ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ನಿಮ್ಮೂರಿನ ಹೆಸರು ಹೇಗೆ ಹುಟ್ಟಿತು ?

ಉಡುಪಿ ಎಂಬ ಪ್ರಸಿದ್ಧ ಊರಿನ ಹೆಸರಿನ ಹಿಂದೆ ಹಲವು ಕಥೆಗಳಿದ್ದು, ಇನ್ನೂ ಒಮ್ಮತಕ್ಕೆ ಬಂದಂತಿಲ್ಲ. ಇನ್ನು, ಕೆಲವು ಹಳ್ಳಿಗಳ ಮತ್ತು ಪಟ್ಟಣಗಳ ಹೆಸರಿನ ಮೂಲವನ್ನು ಹುಡುಕುತ್ತಾ ಹೊರಟರೆ, ಬಹಳ ಕುತೂಹಲಕಾರಿ ಮತ್ತು ಕೆಲವು ಬಾರಿ ತಮಾಷೆ ಎನಿಸುವ ವಿಷಯಗಳನ್ನು ಕಾಣಬಹುದು. ಅಪರೂಪಕ್ಕೆ ಒಮ್ಮೊಮ್ಮೆ ಅಭಾಸ ಎನಿಸುವ ವಿಚಾರವೂ ಎದುರಾಗಬಹುದು- ಹುಸ್ಕೂರು ಎಂಬ ಹೆಸರಿನ ಹಳ್ಳಿಯವರು ಅದು ಧ್ವನಿಸುವ ಅರ್ಥದಿಂದ ಬೇಸತ್ತು, ಹೆಸರನ್ನೇ ಬದಲಿಸಿದ್ದುಂಟು!

ನಿಮ್ಮೂರಿನ ಹೆಸರು ಹೇಗೆ ಹುಟ್ಟಿತು ?

ಶಶಿಧರ ಹಾಲಾಡಿ ಶಶಿಧರ ಹಾಲಾಡಿ Jul 11, 2025 9:54 AM

ಶಶಾಂಕಣ

shashidhara.halady@gmail.com

ಕೆಲವು ಊರುಗಳ ಹೆಸರನ್ನು ಸ್ಪಷ್ಟವಾಗಿ ವಿವರಿಸಿ ಹೇಳುವುದು ಕಷ್ಟ ಎಂಬುದಕ್ಕೆ ಒಂದು ಉದಾಹರಣೆ ಎಂದರೆ, ನಮ್ಮ ಹಳ್ಳಿಯಾದ ಹಾಲಾಡಿ. ‘ಅಡಿ’ ಎಂದರೆ ಸ್ಥಳ ಎಂಬುದರಲ್ಲಿ ಅನುಮಾನವಿಲ್ಲ; ಆದರೆ ಹೆಸರಿನ ಮೊದಲ ಭಾಗವನ್ನು ವಿಭಿನ್ನವಾಗಿ ಅರ್ಥೈಸಲಾಗಿದೆ.

ಕೆಲವರಿಗೆ ಈ ಪ್ರಶ್ನೆಗೆ ಉತ್ತರಿಸುವುದು ಬಲು ಸುಲಭ. ಅರಸೀಕೆರೆ ಎಂಬ ಹೆಸರಿನ ಮೂಲವು, ಹಿಂದಿನ ಕಾಲದಲ್ಲಿ ಅರಸಿಯೊಬ್ಬಳು ಕಟ್ಟಿದ ಕೆರೆಯಿಂದಾಗಿ ಬಂದಿದೆ ಎಂದು ಸುಲಭವಾಗಿ ಹೇಳಬಹುದು. ಆದರೆ, ಎಲ್ಲಾ ಹಳ್ಳಿಗಳ, ಊರುಗಳ ಹೆಸರು ಅಷ್ಟು ಸುಲಭ ನಿಷ್ಪತ್ತಿಗೆ ಸಿಲುಕುವು ದಿಲ್ಲ.

ಉಡುಪಿ ಎಂಬ ಪ್ರಸಿದ್ಧ ಊರಿನ ಹೆಸರಿನ ಹಿಂದೆ ಹಲವು ಕಥೆಗಳಿದ್ದು, ಇನ್ನೂ ಒಮ್ಮತಕ್ಕೆ ಬಂದಂತಿಲ್ಲ. ಇನ್ನು, ಕೆಲವು ಹಳ್ಳಿಗಳ ಮತ್ತು ಪಟ್ಟಣಗಳ ಹೆಸರಿನ ಮೂಲವನ್ನು ಹುಡುಕುತ್ತಾ ಹೊರಟರೆ, ಬಹಳ ಕುತೂಹಲಕಾರಿ ಮತ್ತು ಕೆಲವು ಬಾರಿ ತಮಾಷೆ ಎನಿಸುವ ವಿಷಯಗಳನ್ನು ಕಾಣಬಹುದು. ಅಪರೂಪಕ್ಕೆ ಒಮ್ಮೊಮ್ಮೆ ಅಭಾಸ ಎನಿಸುವ ವಿಚಾರವೂ ಎದುರಾಗಬಹುದು- ಹುಸ್ಕೂರು ಎಂಬ ಹೆಸರಿನ ಹಳ್ಳಿಯವರು ಅದು ಧ್ವನಿಸುವ ಅರ್ಥದಿಂದ ಬೇಸತ್ತು, ಹೆಸರನ್ನೇ ಬದಲಿಸಿದ್ದುಂಟು!

ಇನ್ನೂ ಕೆಲವು ಬಾರಿ ಈ ಚಟುವಟಿಕೆಯು, ಅನಾದಿ ಕಾಲದಿಂದ ಸ್ಥಳೀಯರಿಗೆ ನೆನಪಿರುವ ಹೆಸರಿನ ನಿಷ್ಪತ್ತಿಯನ್ನು, ಈಚಿನ ತಲೆಮಾರು ಹೊಸದಾಗಿ ತಿಳಿಯುವ ಪ್ರಕ್ರಿಯೆಯೂ ಹೌದು. ಎಷ್ಟೋ ಬಾರಿ ಸರಳ ಎನಿಸುವ ಊರಿನ ಹೆಸರು, ಬೇರೊಂದೇ ಪದನಿಷ್ಪತ್ತಿಯನ್ನು ಹೊಂದಿರಬಹುದು; ಇನ್ನು ಕೆಲವು ಬಾರಿ ತೀರಾ ಸಂಕೀರ್ಣ ಪದನಿಷ್ಪತ್ತಿ ಎಂದು ಮೇಲ್ನೋಟಕ್ಕೆ ತೋರುವ ಹೆಸರುಗಳ ಅರ್ಥ ಹುಡುಕಿದರೆ ಸರಳ ಎನಿಸಬಹುದು.

ಕೆ.ಆರ್.ನಗರ, ಕನಕಪುರ, ರಾಮನಗರ ಎಂಬ ಆಧುನಿಕ ಹೆಸರಿನ ಊರುಗಳ ಹಳೆಯ ಹೆಸರನ್ನು ಹುಡುಕಿದರೆ, ಜನಪದ ಅಥವಾ ಐತಿಹಾಸಿಕ ಕಥನವೊಂದು ತೆರೆದುಕೊಳ್ಳುತ್ತದೆ; ಕೆಲವು ಬಾರಿ ವಸಾಹತುಶಾಹಿ ದಬ್ಬಾಳಿಕೆಯ ಹಿನ್ನೆಲೆಯೂ ಅನಾವರಣಗೊಳ್ಳಬಹುದು! ಕ್ಲೋಸ್‌ಪೇಟೆ ಎಂಬ ಹೆಸರು ರಾಮನಗರವಾಗಿದ್ದನ್ನು ಗಮನಿಸಿ. ಆದರೆ, ಕೆಲವು ಊರುಗಳ ಹೆಸರಿನ ಮೂಲ ಅದೆಷ್ಟು ಪುರಾತನ ಅಥವಾ ಅಪಭ್ರಂಶಗೊಂಡಿದೆ ಎಂದರೆ, ಜಪ್ಪಯ್ಯ ಎಂದರೂ ಸ್ಪಷ್ಟ ಅರ್ಥ ಹೊಳೆ ಯದೇ ಇರಬಹುದು.

ಇದನ್ನೂ ಓದಿ: Shashidhara Halady Column: ಬೆಲ್ಲ ಬೆರೆಸಿದ ಸಾಂಬಾರು ಗೊತ್ತೇ ನಿಮಗೆ ?

ನಮ್ಮೂರಿನ ಹತ್ತಿರ ಜನ್ನಾಡಿ ಎಂಬ ಹಳ್ಳಿಯಿದೆ. ಮೇಲ್ನೋಟಕ್ಕೆ ಅದು ‘ಜೈನರು ಇದ್ದ ಜಾಗ’ ಎಂಬ ಅರ್ಥ ಕೊಡುತ್ತದೆ. ಕುಂದಗನ್ನಡದಲ್ಲಿ ‘ಅಡಿ’ ಎಂದರೆ ಒಂದು ಜಾಗ, ತಾಣ ಎಂಬರ್ಥ. ಆದರೆ ಅಲ್ಲಿ ಈಗ ಜೈನರು ಇಲ್ಲ- ಆ ಸುತ್ತಲೆಲ್ಲೂ ಇಂದು ಜೈನರ ವಸತಿ ಇಲ್ಲ. ಬಹು ಹಿಂದೆ ಅಲ್ಲಿ ಜೈನರು ವಾಸ ವಿದ್ದಿರಬೇಕು; ಅವರು ಆ ಪ್ರದೇಶವನ್ನು ತೊರೆದು ಹೋಗಿರಬಹುದು ಅಥವಾ ಸುತ್ತಲೂ ಇದ್ದ ಪ್ರಭಾವಿ ಧರ್ಮಕ್ಕೆ ಮತಾಂತರ ಹೊಂದಿರಬಹುದು- ಹೊಯ್ಸಳ ರಾಜ ಬಿಟ್ಟಿದೇವನು ಜೈನಮತ ತೊರೆದು, ರಾಮಾನುಜಾಚಾರ್ಯರ ಪ್ರಭಾವದಿಂದ ವೈಷ್ಣವ ಮತಕ್ಕೆ ಸೇರಿಕೊಂಡ ಪ್ರಖ್ಯಾತ ಉದಾ ಹರಣೆಯೇ ಇದೆಯಲ್ಲ- ಆ ಮಹಾರಾಜನ ಜತೆಯಲ್ಲೇ, ಸಾಕಷ್ಟು ಸಂಖ್ಯೆಯ ಅಧಿಕಾರಿಗಳು, ಸೈನಿಕರು, ಜನಸಾಮಾನ್ಯರು ಸಹ ಜೈನಮತ ತೊರೆದಿದ್ದರು.

ಯಾರಿಗ್ಗೊತ್ತು, ಆ ಸಮಯದಲ್ಲೇ ಈ ‘ಜೈನಡಿ‘ (ಜನ್ನಾಡಿ) ಯಲ್ಲಿದ್ದ ಜೈನರು ಬದಲಾಗಿರಲೂ ಬಹುದು. ಹಳ್ಳಿಯ ಹೆಸರು ಮಾತ್ರ ಜನ್ನಾಡಿಯಾಗಿ ಈಗಲೂ ಉಳಿದುಕೊಂಡಿದೆ. ಜನ್ನಾಡಿಯ ಈಶಾನ್ಯ ದಿಕ್ಕಿಗೆ ಸಾಗಿದರೆ ‘ಸೌಡ’ ಎಂಬ ಹಳ್ಳಿಯಿದೆ. ಆ ಹೆಸರಿನ ಮೂಲವನ್ನು ತಿಳಿದುಕೊಳ್ಳಲು ಎಷ್ಟು ಕಷ್ಟಪಟ್ಟರೂ ಸಾಧ್ಯವಾಗಲಿಲ್ಲ. ಆ ಊರಿನ ಪಕ್ಕದಲ್ಲಿ ಹರಿಯುವ ವಾರಾಹಿ ನದಿಯನ್ನು ದಾಟಿದರೆ ದೊರೆಯುವ ‘ಶಂಕರನಾರಾಯಣ’ ಎಂಬ ಊರಿನ ಹೆಸರು ಮಾತ್ರ ಬಹಳ ಕುತೂಹಲ ಕಾರಿ. ಎರಡು ಹೆಸರುಗಳನ್ನು ಸಂಯೋಜಿಸಿದಾಗ ಉಂಟಾದ ಶಬ್ದವೇ ಆ ಊರಿನ ಹೆಸರು ಎಂದು ಹೊಸದಾಗಿ ಕೇಳಿದವರಿಗೂ ಅರ್ಥವಾಗುವಷ್ಟು ಸ್ಪಷ್ಟವಾಗಿದೆ ಆ ಹೆಸರು- ಅದೂ ನಿಜವೇ- ಶಂಕರ ಮತ್ತು ನಾರಾಯಣ (ಹರಿಹರ) ದೇವರುಗಳ ದೇಗುಲ ಅಲ್ಲಿರುವುದರಿಂದಾಗಿ ‘ಶಂಕರನಾರಾಯಣ’ ಎಂಬ ಹೆಸರು ಅಧಿಕೃತ ದಾಖಲೆಗಲ್ಲಿ ನಮೂದಾಗಿ, ಪ್ರಚುರಗೊಂಡಿದೆ.

ಆದರೆ ಅಲ್ಲಿಗೆ ಹಿಂದೆ ಬೇರೊಂದೇ ಹೆಸರಿತ್ತು! ಮೂರು ರಸ್ತೆ ಕೂಡುವ ಆ ಜಾಗಕ್ಕೆ ‘ಗೋಳಿ ಕಟ್ಟೆ’ ಎಂಬ ಧ್ವನಿಪೂರ್ಣ ಹೆಸರಿತ್ತು. ಗೋಳಿ ಮರ (ಗೋಣಿ ಮರ)ವು ಅಲ್ಲಿ ಪ್ರಧಾನವಾಗಿದ್ದು, ಅಲ್ಲಿ ಸಂತೆಯೂ ನಡೆಯುತ್ತಿದ್ದುದರಿಂದ, ಆ ಹೆಸರು ಜನಪದರ ಬಾಯಲ್ಲಿ ರೂಪುಗೊಂಡಿರಬೇಕು.

ಅಲ್ಲಿರುವ ಶಂಕರನಾರಾಯಣ ದೇಗುಲವೂ ಬಹಳ ಪುರಾತನ. ಕೆರೆಯ ಮೇಲೆ ದೇವತೆಗಳಿಂದ ನಿರ್ಮಾಣಗೊಂಡ ದೇಗುಲ ಎಂಬ ವಿಶೇಷಣ ಹೊಂದಿರುವ ಆ ದೇಗುಲ ಪುರಾತನ ಕಾಲದಿಂದಲೂ ಇದೆ. ಪ್ರಾಗೈತಿಹಾಸಿಕ ಕಾಲದ ಕೆಲವು ಕುರುಹುಗಳನ್ನೊಳಗೊಂಡ ಕಥೆಯೊಂದು ಸಹ ಆ ದೇಗುಲದ ಮೂಲದೊಂದಿಗೆ ಗುರುತಿಸಿಕೊಂಡಿದೆ.

ಬೆಟ್ಟದ ಮೇಲೆ ಇದ್ದ ದೇವರು, ಅಲ್ಲಿಂದ ಕೆಳಗೆ ಹಾರಿದನು, ದೇವರು ಹಾರಿದ ಹೆಜ್ಜೆ ಗುರುತು ದೇಗುಲದ ಎದುರಿನ ವಿಶಾಲ ಬಂಡೆ ಹಾಸಿನ ಮೇಲೆ ಒಡಮೂಡಿದೆ ಎಂಬ ನಂಬಿಕೆ. ಅಲ್ಲಿಂದ ಹರದಾರಿ ದೂರದ ಸುತ್ತಳತೆಯಲ್ಲಿ, ಒಟ್ಟು ಐದು ಶಂಕರನಾರಾಯಣ (ಹರಿಹರ) ದೇಗುಲಗಳಿದ್ದು, ಬಹು ಹಿಂದೆ ಉದ್ಭವಿಸಿರಬಹುದಾದ ಪಂಥ ಸಂಘರ್ಷ ಮರೆಸಲು ರೂಪುಗೊಂಡ ಸಮನ್ವಯದ ಪ್ರಯತ್ನವನ್ನು ನೆನಪಿಸುತ್ತದೆ.

ಕರಾವಳಿಯ ಸಪ್ತ ಪುರಾತನ ಕ್ಷೇತ್ರಗಳಲ್ಲಿ, ಗೋಕರ್ಣವನ್ನೂ ಒಳಗೊಂಡು ಈ ಕ್ಷೇತ್ರಕ್ಕೆ ಸ್ಥಾನವಿದೆ ಎಂದ ಮೇಲೆ, ಕನಿಷ್ಠ 2000 ವರ್ಷಗಳಿಗೂ ಹಿಂದಿನ ಇತಿಹಾಸ ಈ ಸ್ಥಳಕ್ಕಿದೆ ಎನ್ನಬಹುದು. ಆದರೆ, ಹಲವು ಹಕ್ಕಿಗಳಿಗೆ ಆಶ್ರಯ ನೀಡುವ ಗೋಳಿ ಮರವನ್ನು ನೆನಪಿಸುವ ‘ಗೋಳಿಕಟ್ಟೆ’ ಎಂಬ ಸುಂದರ ಹೆಸರು ಮಾತ್ರ ಇಂದೂ ಮುಂದುವರಿಯಬೇಕಿತ್ತು ಎಂಬ ಭಾವ ನನ್ನ ಮನದಾಳದಲ್ಲಿ ಕುಳಿತುಬಿಟ್ಟಿದೆ.

ಕೆಲವು ಊರುಗಳ ಹೆಸರನ್ನು ಸ್ಪಷ್ಟವಾಗಿ ವಿವರಿಸಿ ಹೇಳುವುದು ಕಷ್ಟ ಎಂಬುದಕ್ಕೆ ಒಂದು ಉದಾಹರಣೆ ಎಂದರೆ, ನಮ್ಮ ಹಳ್ಳಿಯಾದ ಹಾಲಾಡಿ. ‘ಅಡಿ’ ಎಂದರೆ ಸ್ಥಳ ಎಂಬುದರಲ್ಲಿ ಅನುಮಾನವಿಲ್ಲ; ಆದರೆ ಹೆಸರಿನ ಮೊದಲ ಭಾಗವನ್ನು ವಿಭಿನ್ನವಾಗಿ ಅರ್ಥೈಸಲಾಗಿದೆ. ‘ಹಾಲು’ ಇರುವ ‘ಅಡಿ’ (ಸ್ಥಳ) ಎಂದು ಅಭಿಮಾನದಿಂದ ಈಚೆಗೆ ಕೆಲವರು ಪದ ನಿಷ್ಪತ್ತಿಯನ್ನು ಮಾಡಿ ದ್ದಾರೆ.

ಆದರೆ, ಹಿಂದೆ ‘ಹಾಳು’ ‘ಅಡಿ’ ಎಂದು ಕೆಲವರು ಅರ್ಥೈಸಿದ್ದುಂಟು- ಅಂದರೆ, ಜನರು ವಾಸವಿಲ್ಲದೇ ಇರುವ, ಹಾಳುಬಿದ್ದ ಜಾಗ ಎಂದು. ಆದರೆ, ಇದನ್ನು ಎಲ್ಲರೂ ಒಪ್ಪುತ್ತಿಲ್ಲ. ಏಕೆಂದರೆ, ಅಲ್ಲಿ ಹಾಳು ಬಿದ್ದ ಐತಿಹಾಸಿಕ ಜಾಗಗಳನ್ನು ಗುರುತಿಸಲು ಸಾಧ್ಯವಾಗಿಲ್ಲ, ಬದಲಿಗೆ ಎಲ್ಲಾ ಕಡೆ, ಕಾಡು, ಗುಡ್ಡ ಗಳೇ ಇವೆ. ‘ಹಲ’ರು ಎಂಬ ಐತಿಹಾಸಿಕ ರಾಜರಿಗೂ, ಈ ಸ್ಥಳಕ್ಕೂ ಸಂಬಂಧ ಕಲ್ಪಿಸಬಹು ದಾದ ಯಾವುದೇ ಪುರಾವೆಗಳು ದೊರಕಿಲ್ಲ.

ಕೋಟೆ-ಕೊತ್ತಳಗಳು, ಪುರಾತನ ಮನೆಗಳು ಸಹ ಇಲ್ಲಿಲ್ಲ. ಹಾಲೆ ಮರಗಳು ಇರುವ ತಾಣ ಎಂಬ ಪ್ರಸ್ತಾಪವೂ ಬಂದಿದೆ. ಆದರೆ, ಸರ್ವಸಮ್ಮತ ಎನಿಸುವ ಪದನಿಷ್ಪತ್ತಿ ಇನ್ನೂ ಮೂಡಿಲ್ಲ. ಇಲ್ಲಿಗೆ ಎರಡು ಕಿ.ಮೀ. ದೂರದಲ್ಲಿ, ಅಂದರೆ ನಮ್ಮ ಮನೆಯ ಹತ್ತಿರವೇ ಇರುವ ‘ಕೋಟೆಹಕ್ಲು’ ಎಂಬ ಜಾಗಕ್ಕೆ ಇನ್ನೂ ಪುರಾತನವಾದ ಇತಿಹಾಸವಿದೆ.

ಬಾರಕೂರು ಅರಸರ ಸಾಮಂತನಾಗಿದ್ದ ಮುದ್ದಳರಾಜ ಎಂಬಾತನು ಇಲ್ಲಿ ಆಳ್ವಿಕೆ ನಡೆಸುತ್ತಿದ್ದ ನಂತೆ. ಆದ್ದರಿಂದ ಈ ಪ್ರದೇಶಕ್ಕೆ ಮುದುವೇರಿ ಅಥವಾ ಮುದೂರಿ ಎಂಬ ಹೆಸರು ಬಂದಿದೆ. ಈ ಪ್ರದೇಶದ ದಕ್ಷಿಣ ದಿಕ್ಕಿನಲ್ಲಿರುವ ಚೋರಾಡಿ ಎಂಬ ಹಳ್ಳಿಯ ಹೆಸರಿನ ಪದನಿಷ್ಪತ್ತಿಯು ಸ್ಪಷ್ಟವಿದೆ- ಬಹು ಹಿಂದೆ ಇಲ್ಲಿಗೆ ಬಂದ ಚಾರುರತಿ ಎಂಬ ನಾಗಕನ್ಯೆಯು ನೆಲೆ ನಿಂತ ಜಾಗ (ಅಡಿ) ಇದು ಎಂಬ ನಂಬಿಕೆ.

ಇದೇ ರೀತಿ, ಚಾರುರತಿ ಎಂಬಾಕೆಯ ಸಹೋದರಿಯರಾದ ಇನ್ನೂ ನಾಲ್ವರು ನಾಗಕನ್ನಿಕೆಯರು ನೆಲೆ ನಿಂತ ಜಾಗಗಳು ಮಂದರ್ತಿ, ದೇವರತಿ, ನಾಗರತಿ ಮತ್ತು ನೀಲರತಿ. ಅಲ್ಲೆಲ್ಲಾ ಇಂದು ನಾಗದೇವತೆಯ (ಅಮ್ಮನವರು) ದೇಗುಲಗಳಿರುವುದು ವಿಶೇಷ. ಈ ಐವರು ನಾಗಕನ್ನಿಕೆಯರಿಗೆ ಬಹು ಪುರಾತನ ಕಾಲದಲ್ಲೇ ಕಾಡಿನ ನಡುವೆ ಪೂಜಾಸ್ಥಳಗಳನ್ನು ನಿರ್ಮಿಸಲಾಗಿತ್ತು ಮತ್ತು ಸ್ಥಳೀಯರು ಪೂಜಿಸುತ್ತಿದ್ದರು.

ಅವೆಲ್ಲವೂ ಈಚಿನ ದಶಕಗಳಲ್ಲಿ ವೈದಿಕ ಪೂಜಾಪದ್ಧತಿಗೆ ಒಳಪಟ್ಟು, ನಾಗಕನ್ನಿಕೆಯರನ್ನು ದುರ್ಗಾಪರಮೇಶ್ವರಿ ಎಂದು ಕರೆದು, ಪೂಜಿಸುವ ಪದ್ಧತಿ ಬೆಳೆದುಬಂದಿದೆ! ಈ ಬೆಳವಣಿಗೆಯೂ, ಆ ಹಳ್ಳಿಗಳ ಹೆಸರಿನಷ್ಟೇ ಕುತೂಹಲಕಾರಿ ಮತ್ತು ಅಧ್ಯಯನಯೋಗ್ಯ ವಿದ್ಯಮಾನ ಎನ್ನಬಹುದು.

ಚಾರುರತಿ ಮತ್ತು ನಾಗರತಿಯರ ದೇಗುಲಗಳಿಂದ ಮುಂದೆ ಸಾಗಿ, ನಾಲ್ಕೈದು ಕಿ.ಮೀ. ಕ್ರಮಿಸಿದರೆ, ‘ತಾರಿಕಟ್ಟೆ’ ಎಂಬ ಪುಟ್ಟ ಹಳ್ಳಿಯಿದೆ. ಅಲ್ಲೊಂದು ದೊಡ್ಡ ಗಾತ್ರದ ‘ತಾರಿ ಮರ’ ಇರುವುದರಿಂದಾಗಿ, ಆ ಮರದ ಬುಡದಲ್ಲಿ ಕಟ್ಟಿದ ಕಟ್ಟೆಯಿಂದಾಗಿ ಹಳ್ಳಿಗೆ ಆ ಹೆಸರು ಬಂದಿರುವುದು ಸ್ಪಷ್ಟ. ವಿಶೇಷ ವೆಂದರೆ, ಅಲ್ಲಿ ಒಂದು ವಿಶಾಲವಾದ ತಾರಿಮರ ಇಂದಿಗೂ ಇದೆ- ನಾನು ಬಾಲ್ಯದಲ್ಲಿ ಕಂಡಾಗಲೂ ಆ ಮರ ಇಷ್ಟೇ ದೊಡ್ಡದಾಗಿ, ವಿಶಾಲವಾಗಿ ಬೆಳೆದುಕೊಂಡಿತ್ತು!

ಆ ಮರದ ಪಕ್ಕದಲ್ಲೇ ಒಂದು ಕಚ್ಚಾ ರಸ್ತೆ ಇದೆ. ಕೆಲವು ವರ್ಷಗಳ ಹಿಂದೆ ಆ ರಸ್ತೆಯಲ್ಲಿ ಸಾಗುತ್ತಿದ್ದ, ಶಿಲೆಕಲ್ಲು ತುಂಬಿದ್ದ ಲಾರಿಯೊಂದು ಆ ಮರಕ್ಕೆ ಡಿಕ್ಕಿ ಹೊಡೆದು, ಮರದ ಕಾಲುಭಾಗ ಕುಸಿದು ಬಿದ್ದರೂ, ಮರ ಪುನಃ ಚಿಗುರಿ ಬೆಳೆದಿದೆ, ಬೆಳೆಯುತ್ತಲೂ ಇದೆ; ಆ ಅಪಘಾತದಲ್ಲಿ ಲಾರಿ ಮಾತ್ರ ಜಖಂ ಆಯ್ತು.

ನಾಗರಿಕ ಮಾನವನು ತೊಂದರೆ ಕೊಡದೇ ಇದ್ದರೆ, ಆ ತಾರಿ ಮರ ಇನ್ನೂ ನೂರು ವರ್ಷ ಅಲ್ಲೇ ಇದ್ದು, ತಾರಿಕಟ್ಟೆ ಎಂಬ ಊರಿನ ಹೆಸರಿನ ಆಧಾರ ಸ್ತಂಭದಂತೆ ನಿಂತಿರುವುದರಲ್ಲಿ ಅನುಮಾನ ವಿಲ್ಲ. ಆದರೆ, ಈ ಆಧುನಿಕ ಮಾನವನನ್ನು ನಂಬುವಂತಿಲ್ಲ- ಆ ಸುತ್ತಲಿನ ಬಂಡೆಗಳನ್ನು ಒಡೆದು, ಕಲ್ಲುಗಳನ್ನು ಪೇಟೆಗೆ ಸಾಗಿಸುವ ಲಾರಿಗಳು ಸಲೀಸಾಗಿ ಚಲಿಸುವ ಉದ್ದೇಶಕ್ಕಾಗಿ, ಅಲ್ಲಿನ ರಸ್ತೆ ಯನ್ನು ಇನ್ನಷ್ಟು ಅಗಲ ಮಾಡುವ ನೆಪದಲ್ಲಿ, ಆ ದೊಡ್ಡ, ವಿಶಾಲ, ಪುರಾತನ, ಸುಂದರ, ಐತಿಹಾಸಿಕ ಮರವನ್ನು ಸದ್ಯದಲ್ಲೇ ಕಡಿದುಹಾಕಿದರೂ ಹಾಕಿಯಾನು!

ತಾರಿಕಟ್ಟೆಯ ಹತ್ತಿರವೇ, ಅರ್ಧ ಕಿ.ಮೀ. ದೂರದಲ್ಲಿ ಅಬ್ಲಿಕಟ್ಟೆ ಎಂಬ ಹಳ್ಳಿಯುಂಟು. ಹಿಂದೆಂದೋ ‘ಅಬ್ಲಿ ಹೂ’ (ಕನಕಾಂಬರ) ಗಳನ್ನು ಮೊದಲ ಬಾರಿ ಬೆಳೆದ ಜಾಗ ಅದಾಗಿರಬೇಕು. ಈ ಅಬ್ಲಿ ಹೂವಿಗೆ ಪೋರ್ಚುಗೀಸರ ನಂಟಿದೆ! ಅಲ್ಲೇ ಮುಂದೆ ತೆಂಕ ಹೊಲ, ಗುಮ್ಮಹೊಲ ಮೊದಲಾದ ಊರುಗಳ ಹೆಸರುಗಳಲ್ಲಿ ಅಡಕಗೊಂಡಿರುವ ‘ಹೊಲ’ ಎಂದರೆ ಭಾರಿ ದಟ್ಟಣೆಯ ಮರಗಳಿರುವ ಕಾಡು. ಅಲ್ಲಿನ್ನೂ ಸ್ವಲ್ಪ ಕಾಡು ಉಳಿದುಕೊಂಡಿದ್ದು, ಊರಿನ ಹೆಸರಿನ ಮರ್ಯಾದೆ ಯನ್ನು ಕಾಪಾಡಿದೆ.

ಇದೇ ಸರಹದ್ದಿನಲ್ಲಿರುವ ‘ಬೆಳ್ವೆ’ ಎಂಬ ಹಳ್ಳಿಯ ಹೆಸರು, ಸನಿಹದಲ್ಲಿ ಹರಿಯುವ ಸೀತಾನದಿಯ ನೀರಿನಿಂದಾಗಿ ಬಂದಿರಬೇಕು. ಈ ಪ್ರದೇಶದಲ್ಲಿ, ‘ಬೆಳ್’ ಪದವನ್ನು ಹೊತ್ತಿರುವ ಊರಿನ ಹೆಸರುಗಳು ನೀರಿನ ಮೂಲವನ್ನು ಸೂಚಿಸುವುದೆಂದು ವಿದ್ವಾಂಸರು ಗುರುತಿಸಿದ್ದಾರೆ.

ಸನಿಹದಲ್ಲಿ ‘ಹೊನ್ನಕಲ್ಲು’ ಎಂಬ ಬಹು ಸುಂದರ ಹೆಸರಿನ ಹಳ್ಳಿ ಇದೆ. ಮೇಲ್ನೋಟಕ್ಕೆ ಇದು ಚಿನ್ನದ ಇರವನ್ನು ಸೂಚಿಸುತ್ತದೆ. ಬಹು ಹಿಂದೆ ಇಲ್ಲಿ ಚಿನ್ನದ ಗಣಿಗಾರಿಕೆ ನಡೆದಿರುವ ಸಾಧ್ಯತೆ ಯುಂಟು. ಹೊನ್ ಪದವನ್ನು ತಮ್ಮ ಊರಿನ ಹೆಸರಿನ ಭಾಗವಾಗಿರಿಸಿಕೊಂಡ ಹಲವು ಊರುಗಳು ನಮ್ಮ ರಾಜ್ಯದಲ್ಲಿರುವುದು ವಿಶೇಷ; ಅಂಥ ಹೆಚ್ಚಿನ ಊರುಗಳ ಬಳಿ ಬಹು ಹಿಂದೆ, ಚಿನ್ನದ ಗಣಿಗಾರಿಕೆ ಸಣ್ಣ ಮಟ್ಟದಲ್ಲಾದರೂ ನಡೆದಿತ್ತು, ನಡೆದಿರಬೇಕು ಎಂದು ತಜ್ಞರು ಗುರುತಿಸಿದ್ದಾರೆ.

ಇನ್ನೂ ವಿಶೇಷವೆಂದರೆ, ಇಂಥ ಹಲವು ಜಾಗಗಳಲ್ಲಿ, ನಂತರದ ಶತಮಾ ಗಳಲ್ಲಿ, ಬ್ರಿಟಿಷರು, ನೆಲದಾಳದಲ್ಲಿ ಸುರಂಗ ತೋಡಿ, ಅಲ್ಲಿ ಚಿನ್ನದ ಅದಿರನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಸಿದ್ದರು! ಭದ್ರಾವತಿ (ಬೆಂಕಿಪುರ, ವಂಕಿಪುರ) ಸನಿಹ ಇರುವ ಹೊನ್ನೇಗುಡ್ಡ ಎಂಬ ಪುಟ್ಟ ಬೆಟ್ಟದಲ್ಲಿ ಚಾರಣ ಮಾಡಿದರೆ, ಆ ಬೆಟ್ಟದ ಗರ್ಭದಲ್ಲಿ ಬ್ರಿಟಿಷರು ತೋಡಿಸಿದ ಸುರಂಗ, ಷಾಫ್ಟ್‌ ಗಳನ್ನು ನೋಡ ಬಹುದು. ಈಚಿನ ವರ್ಷಗಳಲ್ಲಿ ಕುತೂಹಲದಿಂದ ಅಲ್ಲಿಗೆ ಹೋದ ಯುವ ಜನರು, ಆಕಸ್ಮಿಕವಾಗಿ ಬಿದ್ದು ಮೃತರಾಗಿದ್ದರಿಂದ ಆ ಸುರಂಗಗಳ ಬಾಯನ್ನು ಮುಚ್ಚಿಸಲಾಗಿದೆ.

ಹೊನ್ ಎಂಬ ಹೆಸರು ಹೊತ್ತ ಕೆಲವು ಜಾಗ ಗಳಲ್ಲಿ ಚಿನ್ನದ ಶೋಧ ನಡೆದಿತ್ತು ಎಂಬುದಕ್ಕೆ ಇದು ಒಂದು ನಿದರ್ಶನ. ನಮ್ಮ ನಾಡಿನ ಪ್ರತಿ ಹಳ್ಳಿಗೂ, ಊರಿಗೂ ಒಂದೊಂದು ಕಥೆ, ಒಂದೊಂದು ಕಥನ, ಜನಪದ ಹಿನ್ನೆಲೆ ಇದೆ. ನಿಮ್ಮ ಊರಿನ ಹೆಸರಿನ ಹಿಂದೆಯೂ ಕುತೂಹಲಕಾರಿ ಅರ್ಥ, ಪದನಿಷ್ಪತ್ತಿ, ಜನಪದ ಕಥೆ ಅಥವಾ ಪುರಾತನ ವಿದ್ಯಮಾನಗಳ ಹಿನ್ನೆಲೆ ಇರಲೇಬೇಕು. ಅದನ್ನು ಹುಡುಕುತ್ತಾ ಹೋಗುವುದು ಎಂದರೆ, ಅದೊಂದು ಆರೋಗ್ಯಕಾರಿ ಚಟುವಟಿಕೆ; ಮನಸ್ಸಿಗೆ ಕೆಲಸ ಒದಗಿಸಿ, ತೃಪ್ತಿ ನೀಡುವ ಚಟುವಟಿಕೆ ಅದು.