Vishweshwar Bhat Column: ಭಾರತದಲ್ಲಿ ಭಯೋತ್ಪಾದನೆಗಿಂತ ಪ್ರೇಮವೇ ಹೆಚ್ಚು ಅಪಾಯಕಾರಿ !
ಮಾತೃಭಾಷೆಗಳ ದಾಸ್ತಾನನ್ನು ಆಗ ಭಾರತದ 121 ಅಧಿಕೃತ ಭಾಷೆಗಳ ಅಡಿಯಲ್ಲಿ ವರ್ಗೀಕರಿಸ ಲಾಗಿತ್ತು. ಹಿಂದಿ ಭಾಷೆಯಂದೇ 56ಕ್ಕೂ ಹೆಚ್ಚು ಮಾತೃಭಾಷೆಗಳಿವೆ, ಆದರೆ ಆ ಭಾಷಿಕರು ಇವುಗಳನ್ನು ಅವಧ್, ಭೋಜಪುರಿ, ಹರಿಯಾನ್ವಿ, ರಾಜಸ್ಥಾನಿ ಎಂದು ಕರೆಯುತ್ತಾರೆ. ಹಿಂದಿ ಮಾತನಾಡುವ 52.8 ಕೋಟಿ ಭಾರತೀಯರಲ್ಲಿ ಶೇ.40ರಷ್ಟು ಜನರು ವಾಸ್ತವವಾಗಿ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ.
-
ನೂರೆಂಟು ವಿಶ್ವ
ಭಾರತವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಕೆಲವೊಮ್ಮೆ ನಮ್ಮ ದೇಶವನ್ನು ವಿದೇಶಿ ಯರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ನಮಗೇ ಅರ್ಥವಾಗದಿರುವುದು ಅವರಿಗೆ ಅರ್ಥ ವಾಗುವುದಾದರೂ ಹೇಗೋ? ತಾಜಮಹಲ್ ಅಥವಾ ಕುತಬ್ ಮಿನಾರ್ ನೋಡಿ, ಭಾರತವನ್ನು ನೋಡಿ ಬಂದೆ ಎಂದು ಯಾರಾದರೂ ಹೇಳಿದರೆ, ಅಂಥವರ ಬಗ್ಗೆ ನಿಮಗೆ ಏನು ಅನಿಸಬಹುದು? ‘ನಾನು ಭಾರತವನ್ನು ಕಂಡೆ ಅಥವಾ ಅರಿತುಕೊಂಡೆ’ ಎನ್ನುವುದು ಸಮುದ್ರದ ಒಂದು ಹನಿ ನೋಡಿ ಇಡೀ ಸಾಗರವನ್ನೇ ಅಳೆದಂತೆ.
ಇಷ್ಟೊಂದು ಭಾಷೆ, ಉಪಭಾಷೆ, ಜಾತಿ, ಉಪಜಾತಿ, ಸಮುದಾಯ, ಜೀವನ ಪದ್ಧತಿ, ಆಹಾರ ಪದ್ಧತಿ, ಉಡುಪು, ಆಚರಣೆ, ದೇವರು, ನಂಬಿಕೆ, ಸಂಸ್ಕೃತಿ...ಗಳಿರುವ ಇನ್ನೊಂದು ದೇಶ ಈ ಭೂಮಂಡಲ ದಲ್ಲಿ ಇನ್ನೊಂದು ಇರಲಿಕ್ಕಿಲ್ಲ.
ಭಾರತವನ್ನು ಅರ್ಥಮಾಡಿಕೊಳ್ಳುವುದು ಎಂದರೆ ಒಂದು ಸಾವಿರ ಜನ್ಮಗಳ ಕಥೆಯನ್ನು ಒಂದೇ ಸಾಲಿನಲ್ಲಿ ಓದಲು ಬಯಸಿದಂತೆ. ಇಲ್ಲಿ ಪ್ರತಿ ಹತ್ತು ಕಿಮೀಗೆ ಭಾಷೆಯ ಲಯ ಬದಲಾಗುತ್ತದೆ, ಉಚ್ಚಾರ ಬದಲಾಗುತ್ತದೆ, ಪ್ರತಿ ನೂರು ಕಿಮೀಗೆ ಸಂಸ್ಕೃತಿಯ ಬಣ್ಣ ಬದಲಾಗುತ್ತದೆ.
ಇಷ್ಟೊಂದು ವೈವಿಧ್ಯ ಇರುವ ದೇಶದಲ್ಲಿ, ವಿದೇಶಿಯರು ಒಂದೆರಡು ನಗರಗಳನ್ನು ನೋಡಿ, ‘ನಾನು ಭಾರತವನ್ನು ಅರ್ಥಮಾಡಿಕೊಂಡೆ’ ಎನ್ನುವುದು ಅತ್ಯಂತ ಮುಗ್ಧ ಅಥವಾ ಅಹಂಕಾರದ ಮಾತಾಗಬಹುದು. ಸ್ಮಾರಕಗಳು ಇತಿಹಾಸದ ಹೆಜ್ಜೆಗುರುತುಗಳೇ ಹೊರತು, ಭಾರತದ ಜೀವಂತ ಆತ್ಮವಲ್ಲ.
ಭಾರತದಲ್ಲಿ ಏಕಕಾಲಕ್ಕೆ ಹದಿನಾರನೇ ಶತಮಾನ ಮತ್ತು ಇಪ್ಪತ್ತೊಂದನೇ ಶತಮಾನ ಕೈ ಕೈ ಹಿಡಿದು ನಡೆಯುತ್ತವೆ. ಎತ್ತಿನ ಗಾಡಿಯ ಪಕ್ಕದ ಸ್ಯಾಟಲೈಟ್ ಹೊತ್ತ ಟ್ರಕ್ ಸಾಗುತ್ತದೆ. ಈ ವಿರೋಧಾಭಾಸವೇ ಭಾರತದ ಸೌಂದರ್ಯ. ನಮ್ಮ ದೇಶವನ್ನು ಅರ್ಥಮಾಡಿಕೊಳ್ಳಲು ಮಿದುಳೊಂದೇ ಅಲ್ಲ, ಹೃದಯವೂ ಬೇಕು.
ಇದನ್ನೂ ಓದಿ: Vishweshwar Bhat Column: ವಿಶ್ವದಲ್ಲಿ ಸ್ಟಾರ್ಬಕ್ಸ್ ಇಲ್ಲದ ದೇಶವಿಲ್ಲ, ಇಸ್ರೇಲ್ʼನಲ್ಲಿ ಅದೂ ಇಲ್ಲ !
ಇತ್ತೀಚಿಗೆ ನಾನು ’ದಿ ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಮ್ಯಾನೇಜಿಂಗ್ ಎಡಿಟರ್ ಆಗಿರುವ ರೋಹಿತ್ ಸರನ್ ಅವರ ‘"100 Ways To See INDIA : Stats, Stories, And Surprises. The Country You Thought You Know ಪುಸ್ತಕವನ್ನು ಓದುತ್ತಿದ್ದೆ. ಈ ಕೃತಿಯ ವೈಶಿಷ್ಟ್ಯಅಂದ್ರೆ ಅಗಾಧ ಡಾಟಾ, ಅಂಕಿ-ಅಂಶ, ಕೋಷ್ಟಕಗಳನ್ನೆಲ್ಲ ಸ್ಟೋರಿಯಾಗಿ ಹೇಳಿರುವುದು, ಇಲ್ಲಿ ತನಕ ನಾವು ಕೇಳಿರದ ಸಂಗತಿಗಳನ್ನು ನಮಗೆ ವಿಸ್ಮಯವಾಗಿ ನಿರೂಪಿಸಿರುವುದು.
ಈ ಕೃತಿಯಲ್ಲಿ ರೋಹಿತ್ ಸರನ್ ಅವರು ಭಾರತವನ್ನು ಪರಿಚಯಿಸುವ ನೂರು ಸಂಗತಿಗಳ ಪಟ್ಟಿ ಮಾಡಿದ್ದಾರೆ. ಉದಾಹರಣೆಗೆ, ನಾನು ಕಳೆದ ಮೂರೂವರೆ ದಶಕಗಳಿಂದ ಬೆಂಗಳೂರಿನಲ್ಲಿ ವಾಸ ವಿದ್ದೇನೆ. ಆದರೆ ಈ ಪುಸ್ತಕ ಓದುವ ತನಕ ಬೆಂಗಳೂರು ‘ಭಾರತದ ಭಾಷೆಗಳ ರಾಜಧಾನಿ’ ಎಂಬುದು ಗೊತ್ತಿರಲಿಲ್ಲ.
2011ರ ಹೊತ್ತಿಗೆ ಬೆಂಗಳೂರಿನಲ್ಲಿ 107 ಭಾಷೆಗಳನ್ನು ಮಾತನಾಡುತ್ತಿದ್ದರು ಅಂದ್ರೆ ಅಚ್ಚರಿಯಾಗ ಬಹುದು. ಇದು ದೇಶದ ಅತಿ ಹೆಚ್ಚು. ನಾಗಾಲ್ಯಾಂಡಿನ ದಿಮಾಪುರ್ 103 ಭಾಷೆಗಳಿಗೆ ನೆಲೆಯಾ ಗಿದ್ದು, ಇದು ಎರಡನೇ ಅತ್ಯಂತ ಭಾಷಾ-ವೈವಿಧ್ಯಮಯ ಜಿಲ್ಲೆಯಾಗಿದೆ.
ಮಾತೃಭಾಷೆಗಳ ವಿಷಯದಲ್ಲಿ ಈ ಸಂಖ್ಯೆಗಳು ಇನ್ನೂ ಪ್ರಭಾವಶಾಲಿಯಾಗಿವೆ - ಬೆಂಗಳೂರಿನಲ್ಲಿ 181, ಪುಣೆಯಲ್ಲಿ 176 ಮತ್ತು ನೈಋತ್ಯ ದೆಹಲಿಯಲ್ಲಿ 149 ಮಾತೃಭಾಷೆಗಳನ್ನು ಮಾತನಾಡುತ್ತಾರೆ. ಹಲವಾರು ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಮಾತೃಭಾಷೆಗಳಿವೆ. ಭಾಷೆಗಳ ಸಂಖ್ಯೆಗಿಂತ ಮಾತೃಭಾಷೆ ಗಳ ಸಂಖ್ಯೆ ಏಕೆ ಹೆಚ್ಚಾಗಿದೆ? ಜನಗಣತಿ ಸಮೀಕ್ಷೆಗಳಲ್ಲಿ ಭಾಷೆಗಳನ್ನು ಹೇಗೆ ವರ್ಗೀಕರಿಸಲಾಗಿದೆ ಎಂಬುದರಲ್ಲಿ ಉತ್ತರವಿದೆ.
ಉದಾಹರಣೆಗೆ, ಹಿಂದಿ ಕನಿಷ್ಠ 56 ಉಪಭಾಷೆಗಳು ಅಥವಾ ಮಾತೃಭಾಷೆಗಳಿಂದ ಕೂಡಿದೆ. ಅವು ಗಳಲ್ಲಿ ದೊಡ್ಡದು ಭೋಜಪುರಿ. ಭಾಷೆಗಳು ಜನರೊಂದಿಗೆ ಚಲಿಸುತ್ತವೆ ಮತ್ತು ಜನರು ಉದ್ಯೋಗ ಗಳಿಗಾಗಿ ಮತ್ತು ಉದ್ಯೋಗಗಳೊಂದಿಗೆ ಚಲಿಸುತ್ತಾರೆ. ಅದಕ್ಕಾಗಿಯೇ ಕೆಲವು ಭಾಷಾ ಸಮೃದ್ಧ ಜಿಲ್ಲೆಗಳು ಅತಿದೊಡ್ಡ ವಲಸೆ ಕೇಂದ್ರಗಳಾಗಿವೆ ಮತ್ತು ಉದ್ಯೋಗ ಸೃಷ್ಟಿ ಎಂಜಿನ್ ಗಳಾಗಿವೆ. ಕೆಲವು ಈಶಾನ್ಯ ಜಿಲ್ಲೆಗಳು ಭಾಷಾ ವಿಷಯದಲ್ಲಿ ಅಗ್ರಸ್ಥಾನದಲ್ಲಿವೆ. ಇದು ಅವುಗಳ ಐತಿಹಾಸಿಕ ಜನಸಂಖ್ಯಾ ವೈವಿಧ್ಯವನ್ನು ತೋರಿಸುತ್ತದೆ. ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಹಿಂದಿ ಭಾಷೆಯಂದೇ 56 ಮಾತೃಭಾಷೆಗಳಿವೆ.
2011ರ ಭಾಷೆಗಳ ಜನಗಣತಿಯ ದತ್ತಾಂಶವನ್ನು ಸಂಗ್ರಹಿಸಿದಾಗ, ಭಾರತದಲ್ಲಿ 19,569 ಮಾತೃ ಭಾಷೆಗಳಿವೆ ಎಂದು ತಿಳಿದು ಬಂದಿತು. ‘ಸಂಪೂರ್ಣ ಭಾಷಾ ಪರಿಶೀಲನೆ, ಸಂಪಾದನೆ ಮತ್ತು ತರ್ಕಬದ್ಧ ಪರಿಶೀಲನೆ’ ಬಳಿಕ ಅದು 1,369ಕ್ಕೆ ಇಳಿಯಿತು.
ಮಾತೃಭಾಷೆಗಳ ದಾಸ್ತಾನನ್ನು ಆಗ ಭಾರತದ 121 ಅಧಿಕೃತ ಭಾಷೆಗಳ ಅಡಿಯಲ್ಲಿ ವರ್ಗೀಕರಿಸ ಲಾಗಿತ್ತು. ಹಿಂದಿ ಭಾಷೆಯಂದೇ 56ಕ್ಕೂ ಹೆಚ್ಚು ಮಾತೃಭಾಷೆಗಳಿವೆ, ಆದರೆ ಆ ಭಾಷಿಕರು ಇವು ಗಳನ್ನು ಅವಧ್, ಭೋಜಪುರಿ, ಹರಿಯಾನ್ವಿ, ರಾಜಸ್ಥಾನಿ ಎಂದು ಕರೆಯುತ್ತಾರೆ. ಹಿಂದಿ ಮಾತನಾಡುವ 52.8 ಕೋಟಿ ಭಾರತೀಯರಲ್ಲಿ ಶೇ.40ರಷ್ಟು ಜನರು ವಾಸ್ತವವಾಗಿ ವಿವಿಧ ಭಾಷೆ ಗಳನ್ನು ಮಾತನಾಡುತ್ತಾರೆ.
ಭೋಜಪುರಿ (ಶೇ.9.6) ಹಿಂದಿ ಅಡಿಯಲ್ಲಿ ಎರಡನೇ ಅತಿದೊಡ್ಡ ಮಾತನಾಡುವ ಮಾತೃಭಾಷೆ ಯಾಗಿತ್ತು. ಸುಮಾರು 1.7 ಕೋಟಿ ಭಾರತೀಯರು 56 ಮಾತೃಭಾಷೆಗಳ ಪಟ್ಟಿಯಲ್ಲಿಲ್ಲದ ಒಂದು ಮಾತೃಭಾಷೆಯನ್ನು ಮಾತಾಡುತ್ತಾರೆ. ಜನಗಣತಿಯು ಅವರೆಲ್ಲರನ್ನೂ ಹಿಂದಿ ಎಂದೂ ಕರೆಯು ತ್ತದೆ.
ಆದ್ದರಿಂದ, ಮುಂದಿನ ಬಾರಿ ಯಾರಾದರೂ ಹಿಂದಿ ಹೇರಿಕೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿ ದಾಗ, ಅವರು ಯಾವ ಹಿಂದಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕೇಳಬಹುದೇನೋ. ಇಷ್ಟೊಂದು ಭಾಷಾ ವೈವಿಧ್ಯವಿರುವ ಇನ್ನೊಂದು ದೇಶ ಪ್ರಪಂಚದ ಇಲ್ಲ.
ಭಾರತ ಅಂದ್ರೆ ಎಲ್ಲಿ ನೋಡಿದರೂ ಜನ.. ಜನ.. ಜನ.. ಎಂಬ ಭಾವನೆಯಿದೆ. ಆದರೆ ಭಾರತದ ಶಿಶು ಉತ್ಕರ್ಷ(ಬೂಮ್) ಮುಗಿದು ಹದಿನೈದು ವರ್ಷಗಳಾದವು. ಆದರೆ ನಾವು ಗಮನಿಸಿಲ್ಲ ಅಷ್ಟೇ. ದೇಶದಲ್ಲಿ ಶಿಶು ಉತ್ಕರ್ಷವು 2001ರ ಕೊನೆಗೊಂಡಿತು. ಅಂದಿನಿಂದ, ಪ್ರತಿ ವರ್ಷ ಜನಿಸುವ ಮಕ್ಕಳ ಸಂಖ್ಯೆ ಸ್ಥಿರವಾಗಿ ಕುಸಿಯುತ್ತಿದೆ.
2023ರಲ್ಲಿ ಅಂದಾಜು 2.3 ಕೋಟಿ ಶಿಶುಗಳು ಜನಿಸಿವೆ- 2001ಕ್ಕೆ ಹೋಲಿಸಿದರೆ ಪ್ರತಿದಿನ 17000 ಕಡಿಮೆ. ಹಾಗಾದರೆ ಭಾರತದ ಜನಸಂಖ್ಯೆ ಇನ್ನೂ ಏಕೆ ಬೆಳೆಯುತ್ತಿದೆ? ಅಸಲಿಗೆ, ಸಾಯುವವರ ಪ್ರಮಾಣ ಕಮ್ಮಿಯಾಗಿದೆ. 2023ರಲ್ಲಿ, ಸುಮಾರು 2.3 ಕೋಟಿ ಜನನಗಳು ಮತ್ತು 95 ಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.
2050ರ ಹೊತ್ತಿಗೆ ಅಥವಾ ಅದಕ್ಕೂ ಮೊದಲು, ಭಾರತದ ಜನಸಂಖ್ಯೆಯು ಕುಗ್ಗಲು ಪ್ರಾರಂಭಿಸು ತ್ತದೆ - ಚೀನಾ ಮತ್ತು ಇತರ 30ಕ್ಕೂ ಹೆಚ್ಚು ದೇಶಗಳಂತೆ. ಚೀನಾದಲ್ಲಿ, ಮರಣಗಳಿಗಿಂತ ಜನನಗಳು ಕಡಿಮೆ. ಭಾರತದ ಕೆಲವು ಭಾಗಗಳು ಈಗಾಗಲೇ ಆ ಹಾದಿಯಲ್ಲಿವೆ. ಹಲವಾರು ಜಿಲ್ಲೆಗಳಲ್ಲಿ ಜನಸಂಖ್ಯೆ ಕುಗ್ಗುತ್ತಿವೆ. ಆದರೂ ದೆಹಲಿಯಂಥ ರಾಜ್ಯಗಳು ವಲಸೆಯಿಂದಾಗಿ ಇನ್ನೂ ವೇಗವಾಗಿ ಬೆಳೆಯುತ್ತಿವೆ.
ಇಡೀ ಭಾರತವನ್ನು ಕೇರಳದಲ್ಲಿ ತುಂಬಬಹುದು ಅಂದ್ರೆ ಆಶ್ಚರ್ಯವಾಗಬಹುದು. ಹೌದು, ಪ್ರತಿ ಯೊಬ್ಬ ಭಾರತೀಯನು ದೇಶದ ಅತ್ಯಂತ ಜನನಿಬಿಡ ಜಿಲ್ಲೆಯಾದ ಈಶಾನ್ಯ ದೆಹಲಿಯ ನಿವಾಸಿ ಗಳಂತೆ ದಟ್ಟವಾಗಿ ವಾಸಿಸಿದರೆ, ಇಡೀ ಜನಸಂಖ್ಯೆಯು ಕೇರಳ ರಾಜ್ಯವೊಂದರ ಫಿಟ್ ಆಗುತ್ತಾರೆ.
ಏಕೆಂದರೆ ಈಶಾನ್ಯ ದೆಹಲಿಯಲ್ಲಿ ಪ್ರತಿ ಚದರ ಕಿಲೋಮೀಟರಿಗೆ 36000ಕ್ಕೂ ಹೆಚ್ಚು ಜನ ವಾಸಿಸು ತ್ತಿದ್ದಾರೆ. ನೀವು ದೆಹಲಿಯ ಸರಾಸರಿ ಸಾಂದ್ರತೆಯನ್ನು ಒಟ್ಟಾರೆಯಾಗಿ ತೆಗೆದುಕೊಂಡರೆ, ಆಗ ಇಡೀ ಭಾರತವು ತಮಿಳುನಾಡಿನೊಳಗೆ ಹೊಂದಿಕೊಳ್ಳುತ್ತದೆ. ಆದರೆ ಸಾಂದ್ರತೆಯು ಕೇವಲ ಭೂಮಿ ಮತ್ತು ಜನರ ಬಗ್ಗೆ ಅಲ್ಲ. ಇದು ಭಾರತೀಯರು ಹೇಗೆ ವಾಸಿಸುತ್ತಾರೆ, ಚಲಿಸುತ್ತಾರೆ ಮತ್ತು ಕೆಲಸ ಹುಡುಕುತ್ತಾರೆ ಎಂಬುದರ ಪ್ರತೀಕವಾಗಿದೆ. ದೆಹಲಿಯಂಥ ಜನದಟ್ಟಣೆಯ ನಗರಗಳು ಅವು ನೀಡುವ ಅವಕಾಶಗಳಿಂದಾಗಿ ವಲಸಿಗರನ್ನು ಆಕರ್ಷಿಸುತ್ತಲೇ ಇರುತ್ತವೆ.
ಇನ್ನೊಂದು ತುದಿಯಲ್ಲಿ ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆ ಇದೆ. ಅಲ್ಲಿ ಪ್ರತಿ ಚದರ ಕಿಲೋಮೀಟರಿಗೆ ಕೇವಲ 0.8 ಜನರು ವಾಸಿಸುತ್ತಾರೆ. ಇಡೀ ಭಾರತವು ಅಷ್ಟು ತೆಳ್ಳಗೆ ಹರಡಿದ್ದರೆ, ನಮ್ಮೆಲ್ಲರಿಗೂ ಹೊಂದಿಕೊಳ್ಳಲು 368 ಭಾರತಗಳು ಬೇಕಾಗುತ್ತವೆ. ನಾವು ವಾಸಿಸುವ ಸ್ಥಳವು ನಾವು ಎಷ್ಟು ಜನರಿದ್ದೇವೆ ಎನ್ನುವುದಕ್ಕಿಂತ ಹೆಚ್ಚಿನದನ್ನು ಪ್ರತಿಬಿಂಬಿಸುತ್ತದೆ.
ಭಾರತದ ಸಸ್ಯಾಹಾರಿ ಗ್ರಹಿಕೆ ಮತ್ತು ಮಾಂಸಾಹಾರಿ ವಾಸ್ತವ ಕೇಳಿದರೆ ಆಶ್ಚರ್ಯವಾಗುತ್ತದೆ. ಭಾರತದ ಪ್ರಸಿದ್ಧ ಮತ್ತು ಗೊಂದಲಮಯ ವೈವಿಧ್ಯ, ಊಟದ ತಟ್ಟೆಯಲ್ಲಿ ಕಾಣುವಷ್ಟು ಸ್ಪಷ್ಟ ವಾಗಿ ಬೇರೆಲ್ಲೂ ಕಾಣುವುದಿಲ್ಲ. ಎಷ್ಟೋ ಭಾರತೀಯರು ಮಾಂಸ ತಿನ್ನುತ್ತಾರೆ ಎಂಬುದರ ಬಗ್ಗೆ ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಅeನ ಇರುವುದನ್ನು ಇದು ವಿವರಿಸುತ್ತದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಶೇ.87ರಷ್ಟು ಪುರುಷರು ಮತ್ತು ಶೇ.75ರಷ್ಟು ಮಹಿಳೆಯರು ಮಾಂಸಾಹಾರಿಗಳು. ಆದರೂ, ಶೇ.67ರಷ್ಟು ಜೈನರು ಮತ್ತು ಶೇ.21ರಷ್ಟು ಹಿಂದೂ ಗಳು ಬೇರು ತರಕಾರಿ (Root Vegetables)ಗಳನ್ನು ಇಷ್ಟಪಡುವುದಿಲ್ಲ. ಆದರೆ ಶೇ.60ರಷ್ಟು ಬೌದ್ಧರು ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡೂ ಆಹಾರವನ್ನು ಬಡಿಸುವ ಸ್ಥಳಗಳಲ್ಲಿ ತಿನ್ನುವುದಿಲ್ಲ.
ಭಾರತದಲ್ಲಿ ಮಾಂಸಾಹಾರ ಕೇವಲ ಆಹಾರ ಪದ್ಧತಿಯಲ್ಲ - ಅದು ಸಾಂಸ್ಕೃತಿಕ ಸಂಹಿತೆ, ಧಾರ್ಮಿಕ ಗಡಿ ಮತ್ತು ಕೆಲವೊಮ್ಮೆ ರಾಜಕೀಯ ಗುರುತೂ ಆಗಿದೆ. ಹೆಚ್ಚಿನ ಮಾಂಸಾಹಾರಿ ದೇಶಗಳಿಗಿಂತ ಭಿನ್ನವಾಗಿ, ಭಾರತದಲ್ಲಿ ಮಾಂಸಾಹಾರ ಎಂದರೆ ದೈನಂದಿನ ಮಾಂಸ ಸೇವನೆ ಎಂದಲ್ಲ.
ಹಲವರು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಮಾತ್ರ ಮಾಂಸ ತಿನ್ನುತ್ತಾರೆ. ನಾಗಾಲ್ಯಾಂಡ್ ಮತ್ತು ಕೇರಳದಲ್ಲಿ ಹೆಚ್ಚಿನವರು ಮಾಂಸಾಹಾರಿಗಳು. ರಾಜಸ್ಥಾನ ಮತ್ತು ಪಂಜಾಬಿನಲ್ಲಿ ಸಸ್ಯಾ ಹಾರಿಗಳು ಹೆಚ್ಚು. ಹಿಂದೂಗಳಲ್ಲಿ ಹೆಚ್ಚಿನವರು ಮಾಂಸಾಹಾರಿಗಳು, ಆದರೆ ಅವರೆಲ್ಲ ಗೋಮಾಂಸ ಸೇವಿಸುವುದಿಲ್ಲ. ಮುಸ್ಲಿಮರು ಹೆಚ್ಚಿನವರು ಮಾಂಸಹಾರಿಗಳು, ಆದರೆ ಅವರು ಹಂದಿ ಮಾಂಸ ಸೇವಿಸುವುದಿಲ್ಲ. ಕ್ರಿಶ್ಚಿಯನರು ವಾರದಲ್ಲಿ ಹೆಚ್ಚು ದಿನ ಮಾಂಸ ಸೇವಿಸುತ್ತಾರೆ. ಭಾರತ ದಲ್ಲಿ ಮಾಂಸಾಹಾರ ಧಾರ್ಮಿಕವೂ ಹೌದು, ರಾಜಕೀಯವೂ ಹೌದು.
ಸೋಜಿಗ ಎನಿಸಬಹುದು, ಎಂಜಿನಿಯರ್ಗಳು ಮತ್ತು ವೈದ್ಯರು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ರಾಜ್ಯಶಾಸ್ತ್ರ (ಪೊಲಿಟಿಕಲ್ ಸೈನ್ಸ್)ವನ್ನು ಹೆಚ್ಚಾಗಿ ಆರಿಸಿಕೊಳ್ಳುತ್ತಿದ್ದಾರೆ. 2024ರಲ್ಲಿ, ಸುಮಾರು ಹತ್ತು ಲಕ್ಷ ಆಕಾಂಕ್ಷಿಗಳು ಕೇವಲ 1009 ಹುದ್ದೆಗಳಿಗೆ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದಿದ್ದರು.
ಹಾರ್ವರ್ಡ್, ಆಕ್ಸ್ʼಫರ್ಡ್ ಅಥವಾ ನಾಸಾದ ಗಗನಯಾತ್ರಿ ಕಾರ್ಯಕ್ರಮಕ್ಕೆ ಸೀಟು ಗಿಟ್ಟಿಸುವು ದಕ್ಕಿಂತ ಭಾರತದಲ್ಲಿ ನಾಗರಿಕ ಸೇವಕರಾಗುವುದು ಕಷ್ಟ. 2017ರಿಂದ 2021ರ ನಡುವೆ, ಶೇ.76ಕ್ಕಿಂತ ಹೆಚ್ಚು ಆಕಾಂಕ್ಷಿಗಳು ವಿಜ್ಞಾನ, ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಹಿನ್ನೆಲೆಯಿಂದ ಬಂದವರು. ಯಶಸ್ವಿಯಾದವರಲ್ಲಿ ಶೇ.85ರಷ್ಟು ಅಭ್ಯರ್ಥಿಗಳು ಮುಖ್ಯವಾಗಿ ಮಾನವಿಕ ವಿಷಯ ವನ್ನು ಆರಿಸಿಕೊಂಡವರು.
2025ರ ಟಾಪರ್ ಜೀವ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದರು. ಆದರೆ ಅವರು ಮುಖ್ಯ ಪರೀಕ್ಷೆಗೆ ಪೊಲಿಟಿಕಲ್ ಸೈನ್ಸ್ ಆರಿಸಿಕೊಂಡರು. ದುರಂತ ಅಂದ್ರೆ ಭಾರತವು ಸರಕಾರಿ ಕೆಲಸದ ಪ್ರತಿಷ್ಠೆ ಮತ್ತು ಅಧಿಕಾರವನ್ನು ಬೆನ್ನಟ್ಟುವ ಮೂಲಕ ತನ್ನ ತಾಂತ್ರಿಕ ಪ್ರತಿಭೆ ಯನ್ನು ತಪ್ಪಾಗಿ ನಿಯೋಜಿಸುತ್ತಿರುವುದು.
ಭಾರತದಲ್ಲಿ ಅತಿ ಹೆಚ್ಚು ಯುವಕ-ಯುವತಿಯರು ಸಾಯಲು ಪ್ರೇಮ (ಲವ್) ಕೂಡ ಕಾರಣ. 2013ರಿಂದ 2022 ಅವಧಿಯಲ್ಲಿ, ಪ್ರೇಮ ಪ್ರಕರಣದಲ್ಲಿ 30012 ಯುವತಿಯರು ಸತ್ತಿದ್ದಾರೆ. ಅಕ್ರಮ ಸಂಬಂಧದಲ್ಲಿ ನಿರತರಾದ ಹದಿನಾಲ್ಕು ಸಾವಿರ ಮಹಿಳೆಯರು ಸಾವಿಗೀಡಾಗಿದ್ದಾರೆ.
ಇದೇ ಅವಧಿಯಲ್ಲಿ, ಪ್ರೇಮಪಾಶದಲ್ಲಿದ್ದ 74180 ಯುವತಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ಅವಧಿಯಲ್ಲಿ, ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ ಮೂವತ್ತು ಸಾವಿರ ಕೊಲೆಗಳಾಗಿವೆ. ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ವರ್ಷಗಳ ಅವಧಿಯಲ್ಲಿ ಏಳು ಲಕ್ಷ ಕಿಡ್ನಾಪ್ಗಳಾಗಿವೆ.
ಭಾರತದಲ್ಲಿ ಲವ್ ಮಾಡಲು ಧೈರ್ಯಬೇಕು. ‘ಲವರ್’ಗಳು ಸುಲಭವಾಗಿ ‘ಕ್ರಿಮಿನಲ್’ ಗಳಾಗ ಬಹುದು. ಕಳೆದ ದಶಕದಲ್ಲಿ ಭಾರತದಲ್ಲಿ ಭಯೋತ್ಪಾದನೆಗೆ ಸುಮಾರು 8000 ಜನ ಸತ್ತಿದ್ದಾರೆ. ಅವರಲ್ಲಿ ಅರ್ಧದಷ್ಟು ಭಯೋತ್ಪಾದಕರು. ಭಯೋತ್ಪಾದನೆಗಿಂತ ಹೆಚ್ಚಿನ ಜನ ಪ್ರೀತಿಗೆ ಬಲಿಯಾಗಿದ್ದಾರೆ. ಭಾರತವು ತನ್ನ ಸರಕಾರಗಳನ್ನು ಹೇಗೆ ಆಯ್ಕೆ ಮಾಡುತ್ತದೆ ಎಂಬುದು ಸಹ ಅಚ್ಚರಿಯೇ.
1984ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ದಾಖಲೆಯ 414 ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿತು - ಇದು ಸದನದ ಶೇ.76ಕ್ಕಿಂತ ಹೆಚ್ಚು. ಆದರೂ, ಅರ್ಧಕ್ಕಿಂತ ಹೆಚ್ಚು ಮತದಾರರು ಆ ಪಕ್ಷಕ್ಕೆ ಮತ ಹಾಕಲಿಲ್ಲ. ಅದು ಭಾರತೀಯ ಪ್ರಜಾಪ್ರಭುತ್ವದ ವಿರೋಧಾಭಾಸ. ಇಲ್ಲಿ ತನಕ ಯಾವ ಪಕ್ಷವೂ ಚಲಾವಣೆಯಾದ ಮತಗಳಲ್ಲಿ ಶೇ.50ರಷ್ಟು ಸಹ ಪಡೆದಿಲ್ಲ. ಎಲ್ಲ ಚುನಾವಣೆ ಗಳಲ್ಲಿ, ಸುಮಾರು ಮೂರನೇ ಒಂದು ಭಾಗದಷ್ಟು ಭಾರತೀಯರು ಮತ ಚಲಾಯಿಸುವುದೇ ಇಲ್ಲ.
ಇದರರ್ಥ, ಪ್ರಬಲ ಅಲೆಯಲ್ಲಿಯೂ ಸಹ, ಗೆಲ್ಲುವ ಪಕ್ಷದ ಪರಿಣಾಮಕಾರಿ ಮತ ಹಂಚಿಕೆ ಶೇ.30 ರಷ್ಟು ಮಾತ್ರ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಯಾವುದೇ ಭಾರತೀಯ ಸರಕಾರವು ತನ್ನ ಶೇ.70ರಷ್ಟು ಜನರನ್ನು ಪ್ರತಿನಿಧಿಸಿಲ್ಲ. 1990ರ ದಶಕದಲ್ಲಿ ಪ್ರಾರಂಭವಾದ ಸಮ್ಮಿಶ್ರ ಸರಕಾರ ಯುಗವು ಇದನ್ನು ಬದಲಾಯಿಸಿತು.
ಕೇವಲ ಶೇ.20ರಷ್ಟು ಮತಗಳನ್ನು ಪಡೆದ ಪಕ್ಷಗಳು ಸರಕಾರಗಳನ್ನು ರಚಿಸಿದವು. ಆದರೆ ಒಟ್ಟಾಗಿ ಶೇ.40ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದ ಒಕ್ಕೂಟಗಳ ಭಾಗವಾಗಿ, ಆ ಸರಕಾರಗಳು ಹೆಚ್ಚು ಪ್ರಾತಿನಿಧಿಕ ಎಂದೆನಿಸಿದವು. ಇನ್ನೊಂದು ತಮಾಷೆ ಏನೆಂದರೆ, ಭಾರತದಲ್ಲಿ ಗಂಡಸರಿಗಿಂತ ಹೆಂಗಸರೇ ಹೆಚ್ಚು ಮತದಾನದಲ್ಲಿ ಭಾಗವಹಿಸುತ್ತಿರುವುದು.
ಭಾರತದಲ್ಲಿ ಇಂಗ್ಲಿಷ್ ಯಾರ ಮಾತೃಭಾಷೆಯೂ ಅಲ್ಲ. ಆದರೆ ಎಲ್ಲರ ಭಾಷೆಯೂ ಹೌದು. ಜಗತ್ತಿನಲ್ಲಿ ಅತಿ ಹೆಚ್ಚು ಇಂಗ್ಲಿಷ್ ಮಾತಾಡುವ ದೇಶಗಳ ಪೈಕಿ ಭಾರತಕ್ಕೆ ಎರಡನೇ ಸ್ಥಾನ ಅಂದ್ರೆ ಆಶ್ಚರ್ಯವಾಗಬಹುದು. ದೇಶದಲ್ಲಿ ಶೇ.ತೊಂಬತ್ತೊಂಬತ್ತರಷ್ಟು ಜನ ಇಂಗ್ಲಿಷನ್ನು ಎರಡು ಅಥವಾ ಮೂರನೇ ಭಾಷೆಯಾಗಿ ಬಳಸುತ್ತಿದ್ದಾರೆ.
ಭಾರತದಲ್ಲಿ ಕ್ರಿಕೆಟ್ ನಷ್ಟೇ ಜನಪ್ರಿಯವಾಗಿರುವುದು ಇಂಗ್ಲಿಷ್ ಎಂಬ ಮಾತನ್ನು ಶೇ.ತೊಂಬತ್ತೈದರಷ್ಟು ಮಂದಿ ಒಪ್ಪುತ್ತಾರೆ. ಈ ಕೃತಿಯಲ್ಲಿ ಇನ್ನೂ ಅನೇಕ ಅಚ್ಚರಿ ಹುಟ್ಟಿಸುವ, ತಬ್ಬಿಬ್ಬುಗೊಳಿಸುವ ಅಂಶಗಳಿವೆ. ಭಾರತವನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಾ?