ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Viay Darda Column: ಅಂಕಲ್‌ ಸ್ಯಾಮ್‌ ಆರ್ಡರ್‌ ಆಡಿದರೆ ಮುಗೀತ್‌ !

ಅಫ್ಘಾನಿಸ್ತಾನದ ಯುದ್ಧದ ವೇಳೆ ಪಾಕಿಸ್ತಾನದ ಸೇನೆ ಮತ್ತು ಐಎಸ್‌ಐ ಅಮೆರಿಕಕ್ಕೆ ಚೆನ್ನಾಗಿ ಕೈಕೊಟ್ಟಿ ದ್ದವು. ಆ ಕಹಿನೆನಪು ಅಮೆರಿಕಕ್ಕೆ ಇದೆ. ಅಷ್ಟೇಕೆ, ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದ. ಹೀಗಾಗಿ ಪಾಕಿಸ್ತಾನ ಕಳ್ಳಾಟ ಆಡದಂತೆ ನೋಡಿಕೊಳ್ಳುವುದು ಟ್ರಂಪ್‌ಗೆ ಬಹಳ ಮುಖ್ಯ. ಇದೀಗ ಹೊಸತಾಗಿ ರೂಪುಗೊಳ್ಳುತ್ತಿರುವ ಭೂರಾಜಕೀಯ ವ್ಯವಸ್ಥೆಯಲ್ಲಿ ಪಾಕಿಸ್ತಾನ ತನಗೆ ಅಡ್ಡಿ ಯಾಗದಂತೆ ಟ್ರಂಪ್ ನೋಡಿಕೊಳ್ಳುತ್ತಿದ್ದಾರೆ.

ಅಂಕಲ್‌ ಸ್ಯಾಮ್‌ ಆರ್ಡರ್‌ ಆಡಿದರೆ ಮುಗೀತ್‌ !

ಸಂಗತ

ನಾನೀಗ ವಿದೇಶ ಪ್ರವಾಸದಲ್ಲಿದ್ದೇನೆ. ಹಲವು ದೇಶಗಳನ್ನು ಸುತ್ತುತ್ತಿದ್ದೇನೆ. ಪತ್ರಕರ್ತನಾದ್ದರಿಂದ ಎಲ್ಲೇ ಹೋದರೂ ಜನರು ನನಗೊಂದು ಸಾಮಾನ್ಯ ಪ್ರಶ್ನೆ ಕೇಳುತ್ತಿದ್ದಾರೆ: ‘ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಸೇನಾಪಡೆಯ ಮುಖ್ಯಸ್ಥ ಜನರಲ್ ಮುನೀರ್‌ನನ್ನು ಔತಣಕ್ಕೆ ಕರೆದಿದ್ದೇಕೆ? ಇದರಿಂದ ಭಾರತದ ಮೇಲಾಗುವ ಪರಿಣಾಮವೇನು ಅದಕ್ಕೆ ನಾನು, ‘ಅವರಿಬ್ಬರ ಮಧ್ಯೆ ಏನು ಒಪ್ಪಂದವಾಯಿತು ಎಂಬುದನ್ನು ಟ್ರಂಪ್ ಮತ್ತು ಮುನೀರ್ ಮಾತ್ರ ಹೇಳಲು ಸಾಧ್ಯ ಎನ್ನುತ್ತೇನೆ. ಆದರೆ ಆ ಔತಣ ಎಲ್ಲರನ್ನೂ ಅಚ್ಚರಿಗೊಳಿಸಿದ್ದು ಮಾತ್ರ ನಿಜ.

ಏಕೆಂದರೆ, ಅಮೆರಿಕದ ಇತಿಹಾಸದಲ್ಲಿ ಯಾವುದೇ ಒಬ್ಬ ಅಧ್ಯಕ್ಷ ಇನ್ನೊಂದು ದೇಶದ ಪ್ರಧಾನಿ ಅಥವಾ ಅಧ್ಯಕ್ಷ ಅಧಿಕಾರದಲ್ಲಿರುವಾಗ ಆ ದೇಶದ ಮಿಲಿಟರಿಯ ಮುಖ್ಯಸ್ಥನಿಗೆ ಶ್ವೇತಭವನದಲ್ಲಿ ಔತಣಕೂಟ ಏರ್ಪಡಿಸಿದ ನಿದರ್ಶನ ಇಲ್ಲ. ಟ್ರಂಪ್‌ಗೆ ಇರಾನ್ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನದ ಬೆಂಬಲ ಬೇಕಿದೆ.

ಬೆಂಬಲ ನೀಡುವುದಿಲ್ಲ ಎಂದು ಮುನೀರ್ ಯಾವ ಬಾಯಿಯಲ್ಲಿ ಹೇಳಲು ಸಾಧ್ಯ? ಆಫ್ಟರಾಲ್, ಜಾಗತಿಕ ವ್ಯವಹಾರಗಳಲ್ಲಿ ಅಂಕಲ್ ಸ್ಯಾಮ್ ಆದೇಶ ನೀಡದರೆ ಅದೇ ಅಂತಿಮ. ಮಜಾ ಏನೆಂದರೆ, ಔತಣಕೂಟದ ನಂತರ ಪಾಕಿಸ್ತಾನದ ಸಂಸತ್ತು ಡೊನಾಲ್ಡ್ ಟ್ರಂಪ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು ಎಂದು ನಿರ್ಣಯ ಅಂಗೀಕರಿಸಿದಾಗ ಇಡೀ ಬೆಳವಣಿಗೆ ನಗೆಪಾಟಲಿಗೀಡಾ ಯಿತು.

ಇದನ್ನೂ ಓದಿ: Dr Vijay Darda Column: ಭಾರತದ ಹೀರೋ ಆದ ಅಸಾದುದ್ದೀನ್‌ ಒವೈಸಿ !

ಜನರು ಆಡಿಕೊಂಡು ನಗಲು ಇನ್ನಷ್ಟು ಸರಕು ಒದಗಿಸುವಂತೆ ಟ್ರಂಪ್ ಕೂಡ, ‘ನಾನು ಏನೇ ಮಾಡಿದರೂ ನೊಬೆಲ್ ಪ್ರಶಸ್ತಿ ಮಾತ್ರ ನನಗೆ ಸಿಗೋದಿಲ್ಲ ಎಂದು ಹೇಳಿಕೆ ನೀಡಿದರು. ಇರಾನ್ ಮತ್ತು ಇಸ್ರೇಲ್ ನಡುವಿನ ಬಿಕ್ಕಟ್ಟಿನ ಬಗ್ಗೆ ಚರ್ಚಿಸುವುದಕ್ಕಿಂತ ಮೊದಲು ನಿಮಗೊಂದು ಸಂಗತಿ ಹೇಳಬೇಕು. ನಾನೀಗ ಓಡಾಡುತ್ತಿರುವ ದೇಶಗಳಲ್ಲಿ ಪಾಕಿಸ್ತಾನೀಯರೇ ಆಟೋಮೊಬೈಲ್ ಉದ್ದಿಮೆ ಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಅವರ ನಂತರ ಭಾರತೀಯರಿದ್ದಾರೆ.

ಆದರೆ, ಭಾರತೀಯರು ಮತ್ತು ಪಾಕಿಸ್ತಾನೀಯರ ನಡುವೆ ಬಹಳ ಆಪ್ತವಾದ ಭ್ರಾತೃತ್ವವಿದೆ. ಇಬ್ಬರೂ ಪರಸ್ಪರ ಭಾಯಿ ಭಾಯಿ ರೀತಿ ಬದುಕುತ್ತಿದ್ದಾರೆ. ಪಾಕಿಸ್ತಾನೀಯರನ್ನು ಮಾತನಾಡಿಸಿದರೆ ಜಗಳ ಇರುವುದು ಎರಡು ದೇಶಗಳ ಮಧ್ಯೆ ಅಲ್ಲ, ಎರಡು ದೇಶಗಳ ಸರ್ಕಾರ ಮತ್ತು ರಾಜಕಾರಣಿ ಗಳ ಮಧ್ಯೆ. ದೇಶ ಹಾಗೂ ರಾಜಕೀಯದ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ! ಎನ್ನುತ್ತಾರೆ.

ನಿಜ. ನಾನು ಮಾತನಾಡಿಸಿದ ಕೆಲ ಬುದ್ಧಿವಂತ ಪಾಕಿಸ್ತಾನೀಯರು ಹೇಗೆ ಅಮೆರಿಕವು ಪಾಕಿಸ್ತಾನದ ರಾಜಕೀಯ ವ್ಯವಸ್ಥೆಯನ್ನು ಬಳಸಿಕೊಂಡು ಭಾರತವನ್ನು ಬಗ್ಗಿಸಲು ನಿರಂತರವಾಗಿ ಪ್ರಯತ್ನಿ ಸುತ್ತಾ ಬಂದಿದೆ ಎಂಬುದನ್ನು ಹೇಳಿದರು. ಪಾಕಿಸ್ತಾನಕ್ಕೆ ಅಮೆರಿಕದ ಸರ್ಕಾರ ಭಾರೀ ಪ್ರಮಾಣ ದಲ್ಲಿ ಆರ್ಥಿಕ ನೆರವು ನೀಡುತ್ತಾ ಬಂದಿದೆ. ಅದರಲ್ಲೂ ಪಾಕಿಸ್ತಾನದ ಮಿಲಿಟರಿಗೆ ಮತ್ತು ಗುಪ್ತಚರ ಸಂಸ್ಥೆ ಐಎಸ್ ಐಗೆ ಅಮೆರಿಕ ಹಣದ ಹೊಳೆಯನ್ನೇ ಹರಿಸಿದೆ.

ಆ ಹಣವನ್ನು ಬಳಸಿಕೊಂಡು ಪಾಕಿಸ್ತಾನ ಶಸಾಸಗಳನ್ನು ಖರೀದಿ ಮಾಡಿದೆ. ತಮಾಷೆಯೆಂದರೆ, ಅಮೆರಿಕದ ಕಂಪನಿಗಳಿಗೇ ಹಣ ನೀಡಿ ಶಸಾಸ ಖರೀದಿಸಿದೆ. ಅದರಿಂದ ಅಮೆರಿಕದ ಶಸ್ತ್ರಾಸ್ತ್ರ ವ್ಯಾಪಾರಿ ಕಂಪನಿಗಳಿಗೆ ದೊಡ್ಡ ಲಾಭವಾಗಿದೆ. ಪಾಕಿಸ್ತಾನದ ಮಿಲಿಟರಿ ಜನರಲ್‌ಗಳು ಅಮೆರಿಕ, ಯುರೋಪ್ ಮತ್ತು ಫ್ರಾನ್ಸ್‌ನಂತಹ ದೇಶಗಳಲ್ಲಿ ವೈಭವೋಪೇತ ಬಂಗಲೆಗಳನ್ನು ಖರೀದಿಸಿ ಕೊಂಡು, ತಮ್ಮ ಕುಟುಂಬವನ್ನು ಅಲ್ಲಿರಿಸಿ, ಐಷಾರಾಮಿ ಜೀವನ ನಡೆಸುತ್ತಿದ್ದಾರೆ.

ಈಗೀಗ ಕೆನಡಾ ಮತ್ತು ಆಸ್ಟ್ರೇಲಿಯಾಗಳಲ್ಲೂ ಪಾಕಿಸ್ತಾನಿ ಜನರಲ್‌ಗಳ ಐಷಾರಾಮಿ ಸಂಸಾರ ಗಳಿವೆ. ಹೀಗಾಗಿಯೇ ಪಾಕಿಸ್ತಾನದಲ್ಲಿ ಯಾವುದೇ ನಾಯಕ ನಿಜವಾದ ಪ್ರಜಾಪ್ರಭುತ್ವವನ್ನು ತರಲು ಹೊರಟರೆ ಎಲ್ಲರೂ ಸೇರಿಕೊಂಡು ಅವನನ್ನು ವ್ಯವಸ್ಥಿತವಾಗಿ ಮುಗಿಸಿ ಹಾಕುತ್ತಾರೆ. ಬೆನಜೀರ್ ಭುಟ್ಟೋನಿಂದ ಹಿಡಿದು ನವಾಜ್ ಷರೀಫ್ ಮತ್ತು ಇಮ್ರಾನ್ ಖಾನ್‌ನವರೆಗೆ ಸಾಕಷ್ಟು ಉದಾಹರಣೆ ನೀಡಬಹುದು. ‌ಈಗ ಮತ್ತೊಮ್ಮೆ ಅಂಕಲ್ ಸ್ಯಾಮ್ ಅದೇ ತನ್ನ ಹಳೆಯ ಆಟ ಆಡಲು ಆರಂಭಿಸಿ ದ್ದಾನೆ.

ನನ್ನ ಪ್ರಕಾರ ವಿದೇಶಗಳಲ್ಲಿ ನೆಲೆಸಿರುವ ಪಾಕಿಸ್ತಾನಿ ನಾಗರಿಕರು ಹೇಳುವುದು ಅಕ್ಷರಶಃ ನಿಜ. ಇಲ್ಲವಾದರೆ ಟ್ರಂಪ್ ಏಕೆ ಪಾಕಿಸ್ತಾನದ ಪ್ರಧಾನ ಮಂತ್ರಿಯನ್ನು ಕರೆಯದೆ ಸೇನಾಪಡೆಯ ಮುಖ್ಯಸ್ಥನನ್ನು ಔತಣಕ್ಕೆ ಕರೆಯುತ್ತಿದ್ದರು? ಪಾಕಿಸ್ತಾನ ವಿಶ್ವಾಸಾರ್ಹ ಪಾಲುದಾರನಲ್ಲ ಎಂಬುದು ಟ್ರಂಪ್‌ಗೆ ಚೆನ್ನಾಗಿ ಗೊತ್ತಿದೆ.

ಅಫ್ಘಾನಿಸ್ತಾನದ ಯುದ್ಧದ ವೇಳೆ ಪಾಕಿಸ್ತಾನದ ಸೇನೆ ಮತ್ತು ಐಎಸ್‌ಐ ಅಮೆರಿಕಕ್ಕೆ ಚೆನ್ನಾಗಿ ಕೈಕೊಟ್ಟಿದ್ದವು. ಆ ಕಹಿನೆನಪು ಅಮೆರಿಕಕ್ಕೆ ಇದೆ. ಅಷ್ಟೇಕೆ, ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನ ದಲ್ಲೇ ಅಡಗಿ ಕುಳಿತಿದ್ದ. ಹೀಗಾಗಿ ಪಾಕಿಸ್ತಾನ ಕಳ್ಳಾಟ ಆಡದಂತೆ ನೋಡಿಕೊಳ್ಳುವುದು ಟ್ರಂಪ್‌ಗೆ ಬಹಳ ಮುಖ್ಯ. ಇದೀಗ ಹೊಸತಾಗಿ ರೂಪುಗೊಳ್ಳುತ್ತಿರುವ ಭೂರಾಜಕೀಯ ವ್ಯವಸ್ಥೆಯಲ್ಲಿ ಪಾಕಿಸ್ತಾನ ತನಗೆ ಅಡ್ಡಿಯಾಗದಂತೆ ಟ್ರಂಪ್ ನೋಡಿಕೊಳ್ಳುತ್ತಿದ್ದಾರೆ.

ಖಂಡಿತ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಅಮೆರಿಕ ರಂಗಪ್ರವೇಶ ಮಾಡುತ್ತದೆ ಎಂದು ಎಲ್ಲರೂ ಹೇಳಿದ್ದರು. ಅದರಂತೆಯೇ ರಣರಂಗಕ್ಕೆ ಅಮೆರಿಕ ಧುಮುಕಿದೆ. ದಿನಕ್ಕೊಂದು ನೀತಿ ಬದಲಾಯಿಸುವ ಟ್ರಂಪ್ ಬಗ್ಗೆ ಅಮೆರಿಕನ್ನರಿಗೇ ಒಳ್ಳೆಯ ಅಭಿಪ್ರಾಯವಿಲ್ಲ. ಈಗಿನ ಯುದ್ಧ ದಲ್ಲಿ ಅಮೆರಿಕ ಭಾಗವಹಿಸುವುದು ಅಮೆರಿಕನ್ನರಿಗೆ ಬೇಕಿಲ್ಲ.

ಆದರೆ ಟ್ರಂಪ್ ಏನು ಮಾಡಬೇಕು ಅಂದುಕೊಳ್ಳುತ್ತಾರೋ ಅದನ್ನು ಮಾಡುತ್ತಾರೆ. ಅದಕ್ಕಿಂತ ಹೆಚ್ಚಾಗಿ, ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದರ ಹಿಂದೆ ಇಸ್ರೇಲ್‌ಗೆ ಕೇವಲ ತನ್ನ ಉದ್ದೇಶದ ಸಾಧನೆ ಮಾತ್ರ ಇಲ್ಲ, ಅಮೆರಿಕದ ಗುರಿಯನ್ನು ಸಾಧಿಸುವುದು ಕೂಡ ಈ ದಾಳಿಯ ಉದ್ದೇಶ ಗಳಲ್ಲೊಂದು. ಇಸ್ರೇಲ್‌ನ ದಾಳಿಯಿಂದ ಇರಾನ್‌ಗೆ ಬಹಳ ದೊಡ್ಡ ಹಾನಿಯಾಗಿದೆ. ಆದರೆ, ಇರಾನ್ ನ ಪ್ರತಿ ದಾಳಿಯಿಂದ ಇಸ್ರೇಲ್‌ಗೂ ಬಹಳ ನಷ್ಟವಾಗಿದೆ.

ಇಸ್ರೇಲ್ ತಾನೊಬ್ಬನೇ ಯುದ್ಧ ಮಾಡಿ ಇರಾನ್ ದೇಶ ಮಂಡಿಯೂರುವಂತೆ ಮಾಡುವ ಶಕ್ತಿ ಹೊಂದಿಲ್ಲ. ಈ ಕೆಲಸ ಮಾಡಬೇಕು ಅಂದರೆ ಇಸ್ರೇಲ್‌ಗೆ ಅಮೆರಿಕದ ನೆರವು ಬೇಕೇಬೇಕು. ಸದ್ಯಕ್ಕೆ ಇರಾನ್‌ಗೆ ನೆರವು ನೀಡಲು ರಷ್ಯಾ ಮುಂದೆ ಬರುವ ಸ್ಥಿತಿಯಲ್ಲಿಲ್ಲ.

ಅದು ಉಕ್ರೇನ್ ಜೊತೆಗಿನ ಯುದ್ಧದಲ್ಲಿ ಹೈರಾಣಾಗಿದೆ. ಆದರೆ ಇರಾನ್‌ಗೆ ಚೀನಾ ಖಂಡಿತ ನೆರವು ನೀಡುತ್ತಿದೆ. ಗುಪ್ತಚರ ಮೂಲಗಳ ಪ್ರಕಾರ ಚೀನಾದ ಎರಡು ಸರಕು ಸಾಗಣೆ ವಿಮಾನಗಳು ಕ್ಷಿಪಣಿ ತಯಾರಿಸುವ ಸಲಕರಣೆಗಳು ಮತ್ತು ರಾಸಾಯನಿಕಗಳನ್ನು ಹೊತ್ತು ತೆಹ್ರಾನ್‌ಗೆ ಬಂದಿಳಿದಿವೆ. ಈ ಯುದ್ಧದಲ್ಲಿ ಇರಾನ್ ಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಾ ಚೀನಾ ಮುಗುಮ್ಮಾಗಿ ಎಂಜಾಯ್ ಮಾಡುತ್ತಿದೆ!

ಇರಾನ್ ಮತ್ತು ಪಾಕಿಸ್ತಾನದ ನಡುವೆ 909 ಕಿಮೀ ಗಡಿಯಿದೆ. ಬಲೂಚಿಸ್ತಾನ ಇದೇ ಪ್ರದೇಶದಲ್ಲಿ ಬರುತ್ತದೆ. ಇರಾನ್‌ನೊಳಗೆ ನುಗ್ಗುವ ಪ್ರಮೇಯವೇನಾದರೂ ತನಗೆ ಬಂದರೆ ಆಗ ಪಾಕಿಸ್ತಾನದ ಭೂಮಿ ಮತ್ತು ವಾಯು ಪ್ರದೇಶವನ್ನು ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಟ್ರಂಪ್ ಇದ್ದಾರೆ. ಅಫ್ಘಾನಿಸ್ತಾನದ ಯುದ್ಧದಲ್ಲಿ ಅಮೆರಿಕ ಇದನ್ನೇ ಮಾಡಿತ್ತು. ಮೂಲಗಳ ಪ್ರಕಾರ ಪಾಕಿಸ್ತಾನದಲ್ಲೂ ಅಮೆರಿಕ ರಹಸ್ಯವಾಗಿ ವಾಯುನೆಲೆಯನ್ನು ಹೊಂದಿದೆ.

ಆಪರೇಷನ್ ಸಿಂದೂರ್ ಸಮಯದಲ್ಲಿ ಅಮೆರಿಕದ ವಾಯುಪಡೆಯ ವಿಮಾನಗಳು ನೂರ್ ಖಾನ್ ವಾಯು ನೆಲೆಯ ಸಮೀಪದಲ್ಲೇ ನಿಂತಿರುವುದು ಬೆಳಕಿಗೆ ಬಂದಿತ್ತು. ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ ದಾಳಿ ನಡೆಸಿತ್ತು. ಹೀಗಾಗಿ ಎಲ್ಲಾ ರೀತಿಯಿಂದಲೂ ಪಾಕಿಸ್ತಾನವನ್ನು ತನ್ನ ಪರವಾಗಿ ಇರಿಸಿಕೊಳ್ಳುವುದು ಅಮೆರಿಕಕ್ಕೆ ಅಗತ್ಯವಿದೆ.

ಇರಾನ್‌ನಲ್ಲಿರುವ ಹಲವು ಭೂಗತ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ಈಗಾಗಲೇ ಬಾಂಬ್ ದಾಳಿ ನಡೆಸಿದೆ. ಮುಂದೆ ಟ್ರಂಪ್ ಏನು ಮಾಡಲಿದ್ದಾರೆ? ಅಯೋತೊಲ್ಲಾ ಖಮೇನಿಯ ಅಧಿಕಾರ ವನ್ನು ಅಂತ್ಯಗೊಳಿಸಿ, ಅಮೆರಿಕದ ತಾಳಕ್ಕೆ ತಕ್ಕಂತೆ ಕುಣಿಯುವ ಸರ್ಕಾರವನ್ನು ಇರಾನ್‌ನಲ್ಲಿ ಸ್ಥಾಪಿಸಲಿದ್ದಾರೆಯೇ? ಇರಾನ್‌ನಲ್ಲೇ ಅಲ್ಲಿನ ಪರಮೋಚ್ಚ ನಾಯಕ ಖಮೇನಿಗೆ ಸಾಕಷ್ಟು ಆಂತರಿಕ ವಿರೋಧವಿದೆ. ಶರಿಯಾ ಕಾನೂನಿನ ಹೆಸರಿನಲ್ಲಿ ಆತ ಇರಾನಿನ ಜನರನ್ನು ತುಂಬಾ ಹಿಂಸಿಸಿದ್ದಾನೆ.

ಅದರಲ್ಲೂ ಇರಾನ್‌ನ ಮಹಿಳೆಯರು ಖಮೇನಿಯ ಆಡಳಿತದಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ರೆಜಾ ಶಾ ಪಹ್ಲಾವಿಯ ಅಧಿಕಾರದಲ್ಲಿ ಇರಾನಿನ ಮಹಿಳೆಯರು ಫುಟ್‌ಬಾಲ್ ಆಡಿಕೊಂಡು, ಕಾರು ಚಲಾಯಿಸಿಕೊಂಡು ಸ್ವತಂತ್ರ ಬದುಕು ನಡೆಸಿದ್ದರು. ಖಮೇನಿ ಬಂದಮೇಲೆ ಅದನ್ನೆಲ್ಲ ಬಂದ್ ಮಾಡಿಸಿದ್ದಾನೆ. ಮಹಿಳೆಯರು ಈಗ ಸ್ವಾತಂತ್ರ್ಯವಿಲ್ಲದೆ ಬದುಕುತ್ತಿದ್ದಾರೆ. ಹೀಗಾಗಿ ಇರಾನ್‌ನಲ್ಲಿ ಆಡಳಿತ ಬದಲಾವಣೆಯಾಗುವ ಸಾಧ್ಯತೆ ತುಂಬಾ ಹೆಚ್ಚಿದೆ. ಈಗಾಗಲೇ ಖಮೇನಿಯ ಹಲವು ಟಾಪ್ ಮಿಲಿಟರಿ ಕಮಾಂಡರ್‌ಗಳು ಹತ್ಯೆಯಾಗಿದ್ದಾರೆ.

ಸ್ವತಃ ಖಮೇನಿ ಅಡಗಿ ಕುಳಿತಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಮೊಸಾದ್ (ಇಸ್ರೇಲ್‌ನ ಗುಪ್ತಚರ ಸಂಸ್ಥೆ) ಗೂಢಚರರು ಇರಾನ್‌ನೊಳಗೆ ಎಲ್ಲಾ ಕಡೆ ನುಸುಳಿದ್ದಾರೆ ಎಂದು ಹೇಳಲಾಗುತ್ತಿದೆ. ಡ್ರೋನ್ ಮತ್ತು ಕ್ಷಿಪಣಿಗಳಿಗೆ ಬೇಕಾದ ಸಲಕರಣೆಗಳನ್ನು ಇರಾನ್ ನೊಳಗೆ ಸಾಗಿಸಿ, ಆ ದೇಶದ ಒಳಗಿನಿಂದಲೇ ಇರಾನ್ ಮೇಲೆ ದಾಳಿ ನಡೆಸಲಾಗಿದೆ ಎಂಬ ವರದಿ ಗಳೂ ಇವೆ.

ಹೀಗಾಗಿ ನಿಸ್ಸಂಶಯವಾಗಿ ಖಮೇನಿ ಸಂಕಷ್ಟದಲ್ಲಿದ್ದಾನೆ. ಅವನ ಆಡಳಿತ ಬಹುತೇಕ ಕೊನೆಯ ಹಂತಕ್ಕೆ ಬಂದಿದೆ. ಹಾಗಿದ್ದರೆ ಅಧಿಕಾರಕ್ಕೆ ಬರುವವರು ಯಾರು? 1979ರಲ್ಲಿ ಇರಾನ್‌ನ ಪರಮೋಚ್ಚ ನಾಯಕ ಮೊಹಮ್ಮದ್ ರೆಜಾ ಪಹ್ಲಾವಿ ಆಗಿದ್ದ. ಇಸ್ಲಾಮಿಕ್ ಕ್ರಾಂತಿಯಲ್ಲಿ ಅವನನ್ನು ಪದಚ್ಯುತಗೊಳಿಸಲಾಗಿತ್ತು. ಅವನ ಮಗ ರೆಜಾ ಪಹ್ಲಾವಿ ಸದ್ಯ ಅಮೆರಿಕದಲ್ಲಿ ಆಶ್ರಯ ಪಡೆದುಕೊಂಡಿದ್ದಾನೆ.

‘ನಾವು 46 ವರ್ಷಗಳಿಂದ ಹೋರಾಡುತ್ತಿದ್ದೇವೆ. ಈಗ ನಮ್ಮ ಸಮಯ ಬಂದಿದೆ! ಎಂದು ಅವನು ಹೇಳಿದ್ದಾನೆ. ಅವನ ಮಾತು ನಿಜವಾಗಲಿದೆಯೇ? ಕಾದು ನೋಡಿ. ಕಾಲವೇ ಎಲ್ಲದಕ್ಕೂ ಉತ್ತರ ಹೇಳುತ್ತದೆ. ಕೊನೆಯದಾಗಿ ನಾನೊಂದು ಮಾತು ಹೇಳಬೇಕು. ಇರಾನ್ ಜೊತೆ ಸದ್ಯ ಭಾರತ ಒಳ್ಳೆಯ ಸಂಬಂಧವನ್ನೇ ಹೊಂದಿದೆ. ಆದರೆ ಮೊಹಮ್ಮದ್ ರೆಜಾ ಶಾ ಪಹ್ಲಾವಿಯ ಕಾಲದಲ್ಲಿ ಇನ್ನೂ ಒಳ್ಳೆಯ ಸಂಬಂಧವನ್ನು ಭಾರತ ಹೊಂದಿತ್ತು. ನಾವು ಅಲಿಪ್ತ ನೀತಿಯಲ್ಲಿ ನಂಬಿಕೆ ಇರಿಸಿರು ವವರು. ಅಷ್ಟು ಸುಲಭಕ್ಕೆ ಯಾರ ಪರವನ್ನೂ ವಹಿಸುವುದಿಲ್ಲ, ವಿರೋಧವನ್ನೂ ವಹಿಸುವುದಿಲ್ಲ. ನಮ್ಮ ದೇಶಕ್ಕೆ ಶಾಂತಿ ಬೇಕೇ ಹೊರತು ಯುದ್ಧ ಬೇಕಿಲ್ಲ.