B S Shivanna Column: ಮಂದಿರ, ಮಸೀದಿ, ಚರ್ಚ್ಗಳಲ್ಲೂ ಅಂಬೇಡ್ಕರ್ ಭಾವಚಿತ್ರ ಬರಲಿ
ನ್ಯಾಯವಾದಿಗಳು, ನ್ಯಾಯಧೀಶರೆಲ್ಲರೂ ಸಂವಿಧಾನ ಓದುತ್ತಾರೆ. ಆದರೂ ನ್ಯಾಯಾಲಯಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸದೇ ಇರುವುದು ದುರದೃಷ್ಟಕರ. ಹೈಕೋರ್ಟ್ ಆದೇಶದ ಮೂಲಕ ಇನ್ನುಮುಂದಾದರೂ ನ್ಯಾಯಾಂಗ ವ್ಯವಸ್ಥೆಯ ಕಚೇರಿಗಳಲ್ಲಿ ಬಾಬಾ ಸಾಹೇಬರ ಭಾವ ಚಿತ್ರ ಅಳವಡಿಸಬೇಕು ಎಂಬ ಒತ್ತಾಯದೊಂದಿಗೆ ಇಲ್ಲಿ ಕೆಲ ವಿಚಾರಗಳನ್ನು ನಾನು ಪ್ರಸ್ತಾಪ ಮಾಡುತ್ತೇನೆ.


ಪ್ರಸ್ತುತ
ಬಿ.ಎಸ್.ಶಿವಣ್ಣ
ರಾಜ್ಯದ ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ, ಕೋರ್ಟ್ ಸಭಾಂಗಣಗಳಲ್ಲಿ, ಕಚೇರಿಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸ ಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿರುವುದು ಸ್ವಾಗತಾರ್ಹ. ಆದರೆ ಅಂಬೇಡ್ಕರ್ ಭಾವ ಚಿತ್ರ ಹಾಕಲು ಹೈಕೋರ್ಟ್ ಆದೇಶ ನೀಡಬೇಕಾದ ಪರಿಸ್ಥಿತಿ ಬಂತಲ್ಲಾ ಎಂಬ ನೋವು ಕಾಡುತ್ತದೆ.
ಇಲ್ಲಿಯವರೆಗೂ ನ್ಯಾಯಾಲಯಗಳಲ್ಲಿ, ನ್ಯಾಯಾಲಯ ಸಂಬಂಧಿತ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಇರಲಿಲ್ಲವೇ ಎಂಬ ಪ್ರಶ್ನೆಯೂ ಮನಸ್ಸನ್ನು ಕಾಡುತ್ತದೆ. ಬಾಬಾ ಸಾಹೇಬ ಅಂಬೇಡ್ಕರ್ ಅವರು ವಿಶ್ವ ಕಂಡ ಅತ್ಯಂತ ಶ್ರೇಷ್ಠ ನ್ಯಾಯವಾದಿಯಾಗಿದ್ದರು, ಕಾನೂನು ಪಂಡಿತರಾಗಿದ್ದರು. ದೇಶದ ಕಾನೂನು ಸಚಿವರಾಗಿ ಕೆಲಸ ಮಾಡಿದ್ದರು. ನ್ಯಾಯಾಲಯಗಳು ಪ್ರತಿನಿತ್ಯ ಸಾಂವಿಧಾನಿಕ ನಿಯಮಗಳ ಮೇಲೆಯೇ ನಡೆಯುತ್ತವೆ.
ನ್ಯಾಯವಾದಿಗಳು, ನ್ಯಾಯಧೀಶರೆಲ್ಲರೂ ಸಂವಿಧಾನ ಓದುತ್ತಾರೆ. ಆದರೂ ನ್ಯಾಯಾಲಯಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸದೇ ಇರುವುದು ದುರದೃಷ್ಟಕರ. ಹೈಕೋರ್ಟ್ ಆದೇಶದ ಮೂಲಕ ಇನ್ನುಮುಂದಾದರೂ ನ್ಯಾಯಾಂಗ ವ್ಯವಸ್ಥೆಯ ಕಚೇರಿಗಳಲ್ಲಿ ಬಾಬಾ ಸಾಹೇಬರ ಭಾವ ಚಿತ್ರ ಅಳವಡಿಸಬೇಕು ಎಂಬ ಒತ್ತಾಯದೊಂದಿಗೆ ಇಲ್ಲಿ ಕೆಲ ವಿಚಾರಗಳನ್ನು ನಾನು ಪ್ರಸ್ತಾಪ ಮಾಡುತ್ತೇನೆ.
ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸುವುದು ಕೇವಲ ನ್ಯಾಯಾಲಯಗಳಿಗಷ್ಟೇ ಸಾಕಾ? ಈಗಲೂ ಕೆಲವು ಖಾಸಗಿ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲೂ ಅಂಬೇಡ್ಕರ್ ಭಾವಚಿತ್ರ ಅಳವಡಿಸಿಲ್ಲ. ಕೇವಲ ರಾಷ್ಟ್ರೀಯ ಹಬ್ಬದ ದಿನ ಮಾತ್ರ ಭಾವಚಿತ್ರ ತೋರಿಸಿ ಮಿಕ್ಕಂತೆ ಮರೆತು ಬಿಡುತ್ತಾರೆ.
ಇದನ್ನೂ ಓದಿ: B S Shivanna Column: ಎರಡು ವರ್ಷಗಳ ಗ್ಯಾರಂಟಿ ಸಾಕಾರ
ಹೀಗಾಗಿ ಶಾಲಾ, ಕಾಲೇಜು, ವಿವಿಗಳಲ್ಲೂ ಅಂಬೇಡ್ಕರ್ ಭಾವಚಿತ್ರ ಅಳವಡಿಸುವುದು ಕಡ್ಡಾಯ ವಾಗಬೇಕು. ಅಂಬೇಡ್ಕರ್ ಭಾವಚಿತ್ರ ಪ್ರದರ್ಶನ ಮಾಡುವುದು ಮಾತ್ರವಲ್ಲ, ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಮುನ್ನುಡಿ ಓದುವ ಕೆಲಸವೂ ಆಗಬೇಕು. ಆಧುನಿಕ ಭಾರತದ ತಳಹದಿ ಯೇ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವಾಗಿದೆ.
ಹೀಗಾಗಿ ಗುಡಿ, ಚರ್ಚು, ಮಸೀದಿ, ಬಸದಿ, ಗುರುದ್ವಾರಗಳಲ್ಲೂ ಅಂಬೇಡ್ಕರ್ ಭಾವಚಿತ್ರ ಅಳವಡಿಸ ಬೇಕು. ಗುಡಿಗಳಲ್ಲಿ ಭಗವದ್ಗೀತೆ ಇರುವ ಹಾಗೆ ಸಂವಿಧಾನದ ಪ್ರತಿಯೂ ಇರಬೇಕು. ಅಲ್ಲಿಯ ಅರ್ಚಕರು ಪೂಜೆ ಆರಂಭಿಸುವುದಕ್ಕೂ ಮೊದಲು ಸಂವಿಧಾನ ಮುನ್ನಡಿ ಓದಿ ಪ್ರಾರ್ಥನೆ ಸಲ್ಲಿಸಬೇಕು. ಅದೇ ರೀತಿ ಚರ್ಚ್ಗಳಲ್ಲಿ ಫಾದರ್ಗಳು ಬೈಬಲ್ ಓದುವುದಕ್ಕೂ ಮೊದಲು ಸಂವಿಧಾನದ ಮುನ್ನುಡಿ ಓದುವಂತಾಗಬೇಕು.
ಮಸೀದಿಯಲ್ಲಿ ಮುಲ್ಲಾ, ಮೌಲ್ವಿಗಳು ಕುರಾನ್ ಪಠಣ ಮಾಡುವುದಕ್ಕೂ ಮೊದಲು ಸಂವಿಧಾನದ ಮುನ್ನುಡಿಯನ್ನು ಪಠಣ ಮಾಡಬೇಕು. ಅದೇ ರೀತಿ ಜೈನ ಬಸದಿ, ಗುರುದ್ವಾರಗಳಲ್ಲೂ ಸಂವಿ ಧಾನದ ಮುನ್ನುಡಿಗೆ ಮೊದಲ ಆದ್ಯತೆ ನೀಡಿ ನಂತರ ಧಾರ್ಮಿಕ ಆಚರಣೆ ಆರಂಭಿಸುವುದು ಕಡ್ಡಾಯವಾಗಬೇಕು. ಕರ್ನಾಟಕ ಸರಕಾರವೇ ಸಂವಿಧಾನದ ಪ್ರತಿಗಳನ್ನು ಉಚಿತವಾಗಿ ದೇವಾ ಲಯ, ಚರ್ಚ್, ಮಸೀದಿ, ಬಸದಿ, ಗುರುದ್ವಾರಗಳಿಗೆ ಉಚಿತವಾಗಿ ಪೂರೈಕೆ ಮಾಡಬೇಕು.

ಜತೆಗೆ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಸಂವಿಧಾನದ ಮುನ್ನುಡಿ ಪಠಣ ಮಾಡುವು ದನ್ನು ಕಡ್ಡಾಯಗೊಳಿಸಬೇಕು ಎಂದು ನಾನು ಈ ಮೂಲಕ ಒತ್ತಾಯ ಮಾಡುತ್ತೇನೆ. ಬಿಜೆಪಿ ಮುಖಂಡರು ಪ್ರತಿನಿತ್ಯ ದೇಶದ ಒಂದಲ್ಲ ಒಂದು ಕಡೆಗಳಲ್ಲಿ ಭಾರತೀಯ ಸಂವಿಧಾನದ ವಿರುದ್ಧ ಮಾತನಾಡುತ್ತಿದ್ದಾರೆ.
ಅಂಬೇಡ್ಕರ್ ಅವರಿಗೆ ಅವಮಾನ ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಸಂವಿಧಾನದ ವಿರುದ್ಧ ಮಾತನಾಡುವುದು ಬಿಜೆಪಿ ಮುಖಂಡರಿಗೆ, ಬಿಜೆಪಿ ಸಂಸದರಿಗೆ ಅಭ್ಯಾಸವಾಗಿ ಹೋಗಿದೆ. ಸಂವಿಧಾನವನ್ನು ನಿಂದನೆ ಮಾಡಿದರೂ, ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದರೂ ಬಿಜೆಪಿ ಹೈಕಮಾಂಡ್ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸುವುದಿಲ್ಲ. ಕನಿಷ್ಠ ಎಚ್ಚರಿಕೆಯನ್ನೂ ನೀಡುವುದಿಲ್ಲ. ಮನುವಾದವನ್ನು ಪುನರುತ್ಥಾನ ಮಾಡುವ ಚಿಂತನೆಯಲ್ಲಿರುವ ಬಿಜೆಪಿ ಮುಖಂಡ ರಿಗೆ ಸಂವಿಧಾನ, ಅಂಬೇಡ್ಕರ್ ಬೇಕಾಗಿಲ್ಲ.
ಬಿಜೆಪಿ ಮುಖಂಡರಿಗೆ ಧೈರ್ಯವಿದ್ದರೆ ಆರ್ಎಸ್ಎಸ್ ಕಚೇರಿಗಳಲ್ಲಿ, ಶ್ರೀರಾಮ ಸೇನೆ, ವಿಎಚ್ಪಿ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸುವಂತೆ ಸಲಹೆ ನೀಡಲಿ. ಆರ್ಎಸ್ಎಸ್ ಅಭ್ಯಾಸಕ್ಕೆ ಬರುವ ಪ್ರತಿಯೊಬ್ಬ ಸ್ವಯಂಸೇವಕನಿಗೆ ಸಂವಿಧಾನದ ಮುನ್ನುಡಿ ಪಠಣ ಮಾಡು ವುದು ಕಡ್ಡಾಯ ಎಂದು ನಿಯಮ ರೂಪಿಸಲಿ. ’ಕೇಶವ ಕೃಪಾ’ಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಿ ತೋರಿಸಿ ನೋಡೋಣ!
ದೇಶದ ಗೃಹ ಸಚಿವ ಅಮಿತ್ ಶಾ ಅವರು ತುಂಬಿದ ರಾಜ್ಯಸಭೆಯಲ್ಲಿ ಹೇಳಿದ್ದ ಮಾತುಗಳನ್ನು ನೆನಪಿಸಿಕೊಳ್ಳಿ. ’ಅಂಬೇಡ್ಕರ್ ಎಂಬುದು ಈಗ ಫ್ಯಾಷನ್ ಆಗಿಬಿಟ್ಟಿದೆ. ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಬರೀ ಅಂಬೇಡ್ಕರ್. ಇಷ್ಟು ದೇವರ ನಾಮಸ್ಮರಣೆ ಮಾಡಿದ್ದರೆ ಏಳೇಳು ಜನ್ಮ ಸ್ವರ್ಗಕ್ಕೆ ಹೋಗುತ್ತಿದ್ದರು’ ಎಂದು ವ್ಯಂಗ್ಯ ಮಾಡಿದ್ದರು. ಅಮಿತ್ ಶಾ ಅವರ ಕೀಳು ಅಭಿರುಚಿಯ ಈ ಮಾತು ಅವರ ಮನಸ್ಥಿತಿಯನ್ನು ತೆರೆದಿಟ್ಟಿತ್ತು. ಇದರಿಂದಂಲೇ ಗೊತ್ತಾಗುತ್ತದೆ ಅಂಬೇಡ್ಕರ್ ಹಾಗೂ ಸಂವಿಧಾನದ ಮೇಲೆ ಬಿಜೆಪಿಗೆ ಇರುವ ಅಭಿಮಾನ. ’ಇಂಗ್ಲಿಷ್ ಮಾತನಾಡುತ್ತಿದ್ದರೆ ನನಗೆ ನಾಚಿಕೆಯಾಗುತ್ತದೆ’ ಎಂದು ಅಮಿತ್ ಶಾ ಹೇಳಿದ್ದಾರೆ.
ಆದರೆ ಅವರ ಮಕ್ಕಳು, ಮೊಮ್ಮಕ್ಕಳು ಯಾವ ಭಾಷೆ ಮಾತನಾಡುತ್ತಾರೆ. ಯಾವ ಶಾಲೆಗೆ ಹೋಗು ತ್ತಾರೆ ಎಂಬ ಬಗ್ಗೆಯೂ ಅವರು ಮಾತನಾಡಬೇಕಿದೆ. ಉದಾರೀಕರಣ, ಖಾಸಗೀಕರಣ, ಜಾಗತೀಕರಣ ಒಪ್ಪಂದಕ್ಕೆ ಸಹಿಹಾಕಿ ಈಗ ಇಂಗ್ಲಿಷ್ ಮಾತನಾಡುವುದಿಲ್ಲ ಎಂದರೆ ಅವರಿಗೆ ನಿಜಕ್ಕೂ ನಾಚಿಕೆ ಯಾಗಬೇಕು.
ಅಮಿತ್ ಶಾ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಕ್ಕ ಉತ್ತರವನ್ನೇ ನೀಡಿದ್ದಾರೆ. ಬಿಜೆಪಿಯವರ ಮನೋಭಾವ ಯಾವಾಗಲೂ ಅಂಬೇಡ್ಕರ್ ವಾದ ಹಾಗೂ ಸಂವಿಧಾನಕ್ಕೆ ವಿರೋಧಿ ಯಾಗಿರುತ್ತದೆ. ದೇಶಾದ್ಯಂತ ಮನುವಾದವನ್ನು ಹಬ್ಬಿಸುವುದು ಬಿಜೆಪಿಯವರ ಉದ್ದೇಶವಾಗಿದೆ. ಇಂತಹ ಸಂದರ್ಭದಲ್ಲಿ ಅಹಿಂದ. ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಜನರು ಸದಾ ಎಚ್ಚರಿಕೆ ಯಿಂದ ಇರಬೇಕು. ಅಂಬೇಡ್ಕರವಾದದ ಬಗ್ಗೆ ಹೆಚ್ಚೆಚ್ಚು ತಿಳಿವಳಿಕೆ ಹೊಂದಬೇಕು. ಸಂವಿಧಾನ ವನ್ನು ಅಭ್ಯಾಸ ಮಾಡಬೇಕು. ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಹೈಕೋರ್ಟ್ ಆದೇಶ ನೀಡುವಂತಹ ಪರಿಸ್ಥಿತಿ ಬರಬಾರದು.
ಲೇಖಕರು : ಡಾ.ರಾಮ್ ಮನೋಹರ್ ಲೋಹಿಯಾ ವಿಚಾರ
ವೇದಿಕೆ ಅಧ್ಯಕ್ಷರು