತ್ತದೆ. ಒಂಟಿಯಾಗಿರುವುದನ್ನು ಅಥವಾ ಏಕಾಂತವನ್ನು ಸಹಿಸಲು ಸಾಧ್ಯವಾಗದಿದ್ದರೆ ಮನಸ್ಸು ಆ ಶೂನ್ಯವನ್ನು ತುಂಬಲು ಏನಾದರೂ ಮಾಡುತ್ತಿರುತ್ತದೆ. ಹಸಿದಾಗ ನಮಗೆ ಅಗತ್ಯವಿಲ್ಲದ ದಿನಸಿ ವಸ್ತುಗಳನ್ನು ಖರೀದಿಸು ತ್ತೇವೆ, ಜಂಕ್ ಫುಡ್ ತಿನ್ನುತ್ತೇವೆ. ಹಾಗೇ ಒಂಟಿತನ ಸಹಿಸಲಾಗದೆ,
ಜೀವನವನ್ನು ಅರ್ಥಹೀನ ಸಂಬಂಧಗಳು ಮತ್ತು ಚಟುವಟಿಕೆಗಳಿಂದ ತುಂಬಿಸಿಕೊಳ್ಳುತ್ತೇವೆ. ಪ್ರವಾಸ ಹೋಗುವಾಗಲೂ ಸೆಲಿಗಳು, ಫೊಟೋ ಸೆಷನ್ ಗಳು, ಮ್ಯೂಸಿಕ್ ಪ್ಲೇಗಳು ನಮ್ಮ ಸಮಯವನ್ನು ತುಂಬುತ್ತವೆ. ಎಂಥ ಜೋಗ ನೋಡಿದರೂ ಕೊನೆಗೂ ನೆಲೆ ನಿಂತಿರುವುದು ನಮ್ಮ ಮನದ ಉಬ್ಬರವೇ ಹೊರತು ಜಲಪಾತದ ಅಬ್ಬರವಲ್ಲ.
ಸಂಪೂರ್ಣವಾಗಿ ಸ್ವೀಕರಿಸಲು ಬಯಸುವವರಿಗೆ ಏಕಾಂತ ನಿಜವಾಗಿಯೂ ಶ್ರೀಮಂತ ಅನುಭವ. ಅದು ಜನರನ್ನು ಸಕಾರಾತ್ಮಕ ಸಂಬಂಧಗಳನ್ನು ದೂರವಿಡುವುದಲ್ಲ. ತನಗಾಗಿ ಸಮಯ ಮಾಡಿಕೊಳ್ಳುವುದು. ನೀವು ಮಾತ್ರವೇ ಇರುವ ಕ್ಷಣಗಳನ್ನು ನಿಮಗೆ ನೀಡುವುದು. ಈಗಿದನ್ನು ಓದುತ್ತಿರುವಾಗಲೂ, ಸ್ಮಾರ್ಟ್ ಫೋನ್ನಲ್ಲಿ ಪಿಂಗ್ ಎಂದು ಆಗಮಿಸಿದ ನೋಟಿಫಿಕೇಶನ್ ಯಾವುದೆಂದು ನೋಡಲು ನಿಮ್ಮ ಕೈ ಅತ್ತ ಚಾಚಿರುತ್ತದೆ ಎಂದು ನಾನು ಬಲ್ಲೆ. ಅಂಥ ತಕ್ಷಣದ ಆಮಿಷಗಳಿಂದ ದೂರವಿದ್ದು ತನ್ನಲ್ಲಿ ಏನಾಗುತ್ತಿದೆ, ತನ್ನಲ್ಲಿ ತಾನು ಎಷ್ಟಿದ್ದೇನೆ- ಇತರರು ಎಷ್ಟಿದ್ದಾರೆ, ತನ್ನ ಮನದ ಕಡಲಲ್ಲಿ ಏಳುಬೀಳುತ್ತಿರುವ ಅಲೆಗಳು ಯಾವುವು ಎಂದು ನೋಡಿಕೊಳ್ಳುವುದು.
ಜಿಡ್ಡು ಕೃಷ್ಣಮೂರ್ತಿ ಇದನ್ನು ಸುಂದರವಾಗಿ ಹೇಳುತ್ತಾರೆ: ನೀವು ಎಂದೂ ಏಕಾಂತವನ್ನು ಅನುಭವಿಸಿಲ್ಲ. ಯಾಕೆಂದರೆ ನೀವು ನಿಮ್ಮೆಲ್ಲ ನೆನಪುಗಳು, ಎಲ್ಲ ಕಂಡೀಷನಿಂಗ್, ನಿನ್ನೆಯ ಎಲ್ಲಾ ಗೊಣಗಾಟಗಳಿಂದ ತುಂಬಿ ಹೋದವರು. ಸಾವಿರಾರು ಜನ ಹೇಳಿರುವ ವಿಷಯಗಳ ಹೊರೆ, ನಮ್ಮ ಎಲ್ಲಾ ದುರದೃಷ್ಟಕರ ನೆನಪುಗಳನ್ನು ನಾವು ಹೊತ್ತುಕೊಂಡಿದ್ದೇವೆ. ಸಂಗ್ರಹವಾಗಿರುವ ಕಸದಿಂದ ನಿಮ್ಮ ಮನಸ್ಸು ಎಂದಿಗೂ ಮುಕ್ತವಾಗಿಲ್ಲ.
ಒಂಟಿಯಾಗಿರಬೇಕು ಎಂದರೆ ಭೂತಕಾಲದ ಪಾಲಿಗೆ ನೀವು ಸಾಯಬೇಕು. ನೀವು ಒಂಟಿ ಯಾಗಿರುವಾಗ, ಸಂಪೂರ್ಣವಾಗಿ ಒಂಟಿಯಾಗಿರುವಾಗ, ಯಾವುದೇ ಕುಟುಂಬ, ಯಾವುದೇ ರಾಷ್ಟ್ರ, ಯಾವುದೇ ಸಂಸ್ಕೃತಿ, ಯಾವುದೇ ನಿರ್ದಿಷ್ಟ ಖಂಡಕ್ಕೆ ಸೇರಿಲ್ಲದಿದ್ದಾಗ ಮಾತ್ರ ನಾನು ಎಂಬ ಸ್ವತಂತ್ರ ಅಸ್ತಿತ್ವ ನಿಮಗಿರುತ್ತದೆ. ಒಂಟಿಯಾಗುವುದು ಎಂದರೆ ಇವೆಲ್ಲವನ್ನೂ ತ್ಯಜಿಸುವುದು. ಅಂಥ ಏಕಾಂತದಲ್ಲಿ ಮನಸ್ಸು ಮುಗ್ಧ ಮತ್ತು ಬಾಲ್ಯದಿಂದ ಕೂಡಿರುತ್ತದೆ.
ಅಂದರೆ ವಯಸ್ಸಿನಲ್ಲಿ ಅಲ್ಲ, ಯಾವುದೇ ವಯಸ್ಸಿನಲ್ಲಿಯೂ ಅದು ಜೀವಂತವಾಗಿರುತ್ತದೆ. ಅಂತಹ ಮನಸ್ಸು ಮಾತ್ರ ಸತ್ಯವನ್ನು, ಪದಗಳಿಂದ ಅಳೆಯಲಾಗದುದನ್ನು ಕಾಣಬಹುದು. ಲೋಕದಿಂದ ದೂರವಿದ್ದೂ ಅದರ ಬೀದಿಗಳಲ್ಲಿ ನಡೆಯುವುದರಿಂದ, ತೊರೆಗಳು ಮತ್ತು ಬೆಟ್ಟಗಳ ನಡುವಿನ ಹಾದಿಯಲ್ಲಿ ಒಂಟಿಯಾಗಿ ನಡೆಯುವುದರಿಂದ ನೀವು ಅವುಗಳೆಲ್ಲವೂ ಏಕಾಂಗಿಯಾಗಿದ್ದೂ ಘನತೆ ಯುಳ್ಳ ಸೌಂದರ್ಯದಿಂದ ಏಕೆ ಕೂಡಿದೆ ಎಂದು ಅರಿತುಕೊಳ್ಳುವಿರಿ.